Advertisement

ಉಜಿರೆ: ಅಜ್ಜನ ಕಣ್ಣೆದುರೇ ಮೊಮ್ಮಗನ ಅಪಹರಣ; 24 ತಾಸು ಕಳೆದರೂ ಸಿಗದ ಜಾಡು !

09:04 PM Dec 18, 2020 | Mithun PG |

ಬೆಳ್ತಂಗಡಿ: ಉಜಿರೆ ರಥಬೀದಿ ನಿವಾಸಿಯಾಗಿರುವ ಉದ್ಯಮಿ, ನಿವೃತ್ತ ನೇವಿ ಅಧಿಕಾರಿ ಎ.ಕೆ. ಶಿವನ್ ಅವರ 8 ವರ್ಷದ ಮೊಮ್ಮಗ ಅನುಭವ್ ನ ಅಪಹರಣ ನಡೆದು 24 ತಾಸುಗಳು ಕಳೆದರೂ ಪೊಲೀಸರಿಗೆ ಆರೋಪಿಗಳ ಜಾಡು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ.

Advertisement

ಮಗುವಿನ ಅಪಹರಣ ಪ್ರಕರಣ ಡಿ.17ರ ಸಂಜೆ 6.30 ಹೊತ್ತಿಗೆ ನಡೆದು ಅರ್ಧ ತಾಸಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಗುವಿನ‌ ಚಿತ್ರ ಸಹಿತ ಸಂದೇಶ ಹರಿದಾಡಲು ಆರಂಭಿಸಿದೆ. ಸಾಮಾಜಿಕ ಜಾಲತಾಣದ ಸಂದೇಶಗಳು ವಿಶ್ವಾಸಾರ್ಹ ಅಲ್ಲ ಎಂಬ ಚರ್ಚೆಗಳು ಒಂದೆಡೆಯಾದರೆ, ಸ್ಥಳೀಯರು ಹಾಗೂ  ಪೋಷಕರು ಮಾಹಿತಿ ಖಚಿತ ಪಡಿಸುತ್ತಿದ್ದಂತೆ, ಇದು  ಉಜಿರೆ ಗ್ರಾಮಲ್ಲಿ ಜನತೆಗೆ ಅರಗಿಸಿಕೊಳ್ಳದಷ್ಟು ಹೃದಯವಿದ್ರಾವಕ ಘಟನೆಯಾಗಿ ಬದಲಾಗಿತ್ತು.

ಮೊಮ್ಮಗ ಅನುಭವ್ ಜತೆ ಶಿವನ್ ಪ್ರತಿನಿತ್ಯ ರಥಬೀದಿ ಮುಂಭಾಗ ವಾಕಿಂಗ್ ತೆರಳುತ್ತಿದ್ದರು. 3ನೇ ತರಗತಿ ಓದುತ್ತಿರುವ ಅನುಭವ್ ಕೂಡ ತರಗತಿ ಇಲ್ಲದಿರುವುದರಿಂದ ಪ್ರತಿನಿತ್ಯ ಮೈದಾನದಲ್ಲಿ ಸಂಜೆ ಆಟವಾಡುತ್ತ ಮನೆ ಸೇರುತ್ತಿದ್ದ. ಆದರೆ ಡಿ.17ರ ಗುರುವಾರ ಸಂಜೆ 6.30ರ ವೇಳೆಗೆ ಅಜ್ಜ ಮತ್ತು ಮೊಮ್ಮಗ ರಥಬೀದಿಯಿಂದ ವಾಕಿಂಗ್ ಮುಗಿಸಿ ಮನೆ ಗೇಟು ಮುಂಭಾಗ ತಲುಪಿದ್ದಾರೆ. ಅಜ್ಜನ ಮುಂದೆ  ಮೊಮ್ಮಗ ನಡೆದು ಹೋಗುತ್ತಿದ್ದ. ಗೇಟಿನ ಸಮೀಪ ಬಿಳಿ ಕಾರು ಹಾಗೂ ಇಬ್ಬರು ಹೊರ ನಿಂತಿದ್ದರು. ಅನುಭವ್ ಕಾರಿನ ಸಮೀಪ ಬರುತ್ತಿದ್ದಂತೆ ಓರ್ವ ಮಗುವನ್ನು ಎತ್ತಿಕೊಂಡು ಕಾರಿನೊಳಕ್ಕೆ ಹಾಕಿ ಪರಾರಿಯಾಗಿದ್ದಾರೆ.

ಕಾರಿನೊಳಕ್ಕೆ ಮೂವರು ಅಥವಾ ನಾಲ್ವರು ಇದ್ದು, ಹಳದಿ ನಂಬರ್ ಪ್ಲೇಟ್ ಇರುವಿಕೆಯನ್ನು ಶಿವನ್ ಅವರು ಗಮನಿಸಿದ್ದಾರೆ. ತಕ್ಷಣ ಅನುಭವ್ ತಾಯಿ ಸರಿತಾ ಸ್ಥಳಕ್ಕೆ  ಓಡಿಬಂದರೂ, ಅಷ್ಟರಲ್ಲಾಗಲೇ ದುಷ್ಕರ್ಮಿಗಳು  ಕಾರಿನಲ್ಲಿ ಪರಾರಿಯಾಗಿದ್ದರು. ಸ್ವಲ್ಪ ಸಮಯದ ಬಳಿಕ ಅಪಹರಣಕಾರರು ಮಗುವಿನ‌ ತಾಯಿಗೆ ಕರೆಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಇಷ್ಟೆಲ್ಲ ಮಾಹಿತಿಗಳು ರಾತ್ರಿಯಾಗುತ್ತಿದ್ದಂತೆ ಊರೆಲ್ಲ ವಿಷಯ ತಿಳಿದು ಸ್ಥಳೀಯರು ಹಾಗು ಮೈದಾನದಲ್ಲಿ ದಿನನಿತ್ಯ ಆಟವಾಡಲು ಬರುತ್ತಿರುವವರು ಪೊಲೀಸರ ತನಿಖೆಗೆ ಸಹಕರಿಸಿದ್ದಾರೆ.

Advertisement

ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ನಡೆಸಿದ ಘಟನೆ ತಾಲೂಕಿನಲ್ಲಿ ಮಾತ್ರವಲ್ಲದೆ ಜಿಲ್ಲೆಯಲ್ಲೇ ಕಳೆದ ಎರಡು ವರ್ಷಗಳಿಂದ ನಡೆದಿರಲಿಲ್ಲ ಎಂಬುದು ಪೊಲೀಸ್ ದಾಖಲೆಯಿಂದ ಸ್ಪಷ್ಟವಾಗುತ್ತಿದೆ. ಹೆಚ್ಚಾಗಿ ಪೋಷಕರು ಗದರಿರುವುದು, ತಪ್ಪು ಮಾಡಿದ ವಿಚಾರಕ್ಕೆ ಹೊಡೆದಿರುವ ಕೋಪದಲ್ಲೊ ಮನೆ ಬಿಟ್ಟು ಹೋಗಿರುವ ಪ್ರಕರಣ ಸರ್ವೇ ಸಾಮಾನ್ಯ. ಗ್ರಾಮಾಂತರ ಭಾಗದಲ್ಲಿ ಅಪಹರಣ ನಡೆಸಿ 17 ಕೋಟಿಗೆ ಬೇಡಿಕೆ ಇಟ್ಟಿರುವುದು ರಾಷ್ಟ್ರದ ಮಟ್ಟದ ಸುದ್ದಿಯಾಗಿದೆ.

ಬೆಂಗಳೂರು, ಮುಂಬೈ ಸೇರಿದಂತೆ ಮಹಾನಗರಗಳಲ್ಲಿ ದಿನಕ್ಕೊಂದರಂತೆ ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆ ಇರುತ್ತದೆ. ಆದರೆ ಇದೊಂದು ಹೊಸ ಪ್ರಕರಣದಲ್ಲಿ ಹಣದ ವ್ಯವಹಾರದ ಕೆಲ ವದಂತಿಗಳು ಪೊಲೀಸ್ ಅಧಿಕಾರಿಗಳಿಗೆ ಸವಾಲಾಗಿದೆ. ಎಸ್.ಪಿ. ಲಕ್ಷ್ಮೀಪ್ರಸಾದ್ ಅವರ ನೇತೃತ್ವದಲ್ಲಿ ಐದು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಧ್ಯಾಹ್ನ ಅಪಹರಣಕಾರರು ಪೊಲೀಸ್ ದೂರು ನೀಡಿರುವ ಬಗ್ಗೆ ಮಗುವಿನ ತಂದೆಗೆ ಎಚ್ಚರಿಕೆ ನೀಡಿದ್ದರಿಂದ ಮಾಧ್ಯಮದೊಂದಿಗೆ ಮಾತನಾಡಲು ಕೂಡ ಪೋಷಕರು ಹೆದರಿದ್ದರು. ಹಿಂದಿ ಭಾಷೆಯಲ್ಲಿ ವ್ಯವಹಾರ ನಡೆಸುತ್ತಿರುವ ಮಂದಿ, ಬಿಟ್ ಕಾಯಿನ್ ವಿಚಾರ ಪ್ರಸ್ತಾಪವಾಗಿರಿವುದರಿಂದ ತನಿಖೆ ದಿಕ್ಕು ಬದಲಾಗಿದೆ. ನಾನಾ ಆಯಾಮಗಳಿಂದ ತನಿಖೆ ಮುಂದುವರಸಲಾಗಿದೆ.

ಅಪಹರಣಕ್ಕೊಳಗಾದ ಮಗುವಿನ ತಂದೆ ಬಿಜೊಯ್ ಅವರಿಗೆ ನಿರಂತರ ಸಾಮಾಜಿಕ ಜಾಲತಾಣದಲ್ಲಿ ಅಪಹರಣಕಾರರ ಸಂದೇಶ ರವಾನೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ವೇಳೆಗೆ 100 ಬಿಟ್ ಕಾಯಿನ್ ವಿಚಾರ 60 ಬಿಟ್ ಕಾಯಿನ್ ಅಂದರೆ 10 ಕೋಟಿ. ರೂ. ಗೆ ಬಂದು ನಿಂತಿದ್ದು ಮತ್ತಷ್ಟು ಕಡಿಮೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಸಂಜೆ ವೇಳೆಗೆ ಲಭ್ಯವಾಗಿದೆ.

ಮಧ್ಯಾಹ್ನ ಎಸ್.ಪಿ.ಲಕ್ಷ್ಮೀಪ್ರಸಾದ್ ಹಾಗೂ ಬಂಟ್ವಾಳ ಡಿವೈಎಸ್ ಪಿ ವೆಲೆಂಟೈನ್ ಡಿಸೋಜ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮನೆಮಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ:  ಉಜಿರೆ ಮಗು ಅಪಹರಣ ಪ್ರಕರಣ: 17 ಕೋ.ರೂ. ಬೇಡಿಕೆಯಿಟ್ಟ ದುಷ್ಕರ್ಮಿಗಳು, ತೀವ್ರಗೊಂಡ ಶೋಧ

ಬಿಟ್ ಕಾಯಿನ್ ಎಂದರೇನು ?

ಅಪಹರಣಕಾರರು ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸಿದ್ದರಿಂದ ಘಟನೆ ಮತ್ತೊಂದು ಸ್ವರೂಪ ಪಡೆದಿದೆ. ಬಿಟ್ ಕಾಯಿನ್ ಡಿಜಿಟಲ್ ಹಣಕಾಸು ಅಥವಾ ಡಿಜಿಟಲ್ ಕರೆನ್ಸಿ ಆಗಿದೆ. ಅಂದರೆ ಆನ್ ಲೈನ್ ಮೂಲಕ ಪಾವತಿಸಲು ನಿಜವಾದ ನಾಣ್ಯವನ್ನು ನೀಡಬೇಕಾಗಿಲ್ಲ. ಇಂದು ಸುಮಾರು 800ರಷ್ಟು ಇಂತಹ ಕ್ರಿಪ್ಟೋಕರೆನ್ಸಿ (cryptocurrency) ಗಳಿವೆ. ಈ ತಂತ್ರಜ್ಞಾನವನ್ನು ಬ್ಲಾಕ್ಚೈನ್ (blockchain) ಎಂಬ ನೂತನ ವಿಧಾನದ ಆಧಾರದಲ್ಲಿ ಸಾರ್ವಜನಿಕರಿಗೆ ಮಿಥ್ಯಾಹಣದ ಮೂಲಕ ಸುಲಭವಾಗಿ ತಮ್ಮ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಸಾಧ್ಯವಾಗುತ್ತದೆ.

ಕ್ರಿಪ್ಟೋಕರೆನ್ಸಿಯನ್ನು ಬಳಸಿ ಹಣದ ವ್ಯವಹಾರ ನಡೆಸುವ ವೀಸಾ, ಮಾಸ್ಟರ್ ಕಾರ್ಡ್ ಮೊದಲಾದ ವ್ಯವಸ್ಥೆಗಳು ಈಗಾಗಲೇ ಇವೆ. ಆದರೆ ಇವು ಒಂದು ದೇಶದಿಂದ ಇನ್ನೊಂದು ದೇಶದ ನಡುವಣ ವ್ಯವಹಾರದಲ್ಲಿ ಮೊದಲು ಈ ದೇಶದ ಹಣವನ್ನು ಡಾಲರುಗಳಿಗೂ, ಬಳಿಕ ಡಾಲರುಗಳಿಂದ ಆ ದೇಶದ ಹಣಕ್ಕೂ ಪರಿವರ್ತಿಸಿ ವಹಿವಾಟು ನಡೆಸುತ್ತವೆ. ಆದರೆ ಈ ಎರಡೂ ಪರಿವರ್ತನೆಗಳಲ್ಲಿ ಸಂಸ್ಥೆಗಳು ಅಪಾರವಾದ ಕಮೀಶನ್ ಅಥವಾ ದಲ್ಲಾಳಿ ಹಣವನ್ನು ಪಡೆಯುತ್ತವೆ. ಅಲ್ಲದೇ ಈ ವಹಿವಾಟು ಸರಕಾರದ ಆಧೀನದಲ್ಲಿಯೇ ಬ್ಯಾಂಕುಗಳ ಮುಖಾಂತರ ನಡೆಯುತ್ತದೆ. ಆದರೆ ಬಿಟ್ ಕಾಯಿನ್ ಗೆ ಯಾವುದೇ ನಿರ್ಬಂಧವಿಲ್ಲ. ನಮ್ಮ ದೇಶದ ವಿತ್ತ ಸಚಿವಾಲಯ ಹಾಗೂ ಆರ್ ಬಿಐ  ಸದ್ಯಕ್ಕೆ ಈ ಹಣಕ್ಕೆ ಭಾರತದಲ್ಲಿ ಸರಕಾರದ ಮಾನ್ಯತೆ ಇಲ್ಲ ಎಂದಿದೆ.

ಇದನ್ನೂ ಓದಿ: ಉಜಿರೆ ಮಗು ಕಿಡ್ನಾಪ್ ಫಾಲೋಅಪ್: 17 ಕೋಟಿ ಬದಲು 10 ಕೋಟಿ ರೂ. ಬೇಡಿಕೆಯಿಟ್ಟ ಅಪಹರಣಕಾರರು

ತನಿಖೆ ಮುಂದುವರೆದಿದೆ: 

ಮಗುವನ್ನು ಸುರಕ್ಷಿತವಾಗಿ ಕರೆತರಬೇಕಾಗಿದ್ದರಿಂದ ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳು ರವಾನೆಯಾಗುತ್ತಿದ್ದು, ಸ್ಪಷ್ಟಮಾಹಿತಿ ಇಲ್ಲದೆ ಸಂದೇಶಗಳನ್ನು ಹರಿಬಿಡುತ್ತಿರುವುದರಿಂದ ತನಿಖೆಗೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರು ಸಂಯಮದಿಂದ ವರ್ತಿಸಿ ತನಿಖೆಗೆ ಸಹಕರಿಸುವಂತೆಯೂ ದ.ಕ.ಪೊಲೀಸ್ ವರಿಷ್ಠಾಧಿಕಾರಿ ಲಕ್ಣ್ಮೀಪ್ರಸಾದ್ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next