Advertisement

ಸಂಚಾರ ದಟ್ಟಣೆ: ಕ್ಯಾಬ್‌ಗೆ ಕುತ್ತು?

06:34 AM Feb 10, 2019 | Team Udayavani |

ಬೆಂಗಳೂರು: ಪಾರ್ಕಿಂಗ್‌ ಸಮಸ್ಯೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಓಲಾ ಮತ್ತು ಉಬರ್‌ ಕ್ಯಾಬ್‌ಗಳಿಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಹೇಳಿದ್ದಾರೆ. ಆದರೆ, ಅವರ ಹೇಳಿಕೆಗೆ ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾಗಿದೆ.

Advertisement

ನಗರದ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸಂಚಾರ ವಿಭಾಗದ ಕಾರ್ಯವೈಖರಿ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ಪ್ರಸ್ತುತ 78.84 ಲಕ್ಷ ವಾಹನಗಳಿದ್ದು, ಪ್ರತಿ ನಿತ್ಯ ಶೇ.85ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಈ ಪೈಕಿ ಸುಮಾರು 30 ಸಾವಿರಕ್ಕೂ ಹೆಚ್ಚು ಆ್ಯಪ್‌ ಆಧಾರಿತ ಕ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಅವುಗಳ ಸಂಖ್ಯೆ ಕೂಡ ಅಧಿಕವಾಗುತ್ತಿದೆ.

ಆದರೆ, ಆ ಕ್ಯಾಬ್‌ಗಳಿಗೆ ನಿರ್ದಿಷ್ಟ ಪಾರ್ಕಿಂಗ್‌ ಸ್ಥಳ ಇಲ್ಲ ಹೀಗಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು. ಆದರೆ, ವೈಯಕ್ತಿಕವಾಗಿ ಯಾರನ್ನು ಗುರಿಯಾಗಿಸಿಕೊಂಡು ಈ ನಿರ್ಧಾರಕೈಗೊಂಡಿಲ್ಲ. ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಕುರಿತು ಚಿಂತನೆ ನಡೆಸಲಾಗಿದೆ ಎಂದು ಸಮಾಜಾಯಿಸಿ ನೀಡಿದರು.

ಅಷ್ಟೇ ಅಲ್ಲದೆ, ಪಾರ್ಕಿಂಗ್‌ ಹಾಗೂ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಸಂಚಾರ ವಿಭಾಗ ಕೆಲವೊಂದು ತೀರ್ಮಾನಗಳನ್ನು ಕೈಗೊಂಡಿದೆ. ಪ್ರಮುಖವಾಗಿ ನಗರದ ಪ್ರತಿ ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳ ನಿಲ್ದಾಣಕ್ಕೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವಂತೆ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಲಾಗುವುದು. ಜತೆಗೆ ಸಮೂಹ ಸಾರಿಗೆಯನ್ನು ಹೆಚ್ಚಳ ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು. ಇದರಿಂದ ಸಂಚಾರ ದಟ್ಟಣೆ ಜತೆಗೆ ದ್ವಿಚಕ್ರ ವಾಹನಗಳ ಖರೀದಿ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಧ್ಯವಿಲ್ಲ?: ಒಂದೆಡೆ ಓಲಾ ಮತ್ತು ಉಬರ್‌ ಚಾಲಕರು ಮತ್ತು ಮಾಲೀಕರು ಅಸಮಾಧಾನ ವ್ಯಕ್ಕಪಡಿಸಿದರೆ, ಸಂಚಾರ ತಜ್ಞರು ಕೂಡ ಕೇವಲ ಓಲಾ ಮತ್ತು ಉಬರ್‌ ಕ್ಯಾಬ್‌ಗಳ ಚಾಲನೆಗೆ ಅನುಮತಿ ನಿರಾಕರಿಸುವುದರಿಂದ ಪಾರ್ಕಿಂಗ್‌ ಸಮಸ್ಯೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಅಸಾಧ್ಯ ಎಂದಿದ್ದಾರೆ.

Advertisement

ಕೇವಲ ಒಂದೇ ಕ್ರಮದಿಂದ ಎಲ್ಲವನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಪಾರ್ಕಿಂಗ್‌ ಸಮಸ್ಯೆ ಹಾಗೂ ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಸಂಬಂಧಿಸಿದ ಅಧಿಕಾರಿಗಳು, ತಜ್ಞರ ಜತೆ ಚರ್ಚೆ ನಡೆಸಬೇಕು. ಜತೆಗೆ ಯಾವ ಸ್ಥಳಗಳಲ್ಲಿ ಪಾರ್ಕಿಂಗ್‌ ಸಮಸ್ಯೆಯಾಗುತ್ತಿದೆ ಎಂಬುದನ್ನು ತಿಳಿದು, ಅಂತಹ ಸ್ಥಳದಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿ ಕ್ರಮವಹಿಸಬೇಕು ಎಂದು ಸಂಚಾರ ಸಂಬಂಧ  ಅಧ್ಯಯನ ನಡೆಸಿರುವ ಉಷಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

“ಇಂತಹ ನಿರ್ಧಾರಗಳನ್ನು ಯಾವುದೇ ಸರ್ಕಾರ ಒಪ್ಪಿಕೊಳ್ಳುವುದಿಲ್ಲ. ಸಂಚಾರ ದಟ್ಟಣೆಗೆ ಸಾಕಷ್ಟು ಪರ್ಯಾಯ ಮಾರ್ಗಗಳಿವೆ. ಅದು ಹೊರತು ಪಡಿಸಿ ಒಂದೇ ವರ್ಗವನ್ನು ಗುರಿಯಾಗಿಸಿಕೊಂಡು ನಿರ್ಧಾರಕೈಗೊಳ್ಳುವುದರಿಂದ ಚಾಲಕರ ಜೀವನಕ್ಕೆ ಪೆಟ್ಟು ಬಿಳಲಿದೆ. ನಗರದಲ್ಲಿರುವ ಸರ್ಕಾರಿ ಜಮೀನುಗಳಲ್ಲೇ ಪಾರ್ಕಿಂಗ್‌ ಸ್ಥಳಗಳನ್ನು ನಿರ್ಮಾಣ ಮಾಡಿ, ಪಾರ್ಕಿಂಗ್‌ ಸಮಸ್ಯೆಗೆ ಕಡಿವಾಣ ಹಾಕಲಿ. ಆದರೆ, ಓಲಾ, ಉಬರ್‌ ನಿಯಂತ್ರಣದಿಂದ ಸರ್ಕಾರ ಹಾಗೂ ಸಂಚಾರ ಪೊಲೀಸರ ವಿರುದ್ಧ ಹೋರಾಟ ನಡೆಸುವ ಸಾಧ್ಯತೆಯಿದೆ’ ಎನ್ನುತ್ತಾರೆ ಮತ್ತೂಬ್ಬ ಸಂಚಾರ ತಜ್ಞ ಬಿ.ಜಿ.ಶ್ರೀಧರ್‌.

ಕ್ಯಾಬ್‌ ಚಾಲಕರ ಅಸಮಾಧಾನ: ಹೆಚ್ಚುವರಿ ಪೊಲೀಸ್‌ ಆಯುಕ್ತ ಹರಿಶೇಖರನ್‌ ಅವರ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಓಲಾ ಮತ್ತು ಉಬರ್‌ ಕ್ಯಾಬ್‌ ಚಾಲಕರು ಮತ್ತು ಮಾಲೀಕರ ಸಂಘ, ಕ್ಯಾಬ್‌ ನಿಲುಗಡೆಗೆ ಸೂಕ್ತ ಸೌಲಭ್ಯ ನೀಡಲು ಸಂಚಾರ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆಗಳು ಮಂದಾಗಬೇಕು. ಅದು ಹೊರತು ಪಡಿಸಿ ಬೇರೆ ಯಾವುದೇ ನಿರ್ಧಾರಕೈಗೊಂಡರು ಕ್ಯಾಬ್‌ ಚಾಲಕರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಓಲಾ ಟ್ಯಾಕ್ಸಿ ಫಾರ್‌ ಶೋರ್‌ ಉಬರ್‌ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ, ಈ ರೀತಿ ತೀರ್ಮಾನ ಕೈಗೊಳ್ಳುವ ಮೊದಲು ಬೆಂಗಳೂರಿನಲ್ಲಿ ಓಲಾ, ಉಬರ್‌ ಬೇಡಿಕೆ ಬಗ್ಗೆ ಸಂಚಾರ ಪೊಲೀಸರು ಸರ್ವೇ ನಡೆಸಿ, ಕೆಲ ಮಾರ್ಗದರ್ಶನಗಳನ್ನು ಕೊಡಬೇಕು. ಅನಂತರ ಯಾವುದೇ ನಿರ್ಧಾರಕೈಗೊಳ್ಳಲಿ ಎಂದು ಹೇಳಿದರು.

ನಂಬರ್‌ ಪ್ಲೇಟ್‌ ಪತ್ತೆಗೆ ವಿಶೇಷ ಕ್ಯಾಮೆರಾ: ಜಾಗೃತಿ ಕಾರ್ಯಕ್ರಮಗಳ ನಡುವೆಯೂ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮುಖವಾಗಿ ದೋಷಪೂರಿತ ನಂಬರ್‌ ಪ್ಲೇಟ್‌ಗಳ ಪತ್ತೆಗೆ ಕೆಲ ಜಂಕ್ಷನ್‌ ಹಾಗೂ ವೃತ್ತಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಆ ಕ್ಯಾಮೆರಾಗಳಿಗೆ ನಂಬರ್‌ ಪ್ಲೇಟ್‌ಗಳನ್ನೇ ಚಿತ್ರಿಸುವ ಸಾಮರ್ಥಯವಿದೆ. ಇದಲ್ಲದೆ ನಗರದ ವಿವಿಧೆಡೆ 6 ಸಾವಿರ ಸಿಸಿ ಕ್ಯಾಮೆರಾ ಅಳವಡಿಸುವುದಾಗಿ ಹರಿಶೇಖರನ್‌ ಹೇಳಿದರು.

ವೀಲ್ಹಿಂಗ್‌ ನಿಯಂತ್ರಣಕ್ಕೆ ಸ್ಕ್ವಾಡ್‌ ಸ್ಥಾಪನೆ: ಯುವಕರು ನಡುರಾತ್ರಿಯಲ್ಲಿ ದ್ವಿಚಕ್ರ ವಾಹನಗಳನ್ನು ವೇಗವಾಗಿ ಚಾಲನೆ ಮಾಡುವುದರ ಜತೆಗೆ ವೀಲ್ಹಿಂಗ್‌ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಪ್ರಾಣಾಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆ್ಯಂಟಿ ಡ್ರ್ಯಾಗ್‌ರೇಸಿಂಗ್‌ ಸ್ಕ್ವಾಡ್‌ ಸ್ಥಾಪನೆ ಮಾಡಲಾಗುವುದು. ನಗರದ ಮೂರು ಸಂಚಾರ ವಲಯಗಳಲ್ಲಿ ತಲಾ ಒಂದೊಂದು ಪಡೆಗಳನ್ನು ರಚನೆ ಮಾಡಿ, ಒಬ್ಬರು ಎಎಸ್‌ಐ, ಇಬ್ಬರು ಹೆಡ್‌ ಕಾನ್‌ಸ್ಟೆಬಲ್‌ಗ‌ಳನ್ನು ಪಡೆಗೆ ನಿಯೋಜಿಸಲಾಗುತ್ತದೆ. ಈ ಪಡೆ ತಡರಾತ್ರಿ 1ಗಂಟೆಯಿಂದ ನಸುಕಿನ 5 ಗಂಟೆವರೆಗೆ ನಿರ್ದಿಷ್ಟ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next