Advertisement

Traffic Rules: ಸಂಚಾರ ನಿಯಮಾವಳಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಲಿ

01:55 AM Sep 25, 2024 | Team Udayavani |

ಸಂಚಾರ ನಿಯಮಾವಳಿಗಳನ್ನು ಉಲ್ಲಂ ಸುವ ವಾಹನ ಚಾಲಕರ ಚಾಲನ ಪರವಾನಿಗೆಯನ್ನು ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಬಹುತೇಕ ವಾಹನ ಚಾಲಕರು ಸಂಚಾರ ನಿಯಮಾವಳಿಗಳನ್ನು ಉಲ್ಲಂ ಸುತ್ತಿರುವುದೇ ಪ್ರಮುಖ ಕಾರಣವಾಗಿರುವುದರಿಂದ ಮುಖ್ಯಮಂತ್ರಿಗಳ ಈ ನಿರ್ದೇಶನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

Advertisement

ಕೇಂದ್ರ ಸರಕಾರ ಸಂಚಾರ ನಿಯಮಾವಳಿಗಳನ್ನು ಬಿಗಿಗೊಳಿಸಿದ್ದೇ ಅಲ್ಲದೆ ಸಣ್ಣಪುಟ್ಟ ಸಂಚಾರ ನಿಯಮಗಳ ಉಲ್ಲಂಘನೆಯ ಸಂದರ್ಭದಲ್ಲಿ ಈ ಹಿಂದೆ ವಿಧಿಸ ಲಾಗುತ್ತಿದ್ದ ದಂಡದ ಮೊತ್ತದಲ್ಲಿ ಭಾರೀ ಏರಿಕೆಯನ್ನು ಮಾಡಿತ್ತು. ಇದರಂತೆ ರಾಜ್ಯ ದಲ್ಲಿಯೂ ಈ ಬಿಗಿ ನಿಯಮವನ್ನು ಜಾರಿಗೆ ತರಲಾಗಿದೆಯಾದರೂ ಒಟ್ಟಾರೆ ಸಂಚಾರ ನಿಯಮಾವಳಿಗಳ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿಲ್ಲ, ಸದ್ಯ ರಾಜ್ಯದಲ್ಲಿ ದಿನಂಪ್ರತಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದರೆ ಭಾರೀ ಸಂಖ್ಯೆಯಲ್ಲಿ ಜನರು ಗಾಯಾಳುಗಳಾಗಿ ಅಂಗವೈಕಲ್ಯ ಸಹಿತ ತಮ್ಮ ಜೀವನಪರ್ಯಂತ ನರಕಯಾತನೆ ಅನುಭವಿಸುವಂತಾಗಿದೆ.

ವರ್ಷಗಳ ಹಿಂದೆ ರಸ್ತೆ ಅಪಘಾತಗಳಿಗೆ ರಸ್ತೆಗಳ ನಾದುರಸ್ತಿ, ಅವೈಜ್ಞಾನಿಕ ಮಾದರಿ ಯಲ್ಲಿ ನಿರ್ಮಿಸಲಾದ ರಸ್ತೆಗಳು, ತಿರುವು-ಮುರುವುಗಳಿಂದ ಕೂಡಿದ ರಸ್ತೆಗಳು ಕಾರಣ ವಾಗುತ್ತಿದ್ದರೆ ಕಳೆದ ಕೆಲವು ವರ್ಷಗಳಿಂದ ಪ್ರಮುಖ ಹೆದ್ದಾರಿಗಳನ್ನು ಹೊರತುಪಡಿಸಿ ರಾಜ್ಯದ ಹೆಚ್ಚಿನ ರಸ್ತೆಗಳು ಸುಧಾರಣೆ ಕಂಡಿವೆ. ರಸ್ತೆಗಳು ಸುವ್ಯವಸ್ಥಿತವಾಗಿರುವುದರಿಂದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಮಿತಿಯೇ ಇಲ್ಲದಂತಾಗಿದೆ.

ಅತೀ ವೇಗ, ಮದ್ಯ ಸೇವಿಸಿ ವಾಹನ ಚಾಲನೆ, ಏಕಮುಖ ರಸ್ತೆಯಲ್ಲಿ ಅಥವಾ ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುವುದು, ಪಾರ್ಕಿಂಗ್‌ ನಿಷೇಧಿತ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್‌, ಸಮರ್ಪಕ ಸಿಗ್ನಲ್‌ಗ‌ಳನ್ನು ನೀಡದಿರುವುದು ಸಹಿತ ಹತ್ತು ಹಲವು ಸಂಚಾರ ನಿಯಮಗಳನ್ನು ವಾಹನ ಚಾಲಕರು ಸಮರ್ಪಕವಾಗಿ ಪಾಲಿಸದಿರುವ ಪರಿಣಾಮ ಅಪಘಾತಗಳು ಹೆಚ್ಚುತ್ತಲೇ ಸಾಗಿದೆ. ಈ ಕಾರಣದಿಂದಾಗಿಯೇ ಮುಖ್ಯಮಂತ್ರಿ ಅವರು ಇಂತಹ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವಂತೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ದಂಡ ಮೊತ್ತ ಹೆಚ್ಚಳ, ಸಂಚಾರ ಕಾನೂನನ್ನು ಬಿಗಿಗೊಳಿಸಿದರೂ ಚಾಲಕರ ಧಾವಂತಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿರುವುದನ್ನು ಮನಗಂಡೇ ಮುಖ್ಯಮಂತ್ರಿ ಇಂತಹ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ತುರ್ತು ಗಮನ ಹರಿಸುವುದು ಸೂಕ್ತ.

ಸರಕಾರ ಇಂತಹ ಕಠಿನ ನಿಲುವು ತಾಳಿ, ಈ ಸಂಬಂಧ ಅಧಿಕೃತ ಆದೇಶ ಹೊರಡಿ ಸುವುದಕ್ಕಷ್ಟೇ ಸೀಮಿತವಾಗದೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತೀ ಬಾರಿಯೂ ಸರಕಾರ ಜನತೆಯ ಹಿತದೃಷ್ಟಿಯಿಂದ ಸದುದ್ದೇಶದಿಂದ ಕೂಡಿದ ಕಾನೂನು ನಿಯಮಾವಳಿ­ಯನ್ನು ಜಾರಿಗೊಳಿ ಸುತ್ತದೆ ಯಾದರೂ ಅದರ ಸಮರ್ಪಕ ಅನುಷ್ಠಾನದಲ್ಲಿ ಎಡವುತ್ತಿದೆ. ಲೋಪದೋಷಗಳಿಂದ ಕೂಡಿದ ಅನುಷ್ಠಾನ ಪ್ರಕ್ರಿಯೆ, ಭ್ರಷ್ಟಾಚಾರಗಳ ಕಾರಣಗಳಿಂದಾಗಿ ಯಾವೊಂದೂ ಕಾನೂನು, ನಿಯಮಾವಳಿಗಳು ತಳಮಟ್ಟದಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದು ಸರಕಾರಿ ವ್ಯವಸ್ಥೆಗೆ ಬಲುದೊಡ್ಡ ಕಳಂಕವಾಗಿದ್ದು ಇದರಿಂದಾಗಿಯೇ ಸರಕಾರದ ನೈಜ ಉದ್ದೇಶ ಈಡೇರುತ್ತಿಲ್ಲ.

Advertisement

ಸಂಚಾರ ನಿಯಮಾವಳಿ ಉಲ್ಲಂ ಸುವ ಚಾಲಕರ ವಾಹನ ಚಾಲನ ಪರವಾನಿಗೆ ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸುವ ನಿರ್ಧಾರವನ್ನು ಸರಕಾರ ಕೈಗೊಂಡದ್ದೇ ಆದಲ್ಲಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಇದರ ಅನುಷ್ಠಾನದ ಹೊಣೆಗಾರಿಕೆಯನ್ನು ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ವಹಿಸಿಕೊಳ್ಳಬೇಕು. ಈ ಎರಡು ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಸಂಚಾರ ನಿಯಮಾವಳಿಗಳು ಯಥಾವತ್ತಾಗಿ ಪಾಲನೆಯಾಗುವುದನ್ನು ಖಾತರಿಪಡಿಸಿದ್ದೇ ಆದಲ್ಲಿ ರಸ್ತೆ ಅಪಘಾತಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next