Advertisement

ಯುದ್ಧ ಮನುಕುಲದ ಅನಿವಾರ್ಯ ಶಾಪ

11:44 PM May 08, 2022 | Team Udayavani |

“ಯುದ್ಧ’ ಎನ್ನುವುದು ಒಂದು ಮಾನಸಿಕತೆ ಮಾತ್ರವಲ್ಲ ಅದೊಂದು “ಜೈವಿಕ ಪ್ರಕ್ರಿಯೆ’ ಎಂಬುದಾಗಿಯೂ ವಿಶ್ಲೇಷಿಸಲಾಗಿದೆ. ಮಾನವನ ಇತಿಹಾಸದ ಉದ್ದಕ್ಕೂ ಯುದ್ಧ- ಶಾಂತಿಯ ನೆರಳು-ಬೆಳಕಿನಾಟ ಸಾಗಿದೆ. “ಯುದ್ಧ’ ಅನ್ಯಾಯವನ್ನು ಮೆಟ್ಟಿ ನ್ಯಾಯ- ಧರ್ಮ ಒದಗಿಸಬಲ್ಲ ಏಕೈಕ ಕೊನೆಯ ಆಯ್ಕೆ, ಕಟ್ಟಕಡೆಯ ಮೆಟ್ಟಿಲು ಎಂಬ ವ್ಯಾಖ್ಯೆಯೂ ಇದೆ.

Advertisement

ನಾವು ಯುದ್ಧವನ್ನು ಕೊನೆಗಾಣಿಸಬೇಕು; ಇಲ್ಲವಾದರೆ ಯುದ್ಧವೇ ನಮ್ಮನ್ನು ಕೊನೆಗಾಣಿಸುತ್ತದೆ- ಇದು ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್‌. ಎಫ್.ಕೆನಡಿಯವರ ಉದ್ಗಾರ. ಈ ಭೂಗೋಲದ ಮಾನವ ಇತಿಹಾಸದ ಉಗಮದೊಂದಿಗೇ “ಯುದ್ಧ’ ಸಂಗಾತಿಯಾಗಿದೆ. ಇದೀಗ ಇಡೀ ಜಗತ್ತನ್ನೇ ವಿಧ್ವಂಸಗೊಳಿಸಬಲ್ಲ ಸರ್ವಶಕ್ತ ಅಣುಬಾಂಬು ರಾಷ್ಟ್ರಗಳ ಬತ್ತಳಿಕೆಯಲ್ಲಿದೆ. ಇನ್ನೂ ಕೆಲವು ರಾಷ್ಟ್ರಗಳು ಈ ಅಗ್ನಿ ಪಥದಲ್ಲಿ ಇವೆ. ಅಮೆರಿಕ ಸಂಯುಕ್ತ ಸಂಸ್ಥಾನ ಒಂದರಲ್ಲೇ ಒಂದಲ್ಲ 30ಕ್ಕಿಂತಲೂ ಹೆಚ್ಚು ಬಾರಿ ಇಡೀ ಜಗತ್ತನ್ನೇ ಸುಡುವ, ಮನುಕುಲವನ್ನೇ ಇಲ್ಲವಾಗಿಸುವ ನ್ಯೂಕ್ಲಿಯರ್‌ ಬಾಂಬ್‌ಗಳ ಇರುವಿಕೆಯನ್ನು ಸ್ವತಃ ಪೆಂಟಗಾನ್‌ ಬಹಿರಂಗಗೊಳಿಸಿದೆ. ಇದು ಕೇವಲ ಕಾಗೆ-ಗುಬ್ಬಚ್ಚಿಗಳ ಕಥೆಯಲ್ಲ; ವಿನಾಶದ ಪ್ರಪಾತದ ಅಂಚಿನಲ್ಲಿ ನಾವಿದ್ದೇವೆ ಎನ್ನುವ ಕಟು ಸತ್ಯದ ಅನಾವರಣ: 1945ರ ದ್ವಿತೀಯ ಮಹಾ ಸಮರದ ವೇಳೆ ಸೂರ್ಯೋದಯ ರಾಷ್ಟ್ರ ಎನಿಸಿದ ಜಪಾನಿನ ಹಿರೋಶಿಮಾ, ನಾಗಸಾಕಿ ನಗರಗಳು ಸೂರ್ಯೋದಯವನ್ನೇ ಕಾಣದೇ ಬೂದಿರಾಶಿಯಾಗಿ ಕರಗಿದುದು ಮಾನವ ದುರಂತದ ಮೂಕಸಾಕ್ಷಿ!

ಇದೀಗ ವಿಶ್ವಶಾಂತಿಯ ಸುಂದರ ವೃಕ್ಷಕ್ಕೆ ರಷ್ಯಾ- ಉಕ್ರೇನ್‌ ಸಮರದ ಸಿಡಿಲು, ಮಿಂಚು ಅಪ್ಪಳಿಸುತ್ತಲೇ ಇದೆ! ಮಾನವ ರಕ್ತ ಹರಿಯುತ್ತಲೇ ಇದೆ! ಸಮಗ್ರ ಉಕ್ರೇ ನಿನ ನಗರ-  ಹಳ್ಳಿಗಳು ರಷ್ಯಾದ ಉಕ್ಕಿನ ಕಬಂಧ ಬಾಹು ಗಳಿಂದ ಆವರಿತಗೊಂಡು ದಿನ ದಿನವೂ ವಿಧ್ವಂಸ ಕತೆಯ ವರ್ತಮಾನದ, ವರ್ತಮಾನಗಳ ಮಾನಸ್ತಂಭ ಗಳಾ ಗುತ್ತಿವೆ. ತಿಂಗಳುಗಳು ಉರುಳಿದರೂ ಮಾರಣ ಹೋಮದ ಹೊಗೆ ಆವರಿಸುತ್ತಲೇ ಇದೆ; ಕ್ಷಿಪಣಿಗಳು ಮರಣ ಮೃದಂಗ ಬಾರಿಸುತ್ತಲೇ ಇವೆ! ನಮ್ಮ ಮನೆ, ಭೂಪ್ರದೇಶ, ದೇಶಕ್ಕೆ ಏನೇನೂ ಆಗಿಲ್ಲ ಎಂಬ ಭೂಗೋಲದ ಅನ್ಯಭಾಗಗಳ ಭಾವನೆಗೆ ಸೂರ್ಯೋ ದಯ- ಸೂರ್ಯಾಸ್ತಮಾನಗಳು ರುಜು ಹಾಕುತ್ತಿಲ್ಲ. ಅಂತಾರಾಷ್ಟ್ರೀಯ ವಾಣಿಜ್ಯದ ಅಲ್ಲೋಲ ಕಲ್ಲೋಲ ಹೊಂದಿ ಪೆಟ್ರೋಲ್‌ ಬೆಲೆಯೂ ಗಗನಕ್ಕೇರುತ್ತಿದೆ. ಈ ಎಲ್ಲ ವಿನಾಶದ, ಸಾವು ನೋವಿನ ರೋದನ ಈ ಭೂಮಿಯ ಒಂದೆಡೆ ಆವ್ಯಾಹತವಾಗಿ ನಡೆಯುತ್ತಿದ್ದಾಗ ಜಾಗತಿಕ ಕುಟುಂಬದ ಒಳಮನಸ್ಸಿಗೆ, ಮಾನವೀಯ ಮೌಲ್ಯಗಳಿಗೆ ನೋವು- ಕಾವು ಸಹಜವಾಗಿ ತಟ್ಟುತ್ತಲೇ ಇದೆ.

ಯುದ್ಧ-ಸಂಘರ್ಷ-ಇವೆಲ್ಲವೂ ಮನುಜನ ಮನದಲ್ಲಿ ಮೊದಲು ಹುಟ್ಟಿಕೊಳ್ಳುತ್ತದೆ; ಆ ಬಳಿಕ ವಾಸ್ತವಿಕ ಸಮರ ಅನಾವರಣಗೊಳ್ಳುತ್ತದೆ ಎನ್ನುವ ಮಾತಿದೆ. ಹೌದು; ಇದು ಸಾರ್ವಕಾಲಿಕ ಸತ್ಯ ಎಂಬುದನ್ನು ಎರಡು ಜಾಗತಿಕ ಸಮರಗಳಿಂದ ಹಿಡಿದು ಪ್ರಚಲಿತ ಮಾಸ್ಕೋ ಆಡಳಿತದ ಕಟು ನಿರ್ಧಾರದವರೆಗೂ ವಿಶ್ಲೇಷಿಸಬಹುದು. ಕ್ರಿಸ್ತಪೂರ್ವದ ಅಲೆಗ್ಸಾಂಡರ್ ದಂಡೆ ಯಾತ್ರೆಯಿಂದ ಹಿಡಿದು ನಮ್ಮದೇ ನೆರೆ ರಾಷ್ಟ್ರಗಳಾದ ಚೀನ, ಪಾಕಿಸ್ಥಾನದ ಮಿಲಿಟರಿ ದುಸ್ಸಾಹಸದ ವರೆಗೂ ಈ ಸತ್ಯ ಪ್ರತಿಫ‌ಲಿಸುತ್ತಿದೆ ಪೌರುಷದ ಪ್ರದರ್ಶನ, ವ್ಯಕ್ತಿಗತ ಮಹಾತ್ವಾಕಾಂಕ್ಷೆ, ಸಾಮ್ರಾಜ್ಯಶಾಹಿತ್ವದ ಒಳಸುಳಿವಿನಿಂದ ಸಮರ ಜ್ವಾಲೆ ಪುಟಿಯುತ್ತಿದೆ. ಅಧಿಕಾರ ಕೋವಿ ನಳಿಗೆಯ ಮೂಲಕ ಹೊರ ಹೊಮ್ಮುತ್ತದೆ ಎಂಬ ಮಾವೋತ್ಸೆ ತುಂಗನ ಉದ್ಘೋಷಕ್ಕೆ ವಿಶ್ವ ಕುಟುಂಬ ಒಂದಲ್ಲ ಒಂದು ತೆರನಾಗಿ ಷರಾ ಬರೆಯುತ್ತಲೇ ಇದೆ. ವಿಶ್ವಶಾಂತಿಯ ಒಲಿವ್‌ ರೆಂಬೆ ಹೊತ್ತ ಪಾರಿವಾಳದ ವಿಹಂಗಮ ಸಂಚಾರಕ್ಕೆ ಯುದ್ಧ ಭೀತಿಯ ಕಾರ್ಮೋಡಗಳು ಮುತ್ತುತ್ತಲೇ ಇವೆ. ನೊಬೆಲ್‌ ಬಹುಮಾನಿತ ರಾಬರ್ಟ್‌ ಪ್ರಾಸ್ಟ್‌ ತನ್ನ ಮೆಂಡಿಂಗ್‌ ವಾಲ್‌ ಕವನದಲ್ಲಿ ನಾವು ಸೃಷ್ಟಿಸಿರದ ಈ ಜಗತ್ತನ್ನು “ನಮ್ಮದು ನಿಮ್ಮದು’ ಎಂಬ ಗಡಿರೇಖೆಯ ಮೂಲಕ ತುಂಡರಿಸಿ ಬೇಲಿ ಹಾಕುವುದಾದರೂ ಏಕೆ? ಎಂಬುದಾಗಿ ದಾರ್ಶನಿಕತೆಯ, ಸಹೋದರತೆಯ ಉದಾರತೆಯ ಭಾವ ಬೆಸೆದಿ¨ªಾನೆ. ಆದರೆ ಸ್ವತಂತ್ರ ಸಾರ್ವಭೌಮ ದೇಶಗಳಾದ ನಾವು ಈ ಊಹನೆಯ, ಭಾವನೆಯ ಆಗಸದಲ್ಲಿ ಹಾರುವಂತಿಲ್ಲ ತಾನೇ? ವಾಸ್ತವಿಕತೆಯ ಗಟ್ಟಿನೆಲದಲ್ಲಿ ನಿಂತಾಗ ಮಿಲಿಯಾಂತರ ಅಲ್ಲ ಬಿಲಿಯಾಂತರದ ಡಾಲರ್‌, ರೂಬಲ…, ರೂಪಾಯಿ ಅಪಾರ ಮೊತ್ತವನ್ನು ಮಿಲಿಟರಿ ಸಿದ್ಧತೆಗಾಗಿ ವ್ಯಯಿಸದಿರಲೂ ಸಾಧ್ಯವೇ?

“ಯುದ್ಧ’ ಎನ್ನುವುದು ಒಂದು ಮಾನಸಿಕತೆ ಮಾತ್ರವಲ್ಲ ಅದೊಂದು “ಜೈವಿಕ ಪ್ರಕ್ರಿಯೆ’ ಎಂಬುದಾಗಿಯೂ ವಿಶ್ಲೇಷಿಸಲಾಗಿದೆ. ಮಾನವನ ಇತಿಹಾಸದ ಉದ್ದಕ್ಕೂ ಯುದ್ಧ- ಶಾಂತಿಯ ನೆರಳು-ಬೆಳಕಿನಾಟ ಸಾಗಿದೆ. “ಯುದ್ಧ’ ಅನ್ಯಾಯವನ್ನು ಮೆಟ್ಟಿ ನ್ಯಾಯ- ಧರ್ಮ ಒದಗಿಸಬಲ್ಲ ಏಕೈಕ ಕೊನೆಯ ಆಯ್ಕೆ, ಕಟ್ಟಕಡೆಯ ಮೆಟ್ಟಿಲು ಎಂಬ ವ್ಯಾಖ್ಯೆಯೂ ಇದೆ. ಈ ಭಾರತ ನೆಲದಲ್ಲೇ ಅರಳಿ ನಿಂತ ರಾಮಾಯಣ, ಮಹಾಭಾರತ ಮಹಾನ್‌ ಕಾವ್ಯಗಳ ದಿವ್ಯ ಸಂದೇಶವೂ ಇದೇ. ಯುದ್ಧ ಉಳಿದು ನಿಲ್ಲುವ ಏಕೈಕ ಆಯ್ಕೆ ಎಂಬುದು ಮನುಕುಲ ಎತ್ತಿಹಿಡಿದ ಸಾರ್ವಕಾಲಿಕ ಸತ್ಯ ಕೂಡ. “ಯುದ್ಧ ಒಂದು ನಿತ್ಯ ಸೇವನೆಯ ಆಹಾರವಲ್ಲ; ಬದಲಾಗಿ ಅದೊಂದು ಅನಿವಾರ್ಯ ದಿವ್ಯ ಔಷಧ’ ಎಂಬ ಜಾಣ್ಣುಡಿಯಿದೆ. ಜಾಗತಿಕ ಕುಟುಂಬದಿಂದ ಯುದ್ಧವನ್ನು ಗಡೀಪಾರು ಮಾಡುವಿಕೆ ಮಾನವ ಸೃಷ್ಟಿಯ ಉಗಮದಿಂದ ಈ ತನಕವೂ ಸಾಧ್ಯ ಎನಿಸಿಯೇ ಇಲ್ಲ.

Advertisement

1945ರಲ್ಲಿ ಎರಡನೇ ಜಾಗತಿಕ ಸಮರದ ಅಂತ್ಯದಲ್ಲಿ, ವಿನಾಶದ ಗರ್ಭದಿಂದ ವಿನೂತನ ಜಗತ್ತು ಆವಿರ್ಭವಿಸಿತು. ಅದರೊಂದಿಗೇ ಜಗದಗಲ ಪಸರಿಸಿದ ಸಾಮ್ರಾಜ್ಯಶಾಹಿತ್ವ ಹಾಗೂ ವಸಾಹತುಶಾಹಿತ್ವ ಕೂಡ ಚರಮಗೀತೆ ಹಾಡಿದವು. ವಿಶ್ವಕುಟುಂಬ ಬಹುತೇಕ ಏಷ್ಯಾ ಆಫ್ರಿಕನ್‌ ರಾಷ್ಟ್ರಗಳೂ ಭಾರತವೂ ಸೇರಿ ಸ್ವಾತಂತ್ರ್ಯದ ತಣ್ಣೆಳಲಲ್ಲಿ ತಂತಮ್ಮ ಧ್ವಜವನ್ನು ಏರಿಸಿದವು. ಆ ಬಳಿಕ ಪ್ರಜಾತಂತ್ರ ಹಾಗೂ ಕಮ್ಯುನಿಸ್ಟ್‌ ಬಣಗಳಾಗಿ ಅಮೆರಿಕ ಹಾಗೂ ಸೋವಿಯತ್‌ ರಾಷ್ಟ್ರಗಳ ನೇತಾರಿಕೆಯಲ್ಲಿ ಜಾಗತಿಕ ಕುಟುಂಬದ ಅಗ್ನಿರೇಖೆ ಮೂಡಿ ಬಂತು. ಸೋವಿಯತ್‌ ದೇಶದ ಪತನದದ ಬಳಿಕವೂ ಹೊಸ ಹೊಸ ಧ್ರುವೀಕರಣ ವಿನ್ಯಾಸಕ್ಕೆ ಪ್ರಚಲಿತ ಜಗತ್ತು ಷರಾ ಬರೆಯುತ್ತಾ ಬಂತು. ಗಡಿ ಉದ್ವಿಗ್ನತೆ, ಆಕ್ರಮಣ, ಒಳನುಸುಳಿವಿಕೆ, ಛದ್ಮಸಮರ, ಶಾಂತಿ ಭಂಗಕ್ಕೆ ಪಿತೂರಿ, ಈ ಎಲ್ಲ ಜ್ವಾಲಾಮುಖೀಗೆ ದ್ವಿತೀಯ ಮಹಾ ಸಮರೋತ್ತರ ವಿಶ್ವಕುಟುಂಬದ ಷರಾ ಬರೆಯುತ್ತಲೇ ಬಂದಿದೆ; ಶಾಂತ ಸಾಗರದ ನೀರು ಮಾನವ ನಿರ್ಮಿತ ಚಂಡಮಾರುತದ ಸೆಳೆತಕ್ಕೆ ಸಿಕ್ಕಿ ನಭೆತ್ತರಕ್ಕೆ ಚಿಮ್ಮುತ್ತಲೇ ಇದೆ.

ಇದೀಗ ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿ, ಮಾರಣ ಹೋಮದ ಧೂಮ ಹಬ್ಬಿಸುವಿಕೆಯ ನೈಜ ಕಾರಣವಾದರೂ ಏನು? ಒಂದು ಕಾಲದಲ್ಲಿ ಸೋವಿಯತ್‌ ರಷ್ಯಾದ ಭೂಪಟದೊಳಗೇ ಸೇರಿಕೊಂಡಿದ್ದ, ಅತ್ಯಂತ ಉತ್ತಮ ಗುಣಮಟ್ಟದ ಸಾರ್ವಜನಿಕ ಜೀವನ ನಡೆಸುತ್ತಿದ್ದ ಉಕ್ರೇನನ್ನು ಶ್ಮಶಾನ ಸದೃಶವಾಗಿಸಲು ಪಣತೊಟ್ಟ ರಷ್ಯಾದ ಕ್ಷಿಪಣಿಗಳು, ಭಾರೀ ಪ್ರಮಾಣದ ತೋಪುಗಳು, ಮಾನವ ಸಂಪನ್ಮೂಲದ ನಾಶದ ಮೂಲ ಆಶಯವಾದರೂ ಏನು? ಪುತಿನ್‌ ಮಹತ್ವಾಕಾಂಕ್ಷೆ, ನ್ಯಾಟೋ ರಾಷ್ಟ್ರಕೂಟಕ್ಕೆ ಸೇರದಿರುವಂತೆ ಮಾಸ್ಕೋ “ಕರಡಿ’ಯ ತಾಕೀತು ಉಲ್ಲಂಘನೆಗೆ ಈ ಘೋರ ಶಿಕ್ಷೆಯೇ? ಸುದೀರ್ಘ‌ ಕಾಲದಲ್ಲಿಯೂ ಮರಳಿ ನಿರ್ಮಿಸಲು ಸಾಧ್ಯವಾಗದ ಉಕ್ರೇನ್‌ ರಾಷ್ಟ್ರ ಸಂಪತ್ತಿನ ಸಮಗ್ರ ವಿಧ್ವಂಸಕತೆಯ ದಾರುಣ ಚಿತ್ರ ಕಣ್ಣಮುಂದಿದೆ. ವಿಶ್ವಸಂಸ್ಥೆಯಲ್ಲಿನ ಮಾನವ ಹಕ್ಕುಗಳನ್ನು ರಷ್ಯಾ ಉಲ್ಲಂ ಸಿದೆ ಎಂಬ ನಿರ್ಧಾರಕ್ಕೆ ವಿಶ್ವಕುಟುಂಬ ರುಜು ಹಾಕುವಂತಿದೆ. ದೇಹದ ಯಾವುದೇ ಭಾಗಕ್ಕೆ ಮುಳ್ಳು ಚುಚ್ಚಿದರೆ ಇಡೀ ದೇಹಕ್ಕೆ ಆ ನೋವು ತಗಲುತ್ತದೆ. ಮಾನವೀಯ ಮೌಲ್ಯಗಳ ಕರಗುವಿಕೆಯ ಮೌನರೋದನಕ್ಕೆ ಜಗತ್ತು ಕಿವಿ ಆಗಬೇಕಾಗಿದೆ. ಮಾತ್ರವಲ್ಲ, ಬರಲಿರುವ ನಾಳೆಗಳ ಸುಂದರ ಜಗತ್ತಿನ ಉಳಿವಿಗೆ, ಒಳಿತಿಗೆ ಮನುಕುಲ ಒಂದಾಗಬೇಕಿದೆ.

– ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next