Advertisement
ಮಂಗಳೂರು: ಉದ್ಯೋಗಿಯೊಬ್ಬನಿಗೆ ಭರ್ತಿ ಸಂಬಳ ದೊರೆಯಬೇಕಾದರೆ, ನಿಗದಿತ ಕೆಲಸವನ್ನು ಸಮಯ ಪರಿಯಲ್ಲಿ ಮಾಡಬೇಕು. ಆದರೆ ಬರಗಾಲ ಹಾಗೂ ಬೇಸಗೆ ಕಾರಣದಿಂದ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಪಡೆದು ಭರ್ತಿ ಸಂಬಳ ಪಡೆಯಬಹುದು. ಆದರೆ, ಇದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾತ್ರ…!
ಕೆಲಸ ಮಾಡಬಹುದು. ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಶೇ. 30ರಷ್ಟು ರಿಯಾಯಿತಿ ಪ್ರಕಟಿಸಲಾಗಿದ್ದು, ಜೂನ್ನಲ್ಲಿ ಶೇ. 20 ರಿಯಾಯಿತಿ ದೊರೆಯಲಿದೆ. ರಾಜ್ಯದ 160 ಬರಪೀಡಿತ ತಾಲೂಕುಗಳಲ್ಲಿ ಇದನ್ನು ಅನುಷ್ಠಾನಿಸುವ ಜತೆಗೆ ರಾಜ್ಯದ ಎಲ್ಲ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗ ಖಾತರಿಯ ಕೂಲಿ ಕಾರ್ಮಿಕರಿಗೂ ಇದು ಅನ್ವಯವಾಗಲಿದೆ. ರಾಜ್ಯದಲ್ಲಿ ಒಟ್ಟು 52.88 ಲಕ್ಷ ಜಾಬ್ ಕಾರ್ಡ್ ಜಾರಿಗೊಳಿಸಲಾಗಿದ್ದು, ಇದರಲ್ಲಿ 28.96 ಲಕ್ಷ ಕಾರ್ಡ್ಗಳು ಪ್ರಸ್ತುತ ಕಾರ್ಯನಿರತವಾಗಿದ್ದು, ಇವರಿಗೆ ಈ ರಿಯಾಯಿತಿ ಲಾಭ ದೊರೆಯಲಿದೆ.
Related Articles
ರಸ್ತೆ, ಬಾವಿ ನಿರ್ಮಾಣ, ಶ್ಮಶಾನ ರಚನೆ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿ, ದನದ ಹಟ್ಟಿ ನಿರ್ಮಾಣ, ಕೆರೆ ಅಭಿವೃದ್ಧಿ ಸಹಿತ ಅರ್ಹ ಫಲಾನುಭವಿ ರೈತರ ಕೃಷಿ ಸಂಬಂಧಿತ ಕೆಲಸಗಳು ಹಾಗೂ ತೋಟಗಾರಿಕಾ ಅಭಿವೃದ್ಧಿ ಚಟುವಟಿಕೆಗಳನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲು ಅವಕಾಶವಿದೆ. ಗ್ರಾ.ಪಂ. ವ್ಯಾಪ್ತಿಯ ಅರ್ಹ ಪ್ರತೀ ಕುಟುಂಬಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ನೀಡಲಾಗುತ್ತದೆ. 1 ದಿನಕ್ಕೆ 224 ರೂ. ವೇತನ ನಿಗದಿಪಡಿಸಲಾಗಿದ್ದು, ವರ್ಷಕ್ಕೆ 22,400 ದೊರೆಯಲಿದೆ. 1 ದಿನದಲ್ಲಿ 1 ಕ್ಯುಬಿಕ್ ಮೀಟರ್ನಷ್ಟು ಕೆಲಸ ನಡೆಸಬೇಕಾಗುತ್ತದೆ. ಇದರಲ್ಲಿ ಬಿಸಿಲಿನ ಕಾರಣದಿಂದ ಶೇಕಡಾವಾರು ರಿಯಾಯಿತಿ ನೀಡಲು ಇದೀಗ ಸರಕಾರ ನಿರ್ಧರಿಸಿದೆ.
Advertisement
ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಬೇಕಾದರೆ ಆ ಕಾಮಗಾರಿಯ ಪೂರ್ಣ ಹೆಸರನ್ನು ಗ್ರಾಮ ಸಭೆ ಮುಂದಿರಿಸಿ, ಗ್ರಾ.ಪಂ. ಅನುಮತಿ ಪಡೆದು, ತಾ.ಪಂ. ಹಾಗೂ ಜಿ. ಪಂ.ನಲ್ಲಿ ಅದಕ್ಕೆ ಅನುಮೋದನೆ ದೊರೆಯಬೇಕಿದೆ. ಅನಂತರ ಸಂಬಂಧಿತರಿಗೆ ವೈಯಕ್ತಿಕ “ಜಾಬ್ ಕಾರ್ಡ್’ ಜಾರಿಗೊಳಿಸಲಾಗುತ್ತದೆ. ಬಳಿಕ ಸಂಬಂಧಿತ ಕಾರ್ಮಿಕನ ಬ್ಯಾಂಕ್ ಅಕೌಂಟ್ಗೆ ಹಣ ಸಲ್ಲಿಕೆಯಾಗುತ್ತದೆ.
ರಾಜ್ಯದ 30 ಕಂದಾಯ ಜಿಲ್ಲೆಗಳ 176 ತಾಲೂಕುಗಳ ಪೈಕಿ 160 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ರಾಜ್ಯ ಸರಕಾರ ಈಗಾಗಲೇ ಘೋಷಿಸಿದೆ. ಬರ ಪರಿಸ್ಥಿತಿ ತಡೆಗಟ್ಟಲು ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಎಲ್ಲ ಅಗತ್ಯ ಕ್ರಮಕೈಗೊಳ್ಳಲು ಎಲ್ಲ ಜಿ. ಪಂ.ಗಳ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ತೆಲಂಗಾಣದಲ್ಲೂ “ರಿಯಾಯಿತಿ’ ಪ್ರಸ್ತುತ ಬರಗಾಲದ ತೀವ್ರತೆ ಹಾಗೂ ಬಿಸಿಲಿನ ತಾಪ ಮತ್ತು ಉಷ್ಣಾಂಶದ ಪ್ರಖರತೆ ಹೆಚ್ಚಾಗಿರುವುದರಿಂದ ಬೇಸಗೆ ಕಾಲದಲ್ಲಿ ನರೇಗಾ ಯೋಜನೆಯಡಿ ನಿಗದಿಪಡಿಸಿದ ಕಾಮಗಾರಿಗಳ ಕೆಲಸದ ಪ್ರಮಾಣ ನಿರ್ವಹಿಸುವುದು ಕಷ್ಟವಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರಿಗೆ, ತಮಗೆ ದೊರೆಯ ಬೇಕಾದ ಕೂಲಿ ಹಣ ಕಡಿಮೆಯಾಗುತ್ತಿದೆ ಎಂಬುದನ್ನು ಮನಗಂಡು ರಾಜ್ಯ ಸರಕಾರ “ರಿಯಾಯಿತಿ’ ಕ್ರಮ ಕೈಗೊಂಡಿದೆ. ಉಷ್ಣಾಂಶದ ಪ್ರಖರತೆ ಹೆಚ್ಚಾಗಿದ್ದು, ಇದರಿಂದ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ದಣಿವು ಹೆಚ್ಚಾಗಿ ನಿಗದಿ ಪಡಿಸಿದ ಕೆಲಸದ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಬೇಸಗೆ ಕಾಲದಲ್ಲಿ ಕೆಲಸ ಪ್ರಮಾಣದಲ್ಲಿ ರಿಯಾಯಿತಿಯನ್ನು ತೆಲಂಗಾಣ ಸರಕಾರ ಈಗಾಗಲೇ ಪ್ರಕಟಿಸಿದೆ. – ದಿನೇಶ್ ಇರಾ