Advertisement

Udupi; ಜಾಗತಿಕ ವಿದ್ವಾಂಸರಿಗೆ ಉಡುಪಿ ಸಂಶೋಧನ ಯಾತ್ರಾ ಸ್ಥಳ

01:06 AM Mar 18, 2024 | Team Udayavani |

ಉಡುಪಿ: ಹಲವಾರು ವರ್ಷಗಳಿಂದ ಎಲ್ಲ ವಿದ್ವಾಂಸರಿಗೆ ಜನಪದ, ಸಂಸ್ಕೃತಿ ವಿಷಯದಲ್ಲಿ ಸಂಶೋಧನ ಯಾತ್ರಾ ಸ್ಥಳವಾಗಿ ಉಡುಪಿ ಗುರುತಿಸಿಕೊಂಡಿದ್ದು, ಇದರ ಹಿಂದಿನ ಶಕ್ತಿ ಪ್ರೊ| ಕು.ಶಿ. ಹರಿದಾಸ ಭಟ್ಟರು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಹೇಳಿದರು.

Advertisement

ಎಂಜಿಎಂ ಕಾಲೇಜು ವತಿಯಿಂದ ರವಿವಾರ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಪ್ರೊ| ಕು.ಶಿ. ಹರಿದಾಸ ಭಟ್‌ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.

ಕರಾವಳಿ ಮಣ್ಣಿನ ಕಲೆ, ಸಾಹಿತ್ಯ, ಜನಪದ ದಾಖಲೀಕರಣ, ಅಧ್ಯಯನ, ಸಂಶೋಧನೆಗೆ ವಿಶಿಷ್ಟವಾಗಿ ಶ್ರಮಿಸಿ ದವರು ಹರಿದಾಸ ಭಟ್ಟರು. ಉಡುಪಿಯನ್ನು ಸಾಂಸ್ಕೃತಿಕ, ಕಲಾ ಕೇಂದ್ರವಾಗಿ ಬೆಳೆಸಲು ಮಹತ್ವದ ಪಾತ್ರ ವಹಿಸಿದವರು. ಅವರ ಕಾಲಘಟ್ಟದಲ್ಲಿಯೇ ಯುರೋಪ್‌, ಫಿನ್‌ ಲ್ಯಾಂಡ್ ಮೊದಲಾದ ದೇಶಗಳಿಂದ ಭಾರತೀಯ ಜನಪದ ಅಧ್ಯಯನಕ್ಕೆ ವಿದ್ವಾಂಸರು ಉಡುಪಿಗೆ ಬರುತ್ತಿದ್ದುದು ವಿಶೇಷವಾಗಿತ್ತು. ಆರ್‌ಆರ್‌ಸಿಯನ್ನು ಸ್ಥಾಪಿಸುವ ಮೂಲಕ ಎಲ್ಲಿಯೂ ನಡೆಯದ ಜನಪದ ಸಂಶೋಧನೆ, ದಾಖಲೀಕರಣದ ಎಲ್ಲ ಪ್ರಕಾರಗಳು ಇಲ್ಲಿ ನಡೆಯುತ್ತಿರುವುದು ವಿಶೇಷವಾಗಿತ್ತು. ಪಾಶ್ಚಾತ್ಯ ಸಾಹಿತ್ಯ, ಕಲೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕು.ಶಿ.ಯವರ ಅನುವಾದ ಕೃತಿಗಳು ಗಮನ ಸೆಳೆಯುತ್ತಿದ್ದವು. ಅವರ ಎಲ್ಲ ಸಾಹಿತ್ಯಗಳು ಇಂದು ಮರು ವಿಮರ್ಶೆಗೆ ಒಳಪಡಬೇಕು. ಅವರ ಕೃತಿ, ಸಂಪುಟಗಳ ಮರುಮುದ್ರಣದ ಕಾರ್ಯ ಆಗಬೇಕಿದೆ ಎಂದರು.

ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಕು.ಶಿ. ಹರಿದಾಸ ಭಟ್ಟರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಉತ್ತಮ ಪ್ರಾಧ್ಯಾಪಕ ಮಾತ್ರವಲ್ಲದೆ ಉತ್ತಮ ಆಡಳಿತಗಾರರಾಗಿಯೂ ಗುರುತಿಸಿಕೊಂಡಿದ್ದರು. ಯಕ್ಷಗಾನ ಕಲೆಯನ್ನು ಜಗತ್ತಿನಾದ್ಯಂತ ಪಸರಿಸಿದರು. ಇವರನ್ನು ಈ ಪೀಳಿಗೆ ಮಾತ್ರವಲ್ಲದೆ ಮುಂದಿನ ಪೀಳಿಗೆ ಕೂಡ ಸದಾ ಸ್ಮರಿಸಬೇಕು ಎಂದರು. ಪ್ರೊ| ಕು.ಶಿ. ಅವರ ಎಲ್ಲ ಕೃತಿಗಳನ್ನು ಮರು ಮುದ್ರಣಗೊಳಿಸುವ ಯೋಜನೆಗೆ ಸಮ್ಮತಿ ಸೂಚಿಸಿದರು.

ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ| ಎನ್‌.ಟಿ. ಭಟ್‌, ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ| ವಿಶ್ವನಾಥ್‌ ಎಂ. ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ| ಸುರೇಂದ್ರನಾಥ್‌ ಶೆಟ್ಟಿ ಅವರಿಂದ ಗುರು ನಮನ ನಡೆಯಿತು.

Advertisement

ಕು.ಶಿ. ಹರಿದಾಸ ಭಟ್ಟರ ಮಕ್ಕಳಾದ ಸುಜಾತಾ, ಜಯದೇವ, ಅನಂತ ಮೋಹನ, ಹರ್ಷವರ್ಧನ, ಆಶಾ, ಆಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಟಿ. ಮೋಹನದಾಸ್‌ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ. ರಂಗ ಪೈ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಡಾ| ಬಿ. ಜಗದೀಶ್‌ ಶೆಟ್ಟಿ, ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹ ಸಮಿತಿ ಅಧ್ಯಕ್ಷ ಕಿಶನ್‌ ಹೆಗ್ಡೆ, ಎಂಜಿಎಂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಸ್ವಾಗತಿಸಿ, ಪ್ರಸ್ತಾವನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ಪುತ್ತಿ ವಸಂತ್‌ ಕುಮಾರ್‌ ನಿರೂಪಿಸಿ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್‌ ನಾಯ್ಕ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜು ಕ್ಯಾಂಪಸ್‌ನ ಅಡ್ಮಿನಿಸ್ಟ್ರೇಟಿವ್‌ ಬ್ಲಾಕ್‌ನಿಂದ ರವೀಂದ್ರ ಮಂಟಪದ ವರೆಗೆ ಕು.ಶಿ. ಹರಿದಾಸ ಭಟ್ಟರ ಭಾವಚಿತ್ರದ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next