Advertisement

ಪ್ರವಾಸೋದ್ಯಮ: ಜಾಗತಿಕವಾಗಿ ಗುರುತಿಸಲ್ಪಡಲಿದೆ ಬೈಂದೂರು

08:05 PM Aug 05, 2021 | Team Udayavani |

ಬೈಂದೂರು: ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರು ಪ್ರವಾಸೋದ್ಯಮ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಸಂಸದರ ವಿಶೇಷ ಪ್ರಯತ್ನ, ಶಾಸಕರ ಸಹಕಾರ ಹಾಗೂ ಅಭಿವೃದ್ಧಿ ಚಿಂತಕರ ಸಹಕಾರದಲ್ಲಿ ಮಹತ್ತರ ಯೋಜನೆಯ ಕನಸು ಚಿಗುರೊಡೆಯುತ್ತಿದೆ. ಬೈಂದೂರು ತಾಲೂಕಿನ ಸೋಮೇಶ್ವರ ಕುರಿತು ರಾಜ್ಯ ಸರಕಾರ ಕೇಂದ್ರಕ್ಕೆ 228.78 ಕೋ. ರೂ. ಯೋಜನೆಯ ಪ್ರಸ್ತಾವನೆ ಸಲ್ಲಿಸಿದೆ.

Advertisement

ಪ್ರಸ್ತಾವಿತ ಯೋಜನೆಯಲ್ಲಿ ಏನಿದೆ?:

ರಾಜ್ಯದಲ್ಲಿ ಕರಾವಳಿ, ಜಲ ಪ್ರವಾಸೋದ್ಯಮವನ್ನು ಉತ್ತೇಜಿಸಿ ಮತ್ತು ಅತ್ಯಾಧುನಿಕ ಪ್ರವಾಸಿಗರನ್ನು ಆಕರ್ಷಿಸುವುವ ಉದ್ದೇಶ, ರೋ-ರೋ ಸಂಬಂಧಿತ ಯೋಜನೆ, ಕರಾವಳಿ ಸಂಪರ್ಕಕ್ಕಾಗಿ ಮಧ್ಯಂತರ ತಾಣವಾಗಿ ಕಾರ್ಯನಿರ್ವಹಣೆ.

ಮುಂಬಯಿ- ಪಣಜಿ- ಮಂಗಳೂರು- ಕೊಚ್ಚಿ- ಲಕ್ಷದ್ವೀಪ ಮಾರ್ಗ ಮಾರ್ಗದ ಮೂಲಕ ಜಲಸಾರಿಗೆಯ ಮರೀನಾ ಯೋಜನೆ, ಪ್ರಸ್ತುತ ಸೀಮಿತ ವಾಯು ಸಂಪರ್ಕದೊಂದಿಗೆ ಜಲಾನಯನ ಪ್ರದೇಶದಲ್ಲಿ ಸೀಪ್ಲೇನ್‌ ಕಾರ್ಯಾಚರಣೆಗಳನ್ನು ಆರಂಭಿಸುವುದು. ರಾಜ್ಯದ ಪ್ರವಾಸಿಗರು ಮತ್ತು ನಿವಾಸಿಗಳಿಗೆ ಐಷಾರಾಮಿ ಅನುಭವ ಒದಗಿಸು ವುದು. ಜಲ ಆಧಾರಿತ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸುವುದು ಇದರ ಮುಖ್ಯ ಅಂಶಗಳಾಗಿದೆ.

ಈ ಯೋಜನೆ ಸಾಕಾರಕ್ಕಾಗಿ ಕಳೆದ ಆರು ತಿಂಗಳುಗಳಿಂದ ಸಂಸದರ ತಂಡ ಹಗಲಿರುಳು ಶ್ರಮಿಸಿದೆ. ಕೇಂದ್ರ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭವಿಷ್ಯದ ಪ್ರಗತಿ ಮನಗಂಡು ರೂಪಿಸಲಾಗಿದೆ. ಹೀಗಾಗಿ ಕೇಂದ್ರ ಸರಕಾರ ಇದರ ಸಾಕಾರಕ್ಕೆ ಪೂರಕವಾಗಿ ಸ್ಪಂದಿಸಿದ್ದು ಒಂದೊಮ್ಮೆ ಸಾಕಾರಗೊಂಡಲ್ಲಿ ಬೈಂದೂರಿನ ಚಿತ್ರಣವೆ ಬದಲಾಗಲಿದೆ. ಬೈಂದೂರಿನ ಮತ್ತು  ಉಡುಪಿ ಜಿಲ್ಲೆಯ ಹಾಗೂ ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವಿಶೇಷ ಕೊಡುಗೆಯಾಗಲಿದೆ. ವಿಹಾರ ನೌಕೆ ಕಟ್ಟಡ, ದೋಣಿ ಅಂಗಳ, ಸಾಗರ ಉಪಕರಣಗಳ ತಯಾರಿಕೆ, ದೋಣಿ  ಮುಂತಾದ ಇತರ ಮಿತ್ರ ಬೆಂಬಲಿತ ಉದ್ಯಮಗಳಿಗೆ ಅಗತ್ಯವಾದ ಉತ್ತೇಜನ ಗರಿಗೆದರಲಿದೆ. ಕರ್ನಾಟಕದ ಹಿಂದಿನ  ಸಿಎಂ ಯಡಿಯೂರಪ್ಪ ಈ ಯೋಜನೆಗೆ ಅನುಮೋದನೆ ನೀಡಿದ್ದಾರೆ.  ಕರ್ನಾಟಕ ಸರ್ಕಾರವು ಮೇಲಿನ ಯೋಜನೆಯ ಅಭಿವೃದ್ಧಿಯನ್ನು ಕೈಗೊಳ್ಳಲು ಉದ್ದೇಶಿಸಿ ಕೇಂದ್ರ ಸರಕಾರಕ್ಕೆ ನೀಡಿದೆ. ಒಟ್ಟು ಯೋಜನಾ ವೆಚ್ಚ ಅಂದಾಜು 228.78 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

Advertisement

ಯೋಜನಾ ರಚನೆಯನ್ನು ಸುಗಮಗೊಳಿಸಲು ಮತ್ತು ಹಣಕಾಸುಗಾಗಿ ಇಲಾಖೆಗೆ ಮಾರ್ಗದರ್ಶನ ನೀಡಲು ವಿನಂತಿಸಲಾಗಿದೆ. ರಾಜ್ಯ ಸರಕಾರದ ಪರವಾಗಿ ಸಂಸದ ಬಿ.ವೈ. ರಾಘವೇಂದ್ರ ಮುಂದಾ ಳತ್ವದಲ್ಲಿ ಕೇಂದ್ರ ಬಂದರು, ಜಲಸಾರಿಗೆ ಸಚಿವ ಸರ್ಭಾನಂದ ಸೋನೋವಾಲ್‌ ಅವರಿಗೆ ಪ್ರಸ್ತಾವನೆ ತಲುಪಿಸಲಾಗಿದೆ. ಈ ಸಂದರ್ಭದಲ್ಲಿ ಮೂಕಾಂಬಿಕಾ ಯಾತ್ರಿ ಸಂಗದ ಅಧ್ಯಕ್ಷ ವೆಂಕಟೇಶ ಕಿಣಿ ಹಾಜರಿದ್ದರು.

ಸೀಮಿತ ಗ್ರಾಮಗಳ ಸೇರ್ಪಡೆಯಿಂದಾಗಿ ಬೈಂದೂರನ್ನು ಮಾದರಿ ತಾಲೂಕು ಮಾಡುವ ಕುರಿತು ಜನ ಪ್ರತಿನಿಧಿಗಳು, ಅಧಿಕಾರಿಗಳು, ಸರಕಾರ ದೂರದೃಷ್ಟಿತ್ವದ ಚಿಂತನೆಯ ಯೋಜನೆ ರೂಪಿಸಬೇಕಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವ ಸ್ಥಾನ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯವಾಗಿದೆ ಇಲ್ಲಿನ ಶಂಕರ ಪೀಠ, ಕೊಡಚಾದ್ರಿ ಗುಡ್ಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾತ್ರಿಕರನ್ನು ಸೆಳೆಯುತ್ತಿದೆ. ಪ್ರತಿದಿನ ಕೇರಳ, ತಮಿಳನಾಡು ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಕೊಲ್ಲೂರಿಗೆ ಆಗಮಿಸುತ್ತಾರೆ. ಕೊಲ್ಲೂರಿಗೆ ತೆರಳಬೇಕಾದರೆ ಕೇರಳ ಹಾಗೂ ತಮಿಳುನಾಡಿನ ಪ್ರಯಾಣಿಕರು ಬೈಂದೂರು ಮೂಕಾಂಬಿಕಾ ರೈಲು ನಿಲ್ದಾಣದ ಮೂಲಕ ಸಾಗಬೇಕು. ಒಂದು ಸಾವಿರಕ್ಕೂ ಅಧಿಕ ಭಕ್ತರು ಬೈಂದೂರು ರೈಲು ಮೂಲಕ ಕೊಲ್ಲೂರಿಗೆ ಆಗಮಿಸುತ್ತಾರೆ.

ಕೊಲ್ಲೂರಿನಲ್ಲಿ ಈಗಾಗಲೇ ವಸತಿಗೃಹ, ಮೂಲಸೌಕರ್ಯ ಸೇರಿದಂತೆ ಸೀಮಿತ ವ್ಯಾಪ್ತಿ ಹೊಂದಿದೆ. ಅಭಯಾರಣ್ಯ ವ್ಯಾಪ್ತಿ ಇರುವುದರಿಂದ ವಿಸ್ತರಣೆ ಸಾಧ್ಯವಿಲ್ಲ. ಆದರೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಹುತೇಕ ಪ್ರವಾಸಿಗರು ಬೈಂದೂರಿನಲ್ಲಿ ವಿಶ್ರಾಂತಿ ಪಡೆದು ನಂತರ ಕೊಲ್ಲೂರಿಗೆ ಪ್ರಯಾಣಿಸುತ್ತಾರೆ. ಬೈಂದೂರಿನಿಂದ ಸರಕಾರಿ ಬಸ್‌ಗಳ ಸೇವೆ ಮತ್ತು ವಾಹನ ಸೌಲಭ್ಯಗಳಿವೆ. ಯಾವ ರೀತಿ ತಿರುಪತಿ ದೇವಸ್ಥಾನಕ್ಕೆ ತಿರುಮಲ ಉಪನಗರವಾಗಿ ಮಾರ್ಪಟ್ಟಿದೆಯೋ ಅದೇ ರೀತಿ ಕೊಲ್ಲೂರಿಗೆ ಉಪನಗರವಾಗಿ ಬೈಂದೂರು ಮಾರ್ಪಡಬೇಕಾಗಿದೆ ಎನ್ನುವುದು ಇಲ್ಲಿನ ಸಾರ್ವಜನಿಕ ಅಭಿಪ್ರಾಯವಾಗಿದೆ.

ಬೈಂದೂರಿನ ಪ್ರವಾಸಿ ಸ್ಥಳಗಳು:

ಸೋಮೇಶ್ವರ

ಕಡಲ ತೀರ

ವತ್ತಿನೆಣೆ ಕ್ಷಿತಿಜ ನೇಸರಧಾಮ

ಕೊಸಳ್ಳಿ ಜಲಪಾತ

ಜೋಗೂರು ಜಂಗ್ಲಿ ಫೀರ್‌ ಪಿಕ್‌ನಿಕ್‌ ಪಾಯಿಂಟ್‌

ಕಳುಹಿತ್ಲು ಸಮುದ್ರ ಕಿನಾರೆ

ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ

ಕೊಡಚಾದ್ರಿ

ಆನೆಝರಿ

ಮರವಂತೆ

ಬೈಂದೂರು

ಚರ್ಚ್‌ಗುಡ್ಡ

ಬೈಂದೂರು ತಾಲೂಕು ಕೇಂದ್ರವಾಗಿ ಮಾರ್ಪಟ್ಟು ಹಲವು ಮಹತ್ವಾಕಾಂಕ್ಷೆಯ ಯೋಜನೆಗಳು ಸಾಕಾರಗೊಳ್ಳುತ್ತಿದೆ.  ಬೈಂದೂರಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಅತ್ಯುತ್ತಮ ಅವಕಾಶವಿದೆ. ಸಾಗರಮಾಲಾ ಸಂಪರ್ಕದ ಜತೆಗೆ ಮರೀನಾ ಚಿಂತನೆ ಕ್ಷೇತ್ರದ ಕನಸಾಗಿದೆ. ರಾಜ್ಯ ಸರಕಾರ ಅನುಮೋದನೆಯೊಂದಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಬೈಂದೂರಿನ ಅಭಿವೃದ್ಧಿ ಚಿತ್ರಣವನ್ನೇ ಬದಲಿಸಲಿದೆ. ಬಿ.ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next