Advertisement

ಉಣಕಲ್ಲ ನಾಲಾ ಒತ್ತುವರಿಗಿಲ್ಲ ಮುಕ್ತಿ

07:00 PM May 03, 2021 | Team Udayavani |

ಹುಬ್ಬಳ್ಳಿ: ಎರಡು ವರ್ಷಗಳ ಹಿಂದೆ ಮಳೆರಾಯ ಸೃಷ್ಟಿಸಿದ್ದ ಅವಾಂತರ, ನಂತರ ಪಾಲಿಕೆ ತೆಗೆದುಕೊಂಡ ಕ್ರಮದಿಂದ ಇನ್ನೇನು ಉಣಕಲ್ಲ ನಾಲಾ ಒತ್ತುವರಿಗೆ ಮುಕ್ತಿ ದೊರೆಯಲಿದೆ ಎನ್ನುವ ನಿರೀಕ್ಷೆ ಮೂಡಿಸಿತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದ ಜಂಟಿ ಸರ್ವೇ ವರದಿ ಧೂಳು ತಿನ್ನುತ್ತಿದೆ.

Advertisement

2019 ಆಗಸ್ಟ್‌ ತಿಂಗಳಲ್ಲಿ ಸುರಿದ ಮಹಾಮಳೆ ದೊಡ್ಡ ಅನಾಹುತ ಸೃಷ್ಟಿಸಿತ್ತು. ಅಲ್ಲಿಯವರೆಗೆ ನಾಲಾ ಒತ್ತುವರಿಯಿಂದ ಇಂತಹ ದೊಡ್ಡ ಸಮಸ್ಯೆ ಉಂಟಾಗಬಹುದು ಎನ್ನುವ ನಿರೀಕ್ಷೆ ಕೂಡ ಇರಲಿಲ್ಲ. ಉಣಕಲ್ಲ ಕೆರೆ ಕೋಡಿ ಹರಿದು ಅಲ್ಲೋಲ ಕಲ್ಲೋಲ ಸ್ಥಿತಿ ನಿರ್ಮಾಣವಾಗಿತ್ತು. ಹಿಂದೆ ಎಷ್ಟೇ ಮಳೆಯಾಗಿದ್ದರೂ ಇಂತಹ ದುಸ್ಥಿತಿ ನಿರ್ಮಾಣವಾಗಿರಲಿಲ್ಲ. ನೂರಾರು ಮನೆಗಳಿಗೆ ನೀರು ಹೊಕ್ಕು ದೊಡ್ಡ ನಷ್ಟ ಉಂಟಾಗಿತ್ತು. ನಾಲಾಗುಂಟ ಇರುವ ನಾಲ್ಕು ಪ್ರಮುಖ ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿದ್ದವು.

ಯಾವುದೇ ಕ್ರಮವಿಲ್ಲ: ನಾಲಾ ಅಕ್ಕಪಕ್ಕ ಅಲ್ಲಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿಕೊಂಡು ನಾಲಾ ಮಾರ್ಗವನ್ನೇ ಬದಲಿಸಿದ್ದಾರೆ. ದೊಡ್ಡವರು ಮಾಡಿದ ಎಡವಟ್ಟಿನ ಪರಿಣಾಮ ಜನಸಾಮಾನ್ಯರು ಸಂಕಷ್ಟ ಅನುಭವಿಸಿದ್ದರು. ಈ ಎಲ್ಲಾ ಅವಾಂತರಗಳನ್ನು ಗಮನಿಸಿ ಸ್ಥಳೀಯ ಜನಪ್ರತಿನಿಧಿ ಗಳಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ ಒತ್ತುವರಿ ತೆರವಿಗೆ ಖಡಕ್‌ ಸೂಚನೆ ನೀಡಿದ್ದರು. ನಾಲಾದುದ್ದಕ್ಕೂ ಸರ್ವೇ ಮಾಡಿ ಒತ್ತುವರಿ ಗುರುತಿಸಿ ಆರು ತಿಂಗಳಲ್ಲಿ ತೆರವಿಗೆ ಗಡುವು ನೀಡಿದ್ದರು. ಆದರೆ ಎರಡು ವರ್ಷ ಕಳೆಯುತ್ತಾ ಬಂದರೂ ಯಾವುದೇ ಕ್ರಮವಾಗಿಲ್ಲ.

ಆಳುವವರ ದೂರದೃಷ್ಟಿ ಕೊರತೆಯ ಪರಿಣಾಮ 
1975ರಲ್ಲಿ ನಾಲಾ ಅಕ್ಕಪಕ್ಕದಲ್ಲಿ ಮಹಾನಗರ ಪಾಲಿಕೆಯಿಂದಲೇ ಲೀಸ್‌ ನೀಡಲಾಗಿದೆ. ಇದು 1995ರ ವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಜನಪ್ರತಿನಿಧಿ ಗಳ ಪ್ರಭಾವ ಬಳಿಸಿ ಸ್ಥಳೀಯರು ಲೀಸ್‌ಗಳನ್ನು 2012ರವರೆಗೆ ಮುಂದುವರಿಸಿಕೊಂಡು ಬಂದಿದ್ದಾರೆ. ನಾಲಾದುದ್ದಕ್ಕೂ ಇರುವ ಸ್ಲಂಗಳಲ್ಲಿರುವ ಮನೆಗಳಿಗೆ ಸ್ಲಂಬೋಡ್‌ ìನಿಂದ ಹಕ್ಕುಪತ್ರ ಕೂಡ ನೀಡಲಾಗಿದೆ. ಪಾಲಿಕೆಯಿಂದ ಕಟ್ಟಡ ನಿರಪೇಕ್ಷಣ ಪತ್ರ ಕೂಡ ನೀಡಲಾಗಿದೆ. ಜನಪ್ರತಿನಿ ಧಿಗಳಲ್ಲಿ ಹಾಗೂ ಅಧಿಕಾರಿಗಳ ದೂರದೃಷ್ಟಿ ಕೊರತೆ ಇಂದು ಸಮಸ್ಯೆ ರೂಪ ಪಡೆದುಕೊಂಡಿದೆ. ಇದರ ಮಧ್ಯೆ ಸ್ಮಾರ್ಟ್‌ ಸಿಟಿಯಿಂದ ನಡೆಯುತ್ತಿರುವ ಗ್ರೀನ್‌ ಕಾರಿಡಾರ್‌ ಯೋಜನೆಗೆ ಪೂರಕವಾಗಿ ಕೆಲವೆಡೆ ತೆರವು ಮಾಡಲಾಗಿದೆ.

ಪುನರ್ವಸತಿ ಎಂಬ ಡ್ರಾಮಾ
ಜಂಟಿ ಸರ್ವೇ ಆರಂಭವಾದ ಎರಡು ದಿನಕ್ಕೆ ಇತಿಶ್ರೀ ಹಾಡುವ ಕೆಲಸ ನಡೆದಿತ್ತು. ಆದರೆ ಗಂಭೀರ ವಿಚಾರವಾಗಿದ್ದ ಕಾರಣ ಸರ್ವೇ ಹೆಸರಲ್ಲಿ ಆರು ತಿಂಗಳು ಮುಂದೂಡಿದ್ದರು. ಆದರೆ ನಂತರದಲ್ಲಿ ವರದಿ ಸಿದ್ಧವಾಗುತ್ತಿದ್ದಂತೆ ಲೀಸ್‌ ಪಡೆದವರು ಬಡವರಾಗಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಿದ ನಂತರ ತೆರವುಗೊಳಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಜನಪ್ರತಿನಿಧಿಗಳು ನಿರ್ಧಾರಕ್ಕೆ ಬಂದಿದ್ದರು. ಇದರ ಪರಿಣಾಮ ಪಾಲಿಕೆ ಅಧಿಕಾರಿಗಳು ಕೂಡ ಸರ್ವೇ ವರದಿಯನ್ನು ಪಕ್ಕಕ್ಕೆ ಇಟ್ಟಿದ್ದಾರೆ. ಬಡವರ ಹೆಸರಿನಲ್ಲಿ ಉಳ್ಳವರ ಕಟ್ಟಡಗಳನ್ನು ಉಳಿಸುವ ಕಾರ್ಯ ವ್ಯವಸ್ಥಿತವಾಗಿ ಮಾಡಲಾಗಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.

Advertisement

ಆರಂಭ ಶೂರತ್ವ
ಮಹಾನಗರ ಪಾಲಿಕೆ ಭೂ ಮಾಪನಾ ಇಲಾಖೆ ಮೂಲಕ ಉಣಕಲ್ಲ ನಾಲಾ 8.5 ಕಿಮಿ ಸರ್ವೇ ಮಾಡಿಸಿ ಹೂಗಾರ ಪ್ಲಾಟ್‌, ಶಕ್ತಿ ಕಾಲೋನಿ, ಲಿಂಗರಾಜ ನಗರ, ಪಾಂಡುರಂಗ ಕಾಲೋನಿ, ಚನ್ನಪೇಟೆ ದೋಬಿಘಾಟ್‌ ಸೇರಿದಂತೆ ನಾಲಾದುದ್ದಕ್ಕೂ ಸುಮಾರು 153 ಕಡೆ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಲಾಗಿತ್ತು. ಕೆಲ ಬಿಲ್ಡರ್‌ಗಳು ಕಟ್ಟಡ ನಿರ್ಮಾಣ ಮಾಡಿ ನಾಲಾ ಮಾರ್ಗ ಬದಲಿಸಿರುವ ಕುರಿತು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಆದರೆ ಆರಂಭದಲ್ಲಿ ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಗೆ ಇದ್ದ ಆಸಕ್ತಿ ನಂತರದಲ್ಲಿ ಇಲ್ಲದ ಪರಿಣಾಮ ಇಂದಿಗೂ ಉಣಕಲ್ಲ ನಾಲಾ ಅದೇ ಸ್ಥಿತಿಯಲ್ಲಿದೆ.

ಮಳೆಯಾದರೆ ಜಾಗರಣೆ
ಮಹಾನಗರ ಪಾಲಿಕೆ ನಿರ್ಲಕ್ಷ್ಯ ಜನರಲ್ಲಿ ಆತಂಕ ಮೂಡಿಸಿದೆ. ಮಳೆಗಾಲ ಆರಂಭವಾಗದಿದ್ದರೂ ಅಡ್ಡ ಮಳೆಗಳು ಜನರನ್ನು ಬೆಚ್ಚಿ ಬೀಳಿಸಿವೆ. ಈಗಾಗಲೇ ಉಣಕಲ್ಲ ಕೆರೆ ಭರ್ತಿಯಾಗಿದ್ದು, ಒಂದು ಸಣ್ಣ ಮಳೆಯಾದರೂ ಕೋಡಿ ಹರಿಯಲಿದೆ. ಹೀಗಿರುವಾಗ ಮುಂದಿನ ಮಳೆಗಾಲದ ವೇಳೆಗೆ ಇನ್ನೇನು ಕಾದಿದೆ ಎನ್ನುವ ಭಯ ಸ್ಥಳೀಯರಲ್ಲಿ ಶುರುವಾಗಿದೆ. ಈ ಹಿಂದಿನ ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಶೆಟ್ಟರ ಕಾಲೋನಿ, ದೇವಿ ನಗರ, ಅರ್ಜುನ ನಗರ, ಶಿವಪುರ ಕಾಲೋನಿ, ಸಿದ್ದಲಿಂಗೇಶ್ವರ ನಗರ, ಹನುಮನಗರ, ಚನ್ನಪೇಟ, ಎಸ್‌.ಎಂ. ಕೃಷ್ಣ ನಗರ ಸೇರಿದಂತೆ ನಾಲಾ ಎರಡು ಬದಿಯಲ್ಲಿರುವ ಬಡಾವಣೆ ಜನರು ದೊಡ್ಡ ಮಳೆಯಾದರೆ ರಾತ್ರಿ ಜಾಗರಣೆ ಮಾಡುವಷ್ಟರ ಮಟ್ಟಿಗೆ 2019ರ ಘಟನೆ ಭಯ ಮೂಡಿಸಿದೆ.

ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿಯಿಂದ ನಾಲಾ ಸರ್ವೇ ಮಾಡಿಸಲಾಗಿತ್ತು. ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂಬುದನ್ನು ಗುರುತು ಮಾಡಿದ್ದಾರೆ. ಯಾಕೆ ಅದನ್ನು ತೆರವು
ಮಾಡುತ್ತಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ತೆರವು ಮಾಡದೆ ಕಾಮಗಾರಿ ಮಾಡುವುದರಿಂದ ಮುಂದೆ ಮತ್ತೂಂದು ಸಮಸ್ಯೆ ಎದುರಾಗಲಿದೆ. ತೆರವು ಮಾಡಿ ಯೋಜನೆ ಮಾಡುವುದು ಸೂಕ್ತ.
ಮಹೇಶ ಬುರ್ಲಿ, ಪಾಲಿಕೆ ಮಾಜಿ ಸದಸ್ಯ

ಸರ್ವೇ ಕಾರ್ಯ ಆರಂಭಿಸಿದಾಗ ಕಾಲುವೆ ಸ್ವಚ್ಛತೆ, ಸ್ಪಷ್ಟ ರೂಪ ಪಡೆಯಲಿದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಅಲ್ಲಲ್ಲಿ ಕೆಲವರು ಬಡವರಿದ್ದಾರೆ. ಅವರಿಗೆ ಬೇರೆಡೆ ಮನೆಗಳನ್ನು ನಿರ್ಮಿಸಿ ತೆರವುಗೊಳಿಸುತ್ತಾರೆ ಎನ್ನುತ್ತಿದ್ದಾರೆ. ಯಾವಾಗ ಬಡವರಿಗೆ ಮನೆ ಮಾಡಿ, ತೆರವು ಮಾಡುತ್ತಾರೋ ಗೊತ್ತಿಲ್ಲ. ಎರಡು ವರ್ಷದ ಹಿಂದೆ ನಡೆದ ಘಟನೆಯಿಂದಾಗಿ ಮಳೆ ಬಂದರೆ ಸಾಕು ಭಯ ಮೂಡುತ್ತದೆ.
ದೇವಾನಂದ ಭಜಂತ್ರಿ, ಶಿವಪುರ ಕಾಲೋನಿ

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next