Advertisement

ಉಡುಪಿ ನಗರ: ರಿಕ್ಷಾ ನಿಲ್ದಾಣಗಳು ಭರ್ತಿಯಾಗಿವೆ !

11:08 AM Oct 18, 2018 | Team Udayavani |

ಉಡುಪಿ: ಉಡುಪಿ ಮತ್ತು ಮಣಿಪಾಲದ ಆಟೋ ರಿಕ್ಷಾ ನಿಲ್ದಾಣಗಳಲ್ಲಿ ‘ಜಾಗದ ಸಮಸ್ಯೆ’ ಉಲ್ಬಣಗೊಂಡಿದೆ. ತಮ್ಮ ರಿಕ್ಷಾ ನಿಲುಗಡೆ ಮಾಡಲು ಸ್ಥಳಾವಕಾಶ ದೊರೆಯದ ರಿಕ್ಷಾ ಚಾಲಕರು ಇತರ ರಿಕ್ಷಾ ಚಾಲಕರೊಂದಿಗೆ ಜಿದ್ದಿಗೆ ಬಿದ್ದಿದ್ದಾರೆ. ಈ ಗೊಂದಲಕ್ಕೆ ತೆರೆ ಎಳೆಯಬೇಕೆಂಬ ಜಿಲ್ಲಾಡಳಿತದ ಪ್ರಯತ್ನ ಕೂಡ ಕೈಗೂಡಿಲ್ಲ.

Advertisement

‘ಸ್ಥಳ ಕೊರತೆ’ ಮುಖ್ಯವಾಗಿ ಉಡುಪಿ ನಗರದಲ್ಲಿ ರಿಕ್ಷಾ ಚಾಲಕರ ಕೆಲವು ಗುಂಪುಗಳ ನಡುವೆ ಆಗಾಗ್ಗೆ ಘರ್ಷಣೆಗೆ ಕಾರಣವಾಗುತ್ತಿದೆ. ‘ಇರುವ ನಿಲ್ದಾಣಗಳಲ್ಲಿ ಜಾಗವಿಲ್ಲ. ಹಾಗಾಗಿ ಈಗ ಹೊಸದಾಗಿ ಬರುವವರಿಗೆ ಅವಕಾಶ ನೀಡುವುದು ಸಾಧ್ಯವಿಲ್ಲ’ ಎನ್ನುತ್ತದೆ ರಿಕ್ಷಾ ಚಾಲಕರ ಒಂದು ಗುಂಪು. ‘ಈಗ ಇರುವ ರಿಕ್ಷಾಗಳ ಜತೆ ಮತ್ತಷ್ಟು ರಿಕ್ಷಾಗಳು ಬಂದರೆ ನಮ್ಮ ಹೊಟ್ಟೆ ಪಾಡೇನು?’ ಎಂದು ಈ ಗುಂಪು ಪ್ರಶ್ನಿಸುತ್ತಿದೆ. ‘ನಾವು ಆಟೋರಿಕ್ಷಾವನ್ನು ಯಾವ ನಿಲ್ದಾಣದಲ್ಲಿ ಬೇಕಾದರೂ ನಿಲ್ಲಿಸಬಹುದು. ಅದಕ್ಕೆ ಆರ್‌ಟಿಒ ಕಾನೂನು ಅವಕಾಶ ಮಾಡಿಕೊಟ್ಟಿದೆ. ಈಗ ಇರುವ ಆಟೋ ಸ್ಟಾಂಡ್‌ಗಳ ಪೈಕಿ ಹಲವು ಸ್ಟಾಂಡ್‌ಗಳಲ್ಲಿ ಜಾಗ ಇದೆ. ಆದರೆ ಅವರು ನಮಗೆ ಬಿಡುತ್ತಿಲ್ಲ. ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ’ ಎನ್ನುತ್ತಿದೆ ಮತ್ತೊಂದು ಗುಂಪು. 

ವಲಯ ವಿಂಗಡಣೆ ಯತ್ನ
ಮಂಗಳೂರಿನಲ್ಲಿ ವಲಯ – 1 ಮತ್ತು ವಲಯ -2 ಎಂದು ಗುರುತಿಸಿ ನಗರದೊಳಗೆ ಬಾಡಿಗೆ ಮಾಡುವ ಮತ್ತು ಗ್ರಾಮೀಣ ಭಾಗದಲ್ಲಿ ಬಾಡಿಗೆ ಮಾಡುವ ರಿಕ್ಷಾಗಳೆಂದು ವಿಂಗಡಿಸಲಾಗಿದ್ದು ಅದೇ ಮಾದರಿಯಲ್ಲಿ ಉಡುಪಿಯಲ್ಲಿಯೂ ವಲಯ 1 ಮತ್ತು 2ನ್ನು ವಿಂಗಡಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆ ಜಿಲ್ಲಾ ಸಾರಿಗೆ ಪ್ರಾಧಿಕಾರ ನಿರ್ಧರಿಸಿ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತು. ಈಗಾಗಲೇ ಹಲವು ಸಭೆಗಳು ಕೂಡ ನಡೆದಿವೆ. ಆದರೆ ಒಮ್ಮತಕ್ಕೆ ಬರುವುದು ಅಸಾಧ್ಯವಾಗಿದೆ. ವಲಯವಾರು ವಿಂಗಡಣೆಗೆ ಕೆಲವು ರಿಕ್ಷಾ ಚಾಲಕ ಮಾಲಕರ ಸಂಘಗಳು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಸದ್ಯ ಕಾರ್ಯಗತಗೊಂಡಿಲ್ಲ.

ನಗರಮಧ್ಯದಿಂದ 5 ಕಿ.ಮೀ ವ್ಯಾಪ್ತಿ
ಉಡುಪಿ ನಗರದ ಮಧ್ಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ 5 ಕಿ.ಮೀ ವ್ಯಾಪ್ತಿಯನ್ನು ‘ವಲಯ-1’ ಎಂದು ಹಾಗೂ ಅದಕ್ಕಿಂತ ಹೊರಗಿನ ಪ್ರದೇಶವನ್ನು ‘ವಲಯ-2’ ಎಂದು ಗುರುತಿಸಲು ಯೋಜಿಸಲಾಗಿದೆ. ಇದರಲ್ಲಿ ಮಣಿಪಾಲ ಕೂಡ ಸೇರುತ್ತದೆ. ಪ್ರಸ್ತುತ ಗ್ರಾಮೀಣ ಪರ್ಮಿಟ್‌ ಹೊಂದಿರುವ ಆಟೋ ರಿಕ್ಷಾಗಳಿಗೆ ನಗರ ಪ್ರವೇಶಕ್ಕೆ ಅವಕಾಶವಿಲ್ಲ. ಆದರೆ ನಗರ ಪರ್ಮಿಟ್‌ ಹೊಂದಿರುವ ಹಲವು ರಿಕ್ಷಾಗಳಿಗೂ ಅವಕಾಶ ದೊರೆಯುತ್ತಿಲ್ಲ. ವಲಯ ವಿಂಗಡಣೆ ಮಾಡಿದ ಅನಂತರ 2012ಕ್ಕಿಂತ ಹಿಂದೆ ಪರವಾನಿಗೆ ಹೊಂದಿದವರಿಗೆ ಮಾತ್ರ ವಲಯ-1(ನಗರ)ರಲ್ಲಿ ಅವಕಾಶ ಮಾಡಿಕೊಡಲಾಗುವುದು ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಗಳು.

ಯಾಕಾಗಿ ಸಂಘರ್ಷ?
ನಗರದಲ್ಲಿ ಆಟೋಗಳ ಸಂಖ್ಯೆ, ನಿಲ್ದಾಣಗಳ ಸಂಖ್ಯೆ ಹೆಚ್ಚಿರುವುದು ಹೌದಾದರೂ ಈಗ ಉಂಟಾಗಿರುವ ಸಂಘರ್ಷಕ್ಕೆ ಕೆಲವು ಆಟೋ ಯೂನಿಯನ್‌ಗಳ ಪ್ರತಿಷ್ಠೆ ಕೂಡ ಒಂದು ಕಾರಣ. ಇದರಲ್ಲಿ ಒಂದಷ್ಟು ರಾಜಕೀಯ ಮೇಲಾಟಗಳು ಕೂಡ ನಡೆಯುತ್ತಿವೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ.

Advertisement

ಬಾರದಂತೆ ನಾಮಫ‌ಲಕ !
ಕಳೆದ ಒಂದು ತಿಂಗಳಿನಿಂದ ಅಮಾಯಕ ರಿಕ್ಷಾ ಚಾಲಕರ ಮೇಲೆ ದಬ್ಟಾಳಿಕೆ ನಡೆಯುತ್ತಿದೆ. ಈ ಬಗ್ಗೆ ಪ್ರಕರಣಗಳು ಕೂಡ ದಾಖಲಾಗಿವೆ. ನಗರಸಭಾ ವ್ಯಾಪ್ತಿಯ ಜಾಗವಾಗಿರುವುದರಿಂದ ಪ್ರತಿಯೊಂದು ಸ್ಟಾಂಡ್‌ನ‌ಲ್ಲಿ ಆಟೋ ಕಡಿಮೆ ಇದ್ದಾಗ ಅಲ್ಲಿ ಬೇರೆ ಆಟೋದವರಿಗೆ ದುಡಿಯಲು ಅವಕಾಶ ಕೊಡಬೇಕು. ಆದರೆ ಕೆಲವು ಸ್ಟಾಂಡ್‌ಗಳಲ್ಲಿ ‘ಮೂರು ರಿಕ್ಷಾ ಇದ್ದರೆ ಮಾತ್ರ ಸ್ಟಾಂಡ್‌ಗೆ ಬೇರೆ ರಿಕ್ಷಾ ಬರಬಹುದು’ ಎಂದು ಬರೆದಿದ್ದಾರೆ. ಹಾಗಾಗಿ ಅನೇಕ ರಿಕ್ಷಾ ಚಾಲಕರಿಗೆ ದುಡಿಯಲು ಸ್ಟಾಂಡೇ ಇಲ್ಲದಂತಾಗಿದೆ ಎನ್ನುತ್ತಾರೆ ಆಟೋ ಯೂನಿಯನ್‌ವೊಂದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಅವರು.

ಮತ್ತೊಮ್ಮೆ ಸಭೆ
ವಲಯ 1 ಮತ್ತು ವಲಯ 2 ವಿಂಗಡಣೆ ಮಂಗಳೂರಿನಲ್ಲಿ ಯಶಸ್ವಿಯಾಗಿದೆ. ಆರಂಭದಲ್ಲಿ ಸ್ವಲ್ಪ ಗೊಂದಲಗಳು ಉಂಟಾಗಿದ್ದವು. ಅನಂತರ ಸರಿಯಾಗಿದೆ. ಉಡುಪಿಯಲ್ಲಿಯೂ ಇದೇ ರೀತಿ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಆಟೋ ರಿಕ್ಷಾ ಚಾಲಕರು, ಮಾಲಕರ ಸಭೆಗಳನ್ನು ನಡೆಸಲಾಗುತ್ತಿದೆ. ಕೆಲವು ಮಂದಿ ಮತ್ತಷ್ಟು ಕಾಲಾವಕಾಶ ಕೇಳಿದ್ದಾರೆ. ಹಾಗಾಗಿ ಇನ್ನೊಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
– ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ

ಅನಧಿಕೃತ ನಿಲ್ದಾಣಗಳು?
ಉಡುಪಿ, ಮಣಿಪಾಲ ನಗರದಲ್ಲಿ ಈಗ 2,390 ಆಟೋರಿಕ್ಷಾಗಳಿವೆ. ಇಲ್ಲಿ ಅಧಿಕೃತವಾಗಿ 70 ನಿಲ್ದಾಣಗಳಿವೆ. ಆದರೆ ವಾಸ್ತವದಲ್ಲಿ ಈ ಎರಡೂ ಪ್ರದೇಶದಲ್ಲಿ 100ಕ್ಕೂ ಅಧಿಕ ನಿಲ್ದಾಣಗಳಿವೆ. ಉಡುಪಿ ತಾಲೂಕಿನ ಗ್ರಾಮೀಣ ಭಾಗದಲ್ಲಿ 7,210, ಕುಂದಾಪುರ ನಗರದಲ್ಲಿ 260, ಗ್ರಾಮಾಂತರದಲ್ಲಿ 3,050, ಕಾರ್ಕಳ ನಗರದಲ್ಲಿ 21 ಹಾಗೂ ಗ್ರಾಮಾಂತರದಲ್ಲಿ 1,850 ಆಟೋಗಳು ಓಡಾಡುತ್ತಿವೆ. ಉಡುಪಿ ನಗರದಲ್ಲಿ ಹೊಸ ರಿಕ್ಷಾಗಳಿಗೆ ಕಳೆದ 3 ವರ್ಷಗಳಿಂದ ಪರವಾನಿಗೆ ನೀಡಿಲ್ಲ.

ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next