Advertisement

Udupi: 75ರ ಎಂಜಿಎಂ ಕಾಲೇಜಿಗೆ ಸ್ವಾಯತ್ತ ಕಾಲೇಜು ಮಾನ್ಯತೆ

12:35 AM Sep 11, 2024 | Team Udayavani |

ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಎರಡೇ ವರ್ಷದಲ್ಲಿ ಆರಂಭಗೊಂಡ ಮಹಾತ್ಮಾ ಗಾಂಧಿ ಮೆಮೋರಿಯಲ್‌ ಕಾಲೇಜು ಈಗ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭ ಸ್ವಾಯತ್ತ ಕಾಲೇಜು ಆಗಿ ಮಾನ್ಯಗೊಂಡಿದೆ.

Advertisement

ಕಾಲೇಜಿನ ಪ್ರಸ್ತಾವನೆಯನ್ನು ಮಾನ್ಯ ಮಾಡಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು (ಯುಜಿಸಿ) ಸ್ವಾಯತ್ತ ಸ್ಥಾನಮಾನವನ್ನು ನೀಡಿದೆ.
ಯುಜಿಸಿ ಮಾರ್ಗದರ್ಶಿ ಸೂತ್ರದ ಪ್ರಕಾರ ಸ್ವಾಯತ್ತ ಕಾಲೇಜು ಪಠ್ಯಕ್ರಮ, ಶುಲ್ಕ ನಿಗದಿ, ಹೊಸ ಕೋರ್ಸುಗಳ ಆರಂಭ, ಪರೀಕ್ಷಾ ನಿರ್ವಹಣೆ, ಫ‌ಲಿತಾಂಶ ಘೋಷಣೆ ಎಲ್ಲವನ್ನೂ ಸ್ವತಂತ್ರವಾಗಿ ನಿರ್ವಹಿಸಬಹುದಾಗಿದೆ. ಇದುವರೆಗೆ ಮಂಗಳೂರು ವಿ.ವಿ.ಯ ನಿಯಮಗಳನ್ನು ಪಾಲಿಸಬೇಕಿತ್ತು. ಈ ಸ್ವಾಯತ್ತೆಯಿಂದ ವಿದ್ಯಾರ್ಥಿಗಳಿಗೆ ಹಲವು ಪ್ರಯೋಜನಗಳಿವೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಸ್ವಾಯತ್ತೆ ಜಾರಿಗೆ ಬರಲಿದೆ. ಈ ವರ್ಷ ಪಠ್ಯಕ್ರಮ ಸೇರಿದಂತೆ ರೂಪ ರೇಖೆ ಗಳನ್ನು ಸಿದ್ಧಪಡಿಸಲಾಗುವುದು.
1942ರಲ್ಲಿ ಮಣಿಪಾಲದ ಅಕಾ ಡೆಮಿ ಆಫ್ ಜನರಲ್‌ ಎಜುಕೇಶನ್‌ ಸಂಸ್ಥೆ ಆರಂಭಗೊಂಡಿತಾದರೂ ಎಂಜಿಎಂ ಕಾಲೇಜನ್ನು 1949ರಲ್ಲಿ ಆರಂಭಿಸ
ಲಾಯಿತು. ಇದಕ್ಕೆ ಬಹು ಹಿಂದಿನಿಂದಲೇ ಡಾ| ಟಿಎಂಎ ಪೈಯವರು ಪ್ರಯತ್ನವನ್ನು ಹಾಕಿದ್ದರು. ಆಗ ಅವಿಭಜಿತ ದ.ಕ. ಜಿಲ್ಲೆಯ ಮೂರೂ ಕಾಲೇಜು
ಗಳು ಮಂಗಳೂರಿನಲ್ಲಿದ್ದವು. ನಾಲ್ಕನೆಯ ಕಾಲೇಜಾಗಿ ಆರಂಭವಾದದ್ದು ಎಂಜಿಎಂಕಾಲೇಜು.

ಈಗಿನ ನಗರಸಭೆ ಕಚೇರಿ ಎದುರಿನ ಮೇನ್‌ ಶಾಲೆಯಲ್ಲಿ (ಮಹಾತ್ಮಾಗಾಂಧಿ ಮೇನ್‌ ಶಾಲೆ) ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿಗಳು ಓದಿದರು. ಆಗ ಕೇವಲ ಪಿಯುಸಿ ಶಿಕ್ಷಣ ಆರಂಭವಾದದ್ದು. 1951ರಲ್ಲಿ ಎಂಜಿಎಂ ಸ್ವಂತ ಕ್ಯಾಂಪಸ್‌ಗೆ ಸ್ಥಳಾಂತರ ಗೊಂಡಿತು. ಅಂದು ಆರಂಭಗೊಂಡ ಕಾಲೇಜಿನ ಶೈಕ್ಷಣಿಕ ದಿಗ್ವಿಜಯ ಯಾತ್ರೆ ಇಂದಿನವರೆಗೂ ಮುನ್ನಡೆದಿದೆ. ವರ್ಷದ ಹಿಂದೆ ಎಂಜಿಎಂ ಸಂಧ್ಯಾ ಕಾಲೇಜು ಆರಂಭಗೊಂಡಿದೆ.

ಡಾ| ಟಿಎಂಎ ಪೈಯವರ ಪುತ್ರ ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷರಾಗಿದ್ದ ಟಿ.ಮೋಹನದಾಸ್‌ ಪೈಯವರ ಹೆಸರಿ ನಲ್ಲಿ ಕೌಶಲ ಅಭಿವೃದ್ಧಿ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು ಸದ್ಯವೇ ಉದ್ಘಾಟನೆಗೊಳ್ಳಲಿದೆ. ಕಾಲೇಜು, ಪಿಯು ಕಾಲೇಜು, ಸಂಧ್ಯಾ ಕಾಲೇಜು ಸೇರಿ 4 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಸಂಪನ್ಮೂಲ ಕೇಂದ್ರ ಸಾಂಸ್ಕೃತಿಕ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿವೆ.

Advertisement

1949ರಿಂದ ಇದುವರೆಗೆ 45,551 ವಿದ್ಯಾರ್ಥಿಗಳು ಪದವಿ ಮುಗಿಸಿದ್ದಾರೆ. ಪಿಯುಸಿ ಬಳಿಕ ಇನ್ನಿತರ ಕ್ಷೇತ್ರಕ್ಕೆ ತೆರಳಿದವರು ಪ್ರತ್ಯೇಕ. 49.5 ಎಕರೆ ವಿಸ್ತೀರ್ಣದಲ್ಲಿ ಕ್ಯಾಂಪಸ್‌ ಕಂಗೊಳಿಸುತ್ತಿದೆ. ಕಾಲೇಜು ಆರಂಭಗೊಂಡದ್ದು ಬಿಎ ಕೋರ್ಸ್‌ ನಿಂದ. ಪ್ರಸ್ತುತ ಬಿಕಾಂ, ಬಿಎಸ್ಸಿ, ಬಿಸಿಎ, ಕಂಪ್ಯೂಟರ್‌ ವಿಜ್ಞಾನದಲ್ಲಿ ಸ್ನಾತ ಕೋತ್ತರ ಪದವಿ ಕೋರ್ಸ್‌ ಇದೆ. ಟಿ. ಮೋಹನದಾಸ್‌ ಪೈಯವರ ನಿಧನಾನಂತರ 2022ರಿಂದ ಕಾಲೇಜು ಟ್ರಸ್ಟ್‌ ಅಧ್ಯಕ್ಷರಾಗಿ ಟಿ.ಸತೀಶ್‌ ಯು. ಪೈಯವರು ಸೇವೆ ಸಲ್ಲಿಸುತ್ತಿದ್ದಾರೆ.

ಈ ಅವಧಿಯಲ್ಲಿ ಸಂಧ್ಯಾ ಕಾಲೇಜು ಆರಂಭ, ಕಾಲೇಜಿಗೆ ನ್ಯಾಕ್‌ ಎ+ ಮಾನ್ಯತೆ, ಮುದ್ದಣ ಮಂಟಪ ನವೀಕ ರಣ ನಡೆದಿದೆ. ಅಮೃತ ಮಹೋತ್ಸವದ ಸಮಾರೋಪ ಸಮಾರಂಭವು ಡಿಸೆಂಬರ್‌ನಲ್ಲಿ ಸಂಪನ್ನಗೊಳ್ಳಲಿದೆ. ಪ್ರೊ| ಸುಂದರ ರಾವ್‌ ಮೊದಲ ಪ್ರಾಂಶುಪಾಲರಾದರೆ, 2‌ನೆಯ ಪ್ರಾಂಶುಪಾಲ ಪ್ರೊ| ಕು.ಶಿ.ಹರಿದಾಸ ಭಟ್ಟರು ಕಾಲೇಜಿಗೆ ಸಾಂಸ್ಕೃತಿಕ ಸಂಪತ್ತನ್ನು ತಂದಿತ್ತರು. ಪ್ರಸ್ತುತ 20ನೆಯ ಪ್ರಾಂಶುಪಾಲರಾಗಿ ಲಕ್ಷ್ಮೀನಾರಾಯಣ ಕಾರಂತ ಕಾರ್ಯ ನಿರ್ವಹಿಸುತ್ತಿದ್ದಾರೆ.

“ಮಾಹೆ ಕುಲಾಧಿಪತಿ ಡಾ| ರಾಮದಾಸ್‌ ಎಂ. ಪೈಯವರು ಎಂಜಿಎಂ ಕಾಲೇಜು ಕ್ಯಾಂಪಸ್‌ನ್ನು ಮಣಿಪಾಲ ಮಾಹೆ ವಿ.ವಿ. ಕ್ಯಾಂಪಸ್‌ ರೀತಿ ರೂಪಿಸಬೇಕೆಂದು ಕನಸು ಕಂಡಿದ್ದರು. ಸ್ವಾಯತ್ತ ಮಾನ್ಯತೆ ದೊರಕಿರುವುದರಿಂದ ವಿಶ್ವವಿದ್ಯಾಲಯ ಕ್ಯಾಂಪಸ್‌ ರೀತಿಯಾಗಿ ಬೆಳೆಯಲು ಎಲ್ಲ ಅವಕಾಶಗಳಿವೆ. ಶೈಕ್ಷಣಿಕವಾಗಿ ವಿವಿಧ ಚಟುವಟಿಕೆಗಳು ಆರಂಭಗೊಳ್ಳಲಿವೆ.”
-ಟಿ. ಸತೀಶ್‌ ಯು. ಪೈ, ಅಧ್ಯಕ್ಷರು, ಎಂಜಿಎಂ ಕಾಲೇಜು ಟ್ರಸ್ಟ್‌, ಉಡುಪಿ.

“ಸ್ವಾಯತ್ತ ಕಾಲೇಜಾಗಿ ರೂಪುಗೊಳ್ಳುವುದರಿಂದ ಪಠ್ಯಕ್ರಮ ರೂಪಣೆ, ಪರೀಕ್ಷೆ, ಫ‌ಲಿತಾಂಶ ಘೋಷಣೆ, ಶುಲ್ಕ ನಿಗದಿಯಂತಹ ವಿಚಾರಗಳಲ್ಲಿ ಸ್ವಾತಂತ್ರ್ಯವಿರುತ್ತದೆ. ಒಂದರ್ಥದಲ್ಲಿ ಇದು ವಿಶ್ವವಿದ್ಯಾನಿಲಯವಿದ್ದಂತೆ.”
– ಡಾ| ಎಚ್‌.ಎಸ್‌.ಬಲ್ಲಾಳ್‌, ಅಧ್ಯಕ್ಷರು, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಎಂಜಿಎಂ ಕಾಲೇಜು ಟ್ರಸ್ಟ್‌ ಸದಸ್ಯರು,
ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿಗಳು.

“ಎಂಜಿಎಂ ಕಾಲೇಜು ಸ್ವಾಯತ್ತಗೊಳ್ಳುತ್ತಿದ್ದು ಹೊಸ ಹೊಸ ಕೋರ್ಸುಗಳನ್ನು ತೆರೆಯಲು ಅವಕಾಶಗಳಿವೆ. ಆದ್ದರಿಂದ ಕಾಲೇ ಜನ್ನು ಉನ್ನತೀಕರಿಸಲು ಮಾಹೆ ವಿ.ವಿ. ಎಲ್ಲ ಸಹಕಾರ ನೀಡಲಿದೆ.”
– ಲೆ|ಜ| ಡಾ|ಎಂ.ಡಿ.ವೆಂಕಟೇಶ್‌, ಎಂಜಿಎಂ ಕಾಲೇಜು ಟ್ರಸ್ಟ್‌ ಸದಸ್ಯರು, ಮಾಹೆ ವಿ.ವಿ. ಕುಲಪತಿಗಳು.

“ಮುಂದಿನ ಶೈಕ್ಷಣಿಕ ವರ್ಷ ಸ್ವಾಯತ್ತ ಕಾಲೇಜಿನ ಮೊದಲ ತಂಡ ಆರಂಭವಾಗಲಿದ್ದು, ಸ್ವಾಯತ್ತ ಕಾಲೇಜಿನಲ್ಲಿ ಆಗಬೇಕಾದ ಕ್ರಮಗಳ ರೂಪರೇಖೆಗಳನ್ನು ಸಿದ್ಧಪಡಿಸಲಿದ್ದೇವೆ.”
-ಬಿ.ಪಿ.ವರದರಾಯ ಪೈ, ಕಾರ್ಯದರ್ಶಿ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌.

“ಉದ್ಯೋಗಾಧಾರಿತ ಕೋರ್ಸುಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬಹುದು. ಫ‌ಲಿತಾಂಶವನ್ನೂ ಬೇಗ ಪ್ರಕಟಿಸಲು ಸ್ವಾಯತ್ತತೆ ಸಹಕಾರಿಯಾಗಲಿದೆ.”
– ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಪ್ರಾಂಶುಪಾಲರು, ಎಂಜಿಎಂ ಕಾಲೇಜು.

“ನಾನು ಪ್ರಾಂಶುಪಾಲನಾಗಿದ್ದಾಗ ಸಲ್ಲಿಸಿದ್ದ ಪ್ರಸ್ತಾವನೆಗೆ ಈಗ ಅನುಮೋದನೆ ಸಿಕ್ಕಿದೆ. . ಕಾಲೇಜಿನ ಚಿತ್ರಣವೇ ಬದಲಾಗಲಿದೆ.”
– ಡಾ| ದೇವದಾಸ್‌ ನಾಯ್ಕ, ಪ್ರಾಂಶುಪಾಲರು, ಎಂಜಿಎಂ ಸಂಧ್ಯಾ ಕಾಲೇಜು.

“ಹೊಸ ಹೊಸ ಕೋರ್ಸುಗಳನ್ನು ಆರಂಭಿಸುವ ಕಾರಣ ಪಿಯುಸಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬಹಳಷ್ಟು ಅನುಕೂಲವಾಗಲಿದೆ.”
– ಮಾಲತಿ ದೇವಿ, ಪ್ರಾಂಶುಪಾಲರು, ಎಂಜಿಎಂ ಪ.ಪೂ. ಕಾಲೇಜು.

“ಎಲ್ಲ ಸಹೋದ್ಯೋಗಿಗಳ ಪ್ರಯತ್ನದ ಫ‌ಲವಿದು. ಹೊಸ ಯುಜಿ, ಪಿಜಿ, ಸರ್ಟಿಫಿಕೆಟ್‌ ಕೋರ್ಸುಗಳನ್ನು ಆರಂಭಿಸಲು ಇದು ಅನುಕೂಲ.”
– ಡಾ| ಎಂ.ವಿಶ್ವನಾಥ ಪೈ, ಕಂಪ್ಯೂಟರ್‌ ವಿಜ್ಞಾನ ವಿಭಾಗ ಮುಖ್ಯಸ್ಥರು, ಸ್ವಾಯತ್ತ ಪ್ರಕ್ರಿಯೆ ಸಂಚಾಲಕರು.

Advertisement

Udayavani is now on Telegram. Click here to join our channel and stay updated with the latest news.

Next