Advertisement

ರಾಜ್ಯದ ಅಭಿವೃದ್ಧಿಗೆ ನೆರವಾಗಲು ಸಿದ್ಧ : ಕೇಂದ್ರ ಸಚಿವ ಸದಾನಂದ ಗೌಡ

10:42 AM Jun 01, 2019 | keerthan |

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ನಿವಾಸಿ ಡಿ.ವಿ. ಸದಾನಂದ ಗೌಡ ಹೋರಾಟದ ಮೂಲಕವೇ ನಾಯಕರಾಗಿ ರೂಪುಗೊಂಡವರು. ಸಾಮಾನ್ಯ ಕಾರ್ಯಕರ್ತನಿಂದ ಶಾಸಕರಾಗಿ,
ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಎರಡನೆ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿ ಅವರನ್ನು ಸಂದರ್ಶಿಸಿತು

Advertisement

* ಎರಡನೇ ಬಾರಿಗೆ ಮೋದಿ ಸರಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದಿರಿ? ಯಾವ ಕಾರಣಕ್ಕೆ ನಿಮಗೆ ಈ ಜವಾಬ್ದಾರಿ ಸಿಕ್ಕಿರಬಹುದು?
ಕಳೆದ ಐದು ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕತೆ, ನಿಷ್ಠೆಯಿಂದ ಸಚಿವ ಸ್ಥಾನ ಜವಬ್ದಾರಿ ನಿರ್ವಹಿಸಿದ್ದೇನೆ. ನರೇಂದ್ರ ಮೋದಿ ವಿಚಾರಧಾರೆಗಳಿಗೆ ಬದ್ಧನಾಗಿ ಆದೇಶಗಳನ್ನು ಅಕ್ಷರಶಃ ಪಾಲಿಸಿದ್ದೇನೆ. ದೇಶದ, ರಾಜ್ಯ,  ಕ್ಷೇತ್ರದ ಹಿತಾಸಕ್ತಿಯಿಂದ ಕೆಲಸ ಮಾಡಿದ್ದೇನೆ. ಹಾಗಾಗಿ ಮೋದಿ ಅವರ ತಂಡದಲ್ಲಿ ಉಳಿಯಲು ನನಗೆ ಅರ್ಹತೆ ಇದೆ ಎಂದು ಪರಿಗಣಿಸಿ ನನ್ನನ್ನು ಉಳಿಸಿಕೊಂಡು ಎರಡನೇ ಬಾರಿ ಜವಾಬ್ದಾರಿ ನೀಡಿದ್ದಾರೆ.

*ರಾಸಾಯನಿಕ ಮತ್ತು ರಸಗೊಬ್ಬರ ಜನರಿಗೆ ಮಿತದರಲ್ಲಿ ದೊರೆಯಲು ಏನು ಕ್ರಮ ಕೈಗೊವಿರಿ?
ರಸಗೊಬ್ಬರ ಉತ್ಪಾದನೆಯ ಮೂಲವಸ್ತುಗಳು ನಮ್ಮ ದೇಶದಲ್ಲಿ ಸಿಗದ ಕಾರಣ ವಿದೇಶಗಳಿಂದ ಆಮದು ಅನಿವಾರ್ಯ ಇದರಿಂದ ವೆಚ್ಚ ಹೆಚ್ಚಾಗಿ ಬೆಲೆ ಏರುತ್ತದೆ. ಇದಕ್ಕೆ ಕಡಿವಾಣ ಹಾಕಲು ಆಮದಿಗೆ ನಿಯಂತ್ರಣ ಹೇರಿ ಭಾರತದಲ್ಲೇ ಉತ್ಪಾದಿಸಲು ಯೋಜನೆ ಕೈಗೊಳ್ಳಲಾಗಿದೆ. ಕಡಿಮೆ ದರದಲ್ಲಿ ರೈತರಿಗೆ ರಸಗೊಬ್ಬರ ದೊರೆಯಬೇಕು ಎನ್ನುವ ಕಾರಣಕ್ಕೆ ಮೋದಿ ಸರಕಾರ ಹತ್ತು ವರ್ಷಗಳ ಹಿಂದೆ ಮುಚ್ಚಿದ್ದ ಕಾರ್ಖಾನೆಗಳ ಪುನಶ್ಚೇತನಕ್ಕೆ 15 ಸಾವಿರ ಕೋ. ರೂ. ಬಿಡುಗಡೆ ಮಾಡಿತ್ತು. ಮುಂದಿನ ದಿನಗಳಲ್ಲಿ ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರಗಳು ಸಿಗಲಿದೆ.

* ಕಸ್ತೂರಿ ರಂಗನ್‌ ವರದಿ ಜಾರಿ ಕುರಿತಂತೆ ಇಲ್ಲಿನ ಗ್ರಾಮಗಳಲ್ಲಿ ಜನರಿಗೆ ಆತಂಕ ಇದೆ. ಇದಕ್ಕೆ ಕೇಂದ್ರದ ಮೂಲಕ ಸ್ಪಂದನೆ ನೀಡುತ್ತೀರಾ?
ಕಸ್ತೂರಿ ರಂಗನ್‌ ವರದಿ ಜಾರಿಯಿಂದ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಕೇಂದ್ರ ಸಂಪೂರ್ಣ ಬದ್ಧವಾಗಿದೆ. ಜನರ ಬೇಡಿಕೆಯಂತೆ ನಾನೇ ಖುದ್ಧಾಗಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಹಾಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ.

* ಅಡಿಕೆ ಬೆಳೆಗಾರರ ಪರ ನೀವು ಯಾವ ರೀತಿ ನೆರವಾಗುತ್ತೀರಿ?
ಅಡಿಕೆ ಧಾರಣೆ 30 ರೂ.ಗೆ ಇಳಿಕೆ ಆಗಿದ್ದಾಗ ನಾನು ಹೋರಾಟ ಕೈಗೆತ್ತಿಕೊಂಡು ಬೆಂಬಲ ಬೆಲೆ ಕೊಡಿಸಲು ನೆರವಾಗಿದ್ದೇನೆ. ಅಡಿಕೆ ಆಮದು ಸುಂಕ ಕಡಿಮೆ ಇದ್ದದನ್ನು ಶೇ.120ರಷ್ಟು ಹೆಚ್ಚಿಸಿ ಇಲ್ಲಿ ಧಾರಣೆ ಹೆಚ್ಚಳವಾಗುವಲ್ಲಿ ಸಹಕಾರ ನೀಡಿದ್ದೇನೆ. ಹೊರ ದೇಶಗಳಿಂದ ಕಳ್ಳ ಸಾಗಾಣಿಕೆ ಮೂಲಕ ದೇಶಕ್ಕೆ ಬರುವ ಕಳಪೆ ದರ್ಜೆ ಅಡಿಕೆ ತಡೆದು ನಿಯಂತ್ರಣ ಹೇರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಡಿಕೆಯ ಈಗಿನ ಧಾರಣೆ, ಸುಧಾರಣೆಗೆ ಹದಿನೈದು ವರ್ಷಗಳ ಹಿಂದೆ ನಾನು ಮಾಡಿದ ನಿರಂತರ ಕೆಲಸಗಳೇ ಪೂರಕ. ಮುಂದೆಯೂ ಬೆಳೆಗಾರರ ಪರ ನಿಲ್ಲುತ್ತೇನೆ.

Advertisement

* ರಾಜ್ಯಕ್ಕೆ ಸಂಬಂಧಿಸಿ ನಿಮ್ಮಿಂದ ಏನು ನಿರೀಕ್ಷೆ ಮಾಡಬಹುದು?
ರಾಜ್ಯದ ಸಮಗ್ರ ಅಭಿವೃದ್ಧಿಗೆ ಎಲ್ಲ ಸಹಕಾರ ಒದಗಿಸಲು ಸಿದ್ಧನಿದ್ದೇನೆ. ಕಳೆದ ಬಾರಿ ಕೇಂದ್ರದ ಸಚಿವನಾಗಿದ್ದ ಸಂದರ್ಭ ಡಿ.ಕೆ.ಶಿವಕುಮಾರ್‌,  ಕೃಷ್ಣ ಭೈರೇಗೌಡ ಅವರು ನನ್ನನ್ನು ಭೇಟಿಯಾಗಿದ್ದರು. ಈ ವೇಳೆ ರಾಜ್ಯದ ಎಲ್ಲ ಲೋಕಸಭಾ, ರಾಜ್ಯ ಸಭಾ ಸದಸ್ಯರನ್ನು ಕರೆಯಿಸಿ ನಿಯೋಗ ಕರೆದುಕೊಂಡು ಹೋಗಿ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಕೊಡಿಸಿದ್ದೇನೆ ಯುಪಿಎ ಸರಕಾರದ ಐದು ವರ್ಷ ಅವಧಿಯಲ್ಲಿ ಕರ್ನಾಟಕಕ್ಕೆ 75 ಸಾವಿರ ಕೋ.ರೂ. ಬಂದಿತ್ತು. ಮೋದಿ ಸರಕಾರದ ಐದು ವರ್ಷದ ಅವಧಿಯಲ್ಲಿ 2.42 ಲಕ್ಷ ರೂ. ಕೋಟಿ ಅನುದಾನ ಕೊಡಿಸಿದ್ದೇವೆ. ಮೂರು ಪಟ್ಟು ಅಧಿಕ ಅನುದಾನ ದೊರೆಯಲು ಸಹಕಾರ ನೀಡಿದ್ದೇನೆ.

* ಮೋದಿ ಮಂತ್ರಿ ಮಂಡಲದ ಕುರಿತು ನಿಮ್ಮ ಅಭಿಪ್ರಾಯ ಏನು?
ಯಾರು ಅತ್ಯಂತ ಉತ್ತಮವಾಗಿ ಕೆಲಸ ಮಾಡುತ್ತಾರೋ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೋ, ದೇಶದ ಪ್ರಗತಿಗೆ ತನ್ನನ್ನು ತಾನು ಸಮರ್ಪಣಾಭಾವದಿಂದ ತೊಡಗಿಸಿಕೊಳ್ಳುತ್ತಾರೋ ಅಂತಹವರಿಗೆ ಮೋದಿ ಅವಕಾಶ ನೀಡಿದ್ದಾರೆ. ಇದೊಂದು ಅತ್ಯುತ್ತಮ ತಂಡ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next