Advertisement

ಲೋಕಸಮರದ ಟಾಪ್‌ ಟೆನ್‌ ವಿಷಯಗಳು

12:30 AM Mar 12, 2019 | Team Udayavani |

  ರಾಷ್ಟ್ರೀಯ ಭದ್ರತೆ
1990ರ ಬಳಿಕ ಇದೇ ಮೊದಲ ಬಾರಿಗೆ ಈ ವಿಚಾರ ಆದ್ಯತೆಯಲ್ಲಿ ಚರ್ಚೆಯಾಗುತ್ತಿದೆ. ಫೆ.14ರಂದು ಪುಲ್ವಾಮಾದಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯು ಹತ್ಯೆ ಮಾಡುವವರೆಗೂ ರಾಷ್ಟ್ರೀಯ ಭದ್ರತೆಯು ಚುನಾವಣಾ ಪ್ರಚಾರದ ಆದ್ಯತೆಯ ವಿಚಾರವಾಗಿರಲಿಲ್ಲ. ಈ ಘಟನೆಗೆ ಪ್ರತೀಕಾರವಾಗಿ  ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ಸರ್ಜಿಕಲ್‌ ದಾಳಿ ನಡೆಸಿದ ಬಳಿಕ ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ ವಿಚಾರ ಮುಂಚೂಣಿಗೆ ಬಂದಿತು. 

Advertisement

  ಹಣದುಬ್ಬರ
ಯಾವುದೇ ಸರ್ಕಾರಕ್ಕೂ ಹಣದುಬ್ಬರವನ್ನು ನಿಭಾಯಿಸುವುದು ಸವಾಲಿನ ಕೆಲಸವೇ.ಯುಪಿಎ ಅವಧಿಯಲ್ಲಿ ಆ ಮೈತ್ರಿಕೂಟ ಸರ್ಕಾರಕ್ಕೆ ಭ್ರಷ್ಟಾಚಾರ ಮತ್ತು ನೀತಿ ನಿರೂಪಣೆಗೆ ಬಡಿದಿದ್ದ ಗ್ರಹಣವೇ ಮುಂದೆ ಅದಕ್ಕೆ ಮುಳುವಾಗಿ ಪರಿಣಮಿಸಿತ್ತು. ನರೇಂದ್ರ ಮೋದಿ ಸರ್ಕಾರ ಹಣದುಬ್ಬರ ವಿಚಾರವನ್ನು ಸಮರ್ಥವಾಗಿ ಎದುರಿಸಿದೆ. ಕೆಲವು ತಜ್ಞರ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿನ ಕೆಲವೊಂದು ಪರಿಸ್ಥಿತಿ ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಬಹುದು. 

  ಉದ್ಯೋಗ
2014ರ ಚುನಾವಣೆ ಪ್ರಚಾರದ ವೇಳೆ ವಾಗ್ಧಾನ ಮಾಡಿದಷ್ಟು ಸಂಖ್ಯೆಯಲ್ಲಿ ನರೇಂದ್ರ ಮೋದಿ ಸರ್ಕಾರ ಉದ್ಯೋಗ ಸೃಷ್ಟಿಸಿಲ್ಲ ಎನ್ನುವುದು ಪ್ರತಿಪಕ್ಷಗಳ ಆರೋಪ. ನೋಟುಗಳ ಅಮಾನ್ಯ ಮತ್ತು ಜಿಎಸ್‌ಟಿ ಜಾರಿ ಮಾಡಿದ್ದರಿಂದಾಗಿ ಆ ಕ್ಷೇತ್ರಕ್ಕೆ ಗಣನೀಯ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಆದರೆ ಸರ್ಕಾರ, ಇಪಿಎಫ್ಒ ದಾಖಲೆಗಳ ಮೂಲಕ ಉದ್ಯೋಗ ಸೃಷ್ಟಿಯಾಗಿಲ್ಲವೆನ್ನುವ ಆರೋಪಗಳಿಗೆ ಪ್ರತ್ಯುತ್ತರ ನೀಡಿದೆ.

 ಕೃಷಿ ಬಿಕ್ಕಟ್ಟು
2014ರ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದೇ ಗ್ರಾಮೀಣ ಕ್ಷೇತ್ರದ ಮತದಾರರು. ಕಳೆದ ಐದು ವರ್ಷದಲ್ಲಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇರುವುದು, ಹೂಡಿಕೆ ಮಾಡಿದ ಬಂಡವಾಳಕ್ಕೆ ತಕ್ಕಷ್ಟು ಲಾಭ ಬರದೇ ಇರುವುದು ಅವರನ್ನು ಕುಗ್ಗಿಸಿದೆ. ನೋಟು ಅಮಾನ್ಯದ ಜತೆಗೆ ಬೆಳೆದು ನಿಂತ ಪೈರಿಗೆ ಹಾನಿ ಉಂಟಾದದ್ದು ಅವರ ಪರಿಸ್ಥಿತಿಯನ್ನು ಹದಗೆಡಿಸಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ 2018ರ ನವೆಂಬರ್‌-ಡಿಸೆಂಬರ್‌ನಲ್ಲಿ ನಡೆದಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿತ್ತು. 

  ಓಲೈಕೆ ರಾಜಕಾರಣ
ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಧ್ರುವೀಕರಣದ ಪ್ರಮಾಣ ಹೆಚ್ಚು. 2014ರಲ್ಲಿಯೇ ಕಾಂಗ್ರೆಸ್‌ಗೆ ತಾನು ಅಲ್ಪಸಂಖ್ಯಾತರ ಪರ ಎಂಬ ಹಣೆಪಟ್ಟಿಯನ್ನು ಇದೇ ಕಾರಣದಿಂದ ಕೊಂಚ ಸಡಿಲಿಸಿಕೊಂಡಿತ್ತು. ಬಾರಿ ರಾಹುಲ್‌ ಗಾಂಧಿ ಅನೇಕ ಹಿಂದೂ ದೇಗುಲಗಳಿಗೆ ಭೇಟಿ ನೀಡಿದ್ದು, ಈ ಹಣೆಪಟ್ಟಿಯಿಂದ ಹೊರಬರುವ ಪ್ರಯತ್ನವೆಂಬಂತೆ ಕಾಣಿಸುತ್ತದೆ. 

Advertisement

  ಜಾತಿ ಲೆಕ್ಕಾಚಾರ
ದೇಶದ ಚುನಾವಣೆಯ ಮೇಲೆ ಭಾರೀ ಪರಿಣಾಮ ಬೀರುತ್ತಾ ಬಂದಿರುವ ವಿಚಾರ ಇದಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಎದುರಿಸಲು ಕಾಂಗ್ರೆಸ್‌ ಮತ್ತು ಇತರೆ ಪ್ರದೇಶಗಳಿಗೆ ಉತ್ತರ ಭಾರತದಲ್ಲಿ ಯಾದವರು, ಜಾಟರು, ಮುಸ್ಲಿಂ ಸಮುದಾಯದವರ ಮತ ಪಡೆಯಬೇಕಾದ ಅನಿವಾರ್ಯತೆ. ಉತ್ತರ ಪ್ರದೇಶದಲ್ಲಂತೂ ಜಾತಿ ರಾಜಕೀಯ ಹೆಚ್ಚಾಗಿದೆ. ಈ ಮೂರು ಸಮುದಾಯಗಳು ಎಸ್‌ಪಿ, ಬಿಎಸ್‌ಪಿ ಪರ ಹೆಚ್ಚಿನ ಒಲವು ತೋರುತ್ತಿದ್ದಾರೆ. 2014ರಲ್ಲಿ ಎನ್‌ಡಿಎ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನರೇಂದ್ರ ಮೋದಿಯವರ ವರ್ಚಸ್ಸು ಕಾರಣವಾಗಿತ್ತು. ಅದರಿಂದಾಗಿಯೇ ಪ್ರತಿಪಕ್ಷಗಳಿಗೇ ಹೆಚ್ಚಿನ ಸಂಖ್ಯೆಯಲ್ಲಿ ಮತಹಾಕುತ್ತಿದ್ದ ಸಮುದಾಯಗಳೂ ಬಿಜೆಪಿ ಪರವಾಗಿಯೇ ಹಕ್ಕು ಚಲಾವಣೆ ಮಾಡಿದ್ದವು. 

  ನರೇಂದ್ರ ಮೋದಿ
ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳಲು ಇರುವುದು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸಂಘಟನಾ ಕೌಶಲ್ಯ ಪ್ರಧಾನಿ ಮೋದಿಯವರ ಪರವಾಗಿರುವ ಮತಗಳಾಗಿ ಪರಿವರ್ತನೆಯಾಗಲಿದೆ ಎಂದು ಬಿಜೆಪಿ ಭಾವಿಸಿಕೊಂಡಿದೆ. ಆದರೆ ಪ್ರತಿಪಕ್ಷಗಳು ಮೋದಿಯವರು ಆರಂಭದಲ್ಲಿ ಹೊಂದಿದ್ದ ವರ್ಚಸ್ಸು ಕುಂದಿದೆ ಎನ್ನುತ್ತವಾದರೂ ಈಗಲೂ ಪ್ರತಿಪಕ್ಷಗಳೆಲ್ಲ ನರೇಂದ್ರ ಮೋದಿಯವರನ್ನೇ ತಮ್ಮ ಮುಖ್ಯ ಎದುರಾಳಿ ಎಂದು ಭಾವಿಸಿ, ಅಂತೆಯೇ ವರ್ತಿಸುತ್ತಿವೆ. 

  ವಿವಿಧ ಅಭಿವೃದ್ಧಿ ಯೋಜನೆಗಳು.
ಮೋದಿ ಸರ್ಕಾರದ ಅವಧಿಯಲ್ಲಿ ವಿವಿಧ ರೀತಿಯ ಅಭಿವೃದ್ಧಿ ಯೋಜನೆಗಳು ಜಾರಿಯಾದವು. ಇಷ್ಟು ಮಾತ್ರವಲ್ಲ ಅದನ್ನು ಸಮರ್ಪಕವಾಗಿ ಜಾರಿ ಮಾಡಲಾಗಿದೆ. ಸ್ವತ್ಛ ಭಾರತ, ಉಜ್ವಲಾ, ಆಯುಷ್ಮಾನ್‌ ಭಾರತ್‌ ಮೊದಲಾದವುಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅವಧಿಯಲ್ಲಿನ ಪ್ರಮುಖ ಯೋಜನೆಗಳು. ಪ್ರಚಾರ ಕಾರ್ಯಗಳಲ್ಲಿ ಈ ವಿಷಯಗಳನ್ನು ಮುನ್ನೆಲೆಗೆ ತರಲು ಮುಂದಾಗಿದೆ ಬಿಜೆಪಿ.

  ಭ್ರಷ್ಟಾಚಾರ
ಯುಪಿಎಗೆ ಸೋಲು ತಂದುಕೊಟ್ಟ ವಿಚಾರ ಇದು. ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿತ್ತು.  ರಫೇಲ್‌ ಡೀಲ್‌ನಲ್ಲಿ ಭ್ರಷ್ಟಾಚಾರ ಉಂಟಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಚಾರ ನಡೆಸಿದ್ದರೂ, ಅದರಿಂದ ಬಿಜೆಪಿ ಧೃತಿಗೆಟ್ಟಂತೆ ಕಾಣುತ್ತಿಲ್ಲ. ಕಾಂಗ್ರೆಸ್‌ ತನ್ನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸೋಲುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ರಫೇಲ್‌ ವಿಚಾರವನ್ನೂ ಮುನ್ನೆಲೆಯಲ್ಲಿಟ್ಟು ಮತದಾರರ ಮುಂದೆ ಹೋಗುವ ಲಕ್ಷಣಗಳು ಗೋಚರಿಸುತ್ತಿದೆ. 

  ಯುವ ಮತದಾರರು
ಈ ಬಾರಿ ಹೆಚ್ಚಿನ ಸಂಖ್ಯೆಯ ಮತದಾರರು ಲೋಕಸಭೆ ಚುನಾವಣೆಯ ಫ‌ಲಿತಾಂಶದ ಮೇಲೆ ಪ್ರಭಾವ ಬೀರಲಿದ್ದಾರೆ. ಮೊದಲ ಬಾರಿಗೆ ಹಕ್ಕು ಚಲಾಯಿಸಲಿರುವ ಈ ವರ್ಗವನ್ನು ತಮ್ಮತ್ತ ಸೆಳೆದುಕೊಳ್ಳಲು ಎಲ್ಲಾ ಪಕ್ಷಗಳೂ ಮುಂದಾಗಿವೆ.  ಈ ಕಾರಣಕ್ಕಾಗಿಯೇ, ಸೋಷಿಯಲ್‌ ಮೀಡಿಯಾವನ್ನು ಯಾವ ಪಕ್ಷವೂ ಹಗುರಾಗಿ ಪರಿಗಣಿಸುತ್ತಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next