Advertisement

ಸಾಲುಮರದ ತಿಮ್ಮಕ್ಕ  ಹೆಸರಿನಲ್ಲಿ  ಟ್ರೀ ಪಾರ್ಕ್‌: ರೈ

08:17 AM Jul 15, 2017 | |

ಮಂಗಳೂರು: ರಾಜ್ಯದ ಅರಣ್ಯ ಸಂಪತ್ತನ್ನು ವೃದ್ಧಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಟ್ರೀ ಪಾರ್ಕ್‌ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಶುಕ್ರವಾರ ನಗರದ ಪುರಭವನದಲ್ಲಿ ಆಶ್ರಯದಲ್ಲಿ ನಡೆದ ನೀರಿಗಾಗಿ ಅರಣ್ಯ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆ ಹೆಚ್ಚಾದಂತೆ ಅರಣ್ಯದ ಪ್ರಮಾಣ ಕಡಿಮೆ ಯಾಗುತ್ತಿದೆ. ನಿಯಮದ ಪ್ರಕಾರ ಭೂ ಪ್ರದೇಶವೊಂದರ ಶೇ. 33ರಷ್ಟು ಭಾಗದಲ್ಲಿ ಅರಣ್ಯವಿರಬೇಕಿತ್ತು. ರಾಜ್ಯದಲ್ಲಿ ಅಂಕಿ-ಅಂಶಗಳ ಪ್ರಕಾರ ಪ್ರಸ್ತುತ ಶೇ. 22 ಮಾತ್ರ ಅರಣ್ಯವಿದೆ. ಡೆಹ್ರಾಡೂನ್‌ ಸಂಶೋಧನಾ ಸಂಸ್ಥೆಯ ಪ್ರಕಾರ ರಾಜ್ಯದಲ್ಲಿ 28,900 ಹೆಕ್ಟೇರ್‌ ಅರಣ್ಯ ಪ್ರದೇಶ ಹೆಚ್ಚಿದೆ ಎನ್ನುವುದು ಸಮಾಧಾನಕರ ವಿಚಾರ. ರಾಜ್ಯದ ಕಂಪೆನಿಗಳ ಸಿಎಸ್‌ಆರ್‌ ನಿಧಿಯಲ್ಲಿ ಶೇ. 2ರಷ್ಟು ಭಾಗವನ್ನು ಪರಿಸರ ಪೂರಕ ಕಾರ್ಯಕ್ರಮಗಳಿಗೆ ಉಪಯೋಗಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಸಂಜಯ್‌ ಎಸ್‌. ಬಿಜೂರು ಪ್ರಸ್ತಾವನೆಗೈದು, ದ.ಕ. ಜಿಲ್ಲೆ ಯಲ್ಲಿ ಹೆಚ್ಚಿನ ಮಳೆಯಾಗಲು ಇಲ್ಲಿನ ಅರಣ್ಯ ಪ್ರದೇಶ ಗಳೇ ಕಾರಣವಾಗಿದ್ದರೂ, ಪ್ರಸ್ತುತ ದಿನಗಳಲ್ಲಿ ಶೇ. 18ರಷ್ಟು ಮಳೆ ಕಡಿಮೆಯಾಗಿದೆ. ಗಿಡಗಳನ್ನು ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುವ ಪ್ರೋತ್ಸಾಹ ಧನವನ್ನು 45 ರೂ.ನಿಂದ 100 ರೂ.ಗಳಿಗೆ ಹೆಚ್ಚಿಸಲಾಗಿದೆ. ಜಿಲ್ಲೆಯ 600ಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.

ಶಾಸಕ ಜೆ.ಆರ್‌. ಲೋಬೊ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಬಿ.ಎ. ಕುಮಾರ್‌ ಹೆಗ್ಡೆ ಉಪನ್ಯಾಸ ನೀಡಿದರು. ಹಿರಿಯ ಕವಿ ಡಾ| ಕೆ.ಎಸ್‌. ನಿಸಾರ್‌ ಅಹಮ್ಮದ್‌, ಚಿತ್ರನಟ ನವೀನ್‌ ಡಿ. ಪಡೀಲ್‌ ಅವರನ್ನು ಗೌರವಿಸಲಾಯಿತು. ಅರಣ್ಯ ಸಂರಕ್ಷಣೆಗೆ ದುಡಿದ 6 ಮಂದಿಗೆ ಅರಣ್ಯ ಮಿತ್ರ ಪ್ರಶಸ್ತಿ ನೀಡಲಾಯಿತು. ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಸಮ್ಮಾನಿಸಲಾಯಿತು. 

ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಎಸ್‌.ಚಂದ್ರಶೇಖರ್‌, ಶಾಸಕ ಮೊದಿನ್‌ ಬಾವಾ, ಮೇಯರ್‌ ಕವಿತಾ ಸನಿಲ್‌, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಎಚ್‌. ಖಾದರ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್‌ ಎಲ್‌. ರಾಡ್ರಿಗಸ್‌, ಗೌರವ ವನ್ಯಜೀವಿ ಪರಿಪಾಲಕ ಕಿರಣ್‌ ಬುಡ್ಲೆಗುತ್ತು, ವಿವಿಧ ಇಲಾಖಾಧಿಕಾರಿಗಳಾದ ಕಿಶನ್‌ ಸಿಂಗ್‌ ಸುಗಾರ, ಅನೂರ್‌ ರೆಡ್ಡಿ ವಿ, ನಾಗರಾಜ್‌, ಅನಿತಾ ಎಸ್‌. ಅರೆಕಲ್‌, ಜಯನರಸಿಂಹರಾಜ್‌, ಪ್ರಮುಖರಾದ ಮಮತಾ ಗಟ್ಟಿ, ಸಾಹುಲ್‌ ಹಮೀದ್‌, ಚಂದ್ರಹಾಸ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Advertisement

ಅರಣ್ಯ ಸಂಪತ್ತು ನಾಶ: ಆರೋಪ
ಕಾರ್ಯಕ್ರಮದ ಮಧ್ಯದಲ್ಲಿ ಎದ್ದು ನಿಂತ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯ ದರ್ಶಿ ಶಶಿಧರ ಶೆಟ್ಟಿ ಅವರು, ಎತ್ತಿನಹೊಳೆ ಯೋಜನೆ ಮತ್ತು ವಿವಿಧ ರಸ್ತೆ ಯೋಜನೆಗಳಿಗೆ ಅರಣ್ಯ ಸಂಪತ್ತು ನಾಶ ಮಾಡ ಲಾಗುತ್ತಿದೆ. ಪಶ್ಚಿಮ ಘಟ್ಟದ ಹಾನಿ ಯನ್ನು ತಡೆಯಬೇಕು ಎಂದು ತಿಳಿಸಿ ಸಚಿವರಿಗೆ ಮನವಿ ನೀಡಿದರು. ಎತ್ತಿನ ಹೊಳೆ ಯೋಜನೆ ಕಾನೂನು ರೀತಿ ಯಲ್ಲಿ ನಡೆ ಯುತ್ತಿದೆ. ಇದಕ್ಕೆ ಎಲ್ಲರೂ ಅನುಮತಿ ನೀಡಿ ದ್ದಾರೆ. ಯಾವುದೇ ಕಾರ್ಯಕ್ಕೂ ಕಾನೂನು ಪ್ರಕಾರವೇ ಮರ ಕಡಿಯ ಲಾಗು ತ್ತಿದೆ. ಪಶ್ಚಿಮ ವಾಹಿನಿ ಯೋಜನೆಗೆ ಇನ್ನೂ ಹೆಚ್ಚಿನ ಅನು ದಾನ ನೀಡ ಲಾಗುವುದು ಎಂದು ಸಚಿವರು ಪ್ರತಿಕ್ರಿಯಿಸಿದರು. 

ತಿಮ್ಮಕ್ಕನಿಗೆ ಗೌರವಾರ್ಪಣೆ
ಸಮಾರಂಭದಲ್ಲಿ ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ಒಬ್ಬರಾಗಿರುವ, 106 ವರ್ಷದ ಡಾ| ಸಾಲುಮರದ ತಿಮ್ಮಕ್ಕ ಅವರನ್ನು ಗೌರವಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next