Advertisement

ಉಡುಪಿ : ನಗರಭಾಗದಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳ ಸಂಖ್ಯೆ

03:35 AM Jun 29, 2017 | Team Udayavani |

ಉಡುಪಿ: ರಾಜ್ಯದಲ್ಲೆಡೆ ಸಾಂಕ್ರಮಿಕ ರೋಗಗಳ ಭೀತಿ ಆರಂಭಗೊಂಡಿದ್ದು, ಮಲೇರಿಯಾ, ಡೆಂಗ್ಯೂ, ಹೆಚ್‌ 1 ಎನ್‌ 1 ನಂತಹ ರೋಗಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ ಉಡುಪಿ ನಗರದಂತಹ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿದೆ. ಸಾಂಕ್ರಮಿಕ ರೋಗಗಳು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣ ಪ್ರಮುಖವಾಗಿ ಉಡುಪಿಯಲ್ಲಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮಲ್ಪೆಯಂತಹ ಪ್ರದೇಶಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದು, ಇದರಿಂದ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಅದಲ್ಲದೆ ಇಲ್ಲಿ ಆ ರೋಗ ನಿರ್ಮೂಲನೆಯಾದರೂ, ಒಂದು ಊರಿನಿಂದ ಮತ್ತೂಂದೂರಿಗೆ ವಲಸೆ ಹೋಗುವ ಜನರಿಂದ ಹರಡುವ ಸಾಧ್ಯತೆ ಇರುತ್ತದೆ. ಮಲೇರಿಯಾ ಹೆಚ್ಚಿದ್ದರೂ, ಸ್ಪಲ್ಪ ಮಟ್ಟಿಗಿನ ನಿಯಂತ್ರಣದಲ್ಲಿದೆ. ಆದರೆ ಹೆಚ್‌ 1 ಎನ್‌ 1 ಪ್ರಕರಣ ಹೆಚ್ಚಿದೆ. ಇನ್ನೂ ಚಿಕೂನ್‌ ಗುನ್ಯಾ ಉಡುಪಿ ನಗರಭಾಗದಲ್ಲಿ ಕಾಣಿಸಿಕೊಂಡಿಲ್ಲ. 

Advertisement

ಉಡುಪಿಯಲ್ಲಿ ಹೆಚ್ಚು ಯಾಕೆ?
ಉಡುಪಿಯ ಮಲ್ಪೆ ಭಾಗದಲ್ಲಿ ಹೆಚ್ಚಿನ ಮಲೇರಿಯಾ ಪ್ರಕರಣ, ಹನುಮಂತ ನಗರ, ಕೊಡಂಕೂರು, ನಿಟ್ಟೂರು ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿವೆ.  ವಲಸೆ ಕಾರ್ಮಿಕರು, ಮಲ್ಪೆಯಂತಹ ಮೀನುಗಾರಿಕಾ ಪ್ರದೇಶಗಳು ಹೆಚ್ಚಿದ್ದು, ಅಲ್ಲಿ ವಾಸಿಸುವ ಜನ ಸ್ವತ್ಛತೆ ಕಡೆಗೆ ಗಮನ ವಹಿಸುವುದು ಕಡಿಮೆ. ಅದಲ್ಲದೆ ಚರಂಡಿ ಕಾಮಗಾರಿ ಮಳೆಗಾಲ ಆರಂಭವಾಗಿ ತಿಂಗಳಾಗುತ್ತ ಬಂದರೂ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಒಳಚರಂಡಿ ನೀರು ಹೊರಬರುತ್ತಿರುವುದು ಕಂಡು ಬರುತ್ತಿದೆ. ಕಸ ವಿಲೇವಾರಿ ಸಹ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ ನಗರಾಡಳಿತ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯಿದೆ. 

ಜನರು ವಹಿಸಬೇಕಾದ ಎಚ್ಚರ

ಯಾವುದೇ ಜ್ವರವಿರಲಿ, ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.

– ಆರೋಗ್ಯ ಸಿಬಂದಿ ಮನೆಗೆ ಬಂದಾಗ ಪರೀಕ್ಷೆಗೆ ಸಹಕರಿಸಿ

Advertisement

– ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ, ಚರಂಡಿಗಳಲ್ಲಿ ಕಸ, ಕಡ್ಡಿಗಳನ್ನು ಎಸೆದು ನೀರು ಹರಿದು ಹೋಗುವಂತೆ ನೋಡಿಕೊಳ್ಳಿ

– ಮನೆಯ ನೀರು ಸಂಗ್ರಹಣಾ ಸಾಮಗ್ರಿಗಳನ್ನು ಮುಚ್ಚಿಡಿ, ದೊಡ್ಡ ತೊಟ್ಟಿ, ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ತೊಳೆದರೆ ಉತ್ತಮ. ಸಾಧ್ಯವಾದರೆ ಸೊಳ್ಳೆ ನಿಯಂತ್ರಣ ಜಾಲರಿ ಅಳವಡಿಸಿ

– ಮನೆಯ ಅಕ್ಕ- ಪಕ್ಕ ಟಯರು, ಎಳನೀರಿನ ಚಿಪ್ಪು, ಡಬ್ಬ, ಪ್ಲಾಸ್ಟಿಕ್‌ ಕವರ್‌ಗಳನ್ನು ಎಸೆದು ಮಳೆ ನೀರು ನಿಲ್ಲುವಂತೆ ಮಾಡಿದರೆ ಅಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. 

– ಸಂಜೆ ವೇಳೆ ಮನೆಯ ಕಿಟಕಿ ಬಾಗಿಲುಗಳನ್ನು ಹಾಕಿರಿ, ಕೀಡ ತಡೆಗಟ್ಟುವ ಜಾಲರಿ ಅಳವಡಿಸಿದರೆ ಒಳ್ಳೆಯದು. 

– ಬಾವಿ ನೀರು, ಕಾರಂಜಿಗಳು, ಕಟ್ಟಡ ನಿರ್ಮಾಣಕ್ಕಾಗಿ ಸಂಗ್ರಹಿಸಿದ ನೀರು, ಕೆರೆ, ಹೊಂಡ, ತೋಟದ ಬಾವಿ, ಗದ್ದೆಗಳಲ್ಲಿ ಸೊಳ್ಳೆ ಮರಿಗಳನ್ನು ತಿನ್ನುವ ಗ್ಯಾಂಬುಸಿಯ ಹಾಗೂ ಗಪ್ಪಿ ಮೀನುಗಳನ್ನು ಬಿಟ್ಟರೆ ಸೊಳ್ಳೆ ಉತ್ತತ್ತಿಯನ್ನು ನಿಯಂತ್ರಿಸಬಹುದು. 

– ಮಳೆಗಾಲ ಆರಂಭವಾಗಿದ್ದು, ಈಗ ಸಾಂಕ್ರಾಮಿಕ ರೋಗಗಳ ಕುರಿತು ಹೆಚ್ಚಿನ ಜಾಗರೂಕತೆ ವಹಿಸಬೇಕಾದ ಅಗತ್ಯವಿದೆ. ಮಲೇರಿಯಾ, ಡೆಂಗ್ಯೂ, ಎಚ್‌ 1, ಎನ್‌ 1, ಚಿಕೂನ್‌ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಾಡಳಿತ, ಆರೋಗ್ಯ ಇಲಾಖೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದರ ಜತೆಗೆ ಜನರಿಗೂ ಜಾಗೃತಿ ನೀಡುವುದು ಅಗತ್ಯ.

‘ನಿಯಂತ್ರಣಕ್ಕೆ ಸಕಾರಾತ್ಮಕ ಕ್ರಮ’
ಮಳೆಗಾಲದಲ್ಲಿ ಸೊಳ್ಳೆಗಳಿಂದ ಸಾಂಕ್ರಮಿಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೆ ಮನೆಯಲ್ಲಿಯೇ ಔಷಧಿ ಮಾಡುವುದಕ್ಕಿಂತ ತತ್‌ಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಿರಿ. ಮಲೇರಿಯಾ, ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸಕರಾತ್ಮಕ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುತ್ತಿದ್ದು, 4-5 ವರ್ಷಗಳಿಂದ ಕರಾವಳಿ ಭಾಗದಲ್ಲಿ ಎರಡು ರೋಗ ನಿಯಂತ್ರಣದಲ್ಲಿದೆ. ಬೇರೆ ಪ್ರದೇಶಗಳಿಗೆ ಹೋಲಿಸಿದರೆ ನಗರ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಈ ರೋಗಗಳು ಕಾಣಿಸಿಕೊಳ್ಳುತ್ತಿದೆ. ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಧಿಕಾರಿ ಡಾ| ಪ್ರೇಮಾನಂದ ತಿಳಿಸಿದ್ದಾರೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next