Advertisement

ಉಡುಪಿ ಜಿಲ್ಲೆ ಬಹುತೇಕ ಅನ್‌ಲಾಕ್‌ : ನಿಯಮ ಪಾಲಿಸದಿದ್ದರೆ ಕ್ರಿಮಿನಲ್ ಕೇಸ್ : ಜಿಲ್ಲಾಧಿಕಾರಿ

07:44 PM Jun 21, 2021 | Team Udayavani |

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ – 19 (ಕೋರೊನಾ ವೈರಾಣು ಕಾಯಿಲೆ – 2019) ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರಕಾರದ ನಿರ್ದೇಶನದಂತೆ ಕಾಲ ಕಾಲಕ್ಕೆ ಎಲ್ಲ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಕಟ್ಟು ನಿಟ್ಟಿನ ನಿರ್ಬಂಧಗಳ ಪರಿಣಾಮಕಾರಿ ಅನುಷ್ಟಾನದಿಂದಾಗಿ ಕೋವಿಡ್‌ ಪ್ರಕರಣಗಳ ದರವು ಗಣನೀಯವಾಗಿ ಇಳಿಕೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ಶೇ.5 ರಲ್ಲಿದೆ.

Advertisement

ಜಿಲ್ಲೆಗಳ ಕೋವಿಡ್‌ ಪಾಸಿಟಿವಿಟಿ ದರದ ಆಧಾರದ ಮೇಲೆ ಕೋವಿಡ್‌ ನಿಯಂತ್ರಣಕ್ಕಾಗಿ ಈ ವರೆಗೆ ತೆಗೆದುಕೊಳ್ಳಲಾದ ಎಲ್ಲ ಕಟ್ಟುನಿಟ್ಟಿನ ಕ್ರಮಗಳಿಂದ ಸಾಧಿಸಲಾದ ಗಣನೀಯ ಲಾಭವನ್ನು ಕಾಪಾಡಿಕೊಳ್ಳಲು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಹಂತ-ಹಂತವಾಗಿ ಕೆಲವೊಂದು ಪ್ರಮುಖ ಮತ್ತು ಆರ್ಥಿಕ ಮತ್ತು ಇತರ ಚಟುವಟಿಕೆಗಳಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ರಾತ್ರಿ ಕರ್ಫ್ಯೂ ಜಾರಿ
ಜಿಲ್ಲೆಯಾದ್ಯಂತ ಜೂ.7ರವರೆಗೆ ಸಂಜೆ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಟ್ಟುನಿಟ್ಟಿನ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಂತ್ಯದ ಕಫ್ಯೂ ಜಾರಿಯಲ್ಲಿರುತ್ತದೆ.

ಬಸ್ಸು ಸಂಚಾರಕ್ಕೆ ಅನುಮತಿ
ಜಿಲ್ಲೆಯಲ್ಲಿ ಬಸ್ಸುಗಳ ಸಂಚಾರವನ್ನು ಆಸನ ಸಾಮರ್ಥ್ಯದ ಶೇ.50 ರೊಂದಿಗೆ ಕೋವಿಡ್‌ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಬಸ್‌ ಗಳಲ್ಲಿ ನಿಂತುಕೊಂಡು ಪ್ರಯಾಣ ಮಾಡಲು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ : ಬ್ರಿಮ್ಸ್ ಮೂಲ ಸೌಕರ್ಯಕ್ಕೆ ರೂ.10 ಕೋಟಿ ಹೆಚ್ಚುವರಿ ಅನುದಾನ : ಸಚಿವ ಪ್ರಭು ಚವ್ಹಾಣ್

Advertisement

ಕೈಗಾರಿಕೆಗಳು
ಎಲ್ಲ ಉತ್ಪಾದನಾ ಘಟಕಗಳು/ ಕೈಗಾರಿಕಾ ಸಂಸ್ಥೆಗಳು /ಕೈಗಾರಿಕೆಗಳು ತಮ್ಮ ಸಿಬಂದಿ ಸಾಮರ್ಥ್ಯದ ಶೇ.50% ರಷ್ಟು ಸಿಬಂದಿಗಳೊಂದಿಗೆ ಕಾರ್ಯಾಚರಿಸಲು ಅನುಮತಿಸಲಾಗಿದೆ. ಉಡುಪುತಯಾರಿಕೆಯಲ್ಲಿ ತೊಡಗಿರುವ ಘಟಕಗಳು/ ಕೈಗಾರಿಕಾ ಸಂಸ್ಥೆಗಳು / ಕೈಗಾರಿಕೆಗಳು ತಮ್ಮ ಸಿಬಂದಿ ಸಾಮರ್ಥ್ಯದ ಶೇ.30 ರಷ್ಟು ಸಿಬಂದಿಗಳೊಂದಿಗೆ ಕೋವಿಡ್‌ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಕಾರ್ಯಾಚರಿಸಲು ಅನುಮತಿಸಲಾಗಿದೆ.

ಎಸಿ ಹಾಕುವಂತಿಲ್ಲ
ಹವಾನಿಯಂತ್ರಣ ವ್ಯವಸ್ಥೆಯನ್ನು ಚಾಲನೆಗೊಳಿಸದೇ ಎಲ್ಲ ಅಂಗಡಿಗಳಿಗೆ ಪ್ರತಿ ದಿನ ಬೆಳಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಅನುಮತಿಸಲಾಗಿದೆ. ಆದರೆ ಹವಾನಿಯಂತ್ರಿತ ಅಂಗಡಿಗಳು, ವಾಣಿಜ್ಯ ಸಂಕೀರ್ಣ, ಮಾಲ್‌ಗ‌ಳು ಕಾರ್ಯನಿರ್ವಹಿಸಲು ಅವಕಾಶವಿರುವುದಿಲ್ಲ. ಮನೆಯಿಂದ ಸಾರ್ವಜನಿಕರು ಹೊರ ಬರುವುದನ್ನು ಕಡಿಮೆ ಮಾಡಲು ಕೋವಿಡ್‌ ನಿರ್ವಹಣೆಗಾಗಿರುವ ರಾಷ್ಟೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಎಲ್ಲ ವಸ್ತುಗಳ 24*7 ಹೋಂ ಡೆಲಿವರಿ ಸೇವೆಗಳನ್ನು ಪ್ರೋತ್ಸಾಹಿಸಲಾಗುವುದು.

ಪಬ್‌ಗಳಿಗೆ ಅನುಮತಿ ಇಲ್ಲ
ಹೊಟೇಲ್, ರೆಸ್ಟೋರೆಂಟ್‌, ಬಾರ್‌ ಮತ್ತು ಕ್ಲಬ್‌ ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತುಕೊಂಡು ಆಹಾರ ಸೇವಿಸಲು ಬೆಳಗ್ಗೆ 6ರಿಂದ ಸಂಜೆ 5ರ ವರೆಗೆ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಆದರೆ ಪಬ್‌ಗಳಿಗೆ ಅನುಮತಿ ಇಲ್ಲ. ಶೇ. 50 ಸಾಮರ್ಥ್ಯದೊಂದಿಗೆ ಲಾಡ್ಜ್ಗಳು ಮತ್ತು ರೆಸಾರ್ಟ್‌ಗಳಿಗೆ ಕೋವಿಡ್‌-19 ಪ್ರಮಾಣಿತ ಕಾರ್ಯವಿಧಾನವನ್ನು ಕಡ್ಡಾಯವಾಗಿ ಅನುಸರಿಸುವ ಷರತ್ತುಗಳೊಂದಿಗೆ ಅವಕಾಶ ನೀಡಲಾಗಿದೆ.

ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ
ಚಲನಚಿತ್ರ/ ಟಿ.ವಿ. ಧಾರವಾಹಿಗಳಿಗೆ ಸಂಬಂಧಿಸಿದಂತೆ ಕೋವಿಡ್‌ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತುಗಳೊಂದಿಗೆ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.

ಕಟ್ಟಡ ನಿರ್ಮಾಣ
ಕಟ್ಟಡ ನಿರ್ಮಾಣ ಮತ್ತು ದುರಸ್ಥಿಗೆ ಅನುಮತಿಸಿದೆ. ವಾಕಿಂಗ್‌ ಮತ್ತು ಜಾಗಿಂಗ್‌ಗಾಗಿ ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆಯವರೆಗೆ ಉದ್ಯಾನವನಗಳನ್ನು ಕೋವಿಡ್‌ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ತೆರೆಯಲು ಅನುಮತಿಸಿದೆ. ಆದರೆ ಯಾವುದೇ ಗುಂಪು ಚಟುವಟಿಕೆಗಳನ್ನು ನಡೆಸಲು ಅನುಮತಿಸಿಲ್ಲ. ಶೇ. 50 ಸಾಮರ್ಥ್ಯದೊಂದಿಗೆ ಜಿಮ್‌ ಗಳಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ.

ಟ್ಯಾಕ್ಸಿ
ಗರಿಷ್ಠ 2 ಪ್ರಯಾಣಿಕರೊಂದಿಗೆ ಟ್ಯಾಕ್ಸಿಗಳು ಮತ್ತು ಆಟೋ ರಿûಾಗಳಿಗೆ ಸಂಚರಿಸಲು ಅನುಮತಿಸಿದೆ. ಹೊರಾಂಗಣ ಕ್ರೀಡೆಗಳಿಗೆ ಅನುಮತಿ ನೀಡಲಾಗಿದೆ. ಒಳಾಂಗಣ ಕ್ರೀಡೆಗಳಿಗೆ ಅವಕಾಶ ಇಲ್ಲ.

ಸಂಸ್ಥೆಯಲ್ಲಿ ಶೇ.50 ಮಾತ್ರ ಸಾಮಥ್ಯ
ಎಲ್ಲ ಸರಕಾರಿ/ ಖಾಸಗಿ ಕಚೇರಿಗಳಿಗೆ ಸಿಬಂದಿಯ ಶೇ. 50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ. ಅಗತ್ಯ ಮತ್ತು ತುರ್ತು ಸೇವೆಗಳೊಂದಿಗೆ ವ್ಯವಹರಿಸುವ ಕಚೇರಿಗಳಿಗೆ ಅವುಗಳ ಅಗತ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುಮತಿಸಿದೆ. ಸಾಧ್ಯವಾದಷ್ಟು ಮನೆಯಿಂದ ಕೆಲಸವನ್ನು ನಿರ್ವಹಿಸಲು ಪ್ರೋತ್ಸಾಹಿಸುವಂತೆ ತಿಳಿಸಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಸೇರಿದಂತೆ ಆರೋಗ್ಯ ವಲಯಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿಗಳಿಗೆ ಅನುಮತಿಸಲಾಗಿದೆ.

ಮದುವೆಗಳು
ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಸರಳವಾಗಿ ಆಯಾ ಮನೆಗಳಲ್ಲಿ ಕುಟುಂಬದ ಸದಸ್ಯರು /ಸಂಬಂಧಿಕರು ಸೇರಿದಂತೆ 40 ಜನರನ್ನು ಒಳಗೊಂಡು ಈ ಕೆಳಗೆ ನಿಗದಿಪಡಿಸಿದ ಷರತ್ತಿಗೊಳಪಟ್ಟು ನಡೆಸಲು ಅನುಮತಿಸಲಾಗಿದೆ.
ವಿವಾಹಗಳನ್ನು ಆಯೋಜಿಸುವವರು ವಿವಾಹ ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್‌ಗೆ ಸಲ್ಲಿಸಬೇಕು. ಅರ್ಜಿಯ ಸ್ವೀಕೃತಿಯ ಮೇರೆಗೆ, ತಹಶೀಲ್ದಾರರು ಪ್ರತಿ ಮದುವೆ ಕಾರ್ಯಕ್ರಮಕ್ಕೆ 40 ಪಾಸ್‌ಗಳನ್ನು ನೀಡಬೇಕು. ಪಾಸ್‌ ಹೊಂದಿರುವ ಜನರಿಗೆ ಮಾತ್ರ ಮದುವೆ ಕಾರ್ಯಕ್ಕೆ ಹಾಜರಾಗಲು ಅವಕಾಶವಿರುತ್ತದೆ ಮತ್ತು ಪಾಸ್‌ ಅನ್ನು ವರ್ಗಾಯಿಸಲು ಅವಕಾಶವಿರುವುದಿಲ್ಲ.

 ಶವಸಂಸ್ಕಾರ /ಅಂತ್ಯಕ್ರಿಯೆ
ಶವಸಂಸ್ಕಾರ /ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ನಿರ್ವಹಿಸಲು ಅನುಮತಿಸಿದೆ.

ಕ್ರಿಮಿನಲ್‌ ಪ್ರಕರಣ ಎಚ್ಚರಿಕೆ
ಈ ಎಲ್ಲ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್‌ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣಗಳನ್ನು, Disaster Management Act 2005 , Karnataka Epidemic Diseases act 2020 ಮತ್ತು ಐಪಿಸಿ ಸೆಕ್ಷನ್‌ 188 ಪ್ರಕಾರ ನಿಯಮಾನುಸಾರ ಕಠಿನ ಕ್ರಮಕೈಗೊಳ್ಳಲಾಗುವುದು. ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next