Advertisement

Udupi: ನಕಲಿ ದಾಖಲೆಗಳ ಪೂರೈಕೆಯ ಫ್ಯಾಕ್ಟರಿ ಕರಾವಳಿಯಲ್ಲಿ?

02:02 AM Oct 13, 2024 | Team Udayavani |

ಉಡುಪಿ: ನಕಲಿ ದಾಖಲೆ ಗಳನ್ನು ಸೃಷ್ಟಿಸಿಕೊಂಡು ವಿದೇಶದಿಂದ ಭಾರತಕ್ಕೆ ಆಗಮಿಸುವ ದೊಡ್ಡ ಜಾಲವೇ ಇದೆ. ಅಕ್ರಮ ವಲಸಿಗರು ಇಲ್ಲಿ ಕಾರ್ಮಿಕರಾಗಿರುತ್ತಾರೆ. ಅವರಿಗೆ ಉಳಿದುಕೊಳ್ಳಲು ಸ್ಥಳೀಯವಾಗಿಯೇ ವ್ಯವಸ್ಥೆ ಮಾಡಿಕೊಡುವವರೂ ಇದ್ದಾರೆ. ಈಗ ಈ ಜಾಲವನ್ನು ಭೇದಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.

Advertisement

ಜಿಲ್ಲೆಯಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಪತ್ತೆಯಾದ ಹಿನ್ನೆಲೆಯಲ್ಲಿ ಇವರಿಗೆ ದಾಖಲಾತಿಗಳು ಹೇಗೆ ಸಿಗುತ್ತವೆ? ಯಾರು ಮಾಡಿಸಿಕೊಡುತ್ತಾರೆ ಎಂಬುದರ ಹಿಂದೆ ಪೊಲೀಸರು ಬಿದ್ದಿದ್ದಾರೆ. ನಕಲಿ ದಾಖಲೆಗಳನ್ನು ಒದಗಿಸುವ ಏಜೆಂಟರ “ಫ್ಯಾಕ್ಟರಿ’ ಯೇ ಕರಾಳಿಯಲ್ಲಿ ಇದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಪ್ರಸ್ತುತ ಸಿಕ್ಕಿಬಿದ್ದಿರುವ ಅಕ್ರಮ ವಲಸಿಗರಲ್ಲಿ ಒಬ್ಬರಿಗೆ ನಕಲಿ ಪಾಸ್‌ ಪೋರ್ಟ್‌ ಅನ್ನು ಉಡುಪಿಯಲ್ಲೇ ಮಾಡಿಕೊಡಲಾಗಿತ್ತು ಎಂಬ ಸಂಶಯ ವ್ಯಕ್ತವಾಗಿದೆ. ಇದು ನಕಲಿ ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌ ಜಾಲದ ಸಾಧ್ಯತೆ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.

ಜಿಲ್ಲೆಗೆ ಕಟ್ಟಡ, ಕೂಲಿ ಕಾರ್ಮಿಕರಾಗಿ, ಮೀನುಗಾರರಾಗಿ, ಮೀನು ಕಾರ್ಮಿಕರಾಗಿ ಹೊರ ದೇಶದಿಂದ ಅನೇಕರು ಇತ್ತೀಚಿನ ವರ್ಷಗಳಲ್ಲಿ ಬರುತ್ತಿದ್ದಾರೆ. ನಕಲಿ ದಾಖಲೆಗಳ ಮೂಲಕ ಪ್ರವೇಶಿಸುತ್ತಿರುವವರಲ್ಲಿ ಬಾಂಗ್ಲಾ ಹಾಗೂ ಶ್ರೀಲಂಕಾದವರು ಹೆಚ್ಚಿದ್ದಾರೆ. ಇವರೆಲ್ಲರೂ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳುವ ಕಾರಣ ಸ್ಥಳೀಯರಿಗಾಗಲಿ, ಪೊಲೀಸರಿಗಾಗಲಿ ತತ್‌ಕ್ಷಣ ಅನುಮಾನಬಾರದು. ಕಡಿಮೆ ವೇತನಕ್ಕೆ ಬೇರೆ ಬೇರೆ ಉದ್ಯೋಗ ಮಾಡಿಕೊಂಡು, ತಮ್ಮ ಉದ್ಯೋಗದ ಸ್ಥಳ ಬದಲಿಸುತ್ತಾ ಇರುವುದೂ ಪೊಲೀಸರಿಗೆ ಸವಾಲಾಗಿದೆ.

ಬಾಂಗ್ಲಾದಿಂದ ಪಶ್ಚಿಮಬಂಗಾಲ, ಅಸ್ಸಾಂ ಮೂಲಕ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿ, ಅಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಬೇರೆ ಬೇರೆ ರಾಜ್ಯಗಳಿಗೆ ಗುಂಪಾಗಿ ಹೋಗುವ ಪ್ರವೃತ್ತಿ ಈ ಅಕ್ರಮ ವಲಸಿಗರದ್ದು. ಹಾಗೆಯೇ ಶ್ರೀಲಂಕಾದವರು ತಮಿಳುನಾಡು ಮೂಲಕ ಭಾರತಕ್ಕೆ ಬಂದು, ಮೀನುಗಾರಿಕೆ ಬೋಟುಗಳಲ್ಲಿ ಕೆಲಸ ಮಾಡಿ, ಅನಂತರ ಬೇರೆ ಬೇರೆ ಬಂದರುಗಳಿಗೆ ಹೋಗುತ್ತಾರೆ ಎನ್ನುವ ಮಾಹಿತಿಯೂ ಇದೆ ಎನ್ನಲಾಗಿದೆ.

ಕೆಲವು ವರ್ಷಗಳ ಹಿಂದೆಯಷ್ಟೇ ವೀಸಾ ಅವಧಿ ಮುಗಿದಿದ್ದ ನೈಜೀರಿಯಾ ಮೂಲದ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆಯಲಾಗಿತ್ತು. ವಿದ್ಯಾಭ್ಯಾಸ, ಕೆಲಸ ಕಾರ್ಯಕ್ಕೆಂದು ಬರುವ ಜನರಲ್ಲಿ ಕೆಲವರು ತಮ್ಮ ವೀಸಾ ಅವಧಿ ಮುಗಿದ ಬಳಿಕವೂ ತಂಗಿದರೆ, ನಕಲಿ ದಾಖಲೆ ಮೂಲಕ ಸುಲಭದಲ್ಲಿ ಭಾರತಕ್ಕೆ ಪ್ರವೇಶಿಸುವವರ ಸಂಖ್ಯೆಯೂ ಬಹಳಷ್ಟಿದೆ ಎನ್ನಲಾಗಿದೆ.

Advertisement

ಪೊಲೀಸರಲ್ಲೂ ಮಾಹಿತಿಯಿಲ್ಲ
ಪಾಸ್‌ಪೋರ್ಟ್‌ ಮಾಡುವ ಸಂದರ್ಭದಲ್ಲಿ ಪೊಲೀಸರು ಫಲಾನು ಭವಿಗಳ ಎಲ್ಲ ದಾಖಲೆ, ಮನೆ ಭೇಟಿ, ಎಷ್ಟು ವರ್ಷಗಳಿಂದ ವಾಸ ಹೀಗೆ ಹತ್ತು ಹಲವು ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಆದರೆ ಪಾಸ್‌ಪೋರ್ಟ್‌ ಬಂದ ಬಳಿಕ ಆ ವ್ಯಕ್ತಿಯ ಸ್ಥಿತಿಗತಿ ಏನು? ಭಾರತದಲ್ಲಿಯೇ ಇದ್ದಾನೆಯೇ ಅಥವಾ ವಿದೇಶಕ್ಕೆ ಹೋಗಿದ್ದಾನೆಯೇ ಎಂಬ ವಿವರ ಪೊಲೀಸರಲ್ಲೂ ಇರದು. ಎಷ್ಟು ವಿದೇಶಿಗರು ಜಿಲ್ಲೆಯಲ್ಲಿದ್ದಾರೆ ಎಂಬ ನಿಖರ ಮಾಹಿತಿಯೂ ಪೊಲೀಸರಲಿಲ್ಲ.
ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಮಾಹಿತಿಯಷ್ಟೇ ಪೊಲೀಸರ ಬಳಿ ಲಭ್ಯ/ಆದರೆ ವಿಸಿಟಿಂಗ್‌ ವೀಸಾ ಪಡೆದು ವಿವಿಧ ಉದ್ಯೋಗದಲ್ಲಿರುವವರ ವೀಸಾ ಅವಧಿ ಮುಗಿದರೂ ಮಾಹಿತಿ ಇರದು.

ನಕಲಿ ಪಾಸ್‌ಪೋರ್ಟ್‌
ನಕಲಿ ಪಾಸ್‌ಪೋರ್ಟ್‌ ಬಳಸಿ ಉಗ್ರಗಾಮಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಾಧ್ಯತೆಗಳೂ ಇರುತ್ತವೆ. ಪ್ರಸ್ತುತ ಮಲ್ಪೆಯಲ್ಲಿ ಸಿಕ್ಕಿರುವವರು ನಕಲಿ ಪಾಸ್‌ಪೋರ್ಟ್‌ ಮೂಲಕ ಬಂದವರು. ವಿಮಾನ ನಿಲ್ದಾಣಗಳಲ್ಲಿ ಈ ಬಗ್ಗೆ ಕಟ್ಟುನಿಟ್ಟು ತಪಾಸಣೆ ಮಾಡಿದರಷ್ಟೇ ಇಂತಹ ಪ್ರಕರಣಗಳು ಬೆಳಕಿಗೆ ಬರಲು ಸಾಧ್ಯ. ಇಂತಹ ನಕಲಿ ಪಾಸ್‌ಪೋರ್ಟ್‌ ಮಾಡುವವರ ಬಳಿ ಇರುವ ದಾಖಲೆಗಳೆಲ್ಲವೂ ನಕಲಿಯೇ ಆಗಿರುತ್ತದೆ ಎನ್ನುತ್ತಾರೆ ಪೊಲೀಸರೊಬ್ಬರು.

ಏಜೆಂಟ್‌ಗಳ ಪತ್ತೆಯೂ ಸವಾಲು
ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತಂದು ಕೆಲಸ ಕೊಡಿಸುವ ದೊಡ್ಡ ಜಾಲವಿದೆ. ಅದರ ಮೇಲುಸ್ತುವಾರಿ, ಏಜೆಂಟರು ಕರ್ನಾಟಕದವರೇ ಆಗಿರುತ್ತಾರೆ. ಆ ಜಾಲದ ಮೂಲಕವೇ ಹೊರ ದೇಶದ ಅಕ್ರಮ ವಲಸಿಗರು ಬರುತ್ತಿದ್ದಾರೆ. ಕಟ್ಟಡ ಕಾಮಗಾರಿ, ಕೂಲಿ ಕೆಲಸ, ಮೀನುಗಾರಿಕೆ ಇತ್ಯಾದಿಗೆ ಬೇಡಿಕೆ ಹೆಚ್ಚಿದ್ದು ಯಾರೂ ದೀರ್ಘ‌ಕಾಲ ಒಂದೇ ಉದ್ಯೋಗದಲ್ಲಿ ಉಳಿಯುವುದಿಲ್ಲ. ಒಮ್ಮೆ ಸ್ಥಳೀಯವಾಗಿ ಹೊಂದಿಕೊಂಡ ಮೇಲೆ ಅವರು ಏಜೆಂಟರ ಸಂಪರ್ಕದಿಂದ ದೂರವಾಗುತ್ತಾರೆ. ಈ ಏಜೆಂಟರನ್ನು ಪತ್ತೆ ಮಾಡುವುದೇ ಪೊಲೀಸರಿಗೆ ಸವಾಲು.

ಅಕ್ರಮ ವಲಸೆಗೆ ಶಿಕ್ಷೆ ಏನು?
ವೀಸಾ ಇಲ್ಲದೇ ಬರುವುದು, ವೀಸಾ ಅವಧಿ ಮುಗಿದ ಮೇಲೂ ಅಕ್ರಮವಾಗಿ ನೆಲೆಸಿರುವುದು ಅಥವಾ ನಕಲಿ ದಾಖಲೆಯೊಂದಿಗೆ ಇಲ್ಲಿ ಬಂದು ಪೊಲೀಸರ ವಶಕ್ಕೆ ಸಿಕ್ಕ ಅನಂತರದಲ್ಲಿ ಆರೋಪಿಗಳ ತನಿಖೆ ನಡೆಯುತ್ತದೆ. ಇಂತಹ ಪ್ರಕರಣದಲ್ಲಿ ಜಾಮೀನು ಸಿಗದು. ಕನಿಷ್ಠ 7 ವರ್ಷದಿಂದ‌ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಕೋರ್ಟ್‌ ನೀಡಬಹುದು. ಜತೆಗೆ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರು, ಅಕ್ರಮ ವಲಸಿಗರಿಗೆ ನಕಲಿ ದಾಖಲೆ ಸೃಷ್ಟಿಸಲು ಸಹಕರಿಸಿದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳುತ್ತಾರೆ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ.

ಹತ್ತು ಸಾವಿರ ರೂ. ಕೊಟ್ಟರೆ ಎಲ್ಲ ದಾಖಲೆ ಲಭ್ಯ!
ಉಡುಪಿ: ಹತ್ತು ಸಾವಿರ ಕೊಟ್ಟರೆ ನಕಲಿ ದಾಖಲೆಗಳು ಸ್ಥಳೀಯವಾಗಿಯೆ ಲಭ್ಯ . ಇಂಥದೊಂದು ಆಘಾತಕಾರಿ ಮಾಹಿತಿಯನ್ನು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಲದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುವ ಇವರು ಲಂಚದ ರೂಪದಲ್ಲಿ ಹಣ ನೀಡಿ ನಕಲಿ ದಾಖಲೆಗಳನ್ನು ಪಡೆಯುತ್ತಾರೆ ಎನ್ನಲಾಗಿದೆ.

ಈಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿಗಳು ವಿಚಾರಣೆ ವೇಳೆ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಇಲ್ಲಿ 10 ಸಾವಿರ ರೂ. ಕೊಟ್ಟರೆ ಆಧಾರ್‌ ಕಾರ್ಡ್‌ ಮಾಡಿಕೊಡುತ್ತಾರೆ. ಇದೇ ರೀತಿ ಹಣ ನೀಡಿ ಆಧಾರ್‌ಕಾರ್ಡ್‌ ಮಾಡಿಕೊಂಡು ಉದ್ಯೋಗಕ್ಕಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಡಾ. ಕೆ. ಅರುಣ್‌, ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ. ಎಲ್ಲರೂ ನಕಲಿ ಆಧಾರ್‌ ಕಾರ್ಡ್‌ ಹೊಂದಿದ್ದಾರೆ. ಇವರೊಂದಿಗಿದ್ದ ಇನ್ನೊಬ್ಬ ಮೊಹಮ್ಮದ್‌ ಮಾಣಿಕ್‌ ನಕಲಿ ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌ ಮೂಲಕ ದುಬಾೖಗೆ ತೆರಳಲು ಯತ್ನಿಸಿದ ವೇಳೆ ವಿಮಾನ ನಿಲ್ದಾಣ ತಪಾಸಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರಿದಿದೆ. ಇವರು ಗಡಿ ದಾಟಿ ಹೇಗೆ ಬಂದರು, ಇವರಿಗೆ ಸ್ಥಳೀಯವಾಗಿ ಯಾರು ಸಹಾಯ ಮಾಡಿದರು? ನಕಲಿ ಆಧಾರ್‌ ಕಾರ್ಡ್‌ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಕಾನೂನು ಪ್ರಕಾರ ವಿಚಾರಣೆ ಕೈಗೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next