Advertisement

ಟ್ರಾಫಿಕ್‌, ಪಾರ್ಕಿಂಗ್‌ ಮಂಗಳೂರು ನಗರಕ್ಕೆ ದೊಡ್ಡ ಸವಾಲು

09:53 PM Nov 02, 2019 | mahesh |

ಮಂಗಳೂರು ನಗರ ಬೆಳೆದಂತೆ ಇಲ್ಲಿನ ಸಮಸ್ಯೆಗಳು ಹೆಚ್ಚುತ್ತಿದ್ದು, ಟ್ರಾಫಿಕ್‌-ಪಾರ್ಕಿಂಗ್‌, ಒಳಚರಂಡಿ, ಫುಟ್‌ಪಾತ್‌, ತ್ಯಾಜ್ಯ ನಿರ್ವಹಣೆ ಜ್ವಲಂತ ನಗರ ಸಮಸ್ಯೆಗಳಾಗಿ ಕಾಡುತ್ತಿದೆ. 5 ವರ್ಷಗಳಿಗೊಮ್ಮೆ ಪಾಲಿಕೆ ಚುನಾವಣೆ ನಡೆದು ವಿವಿಧ ರಾಜಕೀಯ ಪಕ್ಷಗಳಿಂದ ಜನಪ್ರತಿನಿಧಿಗಳು ಆಯ್ಕೆಯಾಗಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿದ್ದು, ನಗರದ ಆದ್ಯತೆಯ ನಾಗರಿಕ ಸಮಸ್ಯೆಗಳಿಗೆ ಮುಂದಿನ ಆಡಳಿತಾವಧಿಯಲ್ಲಾದರೂ ಮುಕ್ತಿ ಸಿಗಬೇಕೆಂಬುದು ಮತದಾರರ ನಿರೀಕ್ಷೆಯಾಗಿದ್ದು, ಇದಕ್ಕೆ “ಸುದಿನ’ ಜನರ ಧ್ವನಿಯಾಗಿ “ನಗರ ಸಮಸ್ಯೆ-ಜನರ ನಿರೀಕ್ಷೆ’ ಅಭಿಯಾನ ಇಂದಿನಿಂದ ಪ್ರಾರಂಭಸಿದೆ.

Advertisement

ಮಹಾನಗರ: ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ, ಅತ್ಯಂತ ದೊಡ್ಡ, ಹೆಚ್ಚು ಜನಸಂದಣಿ ಹೊಂದಿರುವ ನಗರವಾಗಿ ಬೆಳೆಯುತ್ತಿರುವ ಮಹಾನಗರಗಳ ಪೈಕಿ ಮಂಗಳೂರು ಕೂಡ ಒಂದು. ಇಲ್ಲಿನ ವ್ಯಾಪಾರ-ವಹಿವಾಟು, ದೈನಂದಿನ ಕಾರ್ಯ-ಚಟುವಟಿಕೆ, ಜನರು, ಸರಕುಗಳ ಸಾಗಾಟದ ಹಿನ್ನೆಲೆಯಲ್ಲಿ ನೋಡಿದಾಗ, ಈ ನಗರದಲ್ಲಿ ವಾಹನಗಳ ಸಂಖ್ಯೆಯೂ ದಿನೇದಿನೇ ಜಾಸ್ತಿಯಾಗುತ್ತಿದೆ. ಆದರೆ ಇದಕ್ಕನುಗುಣವಾಗಿ ಇಲ್ಲಿನ ರಸ್ತೆಗಳಾಗಲಿ ಅಥವಾ ಅವುಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಕಾಡುತ್ತಿದೆ.

ನಗರದ ಜ್ವಲಂತ ಸಮಸ್ಯೆಗಳ ಪೈಕಿ ಒಂದಾಗಿರುವ ಇಲ್ಲಿನ ಸಂಚಾರ ದಟ್ಟಣೆ, ಪಾರ್ಕಿಂಗ್‌ಗೆ ಶಾಶ್ವತ ಪರಿಹಾರವಾಗಿ ಆಧುನಿಕ ಮಾದರಿಯಲ್ಲಿ ದೂರದೃಷ್ಟಿಯ ಕಾರ್ಯ ಯೋಜನೆ ರೂಪಿಸಬೇಕಾದ ಗುರುತರ ಜವಾಬ್ದಾರಿ ಪಾಲಿಕೆ ಮೇಲಿದೆ. ನಗರದಲ್ಲಿ ಹೆಚ್ಚುತ್ತಿರುವ ಈ ಟ್ರಾಫಿಕ್‌, ಪಾರ್ಕಿಂಗ್‌ ಸಮಸ್ಯೆಗೆ ಈ ಬಾರಿಯ ಪಾಲಿಕೆ ಚುನಾವಣೆ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಯಾವ ರೀತಿ ಸ್ಪಂದಿಸುವ ಅಥವಾ ಬದ್ಧತೆ ಪ್ರದರ್ಶಿಸುವ ಭರವಸೆ ನೀಡುತ್ತಾರೆ ಎನ್ನುವ ನಿರೀಕ್ಷೆ ಣಘೃಧಜನರದ್ದು.

ರಸ್ತೆ ವಿಸ್ತರಣೆಯಾದರು ಸಮಸ್ಯೆ ಬಗೆಹರಿದಿಲ್ಲ
ನಗರವು ಯೋಜಿತವಾಗಿ ಬೆಳವಣಿಗೆ ಹೊಂದದಿರುವುದು ಇದಕ್ಕೆ ಮುಖ್ಯ ಕಾರಣ. ಒಂದೊಮ್ಮೆ ಅಗಲ ಕಿರಿದಾಗಿದ್ದು, ಕಿಷ್ಕಿಂಧೆಯಂತಿದ್ದ ನಗರದ ಪ್ರಮುಖ ರಸ್ತೆಗಳು ಈಗ ವಿಸ್ತರಣೆಯಾದರೂ ಸಂಚಾರ ಸಮಸ್ಯೆ ಬಗೆಹರಿದಿಲ್ಲ. ವಾಹನಗಳ ಸಂಖ್ಯೆ ಹೆಚ್ಚಳ ಆಗಿರುವುದು ಒಂದು ಮುಖ್ಯ ಕಾರಣ ಆಗಿದ್ದರೂ ರಸ್ತೆ ಅಗಲ ಮಾಡಲು ಭೂಸ್ವಾಧೀನ ಮಾಡಿಕೊಂಡ ಜಾಗದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವುದು. ಬಹು ಮಹಡಿ ಕಟ್ಟಡಗಳಲ್ಲಿ ನಿಯಮಗಳ ಪ್ರಕಾರ ವಾಹನ ಪಾರ್ಕಿಂಗ್‌ಗೆ ಮೀಸಲಾದ ಜಾಗದಲ್ಲಿ ವ್ಯಾಪಾರ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿರುವುದು, ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇತ್ಯಾದಿ.

5 ವರ್ಷಗಳಲ್ಲಿ ವ್ಯಾಪಾರ ವಾಣಿಜ್ಯ ಕಟ್ಟಡಗಳು, ವಸತಿ ಸಮುಚ್ಚಯಗಳು, ವಿವಿಧ ಸಂಘ, ಸಂಸ್ಥೆಗಳ ಕಚೇರಿಗಳು, ಸರಕಾರಿ ಇಲಾಖೆಗಳ ಕಚೇರಿಗಳು ಏರಿಕೆಯಾಗಿವೆ. ಆದರೆ ರಸ್ತೆಗಳ ಸಂಖ್ಯೆ ಹೆಚ್ಚಿಲ್ಲ. ಕೆಲವು ರಸ್ತೆಗಳ ವಿಸ್ತರಣೆ ಆಗಿದ್ದರೂ ಅದರ ಪ್ರಯೋಜನ ಸಂಪೂರ್ಣವಾಗಿ ಸಂಚಾರ ವ್ಯವಸ್ಥೆಗೆ ಲಭಿಸಿಲ್ಲ. ಬಹು ಮಹಡಿ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳ ಬೈಲಾ ಪ್ರಕಾರ ಕಟ್ಟಡದ ತಳ ಅಂತಸ್ತು ವಾಹನ ಪಾರ್ಕಿಂಗ್‌ಗೆ ಮೀಸಲು. ಆದರೆ ನಗರದಲ್ಲಿ ಬಹಳಷ್ಟು ಕಟ್ಟಡಗಳ ಪಾರ್ಕಿಂಗ್‌ ಸ್ಥಳ ಕಟ್ಟಡದ ನೀಲ ನಕ್ಷೆಗೆ ಮಾತ್ರ ಮೀಸಲು. ಬಹು ಮಹಡಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆಯುವಾಗ ನೀಲ ನಕ್ಷೆಯಲ್ಲಿ ತಳ ಅಂತಸ್ತು ವಾಹನ ನಿಲುಗಡೆಗೆಂದು ಗುರುತಿಸಲಾಗಿದ್ದರೂ ಕಟ್ಟಡ ಕಾಮಗಾರಿ ಮುಕ್ತಾಯಗೊಂಡು ಜನರ ಬಳಕೆಗೆ ಬಿಟ್ಟು ಕೊಟ್ಟ ಬಳಿಕ ವಾಹನ ನಿಲುಗಡೆಯ ಜಾಗ ವ್ಯಾಪಾರ ಮಳಿಗೆಯ ತಾಣವಾಗಿ ಮಾರ್ಪಾಟು ಹೊಂದುತ್ತದೆ. ಹಾಗಾಗಿ ವಾಹನಗಳನ್ನು ರಸ್ತೆ ಬದಿಯೇ ನಿಲುಗಡೆ ಮಾಡಬೇಕಾಗಿ ಬಂದಿದೆ. ಇದು 5 ವರ್ಷಗಳ ಬೆಳವಣಿಗೆ ಅಲ್ಲ; ಹತ್ತು-ಹದಿನೈದು ವರ್ಷಗಳಿಂದಲೂ ಇದೇ ಪರಿಸ್ಥಿತಿಯಿದೆ ಎನ್ನುವುದು ವಾಸ್ತವ.

Advertisement

ನಿಯಮ ಉಲ್ಲಂಘನೆ ಮಾಡಿದ ಕಟ್ಟಡಗಳಿಗೆ ಅಧಿಕಾರಿಗಳು ದಾಳಿ ಕಾರ್ಯಾಚರಣೆ ನಡೆಸಿ ನೋಟೀಸು ನೀಡಿದ ಅನೇಕ ಘಟನೆಗಳು ಪಾಲಿಕೆಯ ಇತಿಹಾಸದಲ್ಲಿ ನಡೆದಿವೆ.

ಡಾ| ವಿಜಯ ಪ್ರಕಾಶ್‌ ಪಾಲಿಕೆಯ ಆಯುಕ್ತರಾಗಿದ್ದಾಗ ಮತ್ತು ಆ ಬಳಿಕ ವಿಪುಲ್‌ ಕುಮಾರ್‌ ಅವರು ಮಂಗಳೂರು ಪೊಲೀಸ್‌ ಕಮಿಷನರೆಟ್‌ನ ಆಯುಕ್ತರಾಗಿದ್ದ ಸಂದರ್ಭದಲ್ಲಿ ರಸ್ತೆ ಬದಿಯ ಬಹು ಮಹಡಿ ಕಟ್ಟಡಗಳಿಗೆ ದಾಳಿ ನಡೆಸಿ ತಳ ಅಂತಸ್ತಿನಲ್ಲಿ ಪಾರ್ಕಿಂಗ್‌ ಜಾಗದಲ್ಲಿದ್ದ ಅಂಗಡಿಗಳನ್ನು ತೆರವು ಮಾಡುವಂತೆ ನೋಟೀಸು ಜಾರಿ ಮಾಡಿದ್ದರು.

ಪಾಲಿಕೆಯ ಮೂಲಗಳ ಪ್ರಕಾರ 2011ರ ಬಳಿಕ ನಿರ್ಮಾಣವಾದ ಬಹು ಮಹಡಿ ಕಟ್ಟಡಗಳ ತಳ ಅಂತಸ್ತು ಕಡ್ಡಾಯವಾಗಿ ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದೆ. ಆದರೆ 2011ಕ್ಕಿಂತ ಹಿಂದೆ ನಿರ್ಮಾಣಗೊಂಡ ಕೆಲವು ಬಹು ಮಹಡಿ ಕಟ್ಟಡಗಳಲ್ಲಿನ ತಳ ಅಂತಸ್ತಿನಲ್ಲಿ ವ್ಯಾಪಾರ ಮಳಿಗೆಗಳಿದ್ದು, ಅವುಗಳನ್ನು ತೆರವು ಮಾಡಲು ಕ್ರಮ ಜರಗಿಸಿದಾಗ ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದಾರೆ.

ನ್ಯಾಯಾಲಯದಲ್ಲಿರುವ ಇಂತಹ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಇವೆಲ್ಲದರ ಪರಿಣಾಮವಾಗಿ ಈಗ ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಪಾರ್ಕಿಂಗ್‌ ಸೌಲಭ್ಯದ ಕೊರತೆಯಿಂದಾಗಿ ಹಾಗೂ ನೋ ಪಾರ್ಕಿಂಗ್‌ ತಾಣದಲ್ಲಿ ನಿಲ್ಲಿಸಿದ ವಾಹನಗಳ ಎತ್ತಂಗಡಿಗೆ ಟೋಯಿಂಗ್‌ ವ್ಯವಸ್ಥೆಯೂ ಜಾರಿಯಾದ ಕಾರಣ ಹಾಗೂ ಅಧಿಕ ದಂಡ ವಸೂಲಿಯ ಹೊಸ ಮೋಟಾರು ವಾಹನ ಕಾಯ್ದೆ ಅನುಷ್ಠಾನದ ಹಿನ್ನೆಲೆಯಲ್ಲಿ ಈಗೀಗ ಜನರು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಅಂಗಡಿ, ಮಳಿಗೆಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಇದು ವ್ಯಾಪಾರದ ಮೇಲೆಯೂ ಪರಿಣಾಮ ಬೀರುತ್ತಿದೆ. ಏಕ ಮುಖ ರಸ್ತೆಗಳ ಮಗ್ಗುಲಲ್ಲಿದ್ದ ಮತ್ತು ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಹಲವಾರು ವ್ಯಾಪಾರ ಮಳಿಗೆಗಳು ಮುಚ್ಚಿವೆ.

ಅಧಿಕೃತ ಪಾರ್ಕಿಂಗ್‌ 8 ಕಡೆ ಮಾತ್ರ
ನಗರದಲ್ಲಿ ವಾಹನಗಳ ನಿಲುಗಡೆಗಾಗಿ ಇರುವ ಅಧಿಕೃತ ಪಾರ್ಕಿಂಗ್‌ ಸ್ಥಳಗಳು ಕೇವಲ 8 ಮಾತ್ರ. ಅವು ಕೆಲವು ವರ್ಷಗಳ ಹಿಂದೆ ಗುರುತಿಸಿದ ತಾಣಗಳು. ಫುಟ್‌ಬಾಲ್‌ ಮೈದಾನ್‌ ಬಳಿ (ಲೇಡಿಗೋಶನ್‌ ಆಸ್ಪತ್ರೆ ಎದುರು), ಹ್ಯಾಮಿಲ್ಟನ್‌ ವೃತ್ತದ ಬಳಿ, ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣ, ಜ್ಯೋತಿ ಜಂಕ್ಷನ್‌- ಬಲ್ಮಠ ರಸ್ತೆಯ ಎರಡೂ ಬದಿ, ಲಾಲ್‌ಬಾಗ್‌ನ ಪಬ್ಟಾಸ್‌ ಎದುರು, ಕರಾವಳಿ ಉತ್ಸವ ಮೈದಾನ್‌ ಎದುರು, ಮಂಗಳಾ ಕ್ರೀಡಾಂಗಣದ ಎಡಬದಿ, ಕಾರ್‌ಸ್ಟ್ರೀಟ್‌ನಿಂದ ನ್ಯೂಚಿತ್ರಾ ಜಂಕ್ಷನ್‌ ವರೆಗಿನ ರಸ್ತೆಯ ಒಂದು ಬದಿ (ಪರ್ಯಾಯವಾಗಿ ಒಂದೊಂದು ದಿನ ಒಂದೊಂದು ಬದಿ)- ಇವು ಈಗಿರುವ ಪಾರ್ಕಿಂಗ್‌ ಜಾಗಗಳು. ಈ 8 ಸ್ಥಳಗಳನ್ನು ಹೊರತು ಪಡಿಸಿದರೆ ನಗರದಲ್ಲಿ ಬೇರೆ ಎಲ್ಲಿಯೂ ಅಧಿಕೃತ ಪಾರ್ಕಿಂಗ್‌ ಎಂಬುದಿಲ್ಲ.

5 ವರ್ಷಗಳಲ್ಲಿ 4 ಪಟ್ಟು ಹೆಚ್ಚಳ
ನಗರದಲ್ಲಿ ವಾಹನಗಳ ಸಂಖ್ಯೆ 5 ವರ್ಷಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 5 ವರ್ಷಗಳ ಹಿಂದೆ (2014) ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಗೊಂಡಿದ್ದ ವಾಹನಗಳ ಸಂಖ್ಯೆ 1,72,000. ಈಗ (2019) ಮಂಗಳೂರಿನಲ್ಲಿ ವಾಹನಗಳ ಸಂಖ್ಯೆ 5,65,000ಕ್ಕೇರಿದೆ. ಅಂದರೆ ಸುಮಾರು 4 ಪಟ್ಟು ಜಾಸ್ತಿಯಾಗಿವೆ. ಇಷ್ಟು ವಾಹನಗಳ ಹೊರತಾಗಿ ಗಡಿ ಭಾಗವಾದ್ದರಿಂದ, 3 ರಾಷ್ಟ್ರೀಯ ಹೆದ್ದಾರಿಗಳ ಸಂಗಮವೂ ನಗರದಲ್ಲಿ ಆಗುವುದರಿಂದ ದಿನಂಪ್ರತಿ ಸುಮಾರು 50,000 ವಾಹನಗಳು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ನಗರದ ರಸ್ತೆಗಳಲ್ಲಿ ಹಾದು ಹೋಗುತ್ತವೆ.

- ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next