Advertisement

ಗಮನ ಸೆಳೆದ ಸಂಧಾನ-ಭೇದನ, ಕಲ್ಯಾಣದ್ವಯ!

06:00 AM Aug 10, 2018 | |

ಎರಡು ತಾಳಮದ್ದಳೆಗಳು, ಎರಡು ಯಕ್ಷಗಾನ ಪ್ರಸಂಗಗಳು ಒಂದೇ ವೇದಿಕೆಯಲ್ಲಿ ಒದಗಿದ್ದು ಪ್ರೇಕ್ಷಕನ ಭಾಗ್ಯ. ಬೆಚ್ಚನೆಯ ಭಾವಗಳನ್ನು ಸ್ಪುರಿಸುವ ಹಾಡುಗಳು, ಚಿಂತನೆಗೆ ಹಚ್ಚುವ ಮಾತುಗಾರಿಕೆ, ರಂಜಿಸುವ ಕುಣಿತ ಹಾಗೂ ಅಭಿನಯ – ಕಣ್ತುಂಬಿಕೊಂಡ ಸಾರ್ಥಕ ಭಾವ.  ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಈಶ್ವರಪ್ರಸಾದ ಅವರ ಸಂಯೋಜನೆಯಲ್ಲಿ, ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿ, ಕುರಿಹಿತ್ಲು – ನಿಡ್ಲೆ ವತಿಯಿಂದ ಬರೆಂಗಾಯ ಶಾಲೆಯಲ್ಲಿ ಆ. 4ರಂದು ನಡೆದ ನಾಲ್ಕನೇ ವರ್ಷದ ಯಕ್ಷವೈಭವದಲ್ಲಿ ಸಂಧಾನ-ಭೇದನ ತಾಳಮದ್ದಲೆಗಳು, ಕಲ್ಯಾಣದ್ವಯ (ರುಕ್ಮಿಣಿ, ಜಾಂಬವತಿ) ಪರಿಕಲ್ಪನೆ ಚಿತ್ತಾಕರ್ಷಕವಾಗಿತ್ತು.

Advertisement

“ಕೃಷ್ಣಸಂಧಾನ’ ತಾಳಮದ್ದಳೆ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಿರಿಕಂಠದ ಭಾಗವತಿಕೆ, ಅಡೂರು ಲಕ್ಷ್ಮೀನಾರಾಯಣ ರಾಯರ ಮದ್ದಳೆ, ಶ್ರೇಯಸ್‌ ಪಾಳಂದ್ಯೆ ಅವರ ಚೆಂಡೆಯ ಹಿಮ್ಮೇಳ, ಉಜಿರೆ ಅಶೋಕ ಭಟ್‌ ಹಾಗೂ ಸಂಪಾಜೆಯ ಜಬ್ಟಾರ್‌ ಸಮೋ ಅವರ ಸಂವಾದದ ಮೂಲಕ ರಸವತ್ತಾಯಿತು. ಎರಡೇ ಪಾತ್ರಗಳ ಮೂಲಕ ಪ್ರಸಂಗವನ್ನು ಕಟ್ಟಿಕೊಟ್ಟ ಪರಿ ಅದ್ಭುತ. ಪಾಂಡವದ್ವೇಷಿ ಎಂಬುದನ್ನುಳಿದು ಕೌರವನಲ್ಲಿ ಬೇರಾವ ಊನವೂ ಇಲ್ಲ ಎನ್ನುವ ಕೃಷ್ಣನಾಗಿ ಅಶೋಕ ಭಟ್ಟರು, ಕೃಷ್ಣನ ಪಕ್ಷಪಾತವನ್ನು ಚುಚ್ಚುತ್ತಲೇ ಮೆಚ್ಚುವ, ಛಲದಂಕಮಲ್ಲ ಕೌರವನಾಗಿ ಜಬ್ಟಾರ್‌ ಸಮೋ ಮಿಂಚು ಹರಿಸಿದರು. ಪ್ರೇಕ್ಷಕರ ಸಂದೇಹಗಳನ್ನು ಊಹಿಸಿ, ಪ್ರಶ್ನೆ ಹಾಕಿಕೊಂಡು ಉತ್ತರಿಸಿದ ಶೈಲಿ ಪ್ರಸಂಗವನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದಿತು.

ಪಾತ್ರವೇ ತಾವಾದಾಗ…
ಎರಡನೇ ಪ್ರಸಂಗ ‘ಕರ್ಣಭೇದನ’ ತಿರುಮಲೇಶ್‌ ಭಟ್‌ ಶಿಶಿಲ ಅವರ ಇಂಪಾದ ಹಾಡುಗಾರಿಕೆ, ಅದೇ ಹಿಮ್ಮೇಳದೊಂದಿಗೆ ರಂಜಿಸಿತು. ಕರ್ಣನನ್ನು ಪಾಂಡವರ ಪಕ್ಷಕ್ಕೆ ಕರೆಯುವ ಭೇದೋಪಾಯದ ಕೃಷ್ಣನಾಗಿ ಸಾಗರದ ಮಂಜುನಾಥ ಭಟ್‌ ಗೋರಮನೆ, ಪುತ್ರನ ಮುಂದೆ ಅಸಹಾಯಕಳಾದ ಕುಂತಿಯಾಗಿ ಈಶ್ವರಪ್ರಸಾದ್‌ ಧರ್ಮಸ್ಥಳ, ನಿಂದಿಸದ, ನೋಯಿಸದ ಕರ್ಣನ ಪಾತ್ರದಲ್ಲಿ ರಾಧಾಕೃಷ್ಣ ಕಲ್ಚಾರ್‌ ಮಾತಿನ ಮಂಟಪ ಕಟ್ಟಿದರು.

“ನಿನ್ನೊಂದಿಗೆ ಬಂದರೆ, ರಾಧೇಯನಾಗಿರುವ ನಾನು ಕೌಂತೇಯನಾಗಬಲ್ಲೆ. ಆದರೆ ಪಾಂಡವನಾದೇನೇ? ರಾಜ್ಯ ಸಿಕ್ಕೀತು. ಕೌರವನ ಸ್ನೇಹ ಒದಗೀತೇ? ನಿನ್ನ ಐವರು ಮಕ್ಕಳು ನಿನಗುಳಿಯುತ್ತಾರೆ. ಅರ್ಜುನ ಸತ್ತರೆ ನಿನ್ನ ಮಗನಾಗಿ ನಾ ಬರುವೆ. ನಾನೇ ಸತ್ತರೆ ಪಾರ್ಥ ನಿನ್ನ ಮಗನಾಗಿ ಉಳಿಯುತ್ತಾನೆ!’ ಎಂದು ಕಲ್ಚಾರ್‌ ಹೇಳಿದಾಗ, ಪ್ರೇಕ್ಷಕರ ಕಣ್ಣಲ್ಲಿ ನೀರು! “ತೊಟ್ಟಂಬ ಮರಳಿ ತೊಡುವುದಿಲ್ಲ’ ಎಂದು ಮಾತು ಕೊಟ್ಟಲ್ಲಿಗೆ “ಕರ್ಣಭೇದನ’ ಪೂರ್ಣಗೊಂಡಿತು. 

ಸಮ್ಮಾನ-ಗೌರವಾರ್ಪಣೆ
ನಡುವೆ ಪುಟ್ಟ ಸಭಾ ಕಾರ್ಯಕ್ರಮ. ಹಿರಿಯ ಕಲಾವಿದರಾದ ಉಬರಡ್ಕ ಉಮೇಶ ಶೆಟ್ಟಿ ಹಾಗೂ ನಾರಾಯಣ ಭಟ್‌ ನಿಡ್ಲೆ ಅವರಿಗೆ ಆತ್ಮೀಯ ಸಮ್ಮಾನ. ಬಳಿಕ “ರುಕ್ಮಿಣಿ ಕಲ್ಯಾಣ’ ಯಕ್ಷಗಾನ. ಉದಯೋನ್ಮುಖ ಭಾಗವತ ಚಿನ್ಮಯ ಕಲ್ಲಡ್ಕ ಭಾವಪೂರ್ಣ ಹಾಡುಗಳಿಂದ ಪ್ರೇಕ್ಷಕರ ಚಪ್ಪಾಳೆ ಗಳಿಸಿದರು. 82ರ ಇಳಿವಯಸ್ಸಿನಲ್ಲೂ ರುಕ್ಮನಾಗಿ ಸೂರಿಕುಮೇರು ಗೋವಿಂದ ಭಟ್ಟರು ಅಬ್ಬರಿಸಿದರು. ಮುರಳೀಧರ ಕನ್ನಡಿಕಟ್ಟೆ (ರುಕ್ಮಿಣಿ), ಕಾಯರ್ತಡ್ಕ ವಸಂತ ಗೌಡ (ಕೃಷ್ಣ), ಪೂರ್ಣೆàಶ ಆಚಾರ್ಯ (ಹಾಸ್ಯ), ನಿಡ್ಲೆ ನಾರಾಯಣ ಭಟ್‌ (ಬಲರಾಮ), ಹರಿಶ್ಚಂದ್ರ ಆಚಾರ್ಯ (ಶಿಶುಪಾಲ), ಸುನಿತ್‌ ಕೊಯ್ಯೂರು (ದಂತವಕ್ರ)  - ತಮ್ಮ ಪಾತ್ರಗಳಿಗೆ ಜೀವ ತುಂಬಿದರು. 

Advertisement

ತಂದೆಯಾಗಿಹ ಜಾಂಬವಂತ ಕೇಸರಿಯಾ…
ಜಾಂಬವತಿ ಕಲ್ಯಾಣ ಅದ್ಭುತವಾಗಿ ಮೂಡಿಬಂತು. ಉಬರಡ್ಕ ಉಮೇಶ ಶೆಟ್ಟಿ ಜಾಂಬವಂತ ಬಹುಕಾಲ ನೆನಪಿನಲ್ಲಿ ಉಳಿಯುವ ಜಾಂಬವಂತನ ಪಾತ್ರ ಮಾಡಿದರು. ಜಾಂಬವತಿಯಾಗಿ ಮುರಳೀಧರ ಕನ್ನಡಿಕಟ್ಟೆ, ಬಲರಾಮನಾಗಿ ಯುವ ಕಲಾವಿದ ಮುಖೇಶ್‌ ದೇವಧರ್‌, ಕೃಷ್ಣನಾಗಿ ಈಶ್ವರಪ್ರಸಾದರು, ಪ್ರಸೇನನಾಗಿ ಬಾಲ ಕಲಾವಿದ ಶ್ರೀಗಿರಿ ಅನಂತಪುರ, ಸಿಂಹನಾಗಿ ಅಬ್ಬರಿಸಿದ ಹರೀಶ್‌ ಶೆಟ್ಟಿ ಮಣ್ಣಾಪು, ವೃದ್ಧ ಬ್ರಾಹ್ಮಣನಾಗಿ ಪೂರ್ಣೆàಶ್‌ ಆಚಾರ್ಯ ಭರಪೂರ ಮನರಂಜನೆ ಒದಗಿಸಿದರು. ಮಹೇಶ್‌ ಕನ್ಯಾಡಿ ಅವರ ಕಂಠದಲ್ಲಿ ‘ಶರದಋತು ಪೂರ್ಣಿಮೆಯೊಳ್‌’, ‘ಜೋ ಜೋ ಜೋ ಜೋ ಜೋ ಸುಕುಮಾರ’ ಹಾಡುಗಳ ಸೊಗಸೇ ಬೇರೆಯಿತ್ತು. ಅವರಿಗೆ ಕೊಂಕಣಾಜೆ ಚಂದ್ರಶೇಖರ ಭಟ್‌, ಶಿತಿಕಂಠ ಭಟ್‌ ಉಜಿರೆ ಹಾಗೂ ಹೊಸ ಭರವಸೆ ಶ್ರೇಯಸ್‌ ಪಾಳಂದ್ಯೆ ಅವರ ಹಿಮ್ಮೇಳದ ಸಮರ್ಥ ಸಾಂಗತ್ಯವೂ ಒದಗಿತು.

ಕಲಾವಿದರ ಆಯ್ಕೆ, ಪಾತ್ರಗಳ ಹಂಚಿಕೆಯಲ್ಲಿ ಈಶ್ವರಪ್ರಸಾದರ ಅನುಭವ, ಜಾಣ್ಮೆ ಕೆಲಸ ಮಾಡಿದ್ದರಿಂದ ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು.

ಅನಂತ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next