Advertisement

Tour Circle: ತಿರುಮಲನ ದರ್ಶನಕ್ಕೊಂದು ಪ್ರವಾಸ

04:30 PM Oct 25, 2024 | Team Udayavani |

ದೇಶ ಸುತ್ತಿ ನೋಡು, ಕೋಶ ಓದಿ ನೋಡು. ಜೀವನದಲ್ಲಿ ಅನುಭವ ಮುಖ್ಯ. ಒಂದೊಂದು ಅನುಭವ ಒಂದೊಂದು ಪಾಠವನ್ನು ಕಲಿಸುತ್ತದೆ. ದೇಶವನ್ನು ಸುತ್ತಿ ನೋಡಿದಷ್ಟು ವಿವಿಧ ಸಂಸ್ಕೃತಿ, ಧಾರ್ಮಿಕತೆ ಆಚಾರ ವಿಚಾರ, ಭಾಷೆ, ಅಭಿರುಚಿ ಬಗ್ಗೆ ಅನುಭವವಾಗುತ್ತದೆ.

Advertisement

ನನಗೆ ಸುಮಾರು 3 ವರುಷಗಳಿಂದ ತಿರುಪತಿಯ ತಿರುಮಲ ಬೆಟ್ಟಕ್ಕೆ ಭೇಟಿ ನೀಡಬೇಕೆಂಬ ಮಹದಾಸೆ. ಈ ಹಿಂದೆ ಎಷ್ಟು ಬಾರಿ ತಿರುಪತಿಗೆ ಹೋಗುವುದಕ್ಕೆ ತಯಾರಿ ಮಾಡಿಕೊಂಡರು, ಕೊನೆಯಲ್ಲಿ ವೈಯಕ್ತಿಕ ಕಾರಣಗಳಿಂದ ಪ್ರವಾಸ ರದ್ದಾಗುತ್ತಿತ್ತು. ಈ ಬಾರಿ ಕೊನೆಗೂ ನಾನು ಮತ್ತು ನನ್ನ ಸ್ನೇಹಿತ ಶಿಕ್ಷಕವರ್ಗ ಏನಾದರಾಗಲಿ ಜೂನ್‌ ತಿಂಗಳ ರವಿವಾರ ಮತ್ತು ಸೋಮವಾರ (ಜೂನ್‌ 16 ಮತ್ತು 17, 2024ರಂದು ನಮಗೆ ರಜೆ ಇತ್ತು) ತಿರುಪತಿ ತಿರುಮಲ ಪ್ರವಾಸಕ್ಕೆ ಹೋಗುವುದಾಗಿ ತಿರ್ಮಾನಿಸಿ, ನಾಲ್ಕು ದಿನದ ಮಟ್ಟಿಗೆ ತಿರುಪತಿ ಸುತ್ತಮುತ್ತಲಿನ ಪ್ರವಾಸಿ ತಾಣಗಳ ನಕಾಶೆ ತಯಾರು ಮಾಡಿ, ಅದರಲ್ಲಿ ತಿರುಮಲಕ್ಕೆ ಒಂದು-ಅರ್ಧ ದಿನ ಮೀಸಲಿಟ್ಟು ಪ್ರವಾಸಕ್ಕೆ ಹೊರಟೆವು.

ನಮ್ಮ ಪ್ರಯಾಣ ಶನಿವಾರ ರಾತ್ರಿ ಗದಗ ರೈಲು ನಿಲ್ದಾಣದಿಂದ ಆರಮಭವಾಯಿತು. ತಿರುಪತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕಾಯ್ದಿರಿಸಿದ ಆಸನದಲ್ಲಿ ಕುಳಿತುಕೊಂಡು ಪಯಣದ ಉದ್ದಕ್ಕೂ ಹಿಂದಿನ ಅನುಭವಗಳ ಹರಟೆ, ಶೈಕ್ಷಣಿಕ ಯೋಜನೆಗಳ ಕುರಿತು ಮಾತನಾಡುತ್ತಾ ರಾತ್ರಿ 11 ಗಂಟೆ ಸುಮಾರಿಗೆ ನಿದ್ದೆಗೆ ಜಾರಿದೆವು. ಬೆಳಿಗ್ಗೆ 7 ಗಂಟೆ ಸುಮಾರಿಗೆ ತಿರುಪತಿ ನಗರದಲ್ಲಿ ಇಳಿದು ಫ್ರೆಸ್‌ ಅಪ್‌ ಆಗಿ ಬೆಳಗಿನ ಉಪಾಹಾರ ಮುಗಿಸಿಕೊಂಡು ತಿರುಪತಿ ದೇಗುಲಕ್ಕೆ ತಲುಪಿದೆವು.

ತಿರುಮಲ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ಆಧ್ಯಾತ್ಮಿಕ ಪಟ್ಟಣವಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಬಾಲಾಜಿ ದೇವಸ್ಥಾನ), ವೆಂಕಟೇಶ್ವರ ಅಥವಾ ಬಾಲಾಜಿಯ ವಾಸಸ್ಥಾನವು ಈ ಬೆಟ್ಟದ ಪಟ್ಟಣದಲ್ಲಿದೆ. ಸಮುದ್ರ ಮಟ್ಟದಿಂದ 3,200 ಅಡಿ ಎತ್ತರದಲ್ಲಿರುವ ತಿರುಮಲವು ಶೇಷಾಚಲಂ ಬೆಟ್ಟವು ಏಳು ಶಿಖರಗಳಾದ ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಬಾದ್ರಿ, ನಾರಾಯಣಾದ್ರಿ ಮತ್ತು ವೆಂಕಟಾದ್ರಿಯಿಂದ ಆವೃತವಾಗಿದೆ.

ದೂರದ ಸ್ಥಳಗಳಿಂದ ಬರುವ ಯಾತ್ರಾರ್ಥಿಗಳು ತಮ್ಮ ಬ್ಯಾಗ್‌ ಮತ್ತು ಇತರ ಸಾಮಾನುಗಳನ್ನು ಅಲಿಪಿರಿಯ ಗೊತ್ತುಪಡಿಸಿದ ಕೌಂಟರ್‌ಗಳಲ್ಲಿ ಠೇವಣಿ ಮಾಡಬಹುದು ಮತ್ತು ತಿರುಮಲ ತಲುಪಿದ ಅನಂತರ ಅವುಗಳನ್ನು ತೆಗೆದುಕೊಳ್ಳಬಹುದು.

Advertisement

ತಿರುಮಲಕ್ಕೆ ಚಾರಣ

ತಮ್ಮ ಹರಕೆಗಳನ್ನು ಪೂರೈಸಲು ಹೆಚ್ಚಿನ ಸಂಖ್ಯೆಯ ಭಕ್ತರು ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ಹೋಗುತ್ತಾರೆ. ತಿರುಮಲಕ್ಕೆ ಚಾರಣ ಮಾಡಲು ಎರಡು ಮಾರ್ಗಗಳಿವೆ – ಒಂದು ಅಲಿಪಿರಿಯಿಂದ, ಬೆಟ್ಟಗಳ ತಪ್ಪಲಿನಲ್ಲಿ ಮತ್ತು ಇನ್ನೊಂದು ತಿರುಪತಿಯಿಂದ 12 ಕಿ.ಮೀ. ದೂರದಲ್ಲಿರುವ ಚಂದ್ರಗಿರಿಯಲ್ಲಿರುವ ಶ್ರೀವಾರಿ ಮೆಟ್ಟುವಿನಿಂದ.

ನಾವು ಅಲಿಪಿರಿಯಲ್ಲಿರುವ ಸಣ್ಣ ದೇವಾಲಯದಲ್ಲಿ ವೆಂಕಟೇಶ್ವರನ ಆಶೀರ್ವಾದವನ್ನು ಪಡೆಯುವ ಮೂಲಕ ನಾವು ನಮ್ಮ ಭಕ್ತಿಯ ಚಾರಣವನ್ನು ಪಾದಲ ಮಂಟಪದಿಂದ ಪ್ರಾರಂಭಿಸಿದೆವು. ಸುಮಾರು 9 ಕಿ.ಮೀ. ದೂರವಿರುವ 3,550 ಮೆಟ್ಟಿಲುಗಳನ್ನು ಹತ್ತಿಕೊಂಡು ಪಾದಯಾತ್ರೆಯ ಚಾರಣ(ಕಾಲ್ನಡಿಗೆ)ಮಾಡುವ ಮೂಲಕ ಪಯಣ ಬೆಳೆಸಿದೆವು. ನೂರು ಮೆಟ್ಟಿಲು ಏರುವ ತನಕ ಆಯಾಸ ಕಡಿಮೆ. ಆದರೆ ಅನಂತರದ 1,500ರ ವರೆಗಿನ ಮೆಟ್ಟಲುಗಳು ತುಂಬಾ ಪ್ರಯಾಸದಾಯಕ. ಹಾಗೆಯೇ ನಾವು ಗಾಳಿ ಗೋಪುರವನ್ನು ತಲುಪುವವರೆಗಿನ ಆರಂಭಿಕ 2,083 ಹಂತಗಳು ಅತ್ಯಂತ ಕಠಿನವಾದದ್ದು ಎಂಬುದನ್ನು ಮರೆಯಬಾರದು. ಈ ಹಂತಗಳು ತುಂಬಾ ಕಡಿದಾದವು ಮತ್ತು ಖಂಡಿತವಾಗಿಯೂ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ಮೆಟ್ಟಿಲುಗಳ ಎರಡೂ ಬದಿಯಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು.

ನಿಸ್ಸಂದೇಹವಾಗಿ, ಆರಂಭಿಕ ಹಂತಗಳು ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪರೀಕ್ಷಿಸುತ್ತವೆ. ಈ ಕಡಿದಾದ ಮೆಟ್ಟಿಲುಗಳನ್ನು ಹತ್ತುವಾಗ ನಮ್ಮ ಆಲೋಚನೆಗಳಲ್ಲಿ ದೇವರು ಮತ್ತು ಪ್ರೀತಿಪಾತ್ರರು ಕಂಡುಬಂದರೆ ಆಶ್ಚರ್ಯಪಡಬೇಡಿ. ಚಿಂತಿಸಬೇಡಿ, ನಾವಾಗಲಿ ಅಥವಾ ಭಕ್ತರಾಗಲಿ ಉಸಿರುಗಟ್ಟಿಸುವುದಿಲ್ಲ. ವಿವಿಧ ವಯೋಮಾನದ ಅನೇಕ ಯಾತ್ರಿಕರು ಗಾಳಿಗಾಗಿ ತಬ್ಬಿಬ್ಬು ಮಾಡುತ್ತಾರೆ. ವಯಸ್ಸಾದ ಭಕ್ತರಿಂದ ಸ್ಫೂರ್ತಿ ಪಡೆದು ಚಾರಣವನ್ನು ಮುಂದುವರಿಸಿ. ಇಡೀ ಚಾರಣದಲ್ಲಿ ಗೋವಿಂದಾ ಗೋವಿಂದಾ ಘೋಷಣೆಗಳು ಪ್ರತಿಧ್ವನಿಸುತ್ತವೆ.

ಗಾಳಿ ಗೋಪುರ

ಮೆಟ್ಟಲುಗಳ ಸಂಖ್ಯೆ 2,083ರಲ್ಲಿ ಗಾಳಿ ಗೋಪುರ ಕಾಣಸಿಗುತ್ತದೆ. ಇಲ್ಲಿಂದ ಮುಂದೆ ಸಾಗುವ ಮೊದಲು ಹಿಂದಿರುಗಿ ಮತ್ತು ಪರ್ವತಗಳ ಮೂಲಕ ನಗರದ ಸುಂದರ ನೋಟವನ್ನು ಆನಂದಿಸಿ. ತಂಪಾದ ಗಾಳಿಯೊಂದಿಗೆ ಈ ಸುಂದರವಾದ ನೋಟವು ನಿಮ್ಮ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಮಾಯವಾಗಿಸುತ್ತದೆ. ತಿಂಡಿ ಮತ್ತು ಟಿಫಿನ್‌ಗಳನ್ನು ಮಾರುವ ಉತ್ತಮ ಅಂಗಡಿಗಳು ಇಲ್ಲಿ ಇರುತ್ತವೆ. ನೀವು ದಣಿದಿದ್ದರೆ ಇಲ್ಲಿ ವಿರಾಮ, ವಿಶ್ರಾಂತಿ ಪಡೆಯಬಹುದು.

ಈ ಹಂತದಿಂದ ಹಂತ ಸಂಖ್ಯೆ 2,910 (ಮೊಕ್ಕಲ್ಲ ಪರ್ವತಂ ಅಥವಾ ಮೊಕಲಿಮಿಟ್ಟ ಗೋಪುರ) ವರೆಗೆ ಚಾರಣ ಸುಗಮವಾಗಿರುತ್ತದೆ. ಈ ವಿಸ್ತರಣೆಯು ಹೆಚ್ಚಾಗಿ ಸಮತಟ್ಟಾಗಿರುತ್ತದೆ. ಭಕ್ತರು ಗಾಳಿ ಗೋಪುರದಲ್ಲಿ ಟಿಟಿಡಿ ನೀಡುವ ಉಚಿತ ದರ್ಶನ ಟಿಕೆಟ್‌ಗಳನ್ನು ಪಡೆಯಬಹುದು. ಜನಸಂದಣಿಯನ್ನು ಅವಲಂಬಿಸಿ ಟಿಟಿಡಿ ಈ ಸೌಲಭ್ಯವನ್ನು ಶನಿವಾರ, ರವಿವಾರ ಮತ್ತು ಗುರುವಾರ ರದ್ದುಗೊಳಿಸುತ್ತದೆ.

ಗಾಳಿ ಗೋಪುರದಿಂದ ಕೆಲವು ಕಿಲೋಮೀಟರ್‌ ನಡೆದ ಅನಂತರ, ಭಕ್ತರು 7ನೇ ಮೈಲಿನಲ್ಲಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ (ಹನುಮಾನ್‌) ಮೂರ್ತಿಯನ್ನು ಕಾಣಬಹುದು. ಇದನ್ನು ದಾಟಿದ ಅನಂತರ ಫ‌ುಟ್‌ಪಾತ್‌ನ ಎರಡೂ ಬದಿಯಲ್ಲಿ ಜಿಂಕೆ ಪಾರ್ಕ್‌ ಕಾಣಸಿಗುತ್ತದೆ.

ಮೊಕ್ಕಲ್ಲ ಪರ್ವತಂ ಎನ್ನುವುದು ಈ ಚಾರಣದ ಅಂತಿಮ ಹಂತವೆಂದು ಪರಿಗಣಿಸಲಾಗುತ್ತದೆ. ಈ ಹಂತವನ್ನು ಇಡೀ ಟ್ರೆಕ್‌ನ ಅತ್ಯಂತ ಕಡಿದಾದ ಹಂತ ಎನ್ನಲಾಗುತ್ತದೆ. ಪ್ರಸ್ತುತ ಸಂಪೂರ್ಣ ಮೆಟ್ಟಿಲು ದಾರಿಯಲ್ಲಿ ಬಿಸಿಲು ಮತ್ತು ಮಳೆಯಿಂದ ಯಾತ್ರಾರ್ಥಿಗಳನ್ನು ರಕ್ಷಿಸಲು ಮೇಲ್ಛಾವಣಿಯನ್ನು ಹಾಕಲಾಗಿದೆ. ದಾರಿ ದೀಪಗಳನ್ನೂ ಅಳವಡಿಸಲಾಗಿದ್ದು, ಕಾಲ್ನಡಿಗೆಯಲ್ಲಿ ಬಂದ ಭಕ್ತರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.

ತಾಳ್ಮೆಯ ದರ್ಶನ

ನಾವು ದೇಗುಲಕ್ಕೆ ವಾರಾಂತ್ಯದಲ್ಲಿ ಭೇಟಿ ನೀಡಿದ್ದರಿಂದ ಭಾರೀ ಜನಸಂದಣಿ ಕಂಡುಬಂದಿತು. ಸಂಜೆ 6 ಗಂಟೆಗೆ ಸರತಿ ಸಾಲಿನಲ್ಲಿ ನಿಂತ ನಾವು ಬೆಳಗ್ಗೆ 7 ಗಂಟೆ ವೆಟಿಂಗ್‌ ಹಾಲ್‌ಗೆ ತಲುಪಿ ಫ್ರೆಸ್‌ಅಪ್‌ ಆಗಿ ಬೆಳಗಿನ ವೇಳೆ ಅಲೂ³ಪಹಾರ ಚಹಾ ಸೇವನೆ(ಹಾಗೆಯೇ ಮಧ್ಯಾಹ್ನ ಊಟದ ವ್ಯವಸ್ಥೆ ಕೂಡ ಇರುತ್ತದೆ) ಮಾಡಿ, ವಿಶ್ರಾಂತಿ ತೆಗೆದುಕೊಓಡೆವು. ಅನಂತರ ವೈಕುಂಠಂ ಹಾಲ್‌ಗ‌ಳಲ್ಲಿ ನಮಗೆ ದರ್ಶನದ ಪ್ರವೇಶ ಗುರುತಿನ ಚೀಟಿ ನೀಡಿದರು. ಅಲ್ಲಿ ನಮ್ಮಗೆ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಜತೆಗೆ ನಾವು ತಿಮ್ಮಪ್ಪನ ದರ್ಶನವನ್ನು ಯಾವಾಗ ಪಡೆಯಬಹುದು ಎಂದು ಸಮಯ ತಿಳಿಸಲಾಗುತ್ತದೆ. ಹೀಗೆ ಸುಮಾರು 36 ಗಂಟೆಗಳ ಅನಂತರ ವೈಕುಂಠನ ದರ್ಶನವಾಯಿತು. ಮನಸಿಗೆ ಮುದ ನೀಡುವ ಸನ್ನಿವೇಶ ಸೃಷ್ಟಿಯಾಗಿ ಆ 36 ಗಂಟೆಗಳ ಕಾಯುವಿಕೆ ಮರೆತು ದೇವರ ಧ್ಯಾನದಲ್ಲಿ ತಲ್ಲಿನರಾದೆವು. ಬಳಿಕ ತಿಮ್ಮಪ್ಪನ ಪ್ರದಾದ ಲಾಡು ಪಡೆದುಕೊಂಡು ಅಲ್ಲಿಂದ ಹೊರಟು ಜಾತ್ರೆಯ ಅಂಗಡಿಗಳ ಕಡೆಗೆ ಹೆಜ್ಜೆ ಹಾಕಿದೆವು.

ಬಳಿಕ ತಿರುಮಲ ಬಸ್‌ ನಿಲ್ದಾಣದಿಂದ ತಿರುಪತಿ ನಗರಕ್ಕೆ ಬಂದು ಅಲ್ಲಿನ ಪದ್ಮಾವತಿ ದೇವಿ(ಅಲಮೇಲುಮಂಗ)ಯ ದರ್ಶನ ಪಡೆದು ಅಲ್ಲಿಂದ ದಕ್ಷಿಣ ಕೈಲಾಸವೆಂದು ಪ್ರಸಿದ್ಧಿ ಪಡೆದ ಶ್ರೀಕಾಳಹಸ್ತಿಯ(ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ) ಕಾಳಹಸ್ತೀಶ್ವರ ಹಾಗೂ ಜ್ಞಾನ ಪ್ರಸನ್ನಾಂಬಿಕೆ ದೇಗುಳಿಗೆ ಭೇಟಿ ನೀಡಿ ಬಳಿಕ ತಿರುಪತಿಗೆ ಬಂದು ರೈಲಿನಲ್ಲಿ ಗದಗದತ್ತ ಪ್ರಯಾಣ ಬೆಳಸಿ, ಬೆಳಿಗ್ಗೆ 7 ಗಂಟೆಗೆ ಗದಗ ತಲುಪಿದೆವು.

ಒಟ್ಟಾರೆಯಾಗಿ ಪ್ರವಾಸವು ಭಕ್ತಿ, ಭಕ್ತರ ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಮಾರ್ಗ. ಆಯಾಯ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಅನುಕೂಲ ಮಾಡುತ್ತದೆ. ಇಂತಹ ಯಾತ್ರೆಗಳು ನಮ್ಮಲ್ಲಿ ಧಾರ್ಮಿಕ ಹಾಗೂ ಜ್ಞಾನದ ದೀವಿಗೆಯನ್ನು ಉದ್ದೀಪನಗೊಳಿಸುವ ಶಕ್ತಿಯನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಆರೋಗ್ಯದಲ್ಲೂ ಚೇತರಿಕೆ ತಂದುಕೊಟ್ಟು, ಒತ್ತಡ ಕಡಿಮೆ ಮಾಡುವ ಸುಂದರ ಚಟುವಟಿಕೆಯೂ ಹೌದೆನ್ನಬಹುದು.

ಬಸವರಾಜ ಎಂ. ಯರಗುಪ್ಪಿ

ಗದಗ

Advertisement

Udayavani is now on Telegram. Click here to join our channel and stay updated with the latest news.

Next