Advertisement

ಭ್ರಷ್ಟಾಚಾರ ಮುಕ್ತ ಸರ್ಕಾರ ಆಗುತ್ತೆ ಎಂಬ ವಿಶ್ವಾಸ ನನ್ನದು

03:28 PM Aug 08, 2021 | Team Udayavani |

ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾಗಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ರಚನೆಯಾಗಿದ್ದು, ನೂತನ ನಾಯಕತ್ವ ಹೊಸ ಸಂಪುಟ ಸಚಿವರು, ಪಕ್ಷ ಹಾಗೂ ಸರ್ಕಾರದ ಮುಂದಿನ ಚಟುವಟಿಕೆಗಳು,ಯಡಿಯೂರಪ್ಪ ಅವರ ನಾಯಕತ್ವದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.

Advertisement

ಹೊಸ ನಾಯಕತ್ವದಿಂದಏನು ನಿರೀಕ್ಷೆ ಇಟ್ಟುಕೊಂಡಿದ್ದೀರಾ?
ಬಸವರಾಜ ಬೊಮ್ಮಾಯಿ ಅನುಭವಿ,ಹಿರಿಯ ರಾಜಕಾರಣಿ, ಅತಿ ಹೆಚ್ಚು ಇಲಾಖೆಗಳನ್ನು ನಿರ್ವಹಣೆ ಮಾಡಿದ್ದಾರೆ. ಅವರ ತಂದೆ ಎಸ್‌.ಆರ್‌. ಬೊಮ್ಮಾಯ ಸಿಎಂ ಆಗಿದ್ದರು. ದೇವೇಗೌಡರು, ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌ ಅವರಂತಹ ಹಿರಿಯ ರಾಜಕಾರಣಿಗಳ ಜತೆಗೆ ಪಳಗಿದವರು. ಎರಡು ಮೂರು ಅವಧಿಯಲ್ಲಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದಾರೆ. ಕೇಂದ್ರದ ಮೋದಿ ಸರ್ಕಾರದ
ಮಾದರಿಯಲ್ಲಿ ಕರ್ನಾಟಕ ಕಲ್ಯಾಣ ಮಾಡುವ ನಿಟ್ಟಿನಲ್ಲಿ ಒಳ್ಳೆಯ ಆಡಳಿತ ನೀಡುತ್ತಾರೆ ಎನ್ನುವ ನಿರೀಕ್ಷೆಯಿದೆ.

ಸಿಎಂ ಒಬ್ಬರನ್ನು ಬದಲಾಯಿಸಿ,ಹಳೆಯ ಸಚಿವರನ್ನೇ ಮುಂದುವರಿಸಿದ್ದಾರೆ. ಇದರಿಂದ ಏನು ಬದಲಾವಣೆ ಆಗುತ್ತದೆ?
ಇಲ್ಲ, ಆರು ಜನ ಹೊಸಬರನ್ನು ನಾವು ಸೇರಿಸಿಕೊಂಡಿದ್ದೇವೆ. ಏಕಾಏಕಿ ಎಲ್ಲವನ್ನೂ ಬದಲಾಯಿಸಲು ಆಗುವುದಿಲ್ಲ. ನಮ್ಮ ಸಲುವಾಗಿ ತ್ಯಾಗ ಮಾಡಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಅವರಿಗೂ ಗೌರವ ಕೊಡಬೇಕು. ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ. ಎಲ್ಲರ ನಡುವೆ ಆರೇಳು ಜನ ಒಳ್ಳೆಯ ಆಡಳಿತಗಾರರನ್ನು ಸೇರಿಸಲಾಗಿದೆ. ಎಲ್ಲರೂ ವಿಚಾರಕ್ಕೆ ಬದ್ಧರಾಗಿದ್ದವರನ್ನು ತಂದಿದ್ದೇವೆ.

ಅನೇಕರ ಮೇಲೆ ಭ್ರಷ್ಟಾಚಾರ ಆರೋಪವಿದೆ. ಇದು ಭ್ರಷ್ಟಾಚಾರ ಮುಕ್ತ ಸರ್ಕಾರ ಹೇಗಾಗುತ್ತದೆ?
ನೋಡಿ ಖಂಡಿತವಾಗಿಯೂ ನಮ್ಮ ಸರ್ಕಾರದ ಸಾಧನೆ ಮತ್ತು ಮಂತ್ರಿಗಳ ಕಾರ್ಯ ಶೈಲಿಯನ್ನು ಹಿರಿಯರು ಗಮನಿಸುತ್ತಾರೆ. ಸಚಿವರ
ಮೇಲೆ ಬರುವ ಆರೋಪದ ಬಗ್ಗೆ ಸತ್ಯಾಸತ್ಯತೆಯನ್ನು ಸಿಎಂ ಪರಿಶೀಲಿಸುತ್ತಾರೆ.ಬೊಮ್ಮಾಯಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ ಎಂಬ ವಿಶ್ವಾಸವಿದೆ.

ಇದನ್ನೂ ಓದಿ:ಗೋವಾ ವಾಸ್ಕೊ ವಿಮಾನ ನಿಲ್ದಾಣದಿಂದ ಯುಎಇ ವಿಮಾನ ಹಾರಾಟ ಆರಂಭ

Advertisement

ಯಡಿಯೂರಪ್ಪ ರಾಜ್ಯಪ್ರವಾಸ ಮಾಡುತ್ತೇನೆಂದು ಹೇಳುತ್ತಿದ್ದಾರೆ. ನೀವು ಅವರ ಜತೆಗೆ ಇರುತ್ತೀರಾ?
ಯಡಿಯೂರಪ್ಪ ನಮ್ಮ ಸರ್ವ ಸಮ್ಮತದ ನಾಯಕ. ಅವರ ನಾಯಕತ್ವದಲ್ಲಿ ಒಟ್ಟಿಗೆ ಪ್ರವಾಸ ಮಾಡುತ್ತೇವೆ. ಮುಂದಿನ ಚುನಾವಣೆಗೆ 140 ಸ್ಥಾನ ಗೆಲ್ಲಲು ಅನುಕೂಲವಾಗುತ್ತದೆ. ಅವರ ಮಾರ್ಗ ದರ್ಶನದಲ್ಲಿಯೇ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುತ್ತೇವೆ.

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತಿದೆಯಾ?
ಒಂದಷ್ಟು ಬದಲಾವಣೆಗಳಿಗೆ ಆದ್ಯತೆ ನೀಡುತ್ತೇವೆ. ಎಲ್ಲರನ್ನೂ ಬದಲಾಯಿಸುತ್ತೇವೆ ಎಂದು ಹೇಳುವುದಿಲ್ಲ. ಒಂದೂವರೆ ತಿಂಗಳಲ್ಲಿ ಎಲ್ಲವನ್ನೂ ಮಾಡಲಾಗುತ್ತದೆ. ಎರಡು ವರ್ಷದಲ್ಲಿ ಯಾರು ಸಕ್ರಿಯರಾಗಿ ಕೆಲಸ ಮಾಡಿದ್ದಾರೆ, ಯಾರು ನಿಷ್ಕ್ರಿಯರಾಗಿದ್ದಾರೆ ಎನ್ನುವುದನ್ನು ನೋಡಿ ಬದಲಾವಣೆ ಮಾಡಲಾಗುತ್ತದೆ.

ಕುಮಾರಸ್ವಾಮಿಯವರು ಇದು ಜನತಾ ಸರ್ಕಾರ ಅಂತ ಹೇಳುತ್ತಿದ್ದಾರಲ್ಲ?
ಕುಮಾರಸ್ವಾಮಿಯವರು ರಾಜಕಾರಣಕ್ಕೋಸ್ಕರ ಸಂದರ್ಭಕ್ಕೆ ಸರಿಯಾಗಿ ಕಾಯುತ್ತಿರುತ್ತಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರು ಈ ಸರ್ಕಾರ ಪತನಗೊಳ್ಳುತ್ತದೆ, ಬಿಜೆಪಿ ಇಬ್ಭಾಗ ಆಗುತ್ತದೆ ಎಂಬನಿರೀಕ್ಷೆಯಲ್ಲಿದ್ದರು.ಅವರಿಗೆ ನಿರಾಸೆಯಾಗಿದೆ.

ಬೊಮ್ಮಾಯಿ ಅವರು ದೇವೇಗೌಡರ ಮನೆಗೆ ಭೇಟಿನೀಡಿದ್ದು,ಏನು ಸಂದೇಶ ಕೊಡುತ್ತೆ?
ದೇವೇಗೌಡರು ಈ ದೇಶದ ಹಿರಿಯ ರಾಜಕಾರಣಿ. ಪ್ರಧಾನಿಯಾಗಿ ಅನುಭವ ಪಡೆದವರು, ಅವರ ಅನುಭವದ ಮಾರ್ಗದರ್ಶನ ಪಡೆಯಲು ಸಿಎಂ ಭೇಟಿ ಮಾಡಿದ್ದಾರೆ.

ಯಡಿಯೂರಪ್ಪ ಬಂಡಾಯ ಸಾರಿದರೆ, ಗೌಡರ ಬೆಂಬಲಕ್ಕಾಗಿ ಸಿಎಂ ಭೇಟಿ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ,ಹೌದಾ?
ಅಂಥಾದ್ದೇನಿಲ್ಲ. ಅವರ ಮಾರ್ಗದರ್ಶನ ಪಡೆಯಲು ಬೊಮ್ಮಾಯಿ ಭೇಟಿ ಮಾಡಿದ್ದಾರೆ.

ವಲಸಿಗರಲ್ಲಿ ಕೆಲವರನ್ನು ಕೈಬಿಟ್ಟಿರುವುದಕ್ಕೆಬಿಜೆಪಿ ನಡು ನೀರಿನಲ್ಲಿ ಕೈಬಿಟ್ಟಿತುಎಂದು ಹೇಳುತ್ತಿದ್ದಾರಲ್ಲಾ ?
ನಮ್ಮಲ್ಲಿ ಯಾರೂ ವಲಸಿಗರಲ್ಲ. ನಮ್ಮ ಪಕ್ಷಕ್ಕೆ ಬಂದು ನಮ್ಮ ಪಕ್ಷಕ್ಕೆ ಬಿ. ಫಾರಂ ಮೂಲಕ ಸ್ಪರ್ಧೆ ಮಾಡಿ ಗೆದ್ದವರೆಲ್ಲರೂ ನಮ್ಮವರೇ. ಯಾರಿಗೆ ಸಂಪುಟದಲ್ಲಿ ಸ್ಥಾನ ತಪ್ಪಿದೆಯೋ ಅವರಿಗೆಲ್ಲ ಮುಂದೆ ಒಳ್ಳೆಯ ಅವಕಾಶ ನೀಡಲಾಗುವುದು.

ರಾಜ್ಯ ಘಟಕದಲ್ಲಿ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲ?
ಮುಂದಿನ ಎರಡು ವರ್ಷ ಪಕ್ಷದ ರಾಜ್ಯ ಘಟಕದಲ್ಲಿ ಯಾವುದೇ ಬದಲಾವಣೆಯಿಲ್ಲ. ಈಗಿರುವ ತಂಡವೇ ಮುಂದಿನ ಚುನಾವಣೆವರೆಗೂ ಮುಂದುವರಿಯುತ್ತದೆ. ಒಂದೆರಡು ಸ್ಥಾನಗಳುಖಾಲಿ ಉಳಿದಿವೆ, ಅವುಗಳನ್ನು ಮಾತ್ರ ಭರ್ತಿ ಮಾಡಲಾಗುವುದು. ಉಳಿದಂತೆ ಪಕ್ಷದಲ್ಲಿ ಯಾವುದೇ ಬದಲಾವಣೆ ಇಲ್ಲ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next