Advertisement

ಕಸಾಪದಲ್ಲಿ ಪರಿಶುದ್ಧತೆಗೆ ಆದ್ಯತೆ

12:56 PM Nov 25, 2021 | Team Udayavani |

ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವ್ಯವಹಾರ ದಲ್ಲಿ ಆರ್ಥಿಕ ಪರಿಶುದ್ಧತೆ, ಹೋಬಳಿವಾರು ಮತ ದಾರರ ಹೆಚ್ಚಳ, ಹೋಬಳಿವಾರು ಬರಹಗಾರರ ಕೋಶ ರಚನೆ, ಸಾಹಿತ್ಯ ಸಿರಿ ಪತ್ರಿಕೆ ಆರಂಭ, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಚಲಿತ ವಿದ್ಯಮಾನಗಳ ಚರ್ಚೆಗೆ ಆದ್ಯತೆ ಸೇರಿದಂತೆ ಮಾದರಿ ಕನ್ನಡ ಪರಿಷತ್‌ ಕಟ್ಟುವ ಆಶಯ ನೂತನ ಅಧ್ಯಕ್ಷ ಡಾ.ಎಚ್‌.ಎಲ್‌. ಮಲ್ಲೇಶಗೌಡ ಅವರದ್ದು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯ ವಹಿಸಿಕೊಳ್ಳುತ್ತಿ ರುವ ಡಾ. ಎಚ್‌.ಎಲ್‌.ಮಲ್ಲೇಶಗೌಡ ಅವರು ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಹಲವು ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

  • ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ನಿಮ್ಮ ಪ್ರಥಮ ಆದ್ಯತೆಗಳೇನು?

ಹೋಬಳಿವಾರು ಮತದಾರರ ಹೆಚ್ಚಳ ನನ್ನ ಮೊದಲ ಆದ್ಯತೆ. ಈಗ ಕೆಲವು ಹೋಬಳಿಗಳಲ್ಲಿ 50ರಿಂದ 100ರಷ್ಟು ಮತದಾರರಿದ್ದಾರೆ. ಆ ಸಂಖ್ಯೆ ಯನ್ನು ಕನಿಷ್ಠ 500ಕ್ಕೆ ಹೆಚ್ಚಳವಾಗಬೇಕು. ಆಗಾದಾಗ ಮಾತ್ರ ಸಾಹಿತ್ಯ ಪರಿಷತ್‌ ಚುನಾವಣೆ ಸಂದರ್ಭದಲ್ಲಿ ಹೋಬಳಿಗೊಂಡು ಮತಗಟ್ಟೆ ವ್ಯವಸ್ಥೆ ಸಾಧ್ಯವಾಗುತ್ತದೆ. ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹೋಬಳಿ ಮಟ್ಟದಲ್ಲಿ ನಡೆಸಲೂ ಅನುಕೂಲವಾಗುತ್ತದೆ. ಸಾಹಿತ್ಯ ಪರಿಷತ್ತಿನ ಸದಸ್ಯರ ನೋಂದಣಿ ಸಂದರ್ಭದಲ್ಲಿ ಶಿಕ್ಷಕರು, ಸಾಹಿತಿಗಳು, ಸಾಹಿತ್ಯಾಸಕ್ತರ ನೋಂದಣಿಗೆ ಆದ್ಯತೆ ನೀಡುವೆ.

  • ಸಾಹಿತ್ಯಾಸಕ್ತರು ಸಾಹಿತ್ಯ ಪರಿಷತ್ತಿನತ್ತ ಬರುವಂತೆ ಮಾಡುವ ಚಿಂತನೆ ಇದೆಯೇ?

ಸಾಹಿತಿಗಳು, ಸಾಹಿತ್ಯಾಸಕ್ತರು ಪರಿಷತ್ತಿನತ್ತ ಸದಾ ಬರುತ್ತಿರಬೇಕು. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರಬೇಕು. ಆ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಬರಹಗಾರರ ಕೋಶ ರಚನೆ ಮಾಡುತ್ತೇನೆ. ಆ ಕೋಶದಲ್ಲಿ ಬರಹಗಾರರ ದೂರವಾಣಿ, ವಿಳಾಸ ಸೇರಿರುತ್ತದೆ. ಇದರಿಂದ ಹೋಬಳಿ ಮಟ್ಟದಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ.

  • ಕನ್ನಡ ನಾಡು, ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಚಿಂತನೆ ಇದೆಯೇ?

ತಳಮಟ್ಟದಿಂದ ಅಂದರೆ ಪ್ರೌಢಶಾಲಾ ಮಟ್ಟ ದಿಂದಲೇ ಕನ್ನಡದ ಕಾರ್ಯಕ್ರಮ ಗಳನ್ನು ಆರಂಭಿಸುವ ಮೂಲಕ ಯುವ ಜನಾಂಗದಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಡಲಿದೆ. ಕನ್ನಡ ಭಾಷೆಯ ಮಹತ್ವದ ಬಗ್ಗೆ ಪ್ರೌಢಶಾಲೆ ಮತ್ತು ಕಾಲೇಜು ಹಂತದಲ್ಲೇ ಮಕ್ಕಳಿಗೆ ಚಿತ್ರಣ ಕಟ್ಟಿಕೊಡುವುದಿಂದ ನಾಡು, ನುಡಿಯ ಬಗ್ಗೆ ಅವರಲ್ಲಿ ಅಭಿಮಾನ ಬೆಳೆಯುತ್ತದೆ. ಪ್ರಮುಖ ಸಾಹಿತಿಗಳ ಜನ್ಮದಿನ ಆಚರಣೆ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜು ಹಂತದಲ್ಲಿ ಪ್ರಧಾನ ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

  • ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಬಗ್ಗೆ ಜನರಿಗೆ ತಲುಪಿಸುವ ಕಾರ್ಯಕ್ರಮಗಳಿವೆಯೇ?
Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಎಲ್ಲ ಸದಸ್ಯರಿಗೂ ಮಾಹಿತಿ ಸಿಗುವ ನಿಟ್ಟಿನಲ್ಲಿ ಸಾಹಿತ್ಯ ಸಿರಿ ಪತ್ರಿಕೆ ಆರಂಭಿಸಲಾಗುವುದು. ಪ್ರಾರಂಭದಲ್ಲಿ ತ್ತೈಮಾಸಿಕವಾಗಿ, ಆ ನಂತರ ಮಾಸಿಕ ಪತ್ರಿಕೆ ಹೊರ ತರಲಾಗುವುದು. ಜೊತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಾಚನಾಲಯ ಮತ್ತು ಗ್ರಂಥಾಲಯ ಆರಂಭಿಸಲಾಗುವುದು.

  • ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಲು ಪೈಪೋಟಿ ಎದುರಾಗಲು ಕಾರಣವೇನು?

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಪನ್ಮೂಲ ಬರುತ್ತಿದೆ. ಹಾಗಾಗಿ ಪೈಪೋಟಿ ನಡೆಯುತ್ತಿದೆ. ಪರಿಷತ್ತಿನ ವಾರ್ಷಿಕ ನಿರ್ವಹಣೆಗೆ, ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ನಡೆಸಲು ಅನುದಾನವನ್ನು ಸರ್ಕಾರ ನೀಡುತ್ತದೆ. ಜೊತೆಗೆ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಿಂದಲೂ ಸಮ್ಮೇಳನಗಳಿಗೆ ಆರ್ಥಿಕ ನೆರವು ಪಡೆಯುವ ಅವಕಾಶವಿದೆ.

ಸಾಹಿತ್ಯ ಪರಿಷತ್ತಿನ ಆಸ್ತಿ ಗಳಿಂದ ಅಂದರೆ ಸಾಹಿತ್ಯ ಭವನವನ್ನು ಕಾರ್ಯಕ್ರಮಗಳಿಗೆ ನೀಡುವುದು, ಮಳಿಗೆಗಳಿದ್ದರೆ ಬರುವ ಬಾಡಿಗೆ ಮೊತ್ತ ಹೀಗೆ ಆರ್ಥಿಕ ಸಂಪನ್ಮೂಲವಿರುವುದರಿಂದ ಅಧ್ಯಕ್ಷರಾಗಲು ಪೈಪೋಟಿ ಇದೆ.

  • ನಿಕಟಪೂರ್ವ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಭ್ರಷ್ಟಾಚಾರದ ದೂರುಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆಗಳೇನು?

ಜಿಲ್ಲಾಧಿಕಾರಿಯವರು ತನಿಖೆಗೆ ಸೂಚನೆ ನೀಡಿ ದ್ದಾರೆ. ತನಿಖೆ ನಡೆಯುತ್ತಿದೆ. ಹಾಗಾಗಿ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ, ತನಿಖಾಧಿಕಾರಿಗಳಿಗೆ ಪರಿಷತ್ತಿನ ಅಧ್ಯಕ್ಷನಾಗಿ ಸಹಕರಿಸುತ್ತೇನೆ. ಮುಲಾಜಿಲ್ಲದೆ ಮಾಹಿತಿ ಒದಗಿಸುತ್ತೇನೆ.

  • ನಿಮ್ಮ ಅವಧಿಯಲ್ಲಿ ಆರ್ಥಿಕ ವ್ಯವಹಾರ ಹೇಗೆ ನಡೆಯತ್ತವೆ?

ಪರಿಷತ್ತಿನ ವ್ಯವಹಾರದಲ್ಲಿ ಪರಿಶುದ್ಧತೆ ಕಾಪಾಡಿಕೊಳ್ಳುತ್ತೇನೆ. ಅನಧಿಕೃತವಾಗಿ ಚಂದಾ ಎತ್ತಲು ಅವಕಾಶಕೊಡಲ್ಲ. ಅಗತ್ಯವಿದ್ದರೆ ರಶೀದಿ ನೀಡಿ ದೇಣಿಗೆ ಸಂಗ್ರಹಿಸುತ್ತೇವೆ. ಅದರ ವೆಚ್ಚದ ಬಗ್ಗೆಯೂ ಪಾರ ದರ್ಶಕತೆ ಕಾಪಾಡಿಕೊಳ್ಳಲಾಗುವುದು. ಕಾರ್ಯಕ್ರಮ ನಡೆಸಲು ಪ್ರಾಯೋಜಕರ ಸಹಕಾರ ಪಡೆಯುವೆವು. ಸರ್ಕಾರದಿಂದ ಬರುವ ಅನುದಾನ, ಪರಿಷತ್ತಿನ ಆಸ್ತಿ ಯಿಂದ ಬರುವ ಬಾಡಿಗೆ ಎಲ್ಲವನ್ನೂ ಬ್ಯಾಂಕಿನ ಮೂಲಕವೇ ವ್ಯವಹರಿಸಲಾಗುವುದು.

  • ಪ್ರಾಧ್ಯಾಪಕರಾಗಿ ನಿವೃತ್ತರಾದ ಕೆಲವೇ ತಿಂಗಳಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದೀರಿ ಮುಂದಿನ ಕಸನುಗಳೇನು?

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಕಟ್ಟುವ ಕನಸು ಕಂಡಿದ್ದೇನೆ. ಅದರಲ್ಲಿ ಯಶಸ್ವಿಯಾದರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸುವ ಕನಸಿದೆ.

Advertisement

Udayavani is now on Telegram. Click here to join our channel and stay updated with the latest news.

Next