Advertisement

ಜನಮುಖಿ ಕೆಲಸ ಮಾಡದ ಉನ್ನತ ಅಧಿಕಾರಿ ನಾಲಾಯಕ್: ನಾರಾಯಣಸ್ವಾಮಿ

02:23 PM Oct 17, 2022 | Team Udayavani |

ಕಲಬುರಗಿ: ”ದೊಡ್ಡ ಓದು ಓದಿ ಬಂದು ಕುರ್ಚಿಯಲ್ಲಿ ಕುಳಿತು ಒಳ್ಳೆಯ ಮತ್ತು ಸಮಾಜ ಬಯಸುವ ಕೆಲಸ ಮಾಡದೇ ಇರುವ ಅಧಿಕಾರಿಯ ಓದು ಮೌಲ್ಯವಿಲ್ಲದ್ದು ಮತ್ತು ಅಂತಹ ನಿರ್ಜೀವ ಅಧಿಕಾರಿ ನಾಲಾಯಕ್” ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

Advertisement

ಕಡಗಂಚಿ ಬಳಿ ಇರುವ ಸಿಯುಕೆನಲ್ಲಿ ಅಂಬೇಡ್ಕರ್ ಸೆಂಟರ್ ಆಫ್ ಎಕ್ಸ್ ಲೆನ್ಸ್ ಹಾಗೂ ೩ ವಸತಿ ನಿಲಯಗಳನ್ನು ಉದ್ಘಾಟಿಸಿ ಮಾತನಾಡಿ,ಯಾವ ಉನ್ನತ ಅಧಿಕಾರಿ ದೇಶದ ಉನ್ನತ ತರಬೇತಿಗಳಾದ ಐಎಎಸ್, ಐಪಿಎಸ್, ಕೆಎಎಸ್ ಓದಿ, ಉನ್ನತ ಹುದ್ದೆ ಪಡೆದು ವಿಧಾನಸೌಧದಲ್ಲಿ ಬಂದು ಕುಳಿತು ಕೆಲಸ ಮಾಡದೇ ಇದ್ದರೆ ಹೇಗೆ ಎಂದ ಅವರು, ಅಂತಹ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅಧಿಕಾರಿ ವರ್ಗಕ್ಕೆ ಚಾಟಿ ಬೀಸಿದರು.

ಅಧಿಕಾರಿ ವರ್ಗ ಮತ್ತು ವಿದ್ಯಾರ್ಥಿಗಳು ಪಡೆಯುವ ಪದವಿಪತ್ರದಲ್ಲಿ ನಮ್ಮ ಬದುಕು ಬದಲಿ ಮಾಡುವ ಜಾದೂ ಇಲ್ಲ ಎಂದು ಕಿವಿ ಮಾತು ಹೇಳಿದ ಅವರು, ನಾವು ಕಲಿಯುವ ಮತ್ತು ಪಡೆಯುವ ಜ್ಞಾನದಿಂದ ಮಾತ್ರ. ಅದನ್ನು ವಿವಿಗಳಯ, ಪ್ರೋಫರಸರ್ ಗಳು ವರ್ಗ, ಜಾತಿ ರಹಿತವಾಗಿ ಜ್ಞಾನ ನೀಡಬೇಕು. ಆಗಲೇ ಹೊಸ ಶಿಕ್ಷಣ ನೀತಿಗೆ ಖದರ್ ಬರುತ್ತದೆ ಎಂದರು.

ನಮ್ಮ ದೇಶದಲ್ಲಿ ವರ್ಗ, ಸಮಾಜ ಮತ್ತು ಜಾತಿ ನೋಡಿ ಶಿಕ್ಷಣ ನೀಡುವಂತಹ ಮೀಸಲು ವ್ಯವಸ್ಥೆಯಿಂದ ಹಂತ,ಹಂತವಾಗಿ ನಡೆದು ಬಂದು ಇವತ್ತು ಸಂವಿಧಾನ ಮೀಸಲಾತಿ ಅಡಿಯಲ್ಲಿ ದಲಿತ ಸಮುದಾಯಕ್ಕೆ ಯುಪಿಎಸ್ ಸಿ ಅಂತಹ ಉನ್ನತ ಹುದ್ದೆಗೇರುವಂತಹ ಅವಕಾಶ ಇಂದು ಸಿಯುಕೆಯಲ್ಲಿ ನೀಡುತ್ತಿರುವುದು ಸ್ವಾಗತಾರ್ಹ ಎಂದ ಅವರು, ಇದರ ಸಂಪೂರ್ಣ ಲಾಭವನ್ನು ಶೋಷಿತವರ್ಗದ ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ಶೋಷಿತರು ಎಂದರೆ ಕೇವಲ ದಲಿತರಲ್ಲ. ಎಲ್ಲ ಜಾತಿಗಳಲ್ಲಿ ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರೆಲ್ಲರೂ ಶೋಷಿತರೇ ಎಂದ ಅವರು, ನಾನು ಯಾರ ಬಳಿಯಲ್ಲಿ ಕೈ..ಕಾಲು ಹಿಡಿದು ಅಧಿಕಾರಕ್ಕೆ ಬಂದವನಲ್ಲ.. ಆದ್ದರಿಂದ ನಾನು ಹೇಳುವ ರೀತಿಯಲ್ಲಿ ಜನಮುಖಿ ಕೆಲಸವಾಗಬೇಕು ಎಂದು ಹಠ ಹಿಡಿದೆ. ಪರಿಣಾಮ ರಾಜ್ಯದಲ್ಲಿ ಸಚಿವ ಸ್ಥಾನ ಬಿಡಬೇಕಾಯಿತು. ಬಳಿಕ ಪಕ್ಷದ ಹಿರಿಯರು ಕೇಂದ್ರದಲ್ಲಿ ಸ್ಥಾನ ಸಿಕ್ಕಿತು ಎಂದರು.

Advertisement

ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ವಿವಿ ಈ ಭಾಗದ ಮತ್ತು ದೇಶದ ಇತರೆ ಭಾಗದ ಮಕ್ಕಳಿಗೆ ಒಳ್ಳೆಯ ಉನ್ನತ ಶಿಕ್ಷಣ ನೀಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಅಲ್ಲದೆ, ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಮೂಲಕ ದೇಶದ ಯುವ ಸಮೂಹಕ್ಕೆ ಔದ್ಯೋಗಿಕ ಅವಕಾಶಗಳನ್ನು ತೆರೆಯುತ್ತಿದೆ. ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಕೆಕೆಆರ್ ಡಿಬಿಯಿಂದ ೨.೫ ಕೋಟಿ ರೂಗಳಲ್ಲಿ ವಸತಿ ನಿಲಯ ಕಟ್ಟಲಾಗಿದೆ. ದಲಿತ ಸಮಾಜಕ್ಕೆ, ಹಿಂದುಳಿದ ವರ್ಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಉನ್ನತ ಹುದ್ದೆಗಳ ತರಬೇತಿ ನೀಡಲು ಅಂಬೇಡ್ಕರ್ ಸೆಂಟರ್ ಆಫ್ ಎಕ್ಸ್ ಲೆನ್ಸ್ ಆರಂಭಿಸಲಾಗುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿದರು.ವಿಸಿ ಪ್ರೊ.ಬಟ್ಟು ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುಲಸಚಿವ ಪ್ರೊ. ಬಸವರಾಜ್ ಡೋಣೂರ ಸ್ವಾಗತಿಸಿದರು. ಶಾಸಕ ಸುಭಾಸ ಗುತ್ತೇದಾರ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರ ಕುಮಾರ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next