Advertisement

Tulu Koota Bengaluru: ತುಳುಕೂಟ ಬೆಂಗಳೂರು ಸಂಘಕ್ಕೆ ಬಂಗಾರ್ದ ಪರ್ಬ

02:12 PM Nov 24, 2023 | Team Udayavani |

ಬೆಂಗಳೂರು: ವಿಶ್ವದ ಯಾವುದೇ ಮೂಲೆಗೆ ಹೋದರೂ ಸಿಗುವ ಏಕೈಕ ಸಂಘವೆಂದರೆ ಅದು ತುಳು ಸಂಘಗಳು. ತುಳುನಾಡಿನ ಭಾಷೆ, ನೆಲ, ಜಲಕ್ಕಾಗಿ ಸುದೀರ್ಘ‌ವಾಗಿ ಹೋರಾಟ ಮಾಡಿಕೊಂಡು ಬಂದಿದ್ದ “ತುಳುಕೂಟ, ಬೆಂಗಳೂರು’ ಸಂಘಕ್ಕೆ 50 ವರ್ಷ ತುಂಬಿದ್ದು, ಸುವರ್ಣ ಮಹೋತ್ಸವ (ಬಂಗಾರ್ದ ಪರ್ಬ)ಕ್ಕೆ ಕಾಲಿಟ್ಟಿದೆ.

Advertisement

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರು ಹಿಂದೆ ಹೊಟ್ಟೆಪಾಡಿಗಾಗಿ ವಿವಿಧ ರಾಜ್ಯಕ್ಕೆ ಉದ್ಯೋಗ ಅರಸಿಕೊಂಡು ಹೋಗಿ ಅಲ್ಲಿ ಹಲವು ತುಳು ಸಂಘಗಳನ್ನು ಕಟ್ಟಿ ಬೆಳೆಸಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿ 1972ರಲ್ಲಿ ಪ್ರಾರಂಭವಾದ “ತುಳುಕೂಟ, ಬೆಂಗಳೂರು’ ಸಂಘವು ಸಮಾಜ ಮುಖೀ ಕಾರ್ಯ ಮಾಡುತ್ತಾ ಜನರ ಮನ್ನಣೆಗೆ ಪಾತ್ರವಾಗಿದೆ.

ವಿ.ಟಿ.ರಾಜಶೇಖರ್‌ ಈ ಸಂಘದ ಮೊದಲ ಅಧ್ಯಕ್ಷರಾಗಿದ್ದು, ನಂತರ ಈ ಸಂಘಟನೆಯಲ್ಲಿ 17 ಮಂದಿ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಸುಂದರ್‌ ರಾಜ್‌ ರೈ ಅವರು 18ನೇ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 13 ಜನರಿಂದ ಹುಟ್ಟಿಕೊಂಡ “ತುಳುಕೂಟ, ಬೆಂಗಳೂರು’ ಸಂಘದಲ್ಲಿ ಪ್ರಸ್ತುತ 12,500 ಸದಸ್ಯರಿದ್ದಾರೆ.

“ತುಳುಕೂಟ, ಬೆಂಗಳೂರು’ ಕೊಡುಗೆ ಏನು?: 800 ವರ್ಷಗಳ ಇತಿಹಾಸ ಇರುವ ಉಡುಪಿ ಮಠದ ದ್ವಾರದಲ್ಲಿ ತುಳು ಶಬ್ದಗಳಲ್ಲಿ ಅಕ್ಷರಗಳಿವೆ ಎಂಬುದನ್ನು ಮನದಟ್ಟು ಮಾಡಿ ತುಳು ಭಾಷೆಗೆ ಲಿಪಿ ಎಂಬುದನ್ನು ಸಾಕ್ಷ್ಯ ಸಮೇತ ತೋರಿಸಿಕೊಟ್ಟ ಕೀರ್ತಿ “ತುಳುಕೂಟ, ಬೆಂಗಳೂರು’ಗೆ ಸಲ್ಲುತ್ತದೆ. ಇವರ ಹೋರಾಟದ ಫ‌ಲವಾಗಿಯೇ ಮಹಾಲಕ್ಷ್ಮೀಲೇ ಔಟ್‌ನಲ್ಲಿರುವ ರಾಣಿ ಅಬ್ಬಕ್ಕನ ಪ್ರತಿಮೆ ತಲೆ ಎತ್ತಿದೆ. ಮಹಾಲಕ್ಷ್ಮೀಲೇಔಟ್‌ನಲ್ಲಿ ರಾಣಿ ಅಬ್ಬಕ್ಕ ಮೈದಾನವೂ ನಿರ್ಮಾಣವಾಗಿದೆ.

ಇನ್ನು ಪಠ್ಯಪುಸ್ತಕದಲ್ಲಿ ಐಚ್ಛಿಕ ಭಾಷೆಯಾಗಿ ತುಳು ತಂದಿರುವುದು, ತುಳು ಸಾಹಿತ್ಯ ಅಕಾಡೆಮಿ, ತುಳು ಅಧ್ಯಯನ ಪೀಠ ಸ್ಥಾಪನೆ ಸೇರಿದಂತೆ ತುಳುನಾಡಿನ ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಹಲವು ಕಾರ್ಯಗಳು ಅನುಷ್ಠಾನಕ್ಕೆ ತರುವಲ್ಲಿ ಈ ಸಂಘಟನೆಯ ಕಾರ್ಯ ಬಹಳಷ್ಟಿದೆ.

Advertisement

ಇಂದು ಸುವರ್ಣ ಮಹೋತ್ಸವ: ತುಳುಕೂಟ ಬೆಂಗಳೂರು 50 ವರ್ಷ ತುಂಬಿದ ಈ ಶುಭ ಸಂದರ್ಭದಲ್ಲಿ ಸುವರ್ಣ ಮಹೋತ್ಸವ (ಬಂಗಾರª ಪರ್ಬ) ಇಂದು (ನ.24) ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯ ವರೆಗೆ ಅರಮನೆ ಮೈದಾನದಲ್ಲಿ ಆಚರಿಸಲಾಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ.

ವಿಶ್ವ ತುಳುಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಮತ್ತು ಜಾನಪದ ನೃತ್ಯ, ಕಲೆ, ಸಂಗೀತ, ಯಕ್ಷಗಾನ, ತುಳು ವಿದ್ವಾಂಸರಿಂದ ವಿಚಾರ ಗೋಷ್ಠಿ, ನಗೆಹಬ್ಬ (ಖ್ಯಾತ ಕಲಾವಿದರಿಂದ) ‘ಸ್ಮರಣ ಸಂಚಿಕೆ’ ಬಿಡುಗಡೆ ಹಮ್ಮಿಕೊಳ್ಳಲಾಗಿದೆ. ತುಳು ಭಾಷೆಗೆ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿರುವ /ಸಾಧನೆ ಮಾಡಿರುವ ಗಣ್ಯರಿಗೆ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ.

ತುಳುನಾಡಿನ ಆಚರಣೆಗಳು: ಪ್ರತಿ ವರ್ಷ ತುಳುನಾಡಿನ ಐದಾರು ಆಚರಣೆಗಳನ್ನು ಬೆಂಗಳೂರಿನಲ್ಲಿ ನಡೆಸುವ ಮೂಲಕ ಕರಾವಳಿ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿ ವರ್ಷ ಹೊಸ ಅಕ್ಕಿ ಊಟ (ಪುದ್ದಾರ್‌) ಎಂಬ ಕಾರ್ಯಕ್ರಮ ನಡೆಸುತ್ತಿದೆ. ಇನ್ನು ಆಟಿ ತಿಂಗಳಲ್ಲಿ ಊರಿನಿಂದ ಕೆಲ ಉತ್ಪನ್ನ ತರಿಸಿಕೊಂಡು ಕೆತ್ತೆ ಕಷಾಯ ಮಾಡಲಾಗುತ್ತಿದೆ. ಆಟಿ ತಿಂಗಳಲ್ಲಿ ಈ ಕಷಾಯ ಕುಡಿದರೆ ಆರೋಗ್ಯಕ್ಕೆ ಬಹಳ ಉತ್ತಮ ಎಂಬ ಪ್ರತೀತಿ ಇದೆ. ಜತೆಗೆ ಭೂಮಿ ಪೂಜೆ (ಕೆದ್ದಸ ) ಯಂತಹ ದಕ್ಷಿಣ ಕನ್ನಡ ಭಾಗದ ಹಲವಾರು ಧಾರ್ಮಿಕ ಆಚರಣೆಗಳನ್ನು ಈ ಸಂಘಟನೆ ನಡೆಸುತ್ತಿದೆ. ಪ್ರತಿ ವರ್ಷ ತುಳುನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾಭ್ಯಾಸಕ್ಕೆ ನೆರವಾಗಲು 10 ಸಾವಿರ ರೂ. ಸ್ಕಾಲರ್‌ಶಿಪ್‌ ಕೊಡಲಾಗುತ್ತಿದೆ.

“ತುಳುಕೂಟ, ಬೆಂಗಳೂರು’ಗೆ ಇನ್ನೂ ಸಿಕ್ಕಿಲ್ಲ ಜಾಗ: “ತುಳೂಕೂಟ, ಬೆಂಗಳೂರು’ ಸಂಘಟನೆಗೆ 50 ವರ್ಷವಾದರೂ ಸೂಕ್ತ ಜಾಗವಿಲ್ಲ. ರಾಜ್ಯದ ಹಲವಾರು ಹಳೇ ಸಂಘಟನೆಗಳಿಗೆ ಸರ್ಕಾರವು ಜಾಗ ನೀಡಿ ಅದರ ಏಳಿಗೆಗೆ ಸಹಕರಿಸಿದೆ. ಆದರೆ, ನಮಗೆ ಕನಿಷ್ಠ 5 ಸೆಂಟ್ಸ್‌ ಜಾಗ ಕೊಟ್ಟಿಲ್ಲ ಎಂಬ ಬೇಸರ ಇದೆ. ಬಿಡಿಎನಲ್ಲಿ ಜಾಗಕ್ಕೆ ಅರ್ಜಿ ಸಲ್ಲಿಸಿದ್ದರೂ 12 ವರ್ಷಗಳಿಂದ ಬಾಕಿ ಉಳಿದಿದೆ. ಕಂಬಳ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಕೊಟ್ಟಾಗ ಅವರಿಗೆ ನಮ್ಮ ಸಮಸ್ಯೆಗಳನ್ನು ವಿವರಿಸಿ ಸಂಘಕ್ಕೆ ಜಾಗ ಕೊಡಿಸುವಂತೆ ಮನವಿ ಮಾಡುತ್ತೇವೆ. ಬೆಂಗಳೂರಿನ ಯಾವುದೇ ಭಾಗದಲ್ಲೂ ಜಾಗ ಕೊಟ್ಟರೆ ಸಾಕು ಎಂದು ಸಂಘದ ಅಧ್ಯಕ್ಷ ಸುಂದರ್‌ ರಾಜ್‌ ರೈ ಉದಯವಾಣಿಗೆ ತಿಳಿಸಿದ್ದಾರೆ.

1972ರಲ್ಲಿ “ತುಳೂಕೂಟ, ಬೆಂಗಳೂರು’ ಸಂಘಟನೆ ಪ್ರಾರಂಭವಾದಗ ಶಿವಾನಂದ ವೃತ್ತದ ಬಳಿ ಇದರ ಬಾಡಿಗೆ ಕಚೇರಿಯಿತ್ತು. ಈಗಲೂ ಅಲ್ಲೇ ಇದ್ದೇವೆ. ಸಂಘವು ಯಶಸ್ವಿಯಾಗಿ 50 ವರ್ಷ ಪೂರೈಸಿರುವುದು ಸಂತಸ ಉಂಟಾಗಿದೆ. -ಸುಂದರ್‌ ರಾಜ್‌ ರೈ, ಅಧ್ಯಕ್ಷರು, “ತುಳುಕೂಟ, ಬೆಂಗಳೂರು’

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next