Advertisement

ಕೇರಳದಲ್ಲೊಬ್ಬ ವೃಕ್ಷ ವೈದ್ಯ

02:59 AM Jun 08, 2020 | Hari Prasad |

ವೈದ್ಯರಲ್ಲಿ ವಿವಿಧ ಸ್ಪೆಶಲಿಸ್ಟ್‌ಗಳನ್ನು ಕೇಳಿದ್ದೇವೆ. ಪಶುವೈದ್ಯರೂ ಗೊತ್ತು. ಆದರೆ ಇದೇನು ವೃಕ್ಷ ವೈದ್ಯ ಎಂದು ಆಶ್ಚರ್ಯವಾಗಬಹುದು.

Advertisement

ಹೌದು ಕೇರಳದಲ್ಲಿ ಇಂತಹ ವಿಶೇಷ, ಅಪರೂಪದ ‘ವೈದ್ಯ’ ಕಾಣ ಸಿಗುತ್ತಾರೆ. ಮರಗಳ ತೊಂದರೆ ಅರ್ಥ ಮಾಡಿಕೊಂಡು ಅದಕ್ಕೆ ಚಿಕಿತ್ಸೆ ಕೊಡುವ ಶಿಕ್ಷಕ ಕೆ.ಬಿನು ‘ಮರಗಳ ವೈದ್ಯ’ ಎಂದೇ ಜನಪ್ರಿಯ.

ಯಾವುದಾದರೂ ಮರ ರೋಗ ಬಾಧಿಸಿ ಸಾಯುವ ಸ್ಥಿತಿಯಲ್ಲಿದ್ದರೆ ಅದನ್ನು ಕಡಿಯುವ ಮುನ್ನ ಒಂದು ಕರೆ ಮಾಡಿದರೆ ಸಾಕು ಧಾವಿಸುವ ಬಿನು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.

ಕೋಟಯಂ ಜಿಲ್ಲೆಯ ವಾಳೂರ್‌ ಉಲ್ಲಾಯಂ ಯು.ಪಿ. ಶಾಲೆ ಶಿಕ್ಷಕ ಬಿನು ಕೇರಳ ಸರಕಾರದ ಅರಣ್ಯ ಮತ್ತು ವನ್ಯಜೀವಿ ಮಂಡಳಿ ಸದಸ್ಯನೂ ಹೌದು. 50 ವರ್ಷದ ಬಿನು ಸುಮಾರು 25 ವರ್ಷಗಳಿಂದ ಪ್ರಕೃತಿ ಸೇವೆ, ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಮರವೇ ಒಡನಾಡಿ
ಮರಗಳೇ ಬಿನುವಿನ ಸರ್ವಸ್ವ. ಮಕ್ಕಳ ಹಾಗೆ ಗಿಡಗಳನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡುತ್ತಾರೆ. ರೋಗ ಬಾಧಿಸಿದ ಮರ, ರೆಂಬೆ ಮುರಿದ, ಬೇರಿನ ತೊಂದರೆಗೆ ಸಿಲುಕಿದ, ಸಿಡಿಲು ಬಡಿದ, ಬೆಂಕಿಗೆ ಆಹುತಿಯಾದ ಮರ-ಇವುಗಳಿಗೆಲ್ಲ ಬಿನು ಪ್ರತ್ಯೇಕ ಚಿಕಿತ್ಸೆ ನೀಡುತ್ತಾರೆ. ಕೇರಳ ಮಾತ್ರವಲ್ಲ ಇತರ ರಾಜ್ಯಗಳ ಮರಗಳಿಗೆ ಚಿಕಿತ್ಸೆ ನೀಡಿ ಅವರು ರೋಗ ಗುಣ ಪಡಿಸಿದ್ದಾರೆ. ಹತ್ತು ಪುತ್ರರಿಗೆ ಒಂದು ಮರ ಸಮ ಎನ್ನುವ ಹಿರಿಯರ ಮಾತಿಗೆ ಸಹಮತ ವ್ಯಕ್ತಪಡಿಸುತ್ತಾರೆ ಬಿನು.

Advertisement

ವೃಕ್ಷ ಚಿಕಿತ್ಸೆಗೆ ಬಂದ ಬಗೆ
ಹಲವು ವರ್ಷಗಳಿಂದ ಮರಗಳ ಒಡನಾಡಿಯಾಗಿದ್ದ ಬಿನು ವೃಕ್ಷ ವೈದ್ಯನಾದುದು ಆಕಸ್ಮಿಕವಾಗಿ. ಆಲುವಾದಲ್ಲಿ ಮರವೊಂದು ಬೆಂಕಿಗೆ ಆಹುತಿಯಾಗಿ ಅರೆ ಜೀವವಾಗಿದ್ದು ಬಿನು ಗಮನಕ್ಕೆ ಬಂದಿತ್ತು. ಪರಿಸರ ಪ್ರೇಮಿ ಡಾ|ಎಸ್‌.ಸೀತಾರಾಮನ್‌ ಜತೆ ಸೇರಿ ಬಿನು ಆ ಮರಕ್ಕೆ ಔಷಧ ನೀಡಲು ಮುಂದಾದರು. ಮರದ ಚಿಕಿತ್ಸೆಗಾಗಿ ಅಂದಿನಿಂದ ಪ್ರಯೋಗದಲ್ಲಿ ತೊಡಗಿದರು. ಅನೇಕ ದಿನಗಳ ಪರಿಶ್ರಮದ ಫ‌ಲವಾಗಿ ಔಷಧ ಪರಿಣಾಮ ಬೀರತೊಡಗಿತು.

ಕ್ರಮೇಣ ಆ ಮರ ಚೇತರಿಸಿಕೊಳ್ಳತೊಡಗಿತು. ಹೀಗೆ ಅಪರೂಪದ ವೃಕ್ಷ ವೈದ್ಯನೊಬ್ಬನ ಉದಯವಾಯಿತು. ಅನೇಕ ವರ್ಷಗಳ ಹಿಂದೆ ಕೇರಳದಲ್ಲಿ ಪ್ರಚಲಿತದಲ್ಲಿದ್ದು, ಕ್ರಮೇಣ ಮರೆಯಾಗಿದ್ದ ವೃಕ್ಷಾಯುರ್ವೇದ ಚಿಕಿತ್ಸಾ ರಿತಿಯನ್ನು ಬಿನು ಮತ್ತೆ ಮುನ್ನೆಲೆಗೆ ತಂದರು. ಬಿನು ಅವರ ಕುರಿತು 30 ನಿಮಿಷಗಳ “ವೃಕ್ಷವೈದ್ಯನ್‌’ ಎನ್ನುವ ಡಾಕ್ಯುಮೆಂಟರಿಯೂ ತಯಾರಾಗಿದೆ.

ಔಷಧಗಳು
ಮನುಷ್ಯ, ಪ್ರಾಣಿ-ಪಕ್ಷಿಗಳಿಗೆ ಚಿಕಿತ್ಸೆ ನೀಡುವಂತೆ ಅನೇಕ ವರ್ಷಗಳ ಹಿಂದೆ ಕೇರಳದಲ್ಲಿ ಮರಗಳಿಗೂ ಚಿಕಿತ್ಸೆ ಇತ್ತು. ಬಯಲಿನಿಂದ ತೆಗೆದ ಕೆಸರು, ಭತ್ತದ ಗದ್ದೆಗಳ ಜೇಡಿ ಮಣ್ಣು, ಊರ ದನದ ಸೆಗಣಿ, ಹಾಲು, ತುಪ್ಪ, ಜೇನು, ಬಾಳೆಹಣ್ಣು, ಎಣ್ಣೆ, ತಾವರೆ ಸಮೂಲ ಮುಂತಾದ ಪ್ರಾಚೀನ ಕಾಲದಿಂದಲೂ ವೃಕ್ಷಾಯುರ್ವೇದ ಚಿಕಿತ್ಸೆ ರೀತಿಯಲ್ಲಿ ಬಳಸುವ 12ಕ್ಕಿಂತ ಅಧಿಕ ಔಷಧೀಯ ವಸ್ತುಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಬಿನು.

ಚಿಕಿತ್ಸಾ ರೀತಿ
ಮನುಷ್ಯನಿಗೆ ಚಿಕಿತ್ಸೆ ನೀಡುವ ರೀತಿಯನ್ನೇ ಮರಗಳ ವಿಷಯದಲ್ಲೂ ಬಳಸಲಾಗುತ್ತದೆ. ಔಷಧ ವಸ್ತುಗಳನ್ನು ಜಜ್ಜಿ ಮರದ ಗಾಯವಾದ ಭಾಗಕ್ಕೆ ಹಚ್ಚುತ್ತಾರೆ ಬಿನು. ಅನಂತರ ಈ ಭಾಗವನ್ನು ಬಟ್ಟೆಯಿಂದ ಸುತ್ತಲಾಗುತ್ತದೆ. ಇನ್ನೊಂದು ವಿಶೇಷ ಎಂದರೆ ಮರದಲ್ಲಿ ವಾಸಿಸುವ ಇರುವೆ ಸಹಿತ ಚಿಕ್ಕ ಜàವಿಗಳಿಗೆ ಆಹಾರ ನೀಡಿದ ಬಳಿಕವೇ ಚಿಕಿತ್ಸೆ ಆರಂಭಿಸಲಾಗುತ್ತದೆ. ಸುಮಾರು 6 ತಿಂಗಳಲ್ಲಿ ಮರ ಚೇತರಿಸಲು ಆರಂಭಿಸುತ್ತದೆ ಎನ್ನುವುದು ಬಿನು ಅವರ ಅನುಭವದ ಮಾತು.

– ಆರ್‌.ಬಿ. ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next