Advertisement

ವಿಂಗ್ ಕಮಾಂಡರ್, ಎಚ್ ಎಎಲ್ ಅಧಿಕಾರಿ…ಬಣ್ಣದ ಲೋಕಕ್ಕೆ ಕಾಲಿಟ್ಟು ಮಿಂಚಿದ್ದ ಅಪ್ರತಿಮ ನಟ

10:33 AM Dec 08, 2019 | Nagendra Trasi |

ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಪ್ರತಿಭಾವಂತ ನಟ, ನಟಿಯರು. ಹಾಸ್ಯದಿಂದ ಹಿಡಿದು ಗಂಭೀರ ಪಾತ್ರದವರೆಗೂ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ. ಅದೇ ರೀತಿ ವಿಂಗ್ ಕಮಾಂಡರ್ ಹರಿಹರ್ ಗುಂಡುರಾವ್ ದತ್ತಾತ್ರೇಯ ಅವರ ನಟನೆಯನ್ನು ಮರೆಯಲು ಸಾಧ್ಯವೇ? ಅರೇ ಇದ್ಯಾರಪ್ಪ ಅಂತ ಆಲೋಚಿಸುತ್ತಿದ್ದೀರಾ…ಇವರು ಬೇರೆ ಯಾರು ಅಲ್ಲ ಕನ್ನಡ ಚಿತ್ರರಂಗದ ನಟ ದತ್ತಣ್ಣ!

Advertisement

ಗಿರೀಶ್ ಕಾಸರವಳ್ಳಿ, ಜಿವಿ ಅಯ್ಯರ್, ಬಿವಿ ಕಾರಂತ್, ಶೇಷಾದ್ರಿ, ಸೀತಾರಾಂ, ನಾಗಾಭರಣ, ಟಿಎಸ್ ರಂಗ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಮುಂತಾದ ಘಟಾನುಘಟಿ ನಿರ್ದೇಶನಗಳಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ಆಸ್ಫೋಟ, ಕೊಟ್ರೇಶಿ ಕನಸು, ಚೈತ್ರದ ಚಿಗುರು, ಚಿನ್ನಾರಿ ಮುತ್ತ, ಮುಸ್ಸಂಜೆ, ಬೆಟ್ಟದ ಜೀವ, ಭಾರತ್ ಸ್ಟೋರ್ಸ್ ಮುಂತಾದ ಚಿತ್ರಗಳಲ್ಲಿನ ದತ್ತಣ್ಣ ಅವರ ಅಭಿನಯ ಮರೆಯಲು ಸಾಧ್ಯವೇ ಇಲ್ಲ.

ವಿಂಗ್ ಕಮಾಂಡರ್ ಎಚ್ ಜಿ ದತ್ತಾತ್ರೇಯ ನಟನಾಗಿದೇ ಆಕಸ್ಮಿಕ !

1942ರ ಏಪ್ರಿಲ್ 20ರಂದು ದತ್ತಾತ್ರೇಯ ಅವರು ಕೋಟೆ ನಾಡು ಚಿತ್ರದುರ್ಗದಲ್ಲಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಚಿತ್ರದುರ್ಗದಲ್ಲಿಯೇ ಪೂರೈಸಿದ್ದರು. 1958ರಲ್ಲಿ ಮೆಟ್ರಿಕ್ಯೂಲೇಶನ್ ನಲ್ಲಿ ಎಚ್ ಜಿ ಮೊದಲ Rank ಪಡೆದಿದ್ದರು. 1959ರಲ್ಲಿ ಪ್ರಿ ಯೂನಿರ್ವಸಿಟಿ ಕೋರ್ಸ್ ನಲ್ಲಿ ಎರಡನೇ Rank ಪಡೆದ ಬುದ್ಧಿವಂತ, ಚುರುಕಿನ ಹುಡುಗ ಎಂಬ ಕೀರ್ತಿಗೆ ಭಾಜನರಾಗಿದ್ದರು. ಇವರ ಪ್ರತಿಭೆಗೆ ಅಂದು ಐಐಟಿ ಮದ್ರಾಸ್ ನಲ್ಲಿ ಸೀಟು ಸಿಕ್ಕಿತ್ತಂತೆ, ಆದರೆ ಅದಕ್ಕೆ ಸೇರಿಕೊಳ್ಳಲಿಲ್ಲವಂತೆ, ಕಾರಣ ಅಪರಿಚಿತ ಸ್ಥಳದಲ್ಲಿ (ಮದ್ರಾಸ್) ವಾಸಿಸುವುದು ಅವರಿಗೆ ಇಷ್ಟವಿಲ್ಲವಾಗಿತ್ತಂತೆ.

ನಂತರ ಯುವಿಸಿಇಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ದತ್ತಣ್ಣ ಐಐಎಸ್ಸಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ಆದರೆ ಇವರ ಮನಸ್ಸು ಹಾತೊರೆಯುತ್ತಿದ್ದದ್ದು ರಂಗಭೂಮಿಯತ್ತ..

Advertisement

1964ರಲ್ಲಿ ಪದವಿ ಪಡೆದ ನಂತರ ದತ್ತಾತ್ರೇಯ ಅವರು ಭಾರತೀಯ ವಾಯು ಪಡೆಯಲ್ಲಿ ಅಧಿಕಾರಿ ಆಗಿ ನಿಯುಕ್ತಿಗೊಂಡಿದ್ದರು. ನಂತರ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಸುಮಾರು 20 ವರ್ಷಗಳ ಕಾಲ ಐಎಎಫ್ (ಇಂಡಿಯನ್ ಏರ್ ಫೋರ್ಸ್)ನಲ್ಲಿ ಸೇವೆ ಸಲ್ಲಿಸಿ ವಿಂಗ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ದತ್ತಣ್ಣನವರದ್ದು.

ಐಎಎಫ್ ಗೆ ಸೇರಿದ್ದ ವೇಳೆ ಭಾರತ-ಪಾಕಿಸ್ತಾನ ಯುದ್ಧ ಆರಂಭವಾಗಿತ್ತು. ಆಗ ದತ್ತಾತ್ರೇಯ ಅವರನ್ನು ದೆಹಲಿಗೆ ಕಳುಹಿಸಿದ್ದರು. ರೈಲಿನಲ್ಲಿ ನಾಗಪುರದವರೆಗೆ ಸಾಮಾನ್ಯ ಪ್ರಯಾಣ ಎಂದಿಗೂ ಮರೆಯಲಾರದ ಅನಭವವಾಗಿತ್ತಂತೆ. ಯಾಕೆಂದರೆ ರೈಲು ನಿಂತ ಜಾಗದಲ್ಲೆಲ್ಲಾ ಜನರು ಬಂದು ಯುದ್ಧಕ್ಕೆ ಹೊರಟ ನನಗೆ ಮತ್ತು ಸಂಗಡಿಗರಿಗೆ ಕುಂಕುಮ ಹಚ್ಚಿ, ಆರತಿ ಎತ್ತಿ, ಸಿಹಿಕೊಟ್ಟು ಬೀಳ್ಕೊಟ್ಟಿದ್ದು. ಅಲ್ಲಿಂದ ಮುಂದೆ ಪಾಲಂ, ಕಾನ್ಪುರ್, ಅಂಡಮಾನ್, ಬೆಂಗಳೂರು, ಚಂಡೀಗಢ್, ಭಟಿಂಡಾ, ದೆಹಲಿಗೆ 2-3 ವರ್ಷಕ್ಕೊಮ್ಮೆ ವರ್ಗಾವಣೆಯಾಗುತ್ತಿತ್ತಂತೆ. ಈ ಮಧ್ಯೆ ಜೋಧಪುರ್, ಲಕ್ನೋ, ಆಗ್ರಾ, ಕೊಯಂಬತ್ತೂರು, ಪಾಣಿಪತ್, ಅಂಬಾಲ, ಅದಂಪುರ್ ಸ್ಥಳಕ್ಕೆ ಭೇಟಿ, ಆ ದಿನಗಳಲ್ಲಿ ಮಾಡಿದ ಕೆಲಸಗಳು ಜೀವನದ ಸಂಗಾತಿ ಎಂದು ದತ್ತಣ್ಣ ನೆನಪಿಸಿಕೊಳ್ಳುತ್ತಾರೆ.

ಸಿನಿಮಾ ನಟಿಸುವುದು, ಧಾರವಾಹಿಗಳಲ್ಲಿ ನಟಿಸುವುದು ಯಾವುದನ್ನು ನಾನು ಆಲೋಚಿಸಿಯೇ ಇಲ್ಲ ಎಂಬುದು ದತ್ತಣ್ಣನವರ ಮನದಾಳದ ಮಾತು. ಆದರೆ ದತ್ತಾತ್ರೇಯ ಅವರು ಕಲಿಯುತ್ತಿದ್ದಾಗಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. 1950, 60ರ ದಶಕದಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದರು. 1994ರಲ್ಲಿ ಐಎಎಫ್ ನಿಂದ ಸ್ವಯಂ ನಿವೃತ್ತಿ ಪಡೆದುಕೊಂಡು ತಮ್ಮನ್ನು ಸಿನಿಮಾರಂಗದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಉದ್ಭವ್ ಎಂಬ ಹಿಂದಿ ಸಿನಿಮಾದಲ್ಲಿ ಮೊದಲ ನಟನೆ:

ದತ್ತಾತ್ರೇಯ ಅವರು ಬೆಂಗಳೂರು ಮೂಲದ ನಿರ್ದೇಶಕ ಟಿಎಸ್ ರಂಗಾ ನಿರ್ದೇಶನದ “ಉದ್ಭವ್” ಎಂಬ ಹಿಂದಿ ಸಿನಿಮಾದ ಮೂಲಕ 1987ರಲ್ಲಿ ಬಣ್ಣ ಹಚ್ಚುವ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದ್ದರು. ಇದಾದ ಒಂದು ತಿಂಗಳ ನಂತರ ನಿರ್ದೇಶಕ ಟಿಎಸ್ ನಾಗಾಭರಣ ಅವರು ಕನ್ನಡ ಸಿನಿಮಾದಲ್ಲಿ ನಟಿಸುವಂತೆ ದತ್ತಣ್ಣಗೆ ಆಫರ್ ಕೊಟ್ಟಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೆ ದತ್ತಣ್ಣ ತಮ್ಮ ವೈವಿಧ್ಯಮಯ ಪಾತ್ರಗಳ ಜತೆ ಜೀವಿಸುವ ಮೂಲಕ ಸಿನಿ ಲೋಕದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ.

ಟಿಎಸ್ ನಾಗಾಭರಣ ಅವರ ಆಸ್ಫೋಟ (1988) ಚಿತ್ರದಲ್ಲಿನ ಖಳನಟನ ಪಾತ್ರಕ್ಕೆ ದತ್ತಣ್ಣ ರಾಷ್ಟ್ರ ಮಟ್ಟದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಪಡೆದಿದ್ದರು. ಆಮೇಲೆ ವೈದ್ಯೋ ನಾರಾಯಣ ಹರಿ ಎಂಬ ಧಾರವಾಹಿ ಮೂಲಕ ದೂರದರ್ಶನಕ್ಕೂ ಕಾಲಿಟ್ಟಿದ್ದರು. ಮಾಯಾ ಮೃಗ ಧಾರವಾಹಿಯ ಶಾಸ್ತ್ರಿ ಪಾತ್ರದೊಂದಿಗೆ ದತ್ತಣ್ಣ ಹೆಚ್ಚು ಜನಪ್ರಿಯರಾಗಿದ್ದರು. 1989ರಲ್ಲಿ ಮಾಧುರಿ ಸಿನಿಮಾ, 1990ರಲ್ಲಿ ಸಂತ ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ಹರಕೆಯ ಕುರಿ, ಚಿನ್ನಾರಿ ಮುತ್ತಾ ಸಿನಿಮಾಗಳಲ್ಲಿ ನಟಿಸಿದ್ದರು.

1994ರಲ್ಲಿ ಸ್ವಯಂ ನಿವೃತ್ತಿ ಪಡೆದ ನಂತರ ಕೊಟ್ರೇಶಿ ಕನಸು, ಲೇಡಿ ಪೊಲೀಸ್, ಕ್ರೌರ್ಯ, ಗಂಗಾ ಯುಮುನಾ, ಅಮೇರಿಕಾ ಅಮೇರಿಕಾ, ಅಂಡಮಾನ್, ಹೂಮಳೆ, ಮುನ್ನುಡಿ, ಅತಿಥಿ, ಮೌನಿ, ಜೋಕ್ ಫಾಲ್ಸ್, ಧರ್ಮ, ಬೆಟ್ಟದ ಜೀವ, ಕೆಂಪಿರುವೆ..ಇತ್ತೀಚೆಗೆ ಬಿಡುಗಡೆಯಾಗಿದ್ದ ಮಿಷನ್ ಮಂಗಲ್  ಹೀಗೆ ಸಾಲು, ಸಾಲು ಸಿನಿಮಾಗಳಲ್ಲಿನ ಪಾತ್ರಗಳಿಗೆ ಪರಾಕಾಯ ಪ್ರವೇಶ ಮಾಡಿ ಜೀವ ತುಂಬಿರುವ ದತ್ತಣ್ಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ಅದ್ಭುತ ಪ್ರತಿಭೆ ಇವರದ್ದು. ಅಂದ ಹಾಗೆ ದತ್ತಣ್ಣ ಅವಿವಾಹಿತರಾಗಿದ್ದು ಕಾಯಕ ಮತ್ತು ನಟನೆಯಲ್ಲೇ ಸಾರ್ಥಕ್ಯ ಕಾಣುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next