Advertisement

ಟ್ರೆಕ್ಕಿಂಗ್‌ ಓಕೆ, ರಿವೆಂಜ್‌ ಯಾಕೆ ?

08:08 PM Nov 03, 2020 | Suhan S |

ಕೆಲ ಸಮಯದ ಹಿಂದೆ ಹತ್ತಿರದ ಕವಲೇದುರ್ಗ ಕೋಟೆಗೆ ಚಾರಣ ಹೋಗೋಣ ಅಂತ ಹೋಗಿದ್ವಿ. ಕೊರೊನಾ ಅಂತ ಮನೇಲೇ ಇದ್ದು ಐದು ತಿಂಗಳಾಗ್ತಾ ಬಂದಿದೆ. ಎಲ್ಲಾದ್ರೂ ಹೋಗೋಣ ಅನಿಸಿದಾಗ ನೆನಪಾಗಿದ್ದು ಪ್ರಕೃತಿ ಮಡಿಲಿನ ಈ ತಾಣ. ಲಾಕ್‌ ಡೌನ್‌ನ ಮುಂಚೆಯೆಲ್ಲಾ ಈ ತಾಣಕ್ಕೆ ಯಾವಾಗ ಹೋದ್ರೂ ಹತ್ತಿಪ್ಪತ್ತು ಜನರಿಗಿಂತ ಹೆಚ್ಚು ಜನರಿರ್ತಿರ್ಲಿಲ್ಲ.

Advertisement

ಆದರೆ ಅವತ್ತು ನೋಡಿದರೆ ಹತ್ತೂವರೆ ಹೊತ್ತಿಗೇ ಮೈಲುದ್ದದ ಕಾರುಗಳ ಸಾಲು. ಬೈಕುಗಳೇನು, ಜನರೇನು, ಚಾ, ಕಾಫಿ ಮಾರೋ ಅಂಗಡಿಗಳೇನು.. ಅಬ್ಟಾ, ಕೆಲ ವರ್ಷಗಳ ಹಿಂದೆ ನೋಡಿದ್ದ ಕವಲೇದುರ್ಗ ಇದೇನಾ ಅನಿಸಿಬಿಡ್ತು.

ಅಲ್ಲೇ ಬಂದವರ ಹೆಸರು, ಮೊಬೈಲ್‌ ನಂಬರ್‌ ಬರೆದುಕೊಳ್ತಿದ್ದ ಕಾವಲುಗಾರರನ್ನ ಎಷ್ಟು ಜನ ಬಂದಿದ್ದಾರೆ ಅಂತ ಕೇಳಿದ್ರೆ ಲೆಕ್ಕ ಏಳ್ನೂರೈವತ್ತು ದಾಟಿತ್ತು. ಅದರ ಹಿಂದಿನ ವಾರ ಸಾವಿರ ದಾಟಿತ್ತಂತೆ ! ಇಷ್ಟು ದಿನ ಒಳಗೆ ಕೂಡಿ ಹಾಕಿದ್ದ ಕೊರೊನಾ ಮೇಲೆ ಸೇಡು ತೀರಿಸಿಕೊಳ್ಳೋಕೆ, ಇವತ್ತೇ ಎಲ್ಲಾ ಟ್ರೆಕ್ಕಿಂಗು, ಟೂರು ಮಾಡಿ ಮುಗಿಸಿಬಿಡೋಣ ಅಂತಲೇ ಜನರೆಲ್ಲಾ ಹೊರಟಂಗಿತ್ತು!

ತಿರುಗಾಟ ಓಕೆ, ಹುಚ್ಚಾಟ ಯಾಕೆ? :  ಮನೇಲಿದ್ದು ಬೇಜಾರಾಗಿದೆ ಸರಿ. ಹೊರಗಡೆ ಎಲ್ಲಾದ್ರೂ ಹೋಗಿಬರೋಣ ಅನ್ನಿಸೋದೂ ಸರಿ. ಹಾಗಂತ ಇಷ್ಟು ದಿನ ಮಾಸ್ಕ್ ಹಾಕಾಗಿದೆ. ಇನ್ನೂ ಎಷ್ಟು ದಿನ ಮಾಸ್ಕ್ ಹಾಕೋದು ಅಂತ ಮಾಸ್ಕ್ ಬಿಸಾಕಿ ಎಲ್ಲೆಡೆ ಸುತ್ತೋದು ಸರೀನಾ? ಕೋವಿಡ್ ಕೇವಲ ಬೆಂಗಳೂರಂಥ ಮಹಾನಗರಗಳಲ್ಲಿರೋದು. ಚಿಕ್ಕಮಗಳೂರೋ, ಕೊಡಗೋ, ಮಲೆನಾಡಿಗೋ ಅದು ಬರಲ್ಲ ಅಂತ ಅಂದ್ಕೊಳ್ಳೋದು ಯಾಕೆ ? ಮಲೆನಾಡ ಮಡಿಲಲ್ಲಿರೋ ಜೋಗ ಜಲಪಾತಕ್ಕೆ ವಾರಾಂತ್ಯಕ್ಕೆ ಬಂದರೆ ಸಾವಿರದ ಮೇಲೆ ಜನ. ಮೂಲೆ ಮೂಲೆಯಲ್ಲಿರೋ , ಹಳ್ಳಿ ಮಧ್ಯದ ತಾಣಗಳಲ್ಲೂ ಜನವೋ ಜನ!

ಇನ್ನು ಬೆಂಗಳೂರು ಸುತ್ತಲ ನಂದಿ ಬೆಟ್ಟ, ಸಾವನದುರ್ಗಗಳ ಕತೆಯೆಂತೂ ಕೇಳ್ಳೋದೇ ಬೇಡ. ಎಂದೂ ಇಲ್ಲದಷ್ಟು ಜನರ ಗಿಜಿಗಿಜಿಯೀಗ. ಬಂದವರ್ಯಾರೂ ಮಾಸ್ಕ್ ಹಾಕ್ಕೊಂಡು ಚಾರಣ ಮಾಡೋಲ್ಲ. ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಪ್ರಕೃತಿಗೆ ಬಂದಿರೋದೇ ಫ್ರೆಶ್‌ ಏರ್‌ ಸವಿಯೋಕೆ ಗುರು, ಇಲ್ಲೂ ಮಾಸ್ಕ್ ಹಾಕ್ಕೋಬೇಕಾ ಅಂತ ಮಾಸ್ಕಿದ್ರೂ ಜೇಬಲ್ಲಿಟ್ಕೊಂಡು ಓಡಾಡೋ ಹುಚ್ಚಾಟ ಯಾಕೆ ? ಕೋವಿಡ್ ನೀವು ಟ್ರೆಕ್ಕಿಂಗಿಗೆ ಬಂದಿದೀರಾ , ಪ್ರವಾಸಿ ತಾಣಕ್ಕೆ ಬಂದಿದ್ದೀರಾ, ವಾರಾಂತ್ಯ ಇದು, ನಿಮಗೆ ಬರಬಾರದು ಅಂತ ಗೊತ್ತಾಗುತ್ತಾ ? ನೆನಪಿರಲಿ: ಈ ಪ್ರವಾಸಿ ತಾಣಗಳಲ್ಲಿ, ಹೆಚ್ಚು ಜನ ಸೇರುವಲ್ಲೇ ಜನರ ಅಜಾಗರೂಕತೆಯಿಂದ ಕೋವಿಡ್ ಹಬ್ಬೋದು !

Advertisement

ಕೊನೆಯೆಂದು ಈ ಗೋಳಿಗೆ? :  ಮುಂಚೆಯೆಲ್ಲಾ ವಾರಾಂತ್ಯವೆಂದರೆ ಎಲ್ಲಾದ್ರೂ ಹೋಗ್ತಿದ್ದೋರಿಗೆ, ತಿಂಗಳಿಗೊಂದಾದರೂ ಬೆಟ್ಟಗುಡ್ಡ ಅಲೆಯೋರಿಗೆ ಈಗ ಎಲ್ಲಿಗೂ ಹೋಗಬೇಡ, ಮನೇಲೇ ಇರು ಅಂದ್ರೆ ಕಷ್ಟವೇ. ಮುಂಚೆಯಾದ್ರೂ ಲಾಕ್‌ ಡೌನಿತ್ತು. ಈಗ ಎಲ್ಲ ಓಪನ್ನಾಗಿದ್ಯಲ್ಲ. ಈಗೇನು ಅಂತೀರಾ ? ಈಗ ಓಪನ್ನಾಗಿದೆ ಅಂತ ಎಲ್ಲರೂ ತಿರುಗ್ತಿರೋದ್ರಿಂದ ಮುಂಚೆಗಿಂತ ಹೆಚ್ಚಿನ ಅಪಾಯ ಈಗಿದೆ.

ಯುರೋಪಿನಲ್ಲಿ ಲಾಕ್‌ ಡೌನ್‌ ತೆಗೆದ ಮೇಲೆ ಅಲ್ಲಿನ ಕಡಲ ಕಿನಾರೆಯಲ್ಲಿ ಹುಚ್ಚೆದ್ದು ಸೇರಿದ ಜನರಿಂದ ಕೋವಿಡ್ ಎರಡನೇ ಅಲೆ ಶುರುವಾಗಿತ್ತು. ಅಮೇರಿಕಾದಲ್ಲಿ ತೆರೆದ ಶಾಲೆಗಳಿಂದ, ಹೆಚ್ಚೆಚ್ಚು ಜನ ಸೇರೋ ಸ್ಥಳಗಳಿಂದ

ಕೋವಿಡ್ ಭೀತಿ ಹೆಚ್ಚಾಗಿತ್ತು. ಈಗ ಕೋವಿಡ್ ಪೀಡಿತರ ಸಂಖ್ಯೆ ಜನಸಂಖ್ಯೆಯ ಎಂಟು ಪ್ರತಿಶತ ಮಾತ್ರ ಅಂತ ಎಲ್ಲೆಡೆ ತಿರುಗೋ ಮೊದಲು ಎಚ್ಚರಿಕೆ ವಹಿಸದಿದ್ರೆ ಈ ಸಂಭ್ರಮವೇ ಸಾವ ದಾರಿಯಾಗಿ ಪರಿವರ್ತನೆಯಾಗಬಹುದು. ಮುಂದಿನ ತಿಂಗಳುಗಳಲ್ಲಿ ಅಲ್ಲವೆಂದರೂ ಮುಂದಿನ ವರ್ಷವಾದರೂ ಈ ಕೋವಿಡ್ ಮಾರಿ ಹಂತಹಂತವಾಗಿ ತೊಲಗಬಹುದು. ಆದರೆ ನಾಳೆಯೇ ಕೊನೆಯ ದಿನ ಅನ್ನೋ ರೀತಿ ಈ ರಿವೆಂಜ್‌ ಟೂರ್‌, ರಿವೆಂಜ್‌ ಟ್ರೆಕ್ಕಿಂಗ್‌ ಮಾಡೋದ್ರಿಂದ ನಮ್ಮ ಕೊನೆ ನಿಜವಾಗಲೂ ಹತ್ತಿರ ಬರಬಹುದು !

ದಿನವಿಡೀ ಮನೆಯಲ್ಲಿ ಇದ್ದುಕೊಂಡು ಬೋರ್‌ ಆಗಿಹೋಗಿದೆ ಅನ್ನುವವರಿಗೆ ಒಂದು ಕಿವಿಮಾತು. ಹೇಗಿದ್ರೂ ಈಗ ಬಿಡುವು ಸಿಕ್ಕಿದೆ ಆಲ್ವಾ? ಅದರಲ್ಲಿ ನಿಮ್ಮ ಹಳೆಯ ಹವ್ಯಾಸಗಳಿಗೆ ಸ್ವಲ್ಪ ಸಮಯ ಕೊಡಿ. ಓದಬೇಕೆಂದು ತಂದಿಟ್ಟುಕೊಂಡಿದ್ದ ಪುಸ್ತಕ, ಕಲಿಯಬೇಕೆಂದು ತಂದಿಟ್ಟುಕೊಂಡಿದ್ದ ಪಿಯಾನೋ ಪೆಟ್ಟಿಗೆ ಮೇಲೆ ಎಷ್ಟು ಧೂಳು ಕೂತಿದೆ ನೋಡಿ!

ವಾರಾಂತ್ಯದಲ್ಲಿ ನಿಮ್ಮ ಸಂಗಾತಿಗೋ, ಮಕ್ಕಳಿಗೋ, ಪೋಷಕರಿಗೋ ಒಂದಿಷ್ಟು ಸಮಯವಿತ್ತರೆ, ಹರಟಿದರೆ, ಅವರನ್ನು ಎಲ್ಲಾದರೂ ಹತ್ತಿರದ ಜಾಗಕ್ಕೆ ಕರೆದುಕೊಂಡು ಹೋಗಿ ಬಂದರೆ ಅವರ ಮುಖದಲ್ಲಿ ಕಾಣೋ ನಗುವಿನಷ್ಟು ಖುಷಿ ನಿಮಗೆ ಈ ರಿವೆಂಜ್‌ ಟ್ರೆಕ್ಕಿಂಗೂ, ಅಲ್ಲಿನ ಗಿಜಿಗಿಜಿ, ಗೊಂದಲಗಳಿಗಿಂತ ಎಷ್ಟೋ ಮೇಲೆನಿಸದಿದ್ದರೆ ಹೇಳಿ. ಮುಗಿಸೋ ಮುನ್ನ: ಎಲ್ಲಾದರೂ ಇರಿ, ಹೇಗಾದರೂ ಇರಿ. ಈ ರಿವೆಂಜ್, ಗಿವೆಂಜ್‌ ಅನ್ನೋದನ್ನ ಬಿಟ್ಟು ಮನೆಯವರೊಂದಿಗೆ ಸುರಕ್ಷಿತವಾಗಿರಿ.

ಏನೇನು ಮಾಡಬಹುದು? :  ಕೋವಿಡ್ ಅಂತ ಮನೆಯಲ್ಲೇ ಇರಿ ಎಂದಲ್ಲ. ಎಲ್ಲಾದರೂ ಹೋಗೋದಿದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಉಳಿಸಿಕೊಂಡು, ಸ್ಯಾನಿಟೈಸರ್‌ಗಳ ಬಳಕೆಯೊಂದಿಗೆ ಖಂಡಿತಾ ಹೋಗಿ ಬರಬಹುದು. ಆದರೆ ಅದು ಅತೀ ಅಗತ್ಯವಿದ್ದರೆ ಮಾತ್ರ. ಇಲ್ಲವೆಂದರೆ ಮನೆಯ ಹತ್ತಿರದ ಹೆಚ್ಚು ಜನರಿರದ ಯಾವುದೋ ಉದ್ಯಾನಕ್ಕೆ ಹೋಗಿ ಬನ್ನಿ, ಮನೆಯವರೊಂದಿಗೆ ಲಘು ವಾಕ್‌ ಹೋಗಿ ಬನ್ನಿ. ಎಂದೂ ಮಾತನಾಡದ ಗೆಳೆಯರೊಂದಿಗೆ ವಿಡಿಯೋ ಕಾಲ್‌ ಮಾಡಿ ಮಾತನಾಡಿ…

 

– ಪ್ರಶಸ್ತಿ ಪಿ. ಸಾಗರ

Advertisement

Udayavani is now on Telegram. Click here to join our channel and stay updated with the latest news.

Next