Advertisement

ಸ್ವ ಘೋಷಿತ ಪದಾಧಿಕಾರಿಗಳ ಕೃತ್ಯ: ಸಖಾಫಿ

12:37 AM Jun 29, 2017 | Team Udayavani |

ಮಂಗಳೂರು: ಈದುಲ್‌ ಫಿತ್ರ ಆಚರಣೆ ವಿಚಾರದಲ್ಲಿ ಉಳ್ಳಾಲದ ಜನತೆಗೆ ಯಾವುದೇ ಗೊಂದಲವಿಲ್ಲ; ದರ್ಗಾ ಸಮಿತಿಯ ಕೆಲವು ‘ಸ್ವಘೋಷಿತ ಪದಾಧಿಕಾರಿಗಳು’ ಕೃತಕ ವಿವಾದ ಸೃಷ್ಟಿಸಿದ್ದಾರೆ ಎಂದು ಉಳ್ಳಾಲದ ಸಯ್ಯಿದ್‌ ಮದನಿ ಸುನ್ನಿ ಸೆಂಟ್ರಲ್‌ ಕಮಿಟಿಯ ನಿರ್ದೇಶಕ ಶಿಹಾಬುದ್ದೀನ್‌ ಸಖಾಫಿ ಆರೋಪಿಸಿದ್ದಾರೆ. ಚಂದ್ರ ದರ್ಶನವನ್ನು ಆಧರಿಸಿ ಈದುಲ್‌ ಫಿತ್ರ ಆಚರಿಸಲಾಗುತ್ತಿದ್ದು, ಚಂದ್ರದರ್ಶನಕ್ಕೆ ಸಂಬಂಧಿಸಿ ಆಯಾ ಮೊಹಲ್ಲಾದ ಖಾಝಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈದ್‌ ಕುರಿತಂತೆ ಮಂಗಳೂರು ಮತ್ತು ಉಡುಪಿ ಖಾಝಿಗಳ ಘೋಷಣೆಯು ಅವರನ್ನು ಖಾಝಿಗಳಾಗಿ ನೇಮಿಸಿದ ಮೊಹಲ್ಲಾಗಳಿಗೆ ಮಾತ್ರ ಸೀಮಿತವಾಗಿದೆ. ಅವರ ತೀರ್ಮಾನವು ಉಳ್ಳಾಲದ ಖಾಝಿ ಸಯ್ಯಿದ್‌ ಫಝಲ್‌ ಕೊಯಮ್ಮ ತಂšಳ್‌ ಕೂರತ್‌ ಅವರು ಖಾಝಿಯಾಗಿರುವ ಮೊಹಲ್ಲಾಗಳಿಗೆ ಅನ್ವಯಿಸುವುದಿಲ್ಲ ಎಂದವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಪ್ರತ್ಯೇಕ ಆಚರಣೆ ಅಪಚಾರವಲ್ಲ: ಈದ್‌ ಆಚರಣೆಯು ಯಾವುದೇ ಸಂಘಟನೆಯ ಆದೇಶದಂತೆ ನೆರವೇರುವ ರೂಢಿಯಲ್ಲ. ವಿವಿಧ ಮೊಹಲ್ಲಾಗಳಲ್ಲಿ ಪ್ರತ್ಯೇಕ ಪ್ರತ್ಯೇಕ ಈದ್‌ ಆಚರಣೆಯಾಗುವುದು ಅಪಚಾರವೇನಲ್ಲ. ಅದು ಸಹಜ. ಆಯಾ ಮೊಹಲ್ಲಾದವರು ಖಾಝಿಗಳ ಆದೇಶದಂತೆ ಈದ್‌ ಆಚರಿಸುವುದು ಸರಿಯಾದ ಕ್ರಮವಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ, ಬೆಳ್ತಂಗಡಿ ತಾಲೂಕಿನ 63 ಮೊಹಲ್ಲಾಗಳು, ಸುಳ್ಯ ತಾಲೂಕಿನ 11 ಮೊಹಲ್ಲಾಗಳು ಮತ್ತು ಮುಡಿಪು ಸಂಯುಕ್ತ ಜಮಾತ್‌ಗೊಳಪಟ್ಟ ಕೆಲವು ಮೊಹಲ್ಲಾಗಳು ಸೇರಿದಂತೆ 183ರಷ್ಟು ಮೊಹಲ್ಲಾಗಳಿಗೆ ಕೂರತ್‌ ತಂšಳ್‌ ಖಾಝಿಯಾಗಿರುತ್ತಾರೆ. ತಲೆ ತಲಾಂತರಗಳಿಂದ ಉಳ್ಳಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಉಳ್ಳಾಲ ಖಾಝಿಯವರು ಸೂಚಿಸುವ ದಿನದಂದು ಈದ್‌ ಆಚರಿಸುತ್ತಾ ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಖಾಝಿಗಳ ಆದೇಶದಂತೆ ಸೋಮವಾರ ಈದ್‌ ಆಚರಿಸಲಾಗಿದೆ ಎಂದು ತಿಳಿಸಿದರು. ಸಯ್ಯಿದ್‌ ಮದನಿ ಸುನ್ನಿ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಜಮಾಲ್‌ ಮುಸ್ಲಿಯಾರ್‌, ಕುಬೈಲ್‌ ತಂšಳ್‌, ಆಸಿಫ್‌ ಮದನಿ ನಗರ, ಯು.ಡಿ. ಬದ್ರುದ್ದೀನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next