Advertisement

ಹೊಟ್ಟೆ ಹೊರೆಯಲು ಚರಂಡಿಗಳಲ್ಲಿ ನಿಧಿ ಶೋಧನೆ

09:46 PM Jul 22, 2019 | Lakshmi GovindaRaj |

ಮೈಸೂರು: ಹಸಿದವರಿಗೆ ಅನ್ನ ನೀಡುವ ಸಲುವಾಗಿಯೇ ಅನ್ನಭಾಗ್ಯದಂಥ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ನಮ್ಮನ್ನಾಳುವವರು ಬೆನ್ನು ತಟ್ಟಿಕೊಂಡರೆ, ಇಂದಿಗೂ ಒಂದು ವರ್ಗ ಮಲ-ಮೂತ್ರ ತುಂಬಿ ಹರಿಯುವ ಚರಂಡಿ ಶೋಧಿಸಿ ಹೊಟ್ಟೆ ಹೊರೆಯುತ್ತಿರುವ ಸಂಗತಿಯನ್ನು ಮೈಸೂರಿನಲ್ಲಿ ನಡೆದ ಘಟನಾವಳಿ ಅನಾವರಣಗೊಳಿಸಿದೆ.

Advertisement

ಸತತ ಎರಡು ಬಾರಿಗೆ ದೇಶದ ನಂಬರ್‌ ಒನ್‌ ಸ್ವಚ್ಛ ನಗರಿ ಎಂಬ ಪ್ರಶಸ್ತಿಗಳಿಸಿದ ಹಿರಿಮೆ ಹೊಂದಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮ್ಯಾನ್‌ಹೋಲ್‌ಗ‌ಳನ್ನು ಪೌರಕಾರ್ಮಿಕರಿಂದ ಸ್ವಚ್ಛಗೊಳಿಸಲಾಗುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಸ್ವತಃ ಮೈಸೂರು ಮಹಾ ನಗರಪಾಲಿಕೆ, ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಚರಂಡಿಗಳಲ್ಲಿ ನಿಧಿ ಶೋಧನೆ ಎಂಬ ಹೊಸದೊಂದು ವಿಚಾರವನ್ನು ಬಯಲು ಮಾಡಿದೆ.

ಸಾಮಾನ್ಯವಾಗಿ ಮುಂಜಾನೆಯ ವೇಳೆ ಹೆಂಗಸರು, ಮಕ್ಕಳೊಂದಿಗೆ ಕೆಲವರು ಚಿನ್ನಾಭರಣ ಅಂಗಡಿಗಳ ಮುಂಭಾಗ, ಅಕ್ಕಸಾಲಿಗರ ಅಂಗಡಿ ಮುಂಭಾಗ, ಊರಿನ ಕೊಳಚೆಯನ್ನು ಹೊತ್ತು ರಭಸದಿಂದ ಹರಿಯುತ್ತಿರುವ ತೆರೆದ ಚರಂಡಿಯನ್ನು ಅಡ್ಡಗಟ್ಟಿ ಬಾಣಲೆಯಲ್ಲಿ ನಿಧಿ ಶೋಧಿಸುವ, ಚಿನ್ನಾಭರಣ, ಅಕ್ಕಸಾಲಿಗರ ಅಂಗಡಿ ಬಾಗಿಲು ತೆರೆಯುವ ಮುನ್ನ ಅವರ ಅಂಗಡಿ ಬಾಗಿಲುಗಳನ್ನು ಚಿಕ್ಕ ಪೊರಕೆಯಲ್ಲಿ ಲೋಹದ ಒಂದು ಸಣ್ಣ ತುಣಕನ್ನೂ ಬಿಡದಂತೆ ಮಣ್ಣಿನ ಸಮೇತ ಗುಡಿಸಿಕೊಂಡು ಹೋಗುವವರನ್ನು ನಗರಗಳಲ್ಲಿ ಕಾಣಬಹುದು.

ನಗರ ಜೀವನದ ಒತ್ತಡದ ಬದುಕಿನಲ್ಲಿ ಅವರೇಕೆ ಹೀಗೆ ಚರಂಡಿ ಶೋಧಿಸುತ್ತಿದ್ದಾರೆ ಎಂದು ಕೇಳಿ ತಿಳಿದುಕೊಳ್ಳುವ ಧಾವಂತ ಯಾರಲ್ಲೂ ಇಲ್ಲ. ಆದರೆ, ಮಲ-ಮೂತ್ರ ತುಂಬಿ ಹರಿಯುವ ಚರಂಡಿ ಶೋಧಿಸಿಯೇ ಒಂದು ವರ್ಗ ಹೊಟ್ಟೆ ಹೊರೆಯುತ್ತಿದೆ ಎಂಬುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ.

ಚರಂಡಿ ಸೋಸುವಿಕೆ, ಚಿನ್ನಾಭರಣ -ಅಕ್ಕಸಾಲಿಗನ ಅಂಗಡಿ ಮುಂದಿನ ದೂಳನ್ನು ಕೊಂಡೊಯ್ಯುವ ಈ ಜನರು ಆ ಮಣ್ಣನ್ನು ಶೋಧಿಸಿ ಅದರಲ್ಲೇನಾದರೂ ಚಿನ್ನದ ತುಣುಕು ಸಿಕ್ಕರೆ ಅದನ್ನು ಮಾರಿ ಹೊಟ್ಟೆ ಹೊರೆಯುತ್ತಿದೆ. ಕೆಲ ಸಮಯ ಕೈತಪ್ಪಿ ಬಾತ್‌ರೂಂ ಗುಂಡಿಗೆ ಬೀಳುವ ಹಣವೂ ಸಿಗುತ್ತದೆ. ಇದು ಇಷ್ಟಕ್ಕೇ ನಿಂತಿಲ್ಲ, ನಿಧಿ ಶೋಧನೆಗಾಗಿ ಈ ಜನರು ಜೀವದ ಹಂಗು ತೊರೆದು ಮ್ಯಾನ್‌ಹೋಲ್‌ಗ‌ೂ ಇಳಿಯುತ್ತಿರುವ ಅನುಮಾನ, ಪಾಲಿಕೆ ಕೃಷ್ಣರಾಜ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಿಂದ ವ್ಯಕ್ತವಾಗುತ್ತಿದೆ.

Advertisement

ನಗರದ ರಾಮಾನುಜ ರಸ್ತೆಗೆ ಹೊಂದಿಕೊಂಡಂತಿರುವ ಬಸವೇಶ್ವರ ರಸ್ತೆಯ 15ನೇ ಕ್ರಾಸ್‌ನಲ್ಲಿ ಭಾನುವಾರ, ಮೂವರು ವ್ಯಕ್ತಿಗಳು ಮ್ಯಾನ್‌ಹೋಲ್‌ನಲ್ಲಿ ಇಳಿದು ಒಳಚರಂಡಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಹೊರ ತೆಗೆಯುತ್ತಿದ್ದುದನ್ನು ಗಮನಿಸಿದ ಕಾನೂನು ವಿದ್ಯಾರ್ಥಿ ಎನ್‌.ಪುನೀತ್‌ ಎಂಬುವರು ಅವರನ್ನು ಮ್ಯಾನ್‌ಹೋಲ್‌ಗೇಕೆ ಇಳಿದಿದ್ದೀರಿ ಎಂದು ಪ್ರಶ್ನಿಸಿದಾಗ ಉತ್ತರಿಸಲು ತಡಬಡಾಯಿಸಿದ್ದಾರೆ.

ಪಾಲಿಕೆ ಹೇಳುವುದೇನು?: ಜುಲೈ 21ರಂದು ಮೈಸೂರು ನಗರದ ಬಸವೇಶ್ವರ ರಸ್ತೆ 15ನೇ ಕ್ರಾಸ್‌ನಲ್ಲಿ ಮ್ಯಾನ್‌ಹೋಲ್‌ನಲ್ಲಿ ಇಳಿದಿದ್ದಾರೆ ಎಂದು ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿದ್ದು, ಈ ಸ್ಥಳದಲ್ಲಿ ಯಾವುದೇ ರೀತಿಯ ಮ್ಯಾನ್‌ಹೋಲ್‌ ಬ್ಲಾಕ್‌ ಆಗಿದೆ ಎಂದು ನಗರಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ದೂರು ದಾಖಲಾಗಿರುವುದಿಲ್ಲ.

ಈ ಸಂಬಂಧ ವಾಹಿನಿಯಲ್ಲಿ ಪ್ರಸಾರವಾದ ದೃಶ್ಯದಲ್ಲಿ ಕಂಡುಬಂದ ವ್ಯಕ್ತಿಗಳು ನಗರಪಾಲಿಕೆ ಒಳಚರಂಡಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯಾಗಲಿ ಅಥವಾ ಗುತ್ತಿಗೆದಾರರಿಗೆ ಸೇರಿದ ಸಿಬ್ಬಂದಿಯಲ್ಲ. ಸ್ಥಳ ಪರಿಶೀಲನೆ ನಡೆಸಿದ ಸಮಯದಲ್ಲಿ ಈ ಸ್ಥಳದಲ್ಲಿನ ಮ್ಯಾನ್‌ಹೋಲ್‌ ಬ್ಲಾಕ್‌ ಆಗಿರುವುದಿಲ್ಲ ಮತ್ತು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ವಿಚಾರಿಸಲಾಗಿದ್ದು, ಯಾರೋ ಮೂವರು ವ್ಯಕ್ತಿಗಳು ಬಂದು ಮ್ಯಾನ್‌ಹೋಲ್‌ ತೆರೆದು ಒಳಗೆ ಇಳಿದಿದ್ದರು.

ಹತ್ತಿರ ಹೋಗಿ ವಿಚಾರಿಸಿದಾಗ ಚಿನ್ನ-ಬೆಳ್ಳಿ ಮತ್ತು ದುಡ್ಡನ್ನು ಹುಡುಕುತ್ತಿದ್ದೇವೆ ಎಂದು ಹೇಳಿದರು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಮೈಸೂರು ಮಹಾ ನಗರಪಾಲಿಕೆಯಿಂದ ಒಳಚರಂಡಿ ನಿರ್ವಹಣೆಗಾಗಿ ಅವಶ್ಯಕತೆ ಇರುವ ಸಾಕಷ್ಟು ಜೆಟ್ಟಿಂಗ್‌, ಡಿ-ಸಿಲ್ಟಿಂಗ್‌ ಹಾಗೂ ರಾಡಿಂಗ್‌ ಯಂತ್ರಗಳಿದ್ದು, ಯಂತ್ರೋಪಕರಣಗಳಿಂದ ಒಳಚರಂಡಿ ದೂರುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ಪೊಲೀಸ್‌ ಠಾಣೆಗೆ ಪಾಲಿಕೆ ದೂರು: ಮೈಸೂರು ಮಹಾ ನಗರ ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಮ್ಯಾನ್‌ಹೋಲ್‌ ಒಳಗೆ ಇಳಿದು ಕೆಲಸ ಮಾಡುವುದಿಲ್ಲ. ಅಪರಿಚಿತ ವ್ಯಕ್ತಿಗಳು ಕಾನೂನು ಬಾಹಿರವಾಗಿ ಮ್ಯಾನ್‌ಹೋಲ್‌ಗೆ ಇಳಿದಿರುವ ಕಾರಣ ಇವರುಗಳ ಮೇಲೆ ನಗರ ಪಾಲಿಕೆ ವತಿಯಿಂದ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next