Advertisement

ಉಡುಪಿ: ಮರಳು ಪೂರೈಕೆಗೆ ಸಜ್ಜು

01:05 AM Sep 24, 2019 | mahesh |

ಉಡುಪಿ: ಎರಡೂವರೆ ವರ್ಷಗಳಿಂದ ಗ್ರಹಣ ಬಡಿದಂತಿದ್ದ ಉಡುಪಿ ಜಿಲ್ಲೆಯ ಮರಳುಗಾರಿಕೆಗೆ ಮರುಜೀವ ನೀಡುವುದಕ್ಕಾಗಿ ಸಿದ್ಧತೆಗಳು ಬಹುತೇಕ ಪೂರ್ಣಹಂತಕ್ಕೆ ಬಂದಿವೆ. ಇದು ಕಾರ್ಮಿಕರು, ಕಟ್ಟಡ ನಿರ್ಮಾಣಗಾರರು, ಮರಳು ಸಾಗಾಟ ಲಾರಿಯವರ ಜತೆಗೆ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸುತ್ತಿದೆ.

Advertisement

ಕಳೆದೆರಡು ವರ್ಷಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ, ನಗರದಲ್ಲಿ ವಾಹನ ರ್ಯಾಲಿ, ಪ್ರತಿಭಟನ ಸಭೆ ಸೇರಿದಂತೆ ವಿವಿಧ ರೀತಿಯ ಹೋರಾಟಗಳು ನಡೆದಿದ್ದವು. ಈಗ ಮಂಗಳವಾರ ಅಥವಾ ಬುಧವಾರ ಮರಳುಗಾರಿಕೆಗೆ ಮುಹೂರ್ತ ನಿಗದಿಯಾಗಿದೆ. ಮೊದಲ ಹಂತದಲ್ಲಿ 158 ಮಂದಿಗೆ, ಅನಂತರ ಇತರ 21 ಮಂದಿಗೆ (2011ರ ಹಿಂದಿನ ಪರವಾನಿಗೆಯವರು) ಅವಕಾಶ ನೀಡಲು ತೀರ್ಮಾನವಾಗಿದೆ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಮರಳುದಿಬ್ಬಗಳ ತೆರವಿಗೆ ಅವಕಾಶ ದೊರೆತಂತಾಗಿದೆ. ಮೊದಲ ಮೂರು ತಿಂಗಳು ಸ್ಯಾಂಡ್‌ ಬಝಾರ್‌ ಆ್ಯಪ್‌ ಬಳಸದೆ ಈ ಹಿಂದಿನಂತೆಯೇ ಜನರಿಗೆ ಮರಳು ಒದಗಿಸಲು ನಿರ್ಧರಿಸಲಾಗಿದೆ.

ಜಿಪಿಎಸ್‌ ಅಳವಡಿಕೆ ಚುರುಕು
ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 1,800 ಮರಳು ಸಾಗಾಟ ವಾಹನಗಳು ಜಿಪಿಎಸ್‌ ಅಳವಡಿಸಿದ್ದವು. ಆಗ ಹೊರ ಜಿಲ್ಲೆಗಳಿಗೂ ಮರಳು ಸಾಗಾಟವಾಗುತ್ತಿತ್ತು. ಆದರೆ ಈ ಬಾರಿ ಹೊರ ಜಿಲ್ಲೆಗಳಿಗೆ ಮರಳು ಸಾಗಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗಾಗಿ ಈ ಬಾರಿ ಸುಮಾರು 1,200 ವಾಹನಗಳು ಜಿಪಿಎಸ್‌ ಅಳವಡಿಸಿಕೊಳ್ಳುತ್ತಿದ್ದು ಜಿಪಿಎಸ್‌ ಅಳವಡಿಕೆ ಮತ್ತು ಆ್ಯಕ್ಟಿವೇಷನ್‌ ಪ್ರಕ್ರಿಯೆ ಚುರುಕುಗೊಂಡಿದೆ. ಮರಳು ದ‌ಕ್ಕೆಗಳಿಗೆ ಜಿಯೋ ಫೆನ್ಸಿಂಗ್‌ ಮಾಡಲಾಗುತ್ತಿದೆ.

ಇಂದೇ ಅನುಮತಿಪತ್ರ?
ದಕ್ಕೆ ಸಿದ್ಧಗೊಂಡು ಎಲ್ಲ ನಿಯಮಾವಳಿಗಳನ್ನು ಅನುಸರಿಸಿರುವ ಪರವಾನಿಗೆದಾರರಿಗೆ ಮಂಗಳವಾರವೇ ಅನುಮತಿ ಪತ್ರ ಹಾಗೂ ಕಾರ್ಯಾದೇಶ ನೀಡುವ ನಿರೀಕ್ಷೆ ಇದೆ. ಹಾಗಾಗಿ ಬುಧವಾರ ಮರಳು ಪೂರೈಕೆ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

7.96 ಲಕ್ಷ ಮೆಟ್ರಿಕ್‌ ಟನ್‌ ಲಭ್ಯ
ಇನ್ನೆರಡು ದಿನಗಳಲ್ಲಿ ಅನುಮತಿ ಪತ್ರ ನೀಡಲಾಗುವುದು. ಜಿಲ್ಲೆಯ ಸ್ವರ್ಣಾ ನದಿಯ ಉಪ್ಪೂರು, ಸೀತಾನದಿಯ ಮೂಡುತೋನ್ಸೆ, ಬೈಕಾಡಿ ಮತ್ತು ಹಾರಾಡಿ ಹಾಗೂ ಪಾಪನಾಶಿನಿಯಲ್ಲಿ ಪಡುಕೆರೆ ಒಳಗೊಂಡಂತೆ ಒಟ್ಟು 8 ದಿಬ್ಬಗಳನ್ನು ಈಗಾಗಲೇ ಗುರುತಿಸಲಾಗಿದೆ. ಒಟ್ಟು 7,96,522 ಲಕ್ಷ ಮೆಟ್ರಿಕ್‌ ಟನ್‌ ಮರಳು ಲಭ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

Advertisement

ಲಾಟರಿ ಮೂಲಕ ಆಯ್ಕೆ
ಈಗಾಗಲೇ 35 ದಕ್ಕೆಗಳನ್ನು ಗುರುತಿಸಲಾಗಿದೆ. ಕೆಲ ದಕ್ಕೆಗಳಿಗೆ ಅಧಿಕ ಪ್ರಮಾಣದಲ್ಲಿ ಬೇಡಿಕೆ ಇದೆ. ಅಂತಹ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next