Advertisement

Bus travel: ನಾಗರಿಕರಿಗೆ ನರಕ ಸದೃಶವಾದ ಸಾರಿಗೆ ಬಸ್‌ ಪ್ರಯಾಣ!

04:24 PM Nov 27, 2023 | Team Udayavani |

ಚನ್ನಪಟ್ಟಣ: ಮಹಿಳೆಯರಿಗೆ ಬಸ್‌ ಪ್ರಯಾಣ ದರವನ್ನು ಉಚಿತ ಮಾಡಿದ “ಶಕ್ತಿ’ ಯೋಜನೆ ಜಾರಿಯಾದಂದಿನಿಂದ ತಾಲೂಕಿನಲ್ಲಿ ಬಸ್‌ ಪ್ರಯಾಣ ಒಂದು ರೀತಿಯಲ್ಲಿ ಮಹಿಳೆಯರೊಂದಿಗೆ ಪುರುಷ ಪ್ರಯಾಣಿಕರು, ವಯೋವೃದ್ಧರು, ವಿದ್ಯಾರ್ಥಿಗಳಿಗೂ ನರಕ ಸದೃಶವಾಗಿ ಪರಿಣಮಿಸಿದೆ. ಶಕ್ತಿ ಯೋಜನೆಯಿಂದಾಗಿ ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ.

Advertisement

ಕಳೆದ ಐದು ತಿಂಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಮಾತ್ರವೇ ಏರಿಕೆಯಾಗಿಲ್ಲ. ಬಸ್‌ನಲ್ಲಿ ಪ್ರಯಾಣಿಸುವ ಪುರುಷರ ಸಂಖ್ಯೆಯಲ್ಲಿಯೂ ಏರಿಕೆ ಯಾಗಿದೆ. ಇದಕ್ಕೆ ಅನುಗುಣವಾಗಿ ದೊಡ್ಡ ಮೊತ್ತದ ಲಾಭವನ್ನೂ ಸರ್ಕಾರ ಗಳಿಸಿದೆ. ಹಾಗಿದ್ದರೂ ಬಸ್‌ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗಿಲ್ಲ. ಇದು ಯೋಜನೆಯ ಶಕ್ತಿಯನ್ನೇ ಕುಂದಿಸುತ್ತಿದೆ.

ದಟ್ಟಣೆಗೆ ಕಾರಣಗಳೇನು?: ಮಹಿಳೆಯರಿಗೆ ಉಚಿತ ಟಿಕೆಟ್‌ ಜಾರಿಯಾದ ಮೇಲೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಶೇ.60ರಷ್ಟು ಮಹಿಳೆಯರು ಹೆಚ್ಚಾಗಿದ್ದರೆ, ಶೇ.40ರಷ್ಟು ಪುರುಷರು ಸೇರಿದ್ದಾರೆ. ಪುರುಷರೇ ಆಗಿರಲಿ, ಮಹಿಳೆಯೇ ಆಗಿರಲಿ, ವಿದ್ಯಾರ್ಥಿಗಳೇ ಆಗಿರಲಿ ಒಟ್ಟಿನಲ್ಲಿ ಬಸ್‌ ಅನ್ನು ಬಳಸುತ್ತಿರುವ ಜನರ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಬಹುದು.

ಪ್ರವಾಸಿ ತಾಣಗಳಿಗೆ ಭೇಟಿ: ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಕನಸಿಗೆ ಇತ್ತೀಚೆಗೆ ಹೆಚ್ಚಿನ “ಶಕ್ತಿ’ ಬಂದಿದೆ. ಕುಟುಂಬ ಸಮೇತ ಜನರು ಪ್ರಯಾಣ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪುರುಷರ ಬಸ್‌ ಪ್ರಯಾಣ ಪ್ರಮಾಣವೂ ಏರಿಕೆಯಾಗಿದೆ. ಜೊತೆಗೆ, ಮದುವೆ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳಿಗೆ ಜನರು ಬಸ್‌ ಮೂಲ ಕವೇ ಪ್ರಯಾಣ ಮಾಡುತ್ತಿದ್ದಾರೆ. ಒಂದೆರಡು ಕಿಲೋಮೀಟರ್‌ ದೂರಕ್ಕೆ ನಡೆದು ಕೊಂಡೇ ಸಾಗುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿ ಮಹಿಳೆಯರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಗಾರ್ಮೆಂಟ್‌ ಸಹಿತ ವಿವಿಧೆಡೆ ಕೆಲಸ ಮಾಡುವ ಮಹಿಳೆಯರು ದ್ವಿಚಕ್ರ ವಾಹನಗಳನ್ನು ಬಿಟ್ಟು ಬಸ್‌ಗಳಲ್ಲಿ ಸಂಚರಿಸುವ ಮೂಲಕ ಇಂಧನಕ್ಕೆ ಆಗುತ್ತಿದ್ದ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಬಸ್‌ಗಳ ಕೊರತೆ: ಬಸ್‌ನಲ್ಲಿ ಪ್ರಯಾಣ ಮಾಡುವ ಒಟ್ಟು ಪ್ರಯಾಣಿಕರ ಪ್ರಮಾಣ ಶೇ.30ರಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು. ನಿಜ. ಆದರೆ, ಈ ಹೆಚ್ಚಳಕ್ಕೆ ಅನುಗುಣವಾಗಿ ಬಸ್‌ ಲಭ್ಯತೆ ಇಲ್ಲ. ಈ ಏರಿಕೆಗೆ ಅನುಗುಣವಾಗಿ ಸುಮಾರು ಸಾವಿರಾರು ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ ಎಂದು ಅಧಿಕಾರಿಗಳೇ ಹೇಳುತ್ತಾರೆ.ಹೆಚ್ಚಿದ ಪ್ರಯಾ ಣಿಕರ ಸಂಖ್ಯೆಗೆ ತಕ್ಕಷ್ಟು ಬಸ್‌ಗಳನ್ನು ಓಡಿಸದೇ ಇರುವುದರಿಂದ ನಿತ್ಯ ಜಿಲ್ಲಾ, ತಾಲೂಕು ಕೇಂದ್ರ ಗಳಿಂದ ಗ್ರಾಮಗಳಿಗೆ ತೆರಳುವ ಸರ್ಕಾರಿ ಉದ್ಯೋ ಗಿಗಳು, ವಿದ್ಯಾರ್ಥಿಗಳಿಗೆ ಸೀಟು ಸಿಗದೇ ಸಂಕಷ್ಟಪಡ ಬೇಕಾದ ಪರಿಸ್ಥಿತಿ ಎದುರಾಗಿದೆ. ಮಾಸಿಕ ಬಸ್‌ ಪಾಸ್‌ ಹೊಂದಿದವರಿಗೂ ಸೀಟುಗಳು ಸಿಗುತ್ತಿಲ್ಲ.

Advertisement

ಜೇಬುಗಳ್ಳರಿಗೆ ಹಬ್ಬ: ಪ್ರಯಾಣಿಕರು ಹೆಚ್ಚಿದಂತೆಲ್ಲಾ ಬಸ್‌ ನಿಲ್ದಾಣಗಳಲ್ಲಿ ದಟ್ಟಣೆ ಹೆಚ್ಚುತ್ತದೆ. ಇದು ಜೇಬುಗಳ್ಳರು ತಮ್ಮ ಕೈಚಳಕ ತೋರಲು ವರದಾನವಾಗಿ ಪರಿಣಮಿಸಿದೆ.

ದಟ್ಟಣೆ ಹೆಚ್ಚಿದಂತೆ ಅಲ್ಲಿನ ಮೂಲಸೌರ್ಕಯದ ಕೊರತೆಯೂ ಹೆಚ್ಚುತ್ತದೆ. ಆದ್ದರಿಂದ, ಬಸ್‌ ನಿಲ್ದಾಣಗಳಲ್ಲಿ ಸಮಸ್ಯೆ ಗಳ ಸರಮಾಲೆಯೇ ನಿರ್ಮಾಣವಾಗಿದೆ. ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಎಲ್ಲವೂ ಅಸ್ತವ್ಯವಸ್ತವಾಗಿದೆ. ಬಸ್‌ ಹತ್ತುವಾಗ ಉಂಟಾಗುವ ಜನದಟ್ಟಣೆಯ ಲಾಭ ಪಡೆಯುವ ಕೆಲವರು ಜೇಬುಗಳ್ಳತನ ಮಾಡುತ್ತಿದ್ದಾರೆ. ಚಿನ್ನಾಭರಣ ಕಳ್ಳತನವೂ ನಡೆಯುತ್ತಿದೆ. ಎಷ್ಟೋ ಸಂದರ್ಭಗಳಲ್ಲಿ ಹಣ, ಸರ ಕಳೆದುಕೊಂಡರೂ ಪ್ರಯಾಣಿ ಕರು ಪೊಲೀಸರಿಗೆ ದೂರು ನೀಡುವ ಗೋಜಿಗೂ ಹೋಗುವುದಿಲ್ಲ. “ಊರು ಮುಟ್ಟಿದರೆ ಸಾಕು’ ಎನ್ನುವ ಸ್ಥಿತಿ ನಮ್ಮದು ಎನ್ನುತ್ತಾರೆ ಬಹುತೇಕ ಪ್ರಯಾಣಿಕರು.

ವಿದ್ಯಾರ್ಥಿಗಳಿಗೆ ಹೆಚ್ಚಿನ ಕಿರಿಕಿರಿ: ಶಕ್ತಿ ಯೋಜನೆ ಜಾರಿ ನಂತರ ಹೆಚ್ಚು ಕಿರಿಕಿರಿ ಅನುಭವಿಸುತ್ತಿರುವುದು ವಿದ್ಯಾರ್ಥಿ ಸಮೂಹ. ಬಹುತೇಕ ಎಲ್ಲ ಬಸ್‌ಗಳು ತುಂಬಿಯೇ ಬರುವುದರಿಂದ ಬಸ್‌ಗಳಿಗೆ ಹತ್ತಲು ಸಾಧ್ಯವಾಗುತ್ತಿಲ್ಲ. ನಿಗದಿತ ಸಮಯಕ್ಕೆ ಶಾಲಾ ಕಾಲೇಜಿಗೆ ಹೋಗದಿದ್ದರೆ ಕಷ್ಟ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪುಟ್‌ ಬೋರ್ಡ್‌ನಲ್ಲಿಯೇ ನಿಂತು ಪ್ರಯಾಣ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಚನ್ನಪಟ್ಟಣ ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ರಾಜಧಾನಿ ಬೆಂಗಳೂರು ಸೇರಿ ಬೇರೆ ಕಡೆಗಳಿಗೆ ಉದ್ಯೋಗಕ್ಕೆ ಹೋಗುವವರ ಪಾಡು ಯಾರು ಕೇಳದಂತಾಗಿದೆ.

ಸಮರ್ಪಕ ಸಾರಿಗೆಗಾಗಿ ಪ್ರತಿನಿತ್ಯ ಪ್ರತಿಭಟನೆ : ಶಕ್ತಿ ಯೋಜನೆ ಜಾರಿಗೂ ಮುನ್ನ ಇದ್ದ ಬಸ್‌ಗಳನ್ನೇ ಬಳಸಿ ನಿಭಾಯಿಸಲಾಗುತ್ತಿತ್ತು. ಆದರೆ, ಬೇಡಿಕೆ ಹೆಚ್ಚಿರುವ ಕಾರಣ ಮತ್ತಷ್ಟು ಬಸ್‌ಗಳಿಗೆ ಬೇಡಿಕೆ ಇದೆ. ಮದ್ದೂರು ಚನ್ನಪಟ್ಟಣ – ರಾಮನಗರ ಮಾರ್ಗ, ಚನ್ನಪಟ್ಟಣ – ರಾಮ ನಗರ- ಬೆಂಗಳೂರು ಮಾರ್ಗ, ಮಾಗಡಿ ಬೆಂಗ ಳೂರು, ಕನಕಪುರ – ಬೆಂಗಳೂರು ಹೀಗೆ ಎಲ್ಲ ಮಾರ್ಗಗಳಲ್ಲಿಯೂ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಗ್ರಾಮೀಣ ಭಾಗದಲ್ಲೂ ಬೇಡಿಕೆ ಇದ್ದು, ಸಮರ್ಪಕ ಸಾರಿಗೆ ಸೇವೆಗಾಗಿ ವಿದ್ಯಾರ್ಥಿ ಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಒಂದಿಲ್ಲೊಂದು ಮಾರ್ಗದಲ್ಲಿ ಪ್ರತಿನಿತ್ಯ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ 5 ವರ್ಷಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸ ಬಸ್‌ಗಳ ಪೂರೈಕೆ ಆಗಿಲ್ಲ. ಇತ್ತೀಚೆಗೆ ರಾಮನಗರ ವಿಭಾಗಕ್ಕೆ 5 ಹೊಸ ಬಸ್‌ಗಳನ್ನು ನೀಡಿಲಾಗಿದೆ. ಸುಮಾರು 500 ಹೊಸ ಬಸ್‌ ಗಳನ್ನು ಖರೀದಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಬಸ್‌ ಗಳು ಬಹುತೇಕ ಫೆಬ್ರವರಿಗೆ ಬರಲಿವೆ ಎನ್ನಲಾಗಿದೆ, ಇದರಲ್ಲಿ ಜಿಲ್ಲೆಗೆ ಸುಮಾರು 40 ಬಸ್‌ಗಳು ಸಿಗಲಿವೆ ಎನ್ನುವ ನಿರೀಕ್ಷೆ ಸಾರಿಗೆ ಅಧಿಕಾರಿಗಳದ್ದಾಗಿದೆ.

ರಾಮನಗರ ವಿಭಾಗ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ಮತ್ತು ಆನೇ ಕಲ್‌ ಸಾರಿಗೆ ಘಟಕಗಳು ಇವೆ. ಈ ಆರು ಘಟಕಗಳಲ್ಲಿ ಒಟ್ಟು 475 ಬಸ್‌ ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 426 ಮಾರ್ಗಗಳಲ್ಲಿ ಸಂಚರಿಸುತ್ತವೆ. ಆದರೆ, ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಪ್ರತಿ ತಾಲೂಕು ಕೇಂದ್ರಗಳಿಂದ ರಾಜಧಾನಿ ಬೆಂಗಳೂರಿಗೆ ಬಸ್‌ಗಳ ಬೇಡಿಕೆ ಹೆಚ್ಚಿದೆ. ಬಹುತೇಕ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳು ಇಲ್ಲದೆ, ಗಂಟೆಗಟ್ಟಲೇ ಕಾಯುವ ಸ್ಥಿತಿ ಪ್ರಯಾಣಿಕರದ್ದಾಗಿದೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. -ಜಗದೀಶ್‌,ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ, ರಾಮನಗರ

ಶಕ್ತಿ ಯೋಜನೆ ಜಾರಿಯಾದ ನಂತರ ಹೆಚ್ಚು ಕಿರಿಕಿರಿ ಅನುಭವಿಸುತ್ತಿರುವುದು ವಿದ್ಯಾರ್ಥಿ ಸಮೂಹವಾಗಿದ್ದು, ನಮ್ಮ ಚನ್ನಪಟ್ಟಣ ತಾಲೂಕಿನಲ್ಲಿ ಬಹುತೇಕ ಎಲ್ಲ ಬಸ್‌ಗಳು ತುಂಬಿಯೇ ಬರುವುದರಿಂದ ಬಸ್‌ಗಳಿಗೆ ಹತ್ತಲು ಸಾಧ್ಯ ವಾಗುವುದಿಲ್ಲ. ನಿಗದಿತ ಸಮಯಕ್ಕೆ ಶಾಲಾ ಕಾಲೇಜಿಗೆ ಹೋಗದಿದ್ದರೆ ಕಷ್ಟ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪುಟ್‌ ಬೋರ್ಡ್‌ ನಲ್ಲಿಯೇ ನಿಂತು ಪ್ರಯಾಣ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಗೋಳು ಆಲಿಸಿ, ಬಸ್‌ಗಳ ಸಂಖ್ಯೆ ಹೆಚ್ಚಿಸಿ, ನಮ್ಮ ಸಮಸ್ಯೆಗೆ ಮುಕ್ತಿ ಕಾಣಿಸಲಿ. – ಎಚ್‌.ಎಸ್‌.ಜಯಶ್ರೀ,ವಿದ್ಯಾರ್ಥಿನಿ, ಚನ್ನಪಟ್ಟಣ

ತಾಲೂಕು ಬಸ್‌ ಹತ್ತುವುದೇ ದೊಡ್ಡ ಸಾಹಸವಾಗಿದೆ. ಟಿಕೆಟ್‌ ನೀಡಲು ನಿರ್ವಾಹಕರು ಅತ್ತಿತ್ತ ಚಲಿಸುವುದೂ ಸಾಧ್ಯವಿಲ್ಲದಷ್ಟು ಜನರಿರುತ್ತಾರೆ. ಈ ನಡುವೆ ಮಹಿಳೆಯರಿಗೆ ಟಿಕೆಟ್‌ ನೀಡಲು ನಿರ್ವಾಹಕರು ಮುಂದೆ ಬರಲು ಪ್ರಯತ್ನಿಸುತ್ತಿದ್ದಾಗ “ಅವೆಲ್ಲ ಆಧಾರ್‌ ಕಾರ್ಡ್‌ಗಳು ಟಿಕೆಟ್‌ ಕೊಡದಿದ್ದರೂ ನಡೆಯುತ್ತೆ’ ಎಂದು ಪ್ರಯಾಣಿಕರೊಬ್ಬರು ಮಹಿಳೆಯರನ್ನು ಕೇವಲವಾಗಿ ಕಾಣುವ ಮಾತುಗಳನ್ನಾಡುತ್ತಾರೆ. ಸುತ್ತಲಿದ್ದ ಗಂಡಸರು ಅದಕ್ಕೆ ಧ್ವನಿಗೂಡಿಸಿ ನಗುತ್ತಾರೆ. ಒಂದು ಕಡೆ ಯಿಂದ ನಿಲ್ಲಲೂ ಸಾಧ್ಯವಿಲ್ಲದಷ್ಟು ನೂಕುನುಗ್ಗಲು ಇನ್ನೊಂದು ಕಡೆ ಇಂಥ ಗೇಲಿ ಮಾತುಗಳು. ಎಲ್ಲವನ್ನೂ ಸಹಿಸಿಕೊಳ್ಳಬೇಕಿದೆ. – ನಾಗರತ್ನ, ಪ್ರಯಾಣಿಕರು, ಚನ್ನಪಟ್ಟಣ

-ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next