Advertisement

Traditional Toy: ಸಾಂಪ್ರದಾಯಿಕ ಆಟಿಕೆ ಪೇಟ್ಲ ಮುದ್ದು

03:37 PM Sep 01, 2024 | Team Udayavani |

ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನೂರಾದ ಉಡುಪಿಯ ಕೃಷ್ಣ ಮಠ, ರಥಬೀದಿ, ಪೇಟೆ ಸೇರಿದಂತೆ ಇಡೀ ನಗರವೇ ಸಡಗರ ಸಂಭ್ರಮದಿಂದ ಕಳೆಗಟ್ಟಿತ್ತು. ಹೀಗೆ ಮಠದ ರಥಬೀದಿಯಲ್ಲಿ ಅಲೆದಾಡುವಾಗ ವಿಶೇಷವಾಗಿ ಕಂಡಿದ್ದು ಪೆಟ್ಲ ಅನ್ನೋ ಸಾಂಪ್ರದಾಯಿಕ ಆಟಿಕೆ. ಬಾಲ್ಯದ ಆಯುಧ, ಹಿರಿಯ ಜೀವಗಳ ಆಟಿಕೆಯೆಂದೇ ಹೆಸರಾದ ಪೇಟ್ಲ ಮದ್ದು ಈ ಬಾರಿಯ ಅಷ್ಟಮಿಯಲ್ಲಿ ಕಂಡಿದ್ದು ವಿಶೇಷವೆನಿಸಿತು.

Advertisement

ಅಷ್ಟಮಿ ಎಂದರೆ ಪೇಟ್ಲ, ಪೇಟ್ಲ ಎಂದರೆ ಅಷ್ಟಮಿ ಎಂಬ ಮಾತು ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಉಡುಪಿಯ ಸುತ್ತಮುತ್ತ ಜನಪ್ರಿಯವಾಗಿತ್ತು. ಆದರೆ ಇತ್ತೀಚಿನ ಪೀಳಿಗೆಗೆ ಈ ಆಟಿಕೆಯ ಅರಿವೇ ಇಲ್ಲದಂತಾಗಿದೆ.

ಪೇಟ್ಲ ಮದ್ದಿನ ಹಿನ್ನೆಲೆ

ಈ ಹಿಂದೆ ಮಠದಲ್ಲಿ ಶ್ರೀ ಕೃಷ್ಣನಿಗೆ ಪೂಜೆ, ಮಂಗಳಾರತಿ ನಡೆಯುವ ಸಂದರ್ಭದಲ್ಲಿ ಪೇಟ್ಲ ಹೊಡೆಯುವುದು ಸಾಂಪ್ರದಾಯಿಕ ರೂಢಿಯಾಗಿತ್ತು. ಹಾಗೆಯೇ ಕೃಷ್ಣನ ಕೈಯಲ್ಲಿ ಅದನ್ನು ಕೊಟ್ಟು ಪೂಜಾ ಕೈಂಕರ್ಯಗಳು ನೆರೆವೇರಿಸುತ್ತಿದ್ದರು. ಅನಂತರ ಅದು ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಾ ಇಂದಿಗೂ ನಗರದಲ್ಲಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅಷ್ಟಮಿ ಹಾಗೂ ವಿಟ್ಲ ಪಿಂಡಿಯ ಸಂದರ್ಭದಲ್ಲಿ ಅತೀ ವಿರಳವಾಗಿ ಪ್ರಮುಖ ಆಕರ್ಷಣೆಯಾಗಿ ಕಂಡುಬರುತ್ತಿದೆ.

ಪೇಟ್ಲ ಮದ್ದಿನ ಕುರಿತ ಅರಿವು ಇತ್ತೀಚಿನ ಪೀಳಿಗೆಗೆ ಕ್ರಮೇಣ ಕಡಿಮೆಯಾಗುತ್ತಿದ್ದು, ಸದ್ಯ ಈ ಬಾರಿಯ ಅಷ್ಟಮಿಯಲ್ಲಿ ಮಠದ ಆವರಣದ ರಥಭೀದಿಯಲ್ಲಿ ಕೇವಲ ಸೀಮಿತ ಮಾರಾಟಗಾರರು ಕಂಡುಬಂದಿದ್ದು ಬೇಸರವೇನಿಸಿತು.

Advertisement

ಪೇಟ್ಲ ತಯಾರಿಕೆ ಹೇಗೆ?

ಸೀಮೆ ಕೋಲು, ಬಿದರಿನ ಕೋಲು ಮತ್ತು ತಗಡನ್ನು ಬಳಸಿ ಮಾಡುವ ಕೋವಿಯಂತ ಆಟಿಕೆ ಇದು. ಬಿದಿರಿನಲ್ಲಿ ರಂಧ್ರದೊಳಗೆ ಕಾಡಿನಲ್ಲಿ ಸಿಗುವ ಕಮಟೆಕಾಯಿ ಅಥವಾ ಪೇಟ್ಲಕಾಯಿ ಹಾಕಿ ಇನ್ನೊಂದು ಕೋಲಿನಿಂದ ಬಿದರಿನ ರಂಧ್ರದೊಳಗೆ ಹಾಕಿ ಜೋರಾಗಿ ತಳ್ಳುವುದು. ಆಗ ಪೇಟ್ಲಕಾಯಿ ಅತ್ಯಂತ ರಭಸದಿಂದ ಹೊರಬಂದು ದೂರಕ್ಕೆ ಚಿಮ್ಮುತ್ತದೆ. ಸುಮಾರು ವರ್ಷಗಳ ಹಿಂದೆ ಸೀಮೆ ಕೋಲು, ಬಿದಿರಿನ ಕೋಲು ಮತ್ತು ತಗಡನ್ನು ಬಳಸಿ ಪೇಟ್ಲ ಮದ್ದನ್ನು ತಯಾರಿಸಲಾಗುತ್ತಿತ್ತು. ಆದರೆ ಆಧುನಿಕತೆಯ ಬದಲಾವಣೆಗೆ ತಕ್ಕಂತೆ ಪ್ಲಾಸ್ಟಿಕ್‌ ಹಾಗೂ ಪ್ಲಾಸ್ಟಿಕ್‌ ಪೈಪ್‌ಗ್ಳನ್ನು ಬಳಸಿ ತಯಾರು ಮಾಡಲಾಗುತ್ತಿದೆ.

ಅದ್ದೂರಿಯಾಗಿ ಜರಗುತ್ತಿರುವ ಅಷ್ಟಮಿಯಲ್ಲಿ ಈ ಬಾರಿ ಕೆಲವೇ ಕೆಲವು ಪೇಟ್ಲ ಮದ್ದಿನ ಮಾರಾಟಗಾರರು ಕಂಡುಬಂದಿದ್ದು. ಆಧುನಿಕತೆಯ ಪ್ರಭಾವಕ್ಕೆ ಸಿಲುಕಿ ಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಈಗ ಬಿದಿರಿನ ಅಲಭ್ಯತೆ, ಕಾಡುನಾಶ, ತಯಾರಕರ ಕೊರೆತೆ ಹಾಗೂ ಖರೀದಿದಾರರ ನಿರಾಸಕ್ತಿಯಿಂದ ಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.

ಇನ್ನೊಂದು ವಿಶೇಷ ಮಾರಾಟಗಾರರೊಬ್ಬರು ಕಸದಿಂದ ರಸ ಎಂಬ ಆಲೋಚನಾದೃಷ್ಟಿಯಿಂದ, ಪೇಟ್ಲ ಮದ್ದಿನ ಆಟಿಕೆಯನ್ನು ಬಳಸಿ ಬಿಸಾಡಲಾದ ಪ್ಲಾಸ್ಟಿಕ್‌ ಬಾಟಲ್‌ಗ‌ಳಿಂದ ತಯಾರಿಸುತ್ತಿರುವುದು ಕಂಡು ವಿಶೇಷವೆನಿಸಿತು.

ಆಧುನಿಕ ತಂತ್ರಜ್ಞಾನದ ಪ್ರಭಾವಕ್ಕೆ ಸಿಕ್ಕ ಈಗಿನ ಮಕ್ಕಳಲ್ಲಿ ತಾಳ್ಮೆ ಇಲ್ಲದಿರುವುದು, ನಿರಾಸಕ್ತಿ ಮತ್ತು ಅರಿವಿನ ಕೊರತೆ, ಮಾಹಿತಿ ಇಲ್ಲದೇ ಇರುವುದು ಇತ್ಯಾದಿ ಕಾರಣದಿಂದ ಹಳೆಯ ಸಾಂಪ್ರದಾಯಿಕ ಆಟಿಕೆಗಳು ಮರೆಯಾಗುತ್ತಿವೆ. ಮಕ್ಕಳಿಗೆ ಇಂತಹ ಸಂಪ್ರದಾಯಿಕ ಹಾಗೂ ಪರಿಸರ ಸ್ನೇಹಿ ಆಟಿಕೆಗಳ ಕುರಿತ ಪರಿಚಯ ಮಾಡಿಸುವ ಕೆಲಸಗಳು ಹಿರಿಯರಿಂದ ಆಗಬೇಕಿದೆ. ಆಗ ಮಾತ್ರ ಇಂತಹ ವಿಶೇಷ ಆಟಿಕೆಗಳು ಅಳಿವು ಉಳಿವು ಸಾಧ್ಯ.

-ವಿಜಯ ಹಿರೇಮಠ

ಗದಗ

Advertisement

Udayavani is now on Telegram. Click here to join our channel and stay updated with the latest news.

Next