Advertisement

8ನೇ ಪರಿಚ್ಛೇದದ ಪ್ರವೇಶ ದ್ವಾರದಲ್ಲಿ ತುಳುಭಾಷೆ

01:10 AM Mar 10, 2021 | Team Udayavani |

ಶರಧಿಯ ಪರಿಧಿಯಾಚೆಗೆ ತುಳು ಭಾಷಿಗರು ಲಕ್ಷಾಂತರ ಮಂದಿ ಅಖೀಲ ಭಾರತ ಮಾತ್ರವಲ್ಲ, ದೂರದ ದುಬಾೖ, ಅಮೆರಿಕದಂತಹ ನೆಲದಲ್ಲಿದ್ದರೂ ಭೌಗೋಳಿಕವಾಗಿ ದಕ್ಷಿಣ ಕನ್ನಡ ಜಿಲ್ಲೆಗೇ ಸೀಮಿತಗೊಂಡಿದೆ. ಈ ಭಾಷೆಯ ಮೇಲ್ಮೆಯನ್ನು ಸಾರುವಲ್ಲಿ ಕರ್ನಾಟಕದ ಎಲ್ಲ ಸಂಸದರೂ ಅದೆಷ್ಟು ಕಾಳಜಿ ವಹಿಸುತ್ತಾರೆ? ಈ ಮೂಲಭೂತ ಪ್ರಶ್ನೆಯ ಬಿಲದಲ್ಲಿಯೇ ತುಳು ಭಾಷಾ ಪ್ರಾತಿನಿಧ್ಯದ ಸೆಲೆ ಅಡಗಿದೆ.

Advertisement

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಗತ್ಯಬಿದ್ದಲ್ಲಿ ತುಳುವರ ನಿಯೋಗದೊಂದಿಗೆ ಕೇಂದ್ರ ಸಂಸ್ಕೃತಿ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿನ ಮಾನ-ಸ್ಥಾನಗಳ ಬಗೆಗೆ ಗಹನವಾದ ಚರ್ಚೆ ಹಾಗೂ ಬದ್ಧತೆಯ ಕಾರ್ಯಸೂಚಿಗೆ ಇದು ಸಕಾಲ. ತುಳುಭಾಷೆಗೆ ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ಒದಗಿ ಬರಲಿ ಎಂಬ ಆಶಯ ವಾಸ್ತವಿಕತೆಯ ಗಟ್ಟಿನೆಲದಲ್ಲಿ ತಾರ್ಕಿಕ ಅಂತ್ಯ ಕಾಣಬೇಕಾಗಿದೆ.

ತೌಳವ ಸೀಮೆಯ ಮಲ್ಲಿಗೆ ಹೂವಿನ ಪರಿಮಳ ವಿಶ್ವಾದ್ಯಂತ ಪಸರಿಸಿದೆ. ಆದರೆ ಅದನ್ನು ಸುಂದರವಾಗಿ ಪೋಣಿಸಿ ಮಾಲೆ ಕಟ್ಟುವಲ್ಲಿ ಏಕಾಗ್ರತೆಯ ಅನು ಸಂಧಾನ ಜನಮನದಲ್ಲಿ ಅಂತೆಯೇ ಪ್ರಜಾಪ್ರತಿನಿಧಿತ್ವ ದಲ್ಲಿ ಅತ್ಯಗತ್ಯ. ಇಲ್ಲವಾದರೆ ಎಲ್ಲೊ ಅಚೆ-ಈಚೆ ನೋಡುತ್ತಾ ಮಲ್ಲಿಗೆ ಮಾಲೆ ಹೆಣೆಯಲು ಹೋದರೆ ಹೂಗಳು ಅಲ್ಲಿ-ಇಲ್ಲಿ ಚದುರಿ ಬಿದ್ದು ಕೇವಲ ಬಾಳೆಯ ನಾರು ಮಾತ್ರ ನಮ್ಮ ಕೈಯಲ್ಲಿ ಉಳಿದೀತು! ತುಳುಗಾದೆಯನ್ನೇ ಇಲ್ಲಿ ಮುಂದಿರಿಸುವುದಾದರೆ “ಪತ್ತಿ ಬಳ್ಳ್ ಬುಡಂದಿಲೆಕ್ಕ’ ಬೆನ್ನು ಹತ್ತುವ ಕಾಯಕ, ಆವಶ್ಯಕ; ತುಳುನಾಡಲ್ಲೇ ನಮ್ಮಿ ಪಡು ಕರಾವಳಿ ಯಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ, ಕೊಂಕಣ ರೈಲ್ವೇಯಂತಹ ಬೃಹತ್‌ ಯೋಜನೆಗಳನ್ನು ದಡ ಸೇರಿಸಿದ ಮಾದರಿಯ ಛಾತಿ ಬೇಕಾಗಿದೆ.

ನೂತನ ರಾಜ್ಯಗಳ ರಚನೆ, ಮೀಸಲಾತಿಯಂತೆಯೇ ಅಖಂಡ ಭಾರತಕ್ಕೇ ಅನ್ವಯಿಸುವ ಭಾರತ ಸಂವಿಧಾನವನ್ನೇ ಮುಟ್ಟುವ, ತಟ್ಟುವ ಕಾಯಕ ಈ 8ನೇ ಪರಿಚ್ಛೇದದ ಕದ ತೆರೆಯುವಿಕೆ. “ತುಳು ಭಾಷೆ’ಯನ್ನು ಅದರೊಳಗೆ ಇರಿಸುವ ಕೀಲಿ ಕೈ ಇರುವುದು ಕೇಂದ್ರ ಸರಕಾರದಲ್ಲಿ ಮಾತ್ರ. ವಿಶಾಲ ಭಾರತಕ್ಕೆ ಏಕೈಕ ಸಂವಿಧಾನ ಇರುವುದರಿಂದ ಈ ಭಾಷಾ ಮಾನ್ಯತೆಗೆ 368ನೇ ವಿಧಿಯ ಅನ್ವಯ ಸಂಸತ್ತಿನ ಉಭಯ ಸದನಗಳಲ್ಲಿ ಸಾಂವಿಧಾನಿಕ ತಿದ್ದುಪಡಿಯೇ ಆವಶ್ಯಕ. ಈ ಕ್ಲಿಷ್ಟ ಹಾಗೂ ಸಂಕೀರ್ಣ ಸಾಂವಿಧಾನಿಕ ಮಸೂದೆ ತೇರ್ಗಡೆ ಆಗಲು ವಿಶೇಷ ಬಹುಮತ ಆವಶ್ಯಕ. ಹಾಗಾಗಿ ಸಮಗ್ರ ಭಾರತದ ಪ್ರಜಾಪ್ರತಿನಿಧಿಗಳ ಅರಿವು, ಸಹಮತ ತುಳುವಿನ ಬಗೆಗೆ ಬೇಕು ಎನ್ನುವಲ್ಲಿಂದಲೇ ಈ “ಚೈತ್ರ ಯಾತ್ರೆ’ ಆರಂಭಗೊಳ್ಳುತ್ತದೆ. ಮೂಲ ಸಂವಿಧಾನ ಕಣ್ಣು ತೆರೆದಾಗ ಕನ್ನಡದ ಸಹಿತ 14 ಭಾಷೆಗಳು 8ನೇ ಪರಿಚ್ಛೇದದಲ್ಲಿ ಬೆಚ್ಚಗೆ ಸೇರಿಕೊಂಡವು. ಆ ಬಳಿಕ 1967ರ 21ನೇ ತಿದ್ದುಪಡಿಯಲ್ಲಿ ಸಿಂಧಿ ಭಾಷೆ ಸೇರ್ಪಡೆಯಾಯಿತು. ಮುಂದೆ 1972ರ 71ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಕೊಂಕಣಿ, ಡೋಗ್ರಿ, ನೇಪಾಲಿ ಹಾಗೂ ಮಣಿಪುರಿ ಭಾಷೆಗಳು ಸೇರ್ಪಡೆಗೊಂಡವು. 2003ರ 92ನೇ ತಿದ್ದುಪಡಿಯ ಮೂಲಕ ಸಂತಾಲಿ, ಮೈಥಿಲಿ ಹಾಗೂ ಬೋಡೊ ಭಾಷೆಗಳು ಸೇರ್ಪಡೆಗೊಂಡವು.

ಇವುಗಳ ಸಮಗ್ರ ತಳಸ್ಪರ್ಶಿ ವಿಶ್ಲೇಷಣೆ ಮಾಡಿದಾಗ ರಾಷ್ಟ್ರದ ಅತ್ಯಂತ ಸಣ್ಣ, ಎರಡೇ ಜಿಲ್ಲೆಗಳ ಗೋವಾಕ್ಕೆ ಕೊಂಕಣಿ ಹಾಗೂ 16 ಜಿಲ್ಲೆಗಳ ಮಣಿಪುರಕ್ಕೆ ಮಣಿಪುರಿ ಭಾಷೆ ಆಧಾರವಾಯಿತು. ಆದರೆ ನೇಪಾಲೀ, ಮೈಥಿಲಿ, ಡೋಗ್ರಿ, ಬೋಡೊ, ಸಂತಾಲಿ ಹಾಗೂ ಸಿಂಧಿ ಭಾಷಾ ಆಧಾರದಲ್ಲಿ ರಾಜ್ಯಗಳೇನೂ ವಿಂಗಡಣೆ ಗೊಳ್ಳಲಿಲ್ಲ. ಈ ನೆಲದ ಮೂಲಭಾಷೆ ಸಂಸ್ಕೃತಕ್ಕೆ “ಮಾತೃಭಾಷೆ’ ಎಂಬ ಮಾನದಂಡದಿಂದ ವಿಭಿನ್ನವಾದ ಮನ್ನಣೆ ನೀಡಲಾಯಿತು. 8ನೇ ಪರಿಚ್ಛೇದದ ಉರ್ದು ಭಾಷಾಧರಿತ ರಾಜ್ಯವೂ ನಮ್ಮ ಭೂಪಟದಲ್ಲಿಲ್ಲ. ಇಂಗ್ಲೀಷ್‌ ಭಾಷೆ 8ನೇ ಪರಿಚ್ಛೇದದಲ್ಲಿ ಇಲ್ಲ ಎನ್ನುವುದೂ ಗಮನಾರ್ಹ.

Advertisement

2011ರ ಜನಗಣತಿಯ ಪ್ರಕಾರ 18 ಲಕ್ಷ ತುಳು ಭಾಷಿಗರಿದ್ದು, 15 ಲಕ್ಷ ಮಣಿಪುರಿ ಭಾಷಿಗರಿಂದ ಸಂಖ್ಯಾತ್ಮಕವಾಗಿ ಬಾಹುಳ್ಯವಿದ್ದರೂ ಏಕೆ ಇದಕ್ಕೆ ಮಣೆ ಹಾಕಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇಲ್ಲಿ ಬ್ರಿಟಿಷ್‌ ಆಳ್ವಿಕೆಯ ದಿನಗಳ ಸೌತ್‌ ಕೆನರಾ ಜಿಲ್ಲೆಯ ನಾಮಕರಣದೊಂದಿಗೆ ಬೈಂದೂರಿನಿಂದ ಕಾಸರಗೋಡುವರೆಗೆ ಹಾಯಾಗಿ ಮಲಗಿದ್ದ ದಿನಗಳ ತುಳುನಾಡಿನ ಕಿರು ಇತಿಹಾಸವನ್ನೇ ನೆನಪಿಸಬೇಕಾ ಗುತ್ತದೆ. ಮುಂದೆ 1956ರ ಭಾಷಾವಾರು ಪ್ರಾಂತ್ಯ ವಿಭಜನೆಯೊಂದಿಗಿನ ದಕ್ಷಿಣಕನ್ನಡ ಜಿಲ್ಲೆಗೆ ತುಳು ಭಾಷೆ, ತೌಳವ ಸಂಸ್ಕೃತಿ ಅನುಸಂಧಾನಗೊಂಡ ಬಗೆ ನಮ್ಮ ಅರಿವಿಗೆ ಬರುವಂತಹದು. ಇಲ್ಲಿನ ಮೂಲ ಚಿಂತನೆ- ಭಾಷಾದುರಭಿಮಾನವೂ ಅಲ್ಲ; ಅಂಧಾನು ಕರಣೆಯೂ ಅಲ್ಲ. ಬದಲಾಗಿ ಕನಿಷ್ಠ 2 ರಿಂದ 3 ಸಾವಿರ ವರ್ಷಗಳ ಸಾಂಸ್ಕೃತಿಕ ಪರಂಪರೆ, ಮೌಖೀಕ ಭಾಷಾ ಜೀವಂತಿಕೆ, ತುಳು ಲಿಪಿ, ಶಾಸನ, ಲಿಖೀತ ಓಲೆ, ಸಾಹಿತ್ಯ, ಕಟ್ಟು ಕಟ್ಟಳೆಗಳ ಪರಿಚಯ-ಒಟ್ಟಿನ ತುಳುಭಾಷಾ ತೇರಿಗೆ ಸಾರ್ವಕಾಲಿಕ ಮನ್ನಣೆ.

ಇಲ್ಲೊಂದು ಭಾರತೀಯ ಭಾಷಾ ಸಮಗ್ರ ಚಿತ್ರಣ ನೀಡಿ ವಿಷಯವನ್ನು ಇನ್ನಷ್ಟು ವಿಶದೀಕರಿಸಬಹು ದಾಗಿದೆ. ನಮ್ಮ ರಾಷ್ಟ್ರ ಬಹು ಭಾಷಾ ಸಮೃದ್ಧ ನೆಲ. 2001ರ ಜನಗಣತಿಯ ಪ್ರಕಾರ 30 ಭಾಷೆಗಳನ್ನು ಆಡುವವರ ಸಂಖ್ಯೆ ತಲಾ 1 ಮಿಲಿಯ ದಾಟಿದೆ. ಅದೇ ರೀತಿ ಮಾತೃಭಾಷೆಯಾಗಿ 10 ಸಾವಿರ ಸಂಖ್ಯೆ ದಾಟಿದ 122 ಭಾಷೆಗಳು ನಮ್ಮಲ್ಲಿವೆ! ತಾಯ್ನುಡಿಯಾಗಿ, ಆಡು ಭಾಷೆಯ ಪ್ರಬೇಧಗಳು ಸಮಗ್ರ ದೇಶದಲ್ಲಿ 1,599 ಲೆಕ್ಕಕ್ಕೆ ಸಿಕ್ಕಿವೆ. ಉದಾಹರಣೆಗೆ ದೂರದ ನಾಗಾಲ್ಯಾಂಡಿನ ಗುಡ್ಡಗಾಡು ಜನಾಂಗಗಳಲ್ಲಿ 16 ಆಡು ಭಾಷೆಗಳು, ಅರುಣಾಚಲ ಪ್ರದೇಶದಲ್ಲಿ 50 ಆಡುಭಾಷೆಗಳು, ಅದೇ ರೀತಿ ಮೇಘಾಲಯದ 11ಜಿಲ್ಲೆಗಳಲ್ಲಿ ಖಾಸಿ, ಗ್ಯಾರೋ, ಪ್ನಾರ್‌ ಹೀಗೆ 15 ಆಡು ಭಾಷೆಗಳಿವೆ! ಆದರೆ ಈ ಈಶಾನ್ಯ ಭಾರತದ ಈ ಎಲ್ಲ ರಾಜ್ಯಗಳು ಇಂಗ್ಲೀಷ್‌ ಭಾಷೆಯನ್ನೇ ರಾಜ್ಯ ಭಾಷೆಯಾಗಿ ಸ್ವೀಕರಿಸಿಬಿಟ್ಟಿವೆ!

ರಾಷ್ಟ್ರೀಯ ಮಟ್ಟದ ಸಿಂಹಾವಲೋಕನದಿಂದ ಮರಳಿ ತುಳು ವರ್ತುಲಕ್ಕೆ ದೃಷ್ಟಿ ಹೊರಳಿಸಿದಾಗ ತುಳು ಭಾಷೆಯ ಜತೆಗೆ 8ನೇ ಪರಿಚ್ಛೇದ ಹಸೆಮಣೆ ಏರಲು ಬಂಜಾರಾ, ಭೋಜು³ರಿ, ಲಢಾಕೀ, ಸಿಕ್ಕಿಮೀಸ್‌, ಬುಂಧೇಲಿ, ಛತ್ತೀಸ್‌ ಘರೀ – ಹೀಗೆ ಸಾಲು ಸಾಲು ಭಾಷೆಗಳು ಕಾದು ಕುಳಿತಿವೆ! ಅದರಲ್ಲಿಯೂ ಸಿಕ್ಕಿಂ, ಛತ್ತೀಸ್‌ಗಢ, ಲಡಾಖ್‌ ಇವೆಲ್ಲ ರಾಜ್ಯ-ಕೇಂದ್ರಾಡಳಿತ ಸ್ಥಾನಮಾನಗಳ ಗಟ್ಟಿ ನೆಲದಲ್ಲಿ ನಿಂತೇ ತಮ್ಮ ಬೇಡಿಕೆಯನ್ನು ಮುಂದೊಡ್ಡುತ್ತಿವೆ. 8ನೇ ಶೆಡ್ನೂಲಿಗೆ ತುಳು ಭಾಷೆ ಪ್ರವೇಶಿಸಿದರೆ, ಕಾನೂನು ಭಾಷಾಂತರ, ಸಂಸತ್‌, ಶಾಸನ ಸಭೆಗಳಲ್ಲಿಯೂ ತುಳು ಭಾಷೆಯಲ್ಲಿಯೇ ವಿಚಾರ ಮಂಡನೆಗೆ ಅವಕಾಶ, ಸ್ಪರ್ಧಾತ್ಮಕ ಪರೀಕ್ಷೆಯ ಸಾಧ್ಯತೆ, ಅಧಿಕೃತ ಭಾಷಾಂತರ, ಸಾಹಿತ್ಯ ಪರಿಷತ್‌ ಮನ್ನಣೆ- ಹೀಗೆ ಪ್ರಧಾನ ಭೂಮಿಕೆ ಹೊಂದಬಹುದಾಗಿದೆ. ಆದರೂ ಈಗಲೂ ಸಂವಿಧಾನದತ್ತವಾದ 345ನೇ ವಿಧಿ ಅನ್ವಯ ರಾಜ್ಯ ಸರಕಾರದ ಭೂಮಿಕೆಯಲ್ಲಿ ತುಳು ಭಾಷಾ ಕಲಿಕೆಗೆ, ಪಠ್ಯ ಪುಸ್ತಕಕ್ಕೆ, ತುಳು ಅಕಾಡೆಮಿ, ಜಾನಪದ ಸಾಹಿತ್ಯಕ್ಕೆ ಪ್ರೋತ್ಸಾಹ ಸ್ವಾಗತಾರ್ಹ. ಕೊನೆಯದಾಗಿ ಇಲ್ಲೊಂದು ತೊಡಕಿನ ಅಂಶವೆಂದರೆ, 2004ರಲ್ಲಿನ ಸೀತಾಕಾಂತ ಮಹಾಪಾತ್ರ ವರದಿಯನ್ವಯ 8ನೇ ಪರಿಚ್ಛೇದದೊಳಗೆ ಭಾಷೆ ಯೊಂದನ್ನು ಸೇರಿಸುವ ಮಾನದಂಡವನ್ನೇ ಕೇಂದ್ರ ಸರಕಾರ ಈ ತನಕವೂ ನಿಖರವಾಗಿ ಗುರುತಿ ಸಲೇ ಇಲ್ಲ! ಈ ಎಲ್ಲ ಏರುಪೇರುಗಳ ಮಧ್ಯೆ, ಅತ್ಯಂತ ಪ್ರಾಚೀನ ಎನಿಸಿದ ತೌಳವ ಸೀಮೆಯ ಆಡು ಭಾಷೆ, ಸಾಂವಿಧಾನಿಕ ನೆಲಗಟ್ಟಿನಲ್ಲಿ ಭವಿಷ್ಯದ ಬೆಳಕು ಕಾಣುವಂತಾಗಲಿ ಎಂಬ ಶುಭ ಹಾರೈಕೆ ನಮ್ಮದು.

ಡಾ| ಪಿ. ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next