ಚಿಂಚೋಳಿ: ಬರ್ಮಾ ದೇಶದಿಂದ ತೊಗರಿ ಆಮದು ಮಾಡಿಕೊಂಡಿದ್ದರಿಂದ ಸ್ಥಳೀಯ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಸೇಡಂ ಮತಕ್ಷೇತ್ರಕ್ಕೆ ಒಳಪಟ್ಟಿರುವ ತಾಲೂಕಿನ ಕರ್ಚಖೇಡ, ಗರಗಪಳ್ಳಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಕರ್ಚಖೇಡ ಮತ್ತು ಚತ್ರಸಾಲ ಗ್ರಾಮದಲ್ಲಿ ಏರ್ಪಡಿಸಿದ ಬಹಿರಂಗ ಚುನಾವಣೆ ಪ್ರಚಾರದಲ್ಲಿ ಅವರು ಮಾತನಾಡಿದರು.
ಬಿಜೆಪಿ ಮುಖಂಡರಿಗೆ ರೈತರ ಕಾಳಜಿ ಇಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 70 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಒಂದು ಲಕ್ಷ ರೂ., ಸಮ್ಮಿಶ್ರ ಸರ್ಕಾರದಲ್ಲಿ 50 ಸಾವಿರ ರೂ. ಸಾಲ ಮನ್ನಾ ಮಾಡಲಾಗಿತ್ತು. ಈಗಿನ ಸರ್ಕಾರ ರೈತರ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದರು.
ಕರ್ಚಖೇಡ ಮತ್ತುಗರಗಪಳ್ಳಿ ಗ್ರಾಪಂಗಳಿಗೆ ಕಳೆದ ಏಳು ವರ್ಷಗಳಿಂದ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಚುನಾವಣೆ ನಡೆದಿರಲಿಲ್ಲ ಎಂದು ಹೇಳಿದರು.
ಮುಖಂಡರಾದ ಬಸವರಾಜ ಸಜ್ಜನಶೆಟ್ಟಿ. ಭೀಮರೆಡ್ಡಿ ಬುರುಗಪಳ್ಳಿ, ಬಸವರಾಜ ಸುಲೇಪೇಟ, ತಾಹೇರ ಪಟೇಲ, ಮೇಘರಾಜ ರಾಠೊಡ, ಸಂತೋಷ ರುದನೂರ ಮಾತನಾಡಿದರು.