Advertisement

ಮುಗಿಯದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ

01:26 AM May 25, 2022 | Team Udayavani |

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಲ್ಲೇ, ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದುಗೊಳಿಸಿ, ವರದಿ ತಿರಸ್ಕರಿಸುವಂತೆ ಆಗ್ರಹಗಳೂ ಕೇಳಿಬಂದಿವೆ. ತಮ್ಮ ಸರ್ವಾಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದ ವೇಳೆ ಕುವೆಂಪು, ಗಾಂಧಿ, ಅಂಬೇಡ್ಕರ್‌, ಕಿತ್ತೂರು ಚೆನ್ನಮ್ಮ ಅವರಿಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಟ್ಟಿತ್ತು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಪ್ಪು ಮಾಹಿತಿ ನೀಡಿದ್ದಾರೆಂದು ಪ್ರೊ| ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಯಾವುದನ್ನೂ ಕೈ ಬಿಟ್ಟಿಲ್ಲ: ಬರಗೂರು ರಾಮಚಂದ್ರಪ್ಪ
ಬೆಂಗಳೂರು: ನನ್ನ ಸರ್ವಾಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದ ವೇಳೆ ಕುವೆಂಪು, ಗಾಂಧಿ, ಅಂಬೇಡ್ಕರ್‌, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ ಹಾಗೂ ಕೆಂಪೇಗೌಡರಿಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಟ್ಟಿತ್ತು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಪ್ಪು ಮಾಹಿತಿ ನೀಡಿದ್ದಾರೆಂದು ಪ್ರೊ| ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಪ್ಪು, ಸಾವರ್ಕರ್‌ ಒಳಗೊಂಡಂತೆ ಯಾರ ಬಗ್ಗೆಯೂ ನಕಾರಾತ್ಮಕ ವಿಷಯಗಳನ್ನು ಹೇಳದೆ ನಡೆದ ಘಟನೆಗಳ ವಾಸ್ತವದ ಮಾಹಿತಿ ಯನ್ನಷ್ಟೇ ನೀಡಲಾಗಿದೆ ಎಂದು ಹೇಳಿದರು.

ನನ್ನ ಬರಹ ಆಯ್ಕೆಗೆ ನನ್ನ ಸಮ್ಮತಿ ಇಲ್ಲ: ಜಿ. ರಾಮಕೃಷ್ಣ
ಬೆಂಗಳೂರು: ಪಠ್ಯ ಪರಿಷ್ಕರಣ ಸಮಿತಿ ನನ್ನ ಯಾವುದಾದರು ಬರಹವನ್ನು ಆಯ್ಕೆ ಮಾಡಿ ಕೊಂಡಿದ್ದರೆ ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲ ಎನ್ನುವುದನ್ನು ಖಚಿತ ಪಡಿಸುತ್ತಿದ್ದೇನೆ ಎಂದು ಹಿರಿಯ ವಿದ್ವಾಂಸ ಡಾ| ಜಿ. ರಾಮಕೃಷ್ಣ ಅವರು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ಪರಿಷ್ಕರಣೆಯು ತೀರಾ ಅಪ ಮಾರ್ಗದಲ್ಲಿ ಸಾಗುತ್ತಿದೆ. ಶಿಕ್ಷಣ ವನ್ನು ಕೆಟ್ಟ ರಾಜಕೀಯಕ್ಕೆ ಗುರಿ ಮಾಡಲಾಗುತ್ತಿರುವುದು ಸರ್ವಥಾ ಕ್ಷಮಾರ್ಹವಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿ ದುರಂತ ಎಂದವರು ದೂರಿದ್ದಾರೆ.

ಚಕ್ರತೀರ್ಥ ಸಮಿತಿ ರದ್ದುಗೊಳಿಸಿ, ವರದಿ ತಿರಸ್ಕರಿಸಿ
ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಕೇಸರೀಕರಣ ಮತ್ತು ರಾಜಕಾರಣವನ್ನು ಬೆರೆಸಲು ಮುಂದಾ ಗಿರುವ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ರದ್ದುಗೊಳಿಸಿ, ವರದಿಯನ್ನು ತಿರಸ್ಕರಿಸಬೇಕೆಂದು ಮಾಜಿ ಶಿಕ್ಷಣ ಸಚಿವರೂ ಆಗಿರುವ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಆಗ್ರಹಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವವನ್ನು ತಿಳಿಸಬೇಕು. ಆದರೆ, ಪ್ರಜಾಪ್ರಭುತ್ವಕರಣ ಬಿಟ್ಟು ಕೇಸರೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಬರ ಗೂರು ರಾಮಚಂದ್ರಪ್ಪ ಸಮಿತಿ ಮಾಡಿರುವುದು ಎಲ್ಲವನ್ನೂ ಸರಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪಠ್ಯದಲ್ಲಿ ನನ್ನ ಲೇಖನಕ್ಕೆ ಒಪ್ಪಿಗೆ ಇಲ್ಲ: ದೇವನೂರು
ಬೆಂಗಳೂರು: ಪಠ್ಯಪುಸ್ತಕದಲ್ಲಿ ನನ್ನ ಪಾಠವನ್ನು “ಸೇರಿಸಿರದಿದ್ದರೆ’ ನನಗೆ ಹೆಚ್ಚು ಸಂತೋಷ. ಒಂದು ವೇಳೆ “ಸೇರಿಸಿದ್ದರೆ’ ಅದಕ್ಕೆ ನನ್ನ ಒಪ್ಪಿಗೆಯೇ ಇಲ್ಲ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಪಠ್ಯದಲ್ಲಿ ಈ ಹಿಂದೆ ಇದ್ದ ಎಲ…. ಬಸವರಾಜು, ಎ.ಎನ್‌. ಮೂರ್ತಿರಾವ್‌, ಪಿ. ಲಂಕೇಶ್‌, ಸಾರಾ ಅಬೂಬಕರ್‌ ಅವರ ಕತೆ, ಲೇಖನಗಳನ್ನು ಕೈಬಿಟ್ಟಿರುವವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೂ ತಿಳಿದಿಲ್ಲ ಅಂತಲೇ ಅರ್ಥ. ಆದ್ದರಿಂದ ನನ್ನ ಪಾಠ ಸೇರಿಸಿದ್ದರೆ ತೆಗೆಯಬೇಕು ಎಂದು ಹೇಳಿದ್ದಾರೆ.

Advertisement

ಆರೆಸ್ಸೆಸ್‌ ಪಠ್ಯ ಎನ್ನುವುದು ಸರಿಯಲ್ಲ:
ಡಾ| ಬಿ.ವಿ. ವಸಂತಕುಮಾರ್‌
ಬೆಂಗಳೂರು: ಪಠ್ಯಪುಸ್ತಕಗಳಲ್ಲಿ ಒಂದೇ ಜಾತಿಯ ಲೇಖಕರ ಲೇಖನಗಳನ್ನು ಸೇರಿಸಿರುವುದು ಸರ್ವಥಾ ಸರಿಯಲ್ಲ. ಆ ಕಾರಣಕ್ಕಾಗಿ ಇಡೀ ಪಠ್ಯವನ್ನು ಬ್ರಾಹ್ಮಣ ಪಠ್ಯ, ಆರೆಸ್ಸೆಸ್‌ ಪಠ್ಯ ಎನ್ನುತ್ತಿರುವುದು ಬೌದ್ಧಿಕ ದಾರಿದ್ರéದ ಪ್ರತೀಕ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತ ಕುಮಾರ್‌ ಹೇಳಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು ನಮಗಿಂದು ಬೇಕಾಗಿರುವುದು ಬ್ರಾಹ್ಮಣವಾದವೂ ಅಲ್ಲ, ಬ್ರಾಹ್ಮಣ ದ್ವೇಷವೂ ಅಲ್ಲ. ದಲಿತ ಮತ್ತು ಮಾನವ ಪ್ರೀತಿ ಬೇಕಾಗಿದೆ ಎಂದಿದ್ದಾರೆ.

“ಪಠ್ಯಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಿ’
ಬೆಂಗಳೂರು: ಅಸಂವಿಧಾನಿಕ, ಅಪ್ರಜಾಸತ್ತಾತ್ಮಕ ಹಾಗೂ ಅವೈಜ್ಞಾನಿಕ ಪಠ್ಯಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಿ ಹಿಂದಿನ ಪಠ್ಯವನ್ನು ಮುಂದುವರಿಸುವಂತೆ ಒತ್ತಾಯಿಸಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕ ರೂಪಿಸುವ ವೇಳೆ ಅಥವಾ ಪರಿಷ್ಕರಿಸುವಾಗ ಪ್ರಮಾಣೀಕರಿಸಿದ ಚೌಕಟ್ಟನ್ನು ಅನುಸರಿಸಬೇಕಿದೆ. ಪಠ್ಯದಲ್ಲಿ ವಿಷಯದ ಜತೆಗೆ ವಸ್ತುನಿಷ್ಠತೆ, ಸಾಕ್ಷ್ಯಾಧಾರಗಳು ಮತ್ತು ಪಠ್ಯದ ಮೂಲಕ ಮಕ್ಕಳಲ್ಲಿ ಬೆಳೆಸಬೇಕಾದ ಮೌಲ್ಯಗಳು ಪ್ರಾಮುಖ್ಯತೆ ಪಡೆಯುತ್ತವೆ. ವಿಷಯ ಆಯ್ಕೆಯ ಜೊತೆಗೆ ಲೇಖಕರ ಹಿನ್ನೆಲೆ ಮತ್ತು ಅದನ್ನು ಸಮರ್ಥಿಸಬಹುದಾದ ಸಂಶೋಧನಾತ್ಮಕ ಪುರಾವೆ ಮಕ್ಕಳಿಗೆ ಆದರ್ಶವಾಗುತ್ತದೆ ಎಂದು ಹೇಳಿದ್ದಾರೆ.

ಗಣಿತ ಮೇಷ್ಟ್ರಿಂದ ಇತಿಹಾಸ ಪುಸ್ತಕ ಪರಿಷ್ಕರಣೆ: ಟೀಕೆ
ಬೆಂಗಳೂರು: ರೋಹಿತ್‌ ಚಕ್ರತೀರ್ಥ ಗಣಿತ ಶಿಕ್ಷಕರಾಗಿದ್ದು, ಅವರಿಂದ ಇತಿಹಾಸ ಪಠ್ಯ ಪರಿಷ್ಕರಣೆ ಮಾಡಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಮಾಡಿ ಟೀಕೆ ಮಾಡಲಾಗಿದೆ. ಚಕ್ರತೀರ್ಥ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ, ಬರಹಗಾರ ಹಾಗೂ ಶಿಕ್ಷಕರಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಪಾಠ ಮಾಡುತ್ತಿದ್ದರು ಎನ್ನಲಾಗಿದೆ. ಯೂಟ್ಯೂಬ್‌ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣಿತ ಮಾಡುವ ವೀಡಿಯೋ ಸಹ ಇದೆ. ಗಣಿತ ಪಾಠ ಮಾಡುವವರಿಂದ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದು ಟೀಕೆಗಳು ವ್ಯಕ್ತವಾಗಿವೆ.

ಡಿಎಸ್‌ಎಸ್‌ ಪ್ರತಿಭಟನೆ
ಪಠ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಿಷಯಗಳನ್ನು ಬಿಟ್ಟು, ಪುರೋಹಿತ ಶಾಹಿ, ಪಂಚಾಂಗಕ್ಕೆ ಸಂಬಂಧಿಸಿದ ವಿಷಯಗಳನ್ನು ತರುವ ಹುನ್ನಾರ ನಡೆಯುತ್ತಿದೆ. ಪಠ್ಯ ಮರುಪರಿಷ್ಕರಣೆ ರದ್ದು ಮಾಡದಿದ್ದರೆ ಮೇ 31ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ಮಾಡಲಾಗುತ್ತದೆ ಎಂದು ಡಿಎಸ್‌ಎಸ್‌ (ಭೀಮವಾದ)ನ ಆರ್‌. ಮೋಹನ್‌ರಾಜ್‌ ಹೇಳಿದ್ದಾರೆ.

ಕುವೆಂಪು ಪಠ್ಯ ಪರಿಷ್ಕರಿಸಿಲ್ಲ: ಪುಠ್ಯಪುಸ್ತಕ ಸಂಘ
ಬೆಂಗಳೂರು: ಶಾಲಾ ಪಠ್ಯದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತ ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 2017-18ನೇ ಸಾಲಿನಲ್ಲಿ ಪರಿಷ್ಕರಿಸಿದ್ದ ಪಠ್ಯವನ್ನು 2022-23ನೇ ಸಾಲಿಗೂ ಮಂದುವರಿಸಲಾಗಿದೆ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘ ಹೇಳಿದೆ. ಕುವೆಂಪು ಬಗ್ಗೆ ಅವಹೇಳನ ಮಾಡಿ ಪಠ್ಯವನ್ನು ತಿರುಚಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಹಲವಾರು ಸಂಘಟನೆಗಳು ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next