Advertisement

ಕ್ಷಯರೋಗ ಪತ್ತೆ-ಚಿಕಿತ್ಸಾ ಆಂದೋಲನ

03:03 PM Nov 28, 2020 | Suhan S |

ಹಾವೇರಿ: ಕ್ಷಯರೋಗ ಪತ್ತೆ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಡಿ.1ರಿಂದ ಜಿಲ್ಲೆಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

Advertisement

ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನದ ಪೂರ್ವಭಾವಿ ಸಿದ್ಧತೆ ಪರಿಶೀಲನೆ ನಡೆಸಿ, ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. 2020-25ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿ ಹಾಕಿಕೊಳ್ಳಲಾಗಿದ್ದು, ಸಾಮಾಜಿಕ ಹಾಗೂ ಆರ್ಥಿಕ ದುರ್ಬಲವರ್ಗದವರನ್ನು ಕೇಂದ್ರೀಕೃತವಾಗಿಸಿಕೊಂಡು ಮನೆ ಮನೆ ಭೇಟಿಯ ಮೂಲಕ ಸಕ್ರಿಯವಾಗಿ ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ರೋಗ ಲಕ್ಷಣಗಳಿರುವವರು ಚಿಕಿತ್ಸೆಗಾಗಿ ಸೇವಾ ಸೌಲಭ್ಯಕ್ಕೆ ಬರುವ ಬದಲು ಆರೋಗ್ಯ ಇಲಾಖೆಯೇ ರೋಗ ಲಕ್ಷಣಗಳಿರುವವರಿಗಾಗಿ ಹುಡುಕಾಟ, ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಗುಣಮುಖಗೊಳಿಸುವುದು ಆಂದೋಲನದ ವೈಶಿಷ್ಟ್ಯವಾಗಿದೆ. ನಿಮ್ಮ ಮನೆ ಬಾಗಿಲಿಗೆ ಬರುವ ಆಶಾ, ಆರೋಗ್ಯ ಕಾರ್ತಕರ್ತರಿಗೆ ಸಹಕರಿಸಿ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಬೇಕೆಂದು ಹೇಳಿದರು.

ಕ್ಷಯರೋಗ ಪತ್ತೆ ಮತ್ತು ಸೂಕ್ತ ಚಿಕಿತ್ಸೆ ಮೂಲಕ ನಿರ್ಮೂಲನೆಗಾಗಿ ಖಾಸಗಿ ವೈದ್ಯರು ಸೇರಿದಂತೆ ಸಾರ್ವಜನಿಕರು ಸಹಕರಿಸಬೇಕು. ಡ್ರಗ್‌ ಕಂಟ್ರೋಲರ್‌ ಸಮಿತಿಗಳನ್ನು ರಚಿಸಿಕೊಂಡು ಎಲ್ಲ ಮೆಡಿಕಲ್‌ ಶಾಪ್‌ಗಳನ್ನು ತಪಾಸಣೆಗೊಳಿಸಬೇಕು. ಖಾಸಗಿ ವೈದ್ಯರಿಗೂ ಈ ಕುರಿತು ಅರಿವು ಮೂಡಿಸಿ ಕ್ಷಯರೋಗದ ನಿರ್ಮೂಲನೆಗೆ ಎಲ್ಲರೂ ಶ್ರಮಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಕ್ಷಯರೋಗ ಪ್ರಮಾಣದಲ್ಲಿ ಇಳಿಮುಖ, ಕ್ಷಯರೋಗದಿಂದ ಮರಣ ಹೊಂದುವವರ ಪ್ರಮಾಣದಲ್ಲಿ ಇಳಿಮುಖಗೊಳಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ನೀಲೇಶ್‌ ಮಾತನಾಡಿ, ಜಿಲ್ಲೆಯಲ್ಲಿ ಈ ವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಐದು ಸುತ್ತುಗಳನ್ನು ಪೂರೈಸಲಾಗಿದೆ. ಡಿ.1 ರಿಂದ ಆರನೇ ಸುತ್ತಿನ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಜರುಗಲಿದೆ. ಈ ಆಂದೋಲನದಲ್ಲಿಈವರೆಗೆ ತಲುಪಲು ಸಾಧ್ಯವಾಗದೇ ಇರುವವರನ್ನುತಲುಪಿ ಅಂಥವರಲ್ಲಿ ಕ್ಷಯರೋಗ ಪ್ರಕರಣಗಳನ್ನು ಬೇಗ ಕಂಡು ಹಿಡಿದು ಚಿಕಿತ್ಸೆ ಪ್ರಾರಂಭಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

Advertisement

ಕ್ಷಯರೋಗಕ್ಕೆ ಅತ್ಯುತ್ತಮ ಗುಣಮಟ್ಟದ ಔಷಧಗಳು ಸರ್ಕಾರದಿಂದ ಪೂರೈಕೆಯಾಗುತ್ತಿದೆ. ಐದು ಲಕ್ಷ ರೂ. ವೆಚ್ಚದವರೆಗೆ ಪ್ರತಿ ರೋಗಕ್ಕೆ ಸರ್ಕಾರದಿಂದ ಉಚಿತವಾಗಿ ಔಷಧ ಒದಗಿಸಲಾಗುವುದು. ಖಾಸಗಿ ಆಸ್ಪತ್ರೆಗಳಿಗೂ ಉಚಿತವಾಗಿ ಔಷಧ ನೀಡಲು ಅವಕಾಶವಿದೆ. ಕ್ಷಯರೋಗವನ್ನು ಗೌಪ್ಯವಾಗಿಡದೇ ಮಾಹಿತಿಯನ್ನು ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 2076 ಕ್ಷಯರೋಗಿಗಳು ಪತ್ತೆಯಾಗಿದ್ದು, 1586 ರೋಗಿಗಳು ಗುಣಮುಖರಾಗಿದ್ದಾರೆ. 125 ರೋಗಳು ಮರಣ ಹೊಂದಿದ್ದು, 37 ರೋಗಿಗಳು ಮಧ್ಯದಲ್ಲಿ ಚಿಕಿತ್ಸೆ ನಿಲ್ಲಿಸಿದ್ದಾರೆ. ಇಂತಹ ರೋಗಿಗಳನ್ನು ಪತ್ತೆ ಹಚ್ಚಿ ಮತ್ತೆ ಚಿಕಿತ್ಸೆಗೆ ಒಳಪಡಿಸಲು ಸೂಚನೆ ನೀಡಿದರು. ಜಿಲ್ಲೆಯ ಏಳು ತಾಲೂಕುಗಳಲ್ಲಿ ಡಿಸೆಂಬರ್‌ನಲ್ಲಿ ಬೇರೆ ಬೇರೆ ದಿನಾಂಕಗಳಂದು ನಡೆಯಲಿದೆ. ಜಿಲ್ಲೆಯಲ್ಲಿ 2,86,637 ಜನರನ್ನು ಸಮೀಕ್ಷೆಗೆ ಒಳಪಡಿಸವ ಗುರಿ ಹೊಂದಲಾಗಿದೆ. ಇದಕ್ಕಾಗಿ 615 ತಂಡಗಳನ್ನು ರಚಿಸಲಾಗಿದೆ. ಸುಮಾರು 1230 ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಡಾ| ಜಯಾನಂದ, ಡಾ| ಹಂಸವೇಣಿ ಒಳಗೊಂಡಂತೆ ವಿವಿಧ ವೈದ್ಯರು ಹಾಗೂ ಸ್ವಯಂಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

 

ಕ್ಷಯರೋಗ ಪತ್ತೆ ಮತ್ತು ಸೂಕ್ತ ಚಿಕಿತ್ಸೆ ಮೂಲಕ ನಿರ್ಮೂಲನೆಗಾಗಿ ಖಾಸಗಿ ವೈದ್ಯರು ಸೇರಿದಂತೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಖಾಸಗಿ ವೈದ್ಯರಿಗೂ ಈ ಕುರಿತು ಅರಿವು ಮೂಡಿಸಿ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಹಾಗೂ ಇದರಿಂದ ಎದುರಾಗುತ್ತಿರುವ ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲರೂ ಶ್ರಮಿಸಬೇಕು. –ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next