Advertisement

Udupi Paryaya: 5ನೇ ಶತಮಾನದ 2ನೇ ಪರ್ಯಾಯ ಕಾಲದ ಸಡಗರ

09:45 AM Jan 06, 2024 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಮಧ್ವಾಚಾರ್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀಕೃಷ್ಣನನ್ನು ಪೂಜಿಸಲು ವಾದಿರಾಜಸ್ವಾಮಿಗಳು ಹಾಕಿಕೊಟ್ಟ ಎರಡು ವರ್ಷಗಳ ಪರ್ಯಾಯ ಪೂಜಾ ಪರಂಪರೆ ಐದನೆಯ ಶತಮಾನದ ಒಂದನೆಯ ಪರ್ಯಾಯದಿಂದ ಎರಡನೆಯ ಪರ್ಯಾಯಕ್ಕೆ ಅಣಿ ಇಡುತ್ತಿದೆ.

Advertisement

ಮಧ್ವಾಚಾರ್ಯರ (1238-1317) ಜೀವಿತದ ಕೊನೆಯ ಭಾಗದಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರೆಂಬ ನಂಬಿಕೆ ಇದೆ. ಇದರ ಪ್ರಕಾರ 1300ರ ಬಳಿಕ ಪ್ರತಿಷ್ಠಾಪನೆ ನಡೆದಿದೆ ಎನ್ನಬಹುದು. ಇವರು ಎರಡು ತಿಂಗಳ ಪರ್ಯಾಯ ಕ್ರಮವನ್ನು ಸೂಚಿಸಿದ್ದರು.

ಎರಡು ತಿಂಗಳ ಪೂಜೆಯಿಂದ ಸುದೀರ್ಘ‌ ತೀರ್ಥಯಾತ್ರೆ, ತಣ್ತೀಪ್ರಸಾರ ಇದರಿಂದ ಸಾಧ್ಯ ವಾಗುತ್ತಿರಲಿಲ್ಲ. ಮಹತ್ವಪೂರ್ಣ ಕಾರ್ಯಯೋಜನೆಗಳಿಗೆ ಇದು ತೊಡಕಾಗುತ್ತಿತ್ತು. ಎರಡು ವರ್ಷದ ಪೂಜಾ ಪದ್ಧತಿ ಜಾರಿಗೊಳಿಸಿದರೆ ಆಡಳಿತಾತ್ಮಕವಾಗಿ ಅನುಕೂಲ ಎಂದು ಶ್ರೀವಾದಿರಾಜರು ಈ ನಿರ್ಧಾರವನ್ನು ತೆಗೆದುಕೊಂಡರು. ಮಧ್ವಾಚಾರ್ಯರು ಈಗಲೂ ಅದೃಶ್ಯರಾಗಿ ಇದ್ದಾರೆಂಬ ನಂಬಿಕೆ ಇರುವ ಉತ್ತರ ಬದರಿಗೆ ಶ್ರೀವಾದಿರಾಜರು ತೆರಳಿ ಶ್ರೀಮಧ್ವಾಚಾರ್ಯರ ಅಣತಿ ಪಡೆದು ದ್ವೆ„ವಾರ್ಷಿಕ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತಂದರೆಂಬ ಪ್ರತೀತಿ ಇದೆ.

ಮಧ್ವಾಚಾರ್ಯರ ಸುಮಾರು 200 ವರ್ಷಗಳ ಬಳಿಕ ಜನ್ಮತಾಳಿದ ವಾದಿರಾಜರು (1481-1601) ಎರಡು ವರ್ಷಗಳ ಪರ್ಯಾಯಕ್ರಮವನ್ನು ಆರಂಭಿಸಿದರು. ವಾದಿರಾಜರಿಗೆ ಎಂಟು ವರ್ಷವಾಗುವಾಗ 1489ರಲ್ಲಿ ಸೋದೆ ಮಠದ ಉತ್ತರಾಧಿಕಾರಿಯಾಗಿ ಕುಂದಾಪುರ ತಾಲೂಕಿನ ಕುಂಭಾಸಿಯ ಸೋದೆ ಮಠದಲ್ಲಿ (ಸೋದೆ ಮಠದ ಮೂಲ ಮಠದ ಹೆಸರು ಕುಂಭಾಸಿ ಮಠ) ಸನ್ಯಾಸಾಶ್ರಮವಾಯಿತು. 1518ರಲ್ಲಿ ಗುರು ಶ್ರೀವಾಗೀಶತೀರ್ಥರು ನಿರ್ಯಾಣ ಹೊಂದಿದರು. 37ನೆಯ ವಯಸ್ಸಿನಲ್ಲಿ ಶ್ರೀವಾದಿರಾಜರು ಮಠಾಧಿಪತಿಯಾದರು. ಆಗಿನ್ನೂ ಎರಡು ತಿಂಗಳ ಪರ್ಯಾಯ ಪೂಜಾ ಕ್ರಮವಿತ್ತು. 1518ರಿಂದ 1522ರ ವರೆಗೆ ಎರಡು ತಿಂಗಳ ಮೂರು ಪರ್ಯಾಯ ಪೂಜೆಯನ್ನು ನಡೆಸಿದ ವಾದಿರಾಜರು 1522ರಲ್ಲಿ ದ್ವೆ„ವಾರ್ಷಿಕ ಪರ್ಯಾಯ ಪೂಜೆ ಕ್ರಮವನ್ನು ಆರಂಭಿಸಿದರು. ಇದು ಆರಂಭವಾಗುವುದು ಪಲಿಮಾರು ಮಠದಿಂದ. ಅನಂತರ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು, ಪೇಜಾವರ ಮಠದಲ್ಲಿ ಪರ್ಯಾಯ ಚಕ್ರ ಕೊನೆಗೊಳ್ಳುವುದು. ಇದು ಆಯಾ ಮಠದ ಮೂಲಯತಿಗಳ ಆಶ್ರಮ ಜ್ಯೇಷ್ಠತ್ವದ ಆಧಾರದಲ್ಲಿ ರೂಢಿಗತವಾಗಿ ಬಂದಿದೆ.

1522ರಲ್ಲಿ ಆರಂಭವಾದ ಮೊದಲ ಚಕ್ರದಲ್ಲಿ ಸೋದೆ ಮಠದ ಸರದಿ ಬರುವಾಗ ವಾದಿರಾಜ ಸ್ವಾಮಿಗಳಿಗೆ 52 ವರ್ಷ. ಇದು 1532-33ರಲ್ಲಿ. ಅನಂತರ 1548-49, 1564-65, 1580-81ರಲ್ಲಿ ಒಟ್ಟು ನಾಲ್ಕು ಪರ್ಯಾಯ ಪೂಜೆ ನಿರ್ವಹಿಸುವಾಗಲೇ 100 ವರ್ಷವಾಯಿತು. ವಾದಿರಾಜರ ಮೊದಲ ಮತ್ತು ಎರಡನೆಯ ಪರ್ಯಾಯ ಪೂಜಾ ಸರದಿ ನಡುವಿನ ಅವಧಿಯಲ್ಲಿ ಅಯೋಧ್ಯೆಯಿಂದ ಆಂಜನೇಯ- ಗರುಡದೇವರ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿದರು. ಇದು ಸುಮಾರಾಗಿ 1545ರಲ್ಲಿ ನಡೆದಿರಬಹುದು ಎಂದು ಸಂಶೋಧಕ ಡಾ| ಜಿ.ಕೆ. ನಿಪ್ಪಾಣಿ ಅಭಿಪ್ರಾಯಪಟ್ಟಿದ್ದಾರೆ. ಐದನೆಯದಾದ 1596-97ರ ಪರ್ಯಾಯ ಪೂಜಾ ಸರದಿಯನ್ನು ಶಿಷ್ಯ ಶ್ರೀವೇದವೇದ್ಯತೀರ್ಥರಿಗೆ ಒಪ್ಪಿಸಿ ತಾವು ಶಿರಸಿ ಸಮೀಪದ ಸೋಂದಾ ಕ್ಷೇತ್ರದಲ್ಲಿ ಅಲ್ಲೇ ಪರ್ಯಾಯವ್ರತನಿಷ್ಠರಾದರು. ಈ ವೇಳೆ ಅವರಿಗೆ 116-118 ವರ್ಷ. ಇನ್ನೆರಡು ವರ್ಷ ಬಳಿಕ 1601ರಲ್ಲಿ ವೃಂದಾವನಸ್ಥರಾದರು.

Advertisement

252ನೇಯ ಪರ್ಯಾಯ

1522ರಿಂದ ಆರಂಭಗೊಂಡ ಈ ಪರ್ಯಾಯ ಪೂಜಾ ಪದ್ಧತಿಗೆ 16 ವರ್ಷಗಳ 31 ಚಕ್ರಗಳು ಉರುಳಿವೆ. ಈಗ ನಡೆಯುತ್ತಿರುವುದು 32ನೆಯ ಪರ್ಯಾಯ ಚಕ್ರದಲ್ಲಿ ಮೂರನೆಯ ಪರ್ಯಾಯ, ಮುಂದಿನದು ನಾಲ್ಕನೆಯ ಪರ್ಯಾಯ. ಈಗ ನಡೆಯುತ್ತಿರುವುದು 251ನೆಯ ಪರ್ಯಾಯ. ಇದು ಕೃಷ್ಣಾಪುರ ಮಠದಿಂದ ನಡೆಯುತ್ತಿದೆ. ಹೀಗೆ ಈಗ ನಡೆಯುತ್ತಿರುವುದು 502ನೆಯ ವರ್ಷ. 2024ರ ಜನವರಿ 18ರಂದು 503ನೆಯ ವರ್ಷ ಆರಂಭವಾಗುತ್ತದೆ. ಈ ಪರ್ಯಾಯ ಪೂಜಾ ಸರದಿಯನ್ನು ನಿರ್ವಹಿಸುವವರು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು. ಇದು 252ನೆಯ ಪರ್ಯಾಯೋತ್ಸವವಾಗಿದೆ. ಹೀಗೆ ಒಂದು ಶತಮಾನದ ಚಕ್ರ ಕೊನೆಗೊಂಡು ಇನ್ನೊಂದು ಶತಮಾನದ ಆರಂಭದ ಅವಧಿ ಮುಗಿಯುತ್ತಿದೆ.

ಅಯೋಧ್ಯೆ ಬೆಳವಣಿಗೆ- ಅಂದು ಇಂದು

ಅಯೋಧ್ಯೆ ಮತ್ತು ಉಡುಪಿಯ ಸಂಬಂಧ ಐದು ಶತಮಾನಗಳಷ್ಟು ಹಿಂದಿನದು. 1540-50ರ ಅವಧಿಯಲ್ಲಿ ಅಯೋಧ್ಯೆಯಿಂದ ಶ್ರೀವಾದಿರಾಜರು ಮುಖ್ಯಪ್ರಾಣ ಮತ್ತು ಗರುಡದೇವರ ವಿಗ್ರಹಗಳನ್ನು ತಂದು ಪ್ರತಿಷ್ಠಾಪಿಸಿದ್ದರು. 1992 ಅಯೋಧ್ಯೆ ರಾಮಮಂದಿರ ನಿರ್ಮಾಣದ ಆಂದೋಲನದಲ್ಲಿ ಪ್ರಮುಖ ಘಟ್ಟ. 1992ರ ಡಿ. 6ರಂದು ಕರಸೇವೆ ನಡೆಯುವಾಗ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ 2ನೆಯ ಪರ್ಯಾಯ ಘಟ್ಟ. ಕಾಲ ಉರುಳಿ ಅನೇಕ ಬೆಳವಣಿಗೆಗಳು ಕಂಡು ಈಗ ಅಯೋಧ್ಯೆಯಲ್ಲಿ ರಾಮಚಂದ್ರನ ವಿಗ್ರಹ ಪ್ರತಿಷ್ಠಾಪನೆಗೊಳ್ಳುವ ಕಾಲದಲ್ಲಿ (ಜ. 22) ಪುತ್ತಿಗೆ ಶ್ರೀಪಾದರ 4ನೆಯ ಪರ್ಯಾಯ ಘಟ್ಟ ಆಗಿರುತ್ತದೆ.

ಆಗಮನ-ನಿರ್ಗಮನ ಪೀಠಾಧೀಶರು: ಚತುರ್ಥ ಪರ್ಯಾಯ ಯೋಗ

ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ನಿರ್ಗಮನ ಪೀಠಾಧೀಶರಾದರೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಆಗಮನ ಪೀಠಾಧೀಶರು. ವಿಶೇಷವೆಂದರೆ ಇವರಿಬ್ಬರಿಗೂ ನಾಲ್ಕನೆಯ ಬಾರಿಗೆ ಸರ್ವಜ್ಞ ಪೀಠಾರೋಹಣದ ಅವಧಿ ಮತ್ತು ಇಬ್ಬರೂ ದ್ವಂದ್ವ ಮಠಾಧೀಶರು. 1974-75, 1990-91, 2006-07ರಲ್ಲಿ ಮೂರು ಬಾರಿ ಪರ್ಯಾಯ ಪೂಜೆಯನ್ನು ಕೃಷ್ಣಾಪುರ ಮಠಾಧೀಶರು ನಿರ್ವಹಿಸಿ 2022-23ರ ಅವಧಿಗೆ ನಾಲ್ಕನೆಯ ಅವಧಿಯ ಪೂಜಾಕೈಂಕರ್ಯ ನಿರ್ವಹಿಸುತ್ತಿದ್ದಾರೆ. 1976-77, 1992-93, 2008-09ರಲ್ಲಿ ಮೂರು ಬಾರಿ ಪರ್ಯಾಯ ಪೂಜೆಯನ್ನು ಪುತ್ತಿಗೆ ಮಠಾಧೀಶರು ನಿರ್ವಹಿಸಿ 2024-25ರ ನಾಲ್ಕನೆಯ ಅವಧಿಯ ಪೂಜಾ ಕೈಂಕರ್ಯ ನಿರ್ವಹಿಸಲಿದ್ದಾರೆ.

ಗೀತಾ ಮಂದಿರಕ್ಕೆ ಬಣ್ಣದ ಶೃಂಗಾರ

ಉಡುಪಿ: ಪರ್ಯಾಯೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಉಡುಪಿಯ ಶ್ರೀಕೃಷ್ಣ ಮಠದ ಪಕ್ಕದಲ್ಲಿರುವ ಗೀತಾಮಂದಿರವೂ ಸಿಂಗಾರಗೊಳ್ಳುತ್ತಿದೆ. ಹಲವಾರು ಮಂದಿ ಕಾರ್ಮಿಕರು ಸುಣ್ಣ ಬಣ್ಣ ಕೊಡುವುದರಲ್ಲಿ ನಿರತರಾಗಿದ್ದಾರೆ. 1992-1993ರ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯ ಅವಧಿಯಲ್ಲಿ ನೇಪಾಳದ ದೊರೆ ವೀರೇಂದ್ರ ಅವರಿಂದ ಉದ್ಘಾಟಿಸಲ್ಪಟ್ಟ ಈ ಕಟ್ಟಡಕ್ಕೆ ಮತ್ತಷ್ಟು ಮೆರುಗು ನೀಡಲಾಗುತ್ತಿದೆ.

ಕಟ್ಟಡದೊಳಗೆ ಭಗವದ್ಗೀತೆಯ 18 ಅಧ್ಯಾಯಗಳ 701 ಶ್ಲೋಕಗಳನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಭಗವದ್ಗೀತೆ, ವಿಷ್ಣು ಸಹಸ್ರನಾಮದ ಪಾರಾಯಣವನ್ನು ಭಕ್ತರು ಇಲ್ಲಿ ಪಠಿಸುತ್ತಿದ್ದಾರೆ. ಆಕರ್ಷಕ ಕಲಾಕೃತಿಗಳೂ ಗಮನಸೆಳೆಯುತ್ತವೆ. ಪ್ರವೇಶದ್ವಾರದ 18 ಮೆಟ್ಟಿಲುಗಳು ಗಮನಸೆಳೆಯುತ್ತವೆ.

1992-93ರ ಪರ್ಯಾಯದಲ್ಲಿ ಲಕ್ಷಗೀತ ಲೇಖನ ಯಜ್ಞ ನಡೆಸಿದಾಗ ಭಕ್ತರು ಬರೆದ ಅಪಾರ ಪುಸ್ತಕಗಳ ಸಂಗ್ರಹ ಇಲ್ಲಿದೆ. ಈ ಬಾರಿ ಕೋಟಿ ಲೇಖನ ಯಜ್ಞದ ಯೋಜನೆ ಇದ್ದು ಈ ಪುಸ್ತಕಗಳನ್ನೂ ಇಲ್ಲಿ ಸಮರ್ಪಿಸಲಾಗುತ್ತಿದೆ. ಇಷ್ಟೊಂದು ಜನರು ಎರಡು ವರ್ಷಗಳಲ್ಲಿ ಇಲ್ಲಿಗೆ ಬಂದು ಲೇಖನಯಜ್ಞವನ್ನು ಸಮರ್ಪಿಸಿ ಪಾರಾಯಣ ಮಾಡುವುದರಿಂದ ಸಭಾಂಗಣ ನಿರ್ಮಿಸುವ ಇರಾದೆ ಇದೆ.

ಭಕ್ತರ ಕ್ಷೇತ್ರವಾಸಕ್ಕೆ ಅನುಕೂಲವಾಗಿ 108 ಕೊಠಡಿಗಳನ್ನು ಹೊಂದಿದ ಅಷ್ಟೋತ್ತರ ಭವನ ಮಾಡುವ ಚಿಂತನೆ ಇದೆ. ನಿರ್ಮಾಣ ಮಾಡುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಬೆಳಗ್ಗಿನಿಂದ ರಾತ್ರಿಯವರೆಗೂ ಇದು ತೆರೆಯಲಿದ್ದು, ಗೀತೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ.

ಹಲವು ಹೆಗ್ಗಳಿಕೆ

ವಿವಿಧ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿ ಗೀತೆಯ ಸಾರವನ್ನು ಪ್ರಚುರಪಡಿಸಿ, ಶ್ರೀಕೃಷ್ಣನ ಸನ್ನಿಧಿಯನ್ನು ಪ್ರತಿಷ್ಠಾಪಿಸಿದ ಹೆಗ್ಗಳಿಕೆ ಇರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನಾಲ್ಕನೆಯ ಬಾರಿಯ ಪರ್ಯಾಯದ ಅವಧಿಯಲ್ಲಿ ಕೋಟಿ ಭಕ್ತರಿಂದ ಗೀತೆಯನ್ನು ಬರೆಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ವಿದೇಶಗಳಲ್ಲಿ ಒಟ್ಟು 15 ಶ್ರೀಕೃಷ್ಣ ವೃಂದಾವನ ಶಾಖೆಗಳನ್ನು ತೆರೆದ ಸಾಧನೆ ಇವರದ್ದಾಗಿದೆ, ಒಟ್ಟು 108 ಶಾಖೆಗಳನ್ನು ತೆರೆಯುವ ಗುರಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next