ಶಹಾಪುರ: ಇಂದು ಮಧ್ಯಾಹ್ನ ವೇಳೆಗೆ ಎಐಸಿಸಿ ಅಧ್ಯಕ್ಷ ನಗರಕ್ಕೆ ಆಗಮಿಸಲಿದ್ದು, ತಾಲೂಕು ಬ್ಲಾಕ್ ಕಾಂಗ್ರೆಸ್ ಪೂರ್ವ ತಯ್ನಾರಿಯನ್ನು ಸಿದ್ಧಗೊಳಿಸಿದೆ. ನಗರದಲ್ಲಿ ಎಲ್ಲಡೆ ಕಟೌಟ್, ಕಾಂಗ್ರೆಸ್ ಪಕ್ಷದ ಧ್ವಜಗಳು ರಾರಾಜಿಸುತ್ತಿವೆ. ಈ ಸಂದರ್ಭದಲ್ಲಿ ನಗರದ ವೇದಿಕೆ ಸಜ್ಜುಗೊಂಡಿರುವುದು ಪರಿಶೀಲನೆ ನಡೆಸಲು ಆಗಮಿಸಿದ್ದ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲವನ್ನೂ ವೇದಿಕೆ ಸುತ್ತಮುತ್ತ ಮೈದಾನ ಸುತ್ತ ಸಂಚರಿಸಿ ವೀಕ್ಷಿಸಿದರು.
ನಂತರ ವೇದಿಕೆ ಮೇಲೆ ಕುಳಿತು ಹಲವು ವಿಚಾರಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಂಡರು. ಹಲವು ನಿರ್ದೇಶನಗಳನ್ನು ನೀಡಿದರು. ಹತ್ತಿಗೂಡೂರ ಗ್ರಾಮದಿಂದ ನಗರದಲ್ಲಿ ಸಿದ್ಧಗೊಂಡ ವೇದಿಕೆವರೆಗೂ ರೋಡ್ ಶೋ ನಡೆಯಲಿದ್ದು, ಬೇಕಾದ ಬ್ಯಾರಿಕೇಡ್, ರಸ್ತೆ ಸಂಚಾರ ಸ್ಥಗಿತ, ಬೇರೆ ವ್ಯವಸ್ಥೆ ಅನುಕೂಲ ಕುರಿತು ಮಾಹಿತಿ ಪಡೆದರು.
ಅದರಂತೆ ಬೆಳಗಿನವರೆಗೆ ಸಮರ್ಪಕ ವ್ಯವಸ್ಥೆ ಮೇಲೆ ಹದ್ದಿನ ಕಣ್ಣಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೇಂದ್ರದ ಭದ್ರತಾ ಪಡೆ ಬೇಡಿಕೆಯಂತೆ ವ್ಯವಸ್ಥೆಗೆ ಸಹಕರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ರಾಹುಲ್ ಗಾಂಧಿ ಅವರು ಪ್ರಥಮ ಬಾರಿಗೆ ಹೈ.ಕ ಭಾಗದಲ್ಲಿ ಸಂಚರಿಸುತ್ತಿದ್ದು, ಕೇಂದ್ರದ ಭದ್ರತಾಪಡೆ ನಿಯಮನುಸಾರ ಅವಕಾಶ ಕಲ್ಪಿಸಬೇಕಿದ್ದು, ಸಾರ್ವಜನಿಕರಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಸ್ವಾಗತಕ್ಕೆ ಸಜ್ಜು ಇಡಿ ಪಟ್ಟಣ ಶೃಂಗಾರಗೊಂಡಿದೆ. ಜೆಸ್ಕಾಂ ಇಲಾಖೆ ಕಚೇರಿ ಎದುರಿನ ಮೈದಾನದಿಂದ ಹತ್ತಿಗೂಡೂರ ರಾಷ್ಟ್ರೀಯ ಹೆದ್ದಾರಿ ಮಾರ್ಗ ಇಂದು ಸಾರ್ವಜನಿಕ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ವ್ಯಾಪಾರಸ್ಥರಿಗೆ ಚಿಂತೆ ಇದೇ ಮೊದಲ ಬಾರಿಗೆ ರಸ್ತೆ ಸಂಚಾರ ಸ್ಥಗಿತಗೊಳಿಸಿರುವುದರಿಂದ ಕಿರುಕುಳ ವ್ಯಾಪಾರಸ್ಥರಲ್ಲಿ ಗೊಂದಲ ಮೂಡಿದೆ.
ಶಿವರಾತ್ರಿ ಹಬ್ಬದ ನಿಮಿತ್ತ ಹಣ್ಣು, ಹೂವು ಮಾರಾಗಾರರು ಸೇರಿದಂತೆ ಕಿರಾಣಿ ಅಂಗಡಿಗಳಿಗೆ ಉತ್ತಮ ವ್ಯಾಪಾರವಿತ್ತು. ಆದರೆ ರಾಹುಲ್ ಆಗಮನ ವ್ಯಾಪಾರಸ್ಥರ ಪಾಲಿಗೆ ರಾಹು ಬಂದೆರಗಿದಂತಾಗಿದೆ. ಅದರಲ್ಲೂ ಸೋಮವಾರ ಉತ್ತಮ ವ್ಯಾಪರವಿತ್ತು. ಗ್ರಾಮೀಣ ಭಾಗದ ರೈತಾಪಿ ಜನ ಇಂದೇ ಮಾರ್ಕೇಟ್ಗೆ ಆಗಮಿಸುತ್ತಾರೆ. ಧವಸ ಧಾನ್ಯಗಳು ಮಾರಾಟ ಗಂಜ್ನಲ್ಲಿ ಇಂದೇ ನಡೆಯುವದು. ಇದಕ್ಕೆಲ್ಲ ಬ್ರೇಕ್ ಬಿದ್ದಿರುವುದು ಜನ ಸಾಮಾನ್ಯರಲ್ಲಿ ಆತಂಕ ಮೂಡಿಸಿರುವುದು ಮಾತ್ರ ಸತ್ಯ.