Advertisement

ಹತ್ತು ಪಟ್ಟು ಹೆಚ್ಚಾಗಲಿದೆ ಸಂಚಾರನಿಯಮ ಉಲ್ಲಂಘನೆ ದಂಡ ಮೊತ್ತ

02:33 PM Dec 13, 2018 | Team Udayavani |

ಬೆಂಗಳೂರು: “ನೋ ಪಾರ್ಕಿಂಗ್‌’ ಬೋರ್ಡ್‌ ನೋಡಿಯೂ ನೀವು ಅಲ್ಲಿ ವಾಹನ ನಿಲ್ಲಿಸುತ್ತೀರಾ? ವಾಹನ ಚಾಲನೆ ಮಾಡುವಾಗ ಫೋನ್‌ ಕಾಲ್‌ ಬಂದರೆ, ಸ್ವೀಕರಿಸಿ ಮಾತನಾಡುತ್ತಲೇ ಚಾಲನೆ ಮಾಡುತ್ತೀರಾ? ಯಾರು ಕೇಳ್ತಾರೆ ಬಿಡು ಎಂದು ವಾಹನದ ಇನ್ಷೊರೆನ್ಸ್‌ ಮಾಡಿಸಿಲ್ಲವಾ? ನಿಮ್ಮ ಉತ್ತರ ಹೌದಾದರೆ ಇನ್ನುಮುಂದೆ ಜೇಬು ತುಂಬಾ ಹಣ ಇರಿಸಿಕೊಂಡು ಓಡಾಡಿ! ಏಕೆಂದರೆ, ಸಣ್ಣ ಸಣ್ಣ ಸಂಚಾರ ನಿಯಮಗಳ ಉಲ್ಲಂಘನೆಗೂ ಇನ್ಮುಂದೆ ಭಾರೀ ಪ್ರಮಾಣದ ದಂಡ ವಿಧಿಸಲು ನಿರ್ಧರಿಸಿರುವ ಸಾರಿಗೆ ಇಲಾಖೆ, ದಂಡದ ಪ್ರಮಾಣವನ್ನು ಈಗಿರುವುದಕ್ಕಿಂತ ಕನಿಷ್ಠ ದುಪ್ಪಟ್ಟು ಹಾಗೂ ಗರಿಷ್ಠ ಹತ್ತುಪಟ್ಟು ಹೆಚ್ಚಳ ಮಾಡಿದೆ. ಶೀಘ್ರದಲ್ಲೇ ಈ ಸಂಬಂಧ ಅಧಿಸೂಚನೆ ಹೊರಬೀಳಲಿದೆ. 

Advertisement

ನಿಲುಗಡೆ ನಿಷೇಧಿಸಿರುವ ಸ್ಥಳದಲ್ಲಿ (ನೋಪಾರ್ಕಿಂಗ್‌) ವಾಹನಗಳ ನಿಲ್ಲಿಸಿದರೆ ಪ್ರಸ್ತುತ ನೂರು ರೂ. ದಂಡ ಇದೆ. ಇದನ್ನು ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ, ಇನ್ಷೊರನ್ಸ್‌ ಇಲ್ಲದೆ ರಸ್ತೆಗಿಳಿದ ವಾಹನಗಳಿಗೆ ಕ್ರಮವಾಗಿ ಸಾವಿರ ರೂ.
ಹಾಗೂ ಅರ್ಹತಾ ಪ್ರಮಾಣಪತ್ರ ಇಲ್ಲದೆ ಸಂಚರಿಸುವ ಎಲ್ಲ ಪ್ರಕಾರದ ವಾಹನಗಳಿಗೆ ಎರಡರಿಂದ ಐದು ಸಾವಿರ ರೂ.ವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಮೋಟಾರು ವಾಹನ ಕಾಯ್ದೆ-1988 ಕಲಂ 200ಕ್ಕೆ ತಿದ್ದುಪಡಿ ತರಲಾಗಿದ್ದು, ಕಾಯ್ದೆಯಲ್ಲಿ ಕೋಷ್ಠಕ 1 (ಮೋಟಾರು ವಾಹನಗಳ ಇನ್‌ಸ್ಪೆಕ್ಟರ್‌) ಮತ್ತು 2 (ಪೊಲೀಸ್‌ ಇಲಾಖೆಯ ಸಂಚಾರ ಸಬ್‌ ಇನ್‌ಸ್ಪೆಕ್ಟರ್‌ ವ್ಯಾಪ್ತಿ) ಸೇರಿದಂತೆ 43ಕ್ಕೂ ಹೆಚ್ಚು ಸಂಚಾರ ನಿಯಮಗಳ ಉಲ್ಲಂಘನೆ ಅಪರಾಧಗಳನ್ನು ಪಟ್ಟಿಮಾಡಲಾಗಿದೆ.

ಈ ಪೈಕಿ ಕ್ರಮಸಂಖ್ಯೆ 1, 2, 9, 10, 30, 37, 38 ಮತ್ತು 39ನೇ ಅಪರಾಧಗಳಿಗೆ ದಂಡದ ಮೊಬಲಗನ್ನು ಪರಿಷ್ಕರಿಸಲಾಗಿದೆ. ವಾರದಲ್ಲಿ ಪರಿಷ್ಕೃತ ದಂಡ ಜಾರಿಗೆ ಬರಲಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ನಿಷೇಧಿತ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು ಸಂಚಾರ ದಟ್ಟಣೆಯಂತಹ ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ. ರಸ್ತೆಯ ಒಂದು ಬದಿಯ ಜಾಗವನ್ನು ಈ ವಾಹನಗಳು ಆಕ್ರಮಿಸಿಕೊಳ್ಳುತ್ತವೆ. ಪೀಕ್‌ ಅವರ್‌ನಲ್ಲಂತೂ ಇದು ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ, ಗರಿಷ್ಠ ಪ್ರಮಾಣದ ದಂಡ ಪ್ರಯೋಗ ಮಾಡಲು ಉದ್ದೇಶಿಸಲಾಗಿದೆ. ಅಲ್ಲದೆ, ವಾಹನಗಳ ಚಾಲನೆ ಮಾಡುವಾಗ ಮೊಬೈಲ್‌ ಬಳಕೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮೋಟಾರು ವಾಹನ ಕಾಯ್ದೆ 184ರ ಉಲ್ಲಂಘನೆ ಅಡಿ “ಅಪಾಯಕಾರಿ ವಾಹನ ಚಾಲನೆ’ ಎಂದು ಪರಿಗಣಿಸಿ ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. 

Advertisement

ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಿದ್ದ ಪೊಲೀಸರು

ರಾಜ್ಯದಲ್ಲಿ ಪ್ರಸ್ತುತ ಸಂಚಾರ ನಿಯಮಗಳಿದ್ದರೂ ಉಲ್ಲಂಘನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚು ತ್ತಲೇ ಇದೆ. ಅದರಲ್ಲೂ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಸಿಗ್ನಲ್‌ ಜಂಪ್‌, ನಿಷೇಧಿತ ಪ್ರದೇಶದಲ್ಲಿ ವಾಹನಗಳ ನಿಲುಗಡೆ, ಅರ್ಹತಾ ಪ್ರಮಾಣಪತ್ರ ಇಲ್ಲದೆ ವಾಹನ ಚಾಲನೆ ಸೇರಿದಂತೆ ನಿರ್ದಿಷ್ಟ ನಿಯಮಗಳ ಉಲ್ಲಂಘನೆ ಪ್ರಮಾಣ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಮಟ್ಟದ ದಂಡ ಪ್ರಯೋಗ ಮಾಡಿ, ಉಲ್ಲಂಘನೆಗಳಿಗೆ ಕಡಿ ವಾಣ ಹಾಕುವ ಅವಶ್ಯಕತೆ ಇದೆ. ಇದರಿಂದ ಸಾಧ್ಯವಾದಷ್ಟು ನಿಯಮಗಳ ಉಲ್ಲಂಘನೆ ಪ್ರಕರಣಗಳು ಕಡಿಮೆ ಆಗಲಿವೆ. ಇದು ತೆಲಂಗಾಣದಲ್ಲಿ ಫ‌ಲ ನೀಡಿದೆ ಎಂದು ಪೊಲೀಸ್‌ ಮಹಾ ನಿರ್ದೇಶಕರು ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ, ದಂಡದ ಮೊತ್ತ ಹೆಚ್ಚಳಕ್ಕೆ ಸಾರಿಗೆ ಇಲಾಖೆ ಸಮ್ಮತಿಸಿದೆ.

ದಂಡ ಹೆಚ್ಚಳದ ಬಿಸಿ ಬೆಂಗಳೂರಿಗೇ ಹೆಚ್ಚು ಅಂದಹಾಗೆ, ಈ ಮೊದಲು 2007-08ರಲ್ಲಿ ವಾಹನಗಳಿಗೆ ಸಂಬಂಧಿಸಿದ ದಂಡವನ್ನು ಪರಿಷ್ಕರಿಸಲಾಗಿತ್ತು. ಹೆಚ್ಚು-ಕಡಿಮೆ ದಶಕದ ನಂತರ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇಡೀ ರಾಜ್ಯಕ್ಕೆ ಪರಿಷ್ಕೃತ ನಿಯಮ ಅನ್ವಯ ಆಗಲಿದ್ದರೂ, ಇದರ ಬಿಸಿ ಹೆಚ್ಚಾಗಿ ಬೆಂಗಳೂರು ನಿವಾಸಿಗಳಿಗೇ ತಟ್ಟಲಿದೆ. ಏಕೆಂದರೆ, ಒಟ್ಟಾರೆ ವಾಹನಗಳ ಪೈಕಿ ಶೇ.40ರಷ್ಟು ನಗರದಲ್ಲಿವೆ. ನಿರ್ಬಂಧಿತ ಜಾಗದಲ್ಲಿ ನಿಲುಗಡೆ, ಸಿಗ್ನಲ್‌ ಜಂಪ್‌ನಂತಹ ಸಂಚಾರ ನಿಯಮಗಳ ಉಲ್ಲಂಘನೆ ಅಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಕೂಡ ಇಲ್ಲಿಯೇ. ಪೊಲೀಸ್‌ ಇಲಾಖೆ ಕೂಡ ನಗರವನ್ನು ಗಮನದಲ್ಲಿಟ್ಟುಕೊಂಡೇ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಮೂಲಗಳು ತಿಳಿಸಿವೆ.

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next