Advertisement

ರಾಜ್ಯ ಸರ್ಕಾರದಿಂದ ತುಘಲಕ್‌ ದರ್ಬಾರ್‌

12:56 PM Feb 18, 2017 | |

ಮೈಸೂರು: ಮೌಲ್ಯಮಾಪನ ಬಹಿಷ್ಕರಿಸುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ತುಘಲಕ್‌ ದರ್ಬಾರ್‌ನಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಕರ ಸಮಸ್ಯೆ ಬಗೆಹರಿಸಿ ಎಂದರೆ ಶಿಕ್ಷೆ ಕೊಡುತ್ತೇವೆ ಎನ್ನುವುದು ಸರಿಯಲ್ಲ.

Advertisement

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ನೋಡಿದರೆ ಇದು ತುಘಲಕ್‌ ಅಥವಾ ಸದ್ದಾಂ ಹುಸೇನ್‌ ಸರ್ಕಾರ ಎಂಬ ಅನುಮಾನ ಮೂಡುತ್ತದೆ. ಅರ್ಹತೆ ಇಲ್ಲದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರೆ ಇಂತಹ ಸಮಸ್ಯೆ ಎದುರಾಗುತ್ತದೆ. ಅಧಿಕಾರಿ ಹೇಳಿದ್ದಕ್ಕೆ ಸಚಿವರು ಹೆಬ್ಬೆಟ್ಟು ಒತ್ತುತ್ತಾರೆ. ಇಂತಹ ಸಚಿವರಿದ್ದಾಗ ಈ ರೀತಿಯ ಕಾನೂನುಗಳು ಬರುತ್ತವೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಗೊಂದಲಕ್ಕೆ ಸಿಲುಕುತ್ತಾರೆ: ಮುಂಬರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೆ ಕಾರ್ಯಕರ್ತರು ಗೊಂದಲಕ್ಕೆ ಸಿಲುಕುತ್ತಾರೆ. ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿ ಸುವ ಚಿಂತನೆ ಇದೆ. ಆದರೆ ಈ ವಿಚಾರ ದಲ್ಲಿ ನಾವು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದೇವೆ.

ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಉಪ ಚುನಾವಣೆಯಲ್ಲಿ ಎರಡೂ ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಸಲು ಸಿದ್ಧವಾಗಿವೆ. ಇದು ಮುಂಬರುವ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆಯಿದೆ ಎಂದರು.

ಅಪಾಯಕಾರಿ ವ್ಯಕ್ತಿ: ಕಳಲೆ ಕೇಶವಮೂರ್ತಿ ಒಬ್ಬ ಅಪಾಯಕಾರಿ ವ್ಯಕ್ತಿ. ಜೆಡಿಎಸ್‌ ಬಿಡಲು ಅವರು ನಮ್ಮ ಅನುಮತಿ ಪಡೆದಿಲ್ಲ. ಅಲ್ಲದೆ ಪಕ್ಷ ಬಿಡುವ ಮುನ್ನ ಮಾಧ್ಯಮಗಳ ಎದುರು ತಮ್ಮ ಹಾಗೂ ದೇವೇಗೌಡರ ಹೆಸರು ಬಳಸಿದ್ದು ನೋವಾಗಿದೆ. ಕೇಶವಮೂರ್ತಿಯನ್ನು ಸಜ್ಜನ ಎಂದುಕೊಂಡಿದ್ದೆ. ಆದರೆ ಕೇವಲ ಕಾಂಗ್ರೆಸ್‌ ಅಭ್ಯರ್ಥಿಯಾಗಲು ಈ ರೀತಿ ಸುಳ್ಳು ಹೇಳುತ್ತಾರೆಂದು ನಾನು ತಿಳಿದಿರಲಿಲ್ಲ.

Advertisement

ಕಾಂಗ್ರೆಸ್‌ನೊಂದಿಗೆ ಅವರು ಯಾವ ಒಪ್ಪಂದವನ್ನು ಮಾಡಿಕೊಂಡು ಜೆಡಿಎಸ್‌ ತೊರೆದಿದ್ದಾರೋ ತಿಳಿ ಯುತ್ತಿಲ್ಲ. ಆದರೆ ಅವರ ನಡೆಯಿಂದ ಅವರೊಬ್ಬ ಅಪಾಯಕಾರಿ ವ್ಯಕ್ತಿ ಅನ್ನುವುದು ಸಾಬೀತಾಗಿದೆ ಎಂದು ಹೇಳಿದರು. ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಹೋಗುವಂತೆ ಸೂಚಿಸಿಲ್ಲ. ಉಪ ಚುನಾವಣೆಯಲ್ಲಿ ಅವರನ್ನೇ ಕಣಕ್ಕಿಳಿಸಲು ತೀರ್ಮಾನಿಸಲಾಗಿತ್ತು. ಆದರೆ ಅವರು ಕಾಂಗ್ರೆಸ್‌ ಸೇರ್ಪಡೆ ವೇಳೆ ನೀಡಿರುವ ಹೇಳಿಕೆಗಳು ಅಚ್ಚರಿ ಉಂಟು ಮಾಡಿವೆ ಎಂದರು.

“ಕೇಶವಮೂರ್ತಿ ಜೊತೆ ಕಾರ್ಯಕರ್ತರು “ಕೈ’ ಸೇರಿಲ್ಲ’
ನಂಜನಗೂಡು:
ಕೇಶವಮೂರ್ತಿ ಕೆಲವು ಬೆಂಬಲಿಗರೊಂದಿಗೆ ಕೈ ಪಕ್ಷ ಸೇರಿರಬಹುದು. ತಾಲೂಕು ಘಟಕವೇನೂ ಅವರ ಹಿಂದೆ ಹೋಗಿಲ್ಲ ಎಂದು ಜೆಡಿಎಸ್‌ ರಾಜಾದ್ಯಕ್ಷ ಕುಮಾರಸ್ವಾಮಿ ಹೇಳಿದರು. ನಗರದ ಶಂಕರ ಮಠದ ಭಾರತಿ ತೀರ್ಥ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಘಟಕದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.ಕೈ ನಾಯಕರ ಆಮಿಷಕ್ಕೆ ಬಲಿಯಾದ ಕಳಲೆ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ ಸೇರಿ ಭವಿಷ್ಯವನ್ನು ಹಾಳು ಮಾಡಿಕೊಂಡಿದ್ದಾರೆ. ಇದಕ್ಕಾಗಿ ಕಾರ್ಯಕರ್ತರು ಧೃತಿಗೆಡಬಾರದು ಎಂದರು.

ಹರಸಿ ಕಳಿಸಿಲ್ಲ: ಕೇಶವಮೂರ್ತಿಯವರಿಗೆ ಆಶೀರ್ವಾದ ಮಾಡಿ ಕಳಿಸಿಲ್ಲ. ಹಾಗೆ ಮಾಡಲು ತಮಗೆ ತಲೆ ಕೆಟ್ಟಿಲ್ಲ ಎಂದು ಕಿಡಿಕಾರಿದರು. ಭ್ರಷ್ಟರಿಗೆ ಮತ ಬೇಡ. ರಾಜ್ಯವನ್ನು ಲೂಟಿ ಹೊಡೆಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಿವೆ. ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಕಾರ್ಯಕರ್ತರ ಅಭಿಪ್ರಾಯ ಪಡೆದು ವರಿಷ್ಠರ ಮುಂದಿಟ್ಟು ತೀರ್ಮಾನಿಸಲಾಗುವುದು ಎಂದರು.

ನಂಜನಗೂಡಿಗೆ ಈಗ ನೂರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಚುನಾವಣಾ ಗಿಮಿಕ್‌. ಶ್ರೀನಿವಾಸ ಪ್ರಸಾದ ರಾಜೀನಾಮೆ ನೀಡುವವರೆಗೆ ನಂಜನಗೂಡಿನ ಅಭಿವೃದ್ಧಿ ಬೇಕಿರಲಿಲ್ಲ. ಉಪ ಚುನಾವಣೆ ಬಂದಾಗ ನೆನಪಾಗಿದೆ. ಕ್ಷೇತ್ರಕ್ಕೆ ಸುಮಾರು 650 ಕೋಟಿ ರೂ. ಹರಿದು ಬಂದಿರುವುದಕ್ಕೆ ಶ್ರೀನಿವಾಸಪ್ರಸಾದ್‌ ನೀಡಿದ ರಾಜೀನಾಮೆಯೇ ಕಾರಣ. ಆದ್ದರಿಂದ ಅವರನ್ನು  ಅಭಿನಂದಿಸುವುದಾಗಿ ಹೇಳಿದರು.

ಅಭ್ಯರ್ಥಿ ಬೇಡ: ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎನ್‌.ಶ್ರೀನಿವಾಸ್‌ ಮಾತನಾಡಿ, ತಾಲೂಕಿನಲ್ಲಿ ಪಕ್ಷ ಹೊಂದಿರುವ ಸ್ಥಿತಿಯಲ್ಲಿ ತೆನೆ ಹೊತ್ತ ಅಭ್ಯರ್ಥಿ ಬೇಡ ಎಂದರು. ಕೆಲವರು ಅಭ್ಯರ್ಥಿ ಬೇಕು ಎಂದಾಗ ಗೊಂದಲ ಕಾಣಿಸಿಕೊಂಡಿತು. ಹೆಚ್ಚಿನವರು ಅಭ್ಯರ್ಥಿ ಬೇಕು ಎಂದು ಕೈ ಎತ್ತಿದರು. ನಂಜನಗೂಡು ಪಟ್ಟಣ ಅಧ್ಯಕ್ಷ ಆರ್‌.ವಿ. ಮಹದೇವಸ್ವಾಮಿ ಸ್ವಾಗತಿಸಿದರು. ಜಿಲ್ಲಾದ್ಯಕ್ಷ  ಎನ್‌.ನರಸಿಂಹಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಚಿಕ್ಕಮಾದು, ಸಂದೇಶ ನಾಗರಾಜು, ಶ್ರೀಕಂಠೇಗೌಡ, ಮೈಸೂರಿನ ಮೇಯರ್‌ ರವಿ ಕುಮಾರ್‌, ನಗರಾಧ್ಯಕ್ಷೆ ಸುಜಾತಾ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next