Advertisement

ವಿಶ್ವವಿದ್ಯಾಲಯಗಳು ಜ್ಞಾನದಾಗರಗಳೇ ಹೊರತು ಉದ್ದಿಮೆಗಳಲ್ಲ

03:50 AM Jul 13, 2017 | |

ವಿಶ್ವವಿದ್ಯಾಲಯಗಳು ಜ್ಞಾನದ ಸಮಗ್ರತೆಯನ್ನು ಕಾಪಿಡುವ ತಾಣಗಳೇ ಹೊರತು ಬಿಡಿ ಭಾಗಗಳನ್ನು ಉತ್ಪಾದಿಸುವ ಘಟಕವಲ್ಲ. ಅವುಗಳಿಂದ ನಿವ್ವಳ ಲಾಭವನ್ನು ನಿರೀಕ್ಷಿಸುವು ದಾದರೆ ಅವು ತನ್ನ ಮೂಲ ಧೊರಣೆಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಬಗೆಯ ಬದಲಾವಣೆಗಳು ವಿವಿಗಳಲ್ಲಿ ಉಪಭೋಗದ ಧೊರಣೆಯನ್ನು ಸಂಪೋಷಿಸಬಹುದೇ ಹೊರತು ಜ್ಞಾನದ ಸಮೈಕ್ಯತೆಯನ್ನಲ್ಲ.

Advertisement

ರಾಜ್ಯದ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಾಗದೇ ಕೇವಲ ಹಗರಣಗಳ ಹಿನ್ನೆಲೆಯಲ್ಲಿ 
ಆಗಾಗ ಸುದ್ದಿಯಾಗುವುದು ಆ ಮೂಲಕ ಪ್ರಭುತ್ವ ಅಲ್ಲಿಯ ಶೈಕ್ಷಣಿಕ ಪರಿಸರವನ್ನು ನಿಗ್ರಹಿಸಲು ಮುಂದಾಗುವುದು ನಿಜವಾ ಗಿಯೂ ವಿಶ್ವವಿದ್ಯಾಲಯಗಳ ಘನತೆಗೆ ತಕ್ಕುದಾದ ಲಕ್ಷಣವಲ್ಲ. ಇನ್ನು ಈ ಬಗೆಯ ಅಕಾಡೆಮಿಕ್‌ ವ್ಯವಸ್ಥೆಯಲ್ಲಿದ್ದು ಹಗರಣ ಗಳನ್ನು ಮಾಡಿದವರನ್ನು ಸಹಿಸಿಕೊಂಡದ್ದೇ ದೊಡ್ಡ ಪ್ರಮಾದ. ಮುಂದೆ ಬರುವವರು ಕೂಡ ಅವರದೇ ಮಾರ್ಗದಲ್ಲಿ ಹೆಜ್ಜೆಯಿಡುವ ಸಾಧ್ಯತೆಗಳೂ ಇಲ್ಲದಿಲ್ಲ. ಮಿಕ್ಕವರನ್ನು ಎಚ್ಚರಿಸು ವಂತೆ ಮತ್ತೆಂದೂ ನಡೆಯದಂತಹ ಕಠಿಣ ಕ್ರಮಗಳ ಅಗತ್ಯ ಹೆಚ್ಚಿಗಿದೆ. ನಾಗರಿಕ ಸಮಾಜದ ಮೆದುಳು ಮತ್ತು ಕನ್ನಡಿಯಂತಿರಬೇಕಾದ ವಿಶ್ವವಿದ್ಯಾಲಯಗಳು ಪ್ರಭುತ್ವದ ನಿಯಂತ್ರಣಕ್ಕೆ ಸಿಲುಕಬೇಕಾಗಿ ಬಂದ ಸ್ಥಿತಿಗೆ ಹೊಣೆಗಾರರು ಯಾರು? ಎನ್ನುವ ಬಗ್ಗೆ ಆ ಪರಿಸರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆಲೋಚಿಸಬೇಕು. 

ಆರೋಗ್ಯಕರ ಸಮಾಜ ಸ್ಥಾಪನೆ ರಾಜ್ಯ ಮತ್ತು ನಾಗರಿಕ ಸಮಾಜಗಳೆರಡೂ ಮುಖಾಮುಖೀಯಾಗಿ ನಿಲ್ಲುವಂತಹ ಕೆಲಸಗಳು ನಡೆದಾಗ ಮಾತ್ರ ಸಾಧ್ಯ. ಹಾಗೆ ನೋಡಿದರೆ ನಾಗರಿಕ ಸಮಾಜವೇ ಪ್ರಭುತ್ವಕ್ಕೆ ಮಾರ್ಗದರ್ಶನ ಮಾಡುವಂತಹ ಘನತೆಯನ್ನು ಹೊಂದಿರಬೇಕು. ದುರಂತವೆಂದರೆ ನಾಗರಿಕ ಸಮಾಜದ ಭಾಗವಾಗಿ ಸೃಷ್ಟಿಯಾದ ರಾಜ್ಯವೇ ಇಂದು ನಾಗರಿಕ ಸಮಾಜದ ಎಲ್ಲ ಆಗುಹೋಗುಗಳನ್ನು ನಿರ್ಧರಿಸುವಂತಾಗಿರುವುದು, ಆಳುವಂತಾಗಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಹು ದೊಡ್ಡ ವ್ಯಂಗ್ಯ. ಮಾರ್ಕ್ಸ್ ಮತ್ತು ಎಂಗೆಲ್ಸ್‌ ರಾಜಕೀಯ ಪ್ರಭುತ್ವಕ್ಕಿಂತಲೂ ನಾಗರಿಕ ಸಮಾಜಕ್ಕೆ ಹೆಚ್ಚಿನ ಮನ್ನಣೆ ಸಿಗುವಂತಾಗಬೇಕು ಎಂದು ಹಂಬಲಿಸಿರುವುದಿತ್ತು. ಇಟಲಿಯ ಚಿಂತಕ ಆಂಟೊನಿಯೋ ಗ್ರಾಮಿ ಕೂಡ ನಾಗರಿಕ ಸಮಾಜವೇ ಪ್ರತಿಯೊಂದನ್ನು ನಿರ್ಧರಿಸುವಂತಾಗಬೇಕು ಎಂದಿದ್ದರು.

ನಾಗರಿಕ ಸಮಾಜ ಮಾತ್ರ ನೈತಿಕತೆ, ವ್ಯಕ್ತಿಸ್ವಾತಂತ್ರ್ಯ ಮತ್ತು ತಾತ್ವಿಕತೆಯನ್ನು ಎತ್ತಿ ಹಿಡಿಯಬಹುದಾದ ಗುಣಗಳನ್ನು ಹೊಂದಿದೆ ಎಂದಿರುವುದಿತ್ತು. ಗ್ರಾಮಿÕಯವರು ಸಾಂಸ್ಕೃತಿಕ ಮತ್ತು ಸಾಮಾಜಿಕ ನಾಯಕತ್ವ, ರಾಜಕೀಯ ನಾಯಕತ್ವಕ್ಕಿಂತಲೂ ಶ್ರೇಷ್ಠವಾದುದು ಎನ್ನುವ ಮೂಲಕ ನಾಗರಿಕ ಸಮಾಜವನ್ನು ಬೆಂಬಲಿಸಿದ್ದರು. ರಾಜ್ಯ ಮತ್ತು ನಾಗರಿಕ ಸಮಾಜಗಳೆರಡೂ ಪರಸ್ಪರ ಅರಿತು ವ್ಯವಹರಿಸುವುದು ಉಚಿತ ಎನ್ನುವುದು ಅವನ ನಿಲುವಾಗಿತ್ತು. ಯಾವುದೇ ಒಂದು ದೇಶದ ಶಿಕ್ಷಣ ಉಚ್ಛಾ†ಯ ಸ್ಥಿತಿಯಲ್ಲಿರಬೇಕಾದರೆ ರಾಜ್ಯ ಇಲ್ಲವೇ ಪ್ರಭುತ್ವ ಅಕಾಡೆಮಿಕ್‌ ಪರಿಸರದಲ್ಲಿ ಸಾಧ್ಯವಾದಷ್ಟು ಕೈಯಾಡಿಸುವುದನ್ನು ಕಡಿಮೆ ಮಾಡಬೇಕು. 1854ರಷ್ಟು ಹಿಂದೆಯೇ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯ ಬಗ್ಗೆ ಲೇಖನ ಬರೆದು ಇಡೀ ಜಗತ್ತಿನ ಗಮನ ಸೆಳೆದ ಚಿಂತಕ ಜಾನ್‌ ಹೆನ್ರಿ ನ್ಯುಮನ್‌ ಎನ್ನುವವರು “ಯಾವುದೇ ಕಾರಣದಿಂದಲೂ ವಿಶ್ವವಿದ್ಯಾಲಯಗಳಲ್ಲಿರುವ ಜ್ಞಾನದ ಅಖಂಡತೆಗೆ ಧಕ್ಕೆ ಬರದಂತೆ ತಡೆಯಬೇಕು. ಅಂಥಲ್ಲಿ ಮಾತ್ರ ಮುಕ್ತ ಶಿಕ್ಷಣ ಸಾಧ್ಯ. ಎಲ್ಲಿ ಮುಕ್ತ ಶಿಕ್ಷಣವಿದೆಯೋ ಅಲ್ಲಿಮಾತ್ರ ಮೆದುಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಾಧ್ಯ’ ಎಂದು ಬರೆದಿರುವುದಿದೆ.

ಕಳೆದ ಅನೇಕ ವರ್ಷಗಳಿಂದಲೂ ನಮ್ಮಲ್ಲಿ ಶೈಕ್ಷಣಿಕ ವಲಯ ದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಲೇ ಬರಲಾಗಿದೆ. ಪ್ರಚಲಿತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ದೋಷಗಳಿವೆ ಇಲ್ಲವೆಂದಲ್ಲ ಆದರೆ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಂಥಾ ಶಿಕ್ಷಣ ತಜ್ಞರು ಕಾರ್ಯ ನಿರ್ವಹಿಸುತ್ತಿ¨ªಾರೆ ಎನ್ನುವ ಬಗ್ಗೆಯೂ ಯೋಚಿಸಬೇಕು. ಕೇವಲ ವಿಶ್ವವಿದ್ಯಾಲಯಗಳ ಹೆಸರು ಬದಲಾಯಿಸುವುದರಿಂದ ಆಂತರಿಕ ಸುಧಾರಣೆಗಳು ಸಾಧ್ಯವಾಗುವುದಿಲ್ಲ. ಯಾವುದೇ ಕಾರಣಕ್ಕೂ ವಿಶ್ವವಿದ್ಯಾಲಯಗಳಲ್ಲಿರುವ ಜ್ಞಾನದ ಶಿಸ್ತಿಗೆ ಧಕ್ಕೆ ಬಾರದಂತೆ ಕ್ರಮಗಳನ್ನು ಅನುಸರಿಸಬೇಕು. 

Advertisement

ಪ್ರಭುತ್ವ ಹೊಸ ಹೊಸ ನಿರ್ಬಂಧಗಳ ಮೂಲಕ ವಿಶ್ವವಿದ್ಯಾಲಯಗಳಲ್ಲಿರುವ ಲೋಪಗಳನ್ನು ಎಷ್ಟರ ಮಟ್ಟಿಗೆ ಸರಿಪಡಿಸಲು ಸಾಧ್ಯ ಎನ್ನುವುದು ಮುಖ್ಯ ಪ್ರಶ್ನೆ. ವಿಶ್ವವಿದ್ಯಾಲಯಗಳು ಜ್ಞಾನದ ಸಮಗ್ರತೆಯನ್ನು ಕಾಪಿಡುವ ತಾಣಗಳೇ ಹೊರತು ಬಿಡಿ ಭಾಗಗಳನ್ನು ಉತ್ಪಾದಿಸುವ ಘಟಕವಲ್ಲ. ಅವುಗಳಿಂದ ನಿವ್ವಳ ಲಾಭವನ್ನು ನಿರೀಕ್ಷಿಸುವು ದಾದರೆ ಅವು ತನ್ನ ಮೂಲ ಧೊರಣೆಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿ ಕೊಳ್ಳಬೇಕಾಗುತ್ತದೆ. ಈ ಬಗೆಯ ಬದಲಾವಣೆಗಳು ವಿಶ್ವ ವಿದ್ಯಾಲಯಗಳಲ್ಲಿ ಉಪಭೋಗದ ಧೊರಣೆಯನ್ನು ಸಂಪೋ ಷಿಸಬಹುದೇ ಹೊರತು ಜ್ಞಾನದ ಸಮೈಕ್ಯತೆಯನ್ನಲ್ಲ. 

ಈಗಾಗಲೇ ಜಾಗತೀಕರಣದ ಸಂದರ್ಭದಲ್ಲಿ ಮಾರುಕಟ್ಟೆಗಾಗಿ ಸಲ್ಲುವ ಶಿಕ್ಷಣ ನೀಡುವ ಭರಾಟೆಯಲ್ಲಿ ಮಾನವ ಸಮಾಜದ ಸಂಪೋಷಣಾ ಸಂಗತಿಗಳಂತಿರುವ ಕಲಾ ನಿಕಾಯಗಳು ಗಣನೀಯವಾಗಿ ಸೊರಗುತ್ತಿವೆ. ಇದು ಶೈಕ್ಷಣಿಕ ಪರಿಸರದಲ್ಲಿ ಉತ್ತಮ ಬೆಳವಣಿಗೆ ಯಂತೂ ಅಲ್ಲ. ಜ್ಞಾನ ಮತ್ತು ಡಿಗ್ರಿಗಳು ನಾಗರಿಕ ಸಮಾಜದ ಆರೋಗ್ಯದ ಹಿನ್ನೆಲೆಯಲ್ಲಿ ಹಂಚಿಕೆಯಾಗದೇ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಉದ್ದಿಮೆಯಲ್ಲಿ ತಯಾರಾಗುವ ಕಮಾಡಿಟಿ ಮಟ್ಟದಲ್ಲಿ ಶಿಕ್ಷಣ ದೊರೆಯುತ್ತಿರುವುದು, ಇದನ್ನೇ ನಾವು ಬದಲಾವಣೆ ಎನ್ನುತ್ತ ವಿಶ್ವವಿದ್ಯಾಲಯಗಳನ್ನು ಲಾಭ ಆಧಾರಿತ ಘಟಕಗಳಂತೆ ಪರಿಗಣಿಸುವ ಪರಿಪಾಠ ಆರಂಭವಾಗಿ ವಿಶ್ವವಿದ್ಯಾಲಯಗಳು ಜ್ಞಾನ ಸಮೈಕ್ಯತೆಯ ತಾಣಗಳಾಗಿ ತೋರದೇ ಉತ್ಪಾದನೆ ಮತ್ತು ಉಪಭೋಗದ ಘಟಕದಂತೆ ತೋರುತ್ತಿರುವುದು ವಿಷಾದಕರ.

ಪ್ರತಿಯೊಂದನ್ನು ಲಾಭದ ನಿಟ್ಟಿನಲ್ಲಿ ನೋಡುವ ಪರಿಣಾಮ ವಾಗಿಯೇ ನಿಜವಾದ ಬುದ್ಧಿವಂತರು, ಪ್ರತಿಭಾವಂತರಿಗೆ ವಿಶ್ವ ವಿದ್ಯಾಲಯಗಳಲ್ಲಿ ಶೈಕ್ಷಣಿಕ ಪರಿಸರದಲ್ಲಿ ಅವಕಾಶ ದೊರೆಯ ದಂತಾಗಿದೆ. ಶೂ ಮೆಕರ್‌ ಎನ್ನುವ ಚಿಂತಕರು “ಮನುಷ್ಯ ತನ್ನ ಸುಖಕ್ಕಾಗಿ ತಾಂತ್ರಿಕತೆಯನ್ನು ಬೆಳೆಸಿದ, ಅನಂತರ ಅದೇ ತಾಂತ್ರಿ ಕತೆಯ ಹಾವಳಿ ಅವನ ಸುಖವನ್ನೇ ಕಸಿಯಿತು’ ಎನ್ನುತ್ತಾರೆ. ಭೌತಿಕವಾದ ಅಳತೆಗೋಲು ಜ್ಞಾನದಾಗರವಾಗಿರುವ ವಿಶ್ವ ವಿದ್ಯಾಲಯಗಳಿಗೆ ಸಲ್ಲದು. ಅದೇನಿದ್ದರೂ ಬೌದ್ಧಿಕ ಕಸರತ್ತಿನ ಅಖಾಡಾ. ಅಲ್ಲಿ ಆ ಚಟುವಟಿಕೆಗಳಿಗೆ ಮಾತ್ರ ಜಾಗವಿರಬೇಕು. ಕೇಂದ್ರ ಕೂಡ ಈಗಿರುವ ಯು.ಜಿ.ಸಿ. ಎನ್ನುವ ಹೆಸರನ್ನು ಸದ್ಯದಲ್ಲಿಯೇ ಬದಲಾಯಿಸಲಿದೆ. ಅದಾಗಲೇ ಹೇಳಿದಂತೆ ಹೊಸ ಹೆಸರು, ಕಟ್ಟಡ ಸ್ಥಾಪನೆ, ಉಪಕರಣಗಳ ವಿತರಣೆ ಶಿಕ್ಷಣದ ಗುಣಮಟ್ಟವಲ್ಲ. ಅದು ಇವೆಲ್ಲವುಗಳನ್ನು ಮೀರಿ¨ªಾಗಿದೆ. ಅತಿ ಮುಖ್ಯವಾಗಿ ಅದು ಕಾಲೇಜಾಗಿರಲಿ, ವಿಶ್ವವಿದ್ಯಾಲಯಗಳಾಗಿ ರಲಿ ಮಾಡಬೇಕಾದ ಕೆಲಸ ಒಂದಿದೆ -ಅದೇನೆಂದರೆ ಆಡಳಿತಾತ್ಮಕ ಚಟುವಟಿಕೆಗಳಿಗೂ ಮತ್ತು ಅಕಾಡೆಮಿಕ್‌ ಚಟುವಟಿಕೆಗಳಿಗೂ ತಳುಕು ಹಾಕಬಾರದು. ಅವೆರಡೂ ಪ್ರತ್ಯೇಕವಾಗಿಯೇ ಕಾರ್ಯ ನಿರ್ವಹಿಸುವಲ್ಲಿಯೇ ಅರ್ಧ ಸುಧಾರಣೆ ಅಡಕವಾಗಿದೆ. ಏನೇ ಬದಲಾವಣೆ, ನಿಯಂತ್ರಣ ಮಾಡುವುದಿದ್ದರೂ ವ್ಯವಸ್ಥಿತವಾಗಿ ಆ ವಲಯವನ್ನು ಅಧ್ಯಯನ ಮಾಡಿ, ಸಾಧಕ ಬಾಧಕಗಳನ್ನು ಅರಿತು ನಿಜವಾದ ಕಳಕಳಿಯಿಂದ ಶಿಕ್ಷಣದಲ್ಲಿ ಸುಧಾರಣೆ ಬಯಸುವವರಿಂದ ಮಾತ್ರ ಆರೋಗ್ಯಕರ ಬದಲಾವಾಣೆ ಸಾಧ್ಯ.

– ಡಾ| ಎಸ್‌. ಬಿ. ಜೋಗುರ

Advertisement

Udayavani is now on Telegram. Click here to join our channel and stay updated with the latest news.

Next