Advertisement

ಹತ್ತಾರು ತಲ್ಲಣಗಳ ನಡುವೆ ಒಲಿಂಪಿಕ್ಸ್‌ಗೆ ಸಿದ್ಧವಾಗಿದೆ ಟೋಕಿಯೊ

02:07 AM Jul 13, 2021 | Team Udayavani |

ಟೋಕಿಯೊ ಒಲಿಂಪಿಕ್ಸ್‌ ಕಳೆದ ವರ್ಷವೇ ನಡೆಯಬೇಕಿತ್ತು. ಸಮಯಕ್ಕೆ ಸರಿ  ಯಾಗಿ ಕೊರೊನಾ ಹಾಜರಾಗಿ ಈ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಗ್ರಹಚಾರ  ವೆಂದರೆ ಈ ಬಾರಿ ಮತ್ತೆ ಕೊರೊನಾ ವಿಶ್ವಾದ್ಯಂತ ತೀವ್ರಗೊಳ್ಳು ತ್ತಿರುವುದರಿಂದ ಮತ್ತೂಮ್ಮೆ ಟೋಕಿಯೊದಲ್ಲಿ ಸಂಕಟ, ತಳಮಳ ಶುರುವಾ ಗಿದೆ. ಇನ್ನೇನು ಕೂಟ ಜು.23ರಿಂದ ಶುರುವಾಗಲಿದೆ. ಈಗಲೂ ಒಲಿಂಪಿಕ್ಸ್‌ ನಿಲ್ಲಿಸಿ ಎಂಬ ಪ್ರತಿಭಟನೆ ಜಪಾನ್‌ನಲ್ಲಿ ನಿಂತಿಲ್ಲ. ಅದಕ್ಕೆ ಕಾರಣ ಕೊರೊನಾ ಪ್ರಕರಣಗಳು ಟೋಕಿಯೊದಲ್ಲಿ ಏರುತ್ತಲೇ ಇರುವುದು.

Advertisement

ಇವೆಲ್ಲದರ ಮಧ್ಯೆ ಜಪಾನ್‌ ಸರಕಾರ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಈ ಬಾರಿಯ ಒಲಿಂಪಿಕ್‌ ಅನ್ನು ಸವಾಲಾಗಿ ಸ್ವೀಕರಿಸಿವೆ. ಶತಾಯಗತಾಯ, ಎಂತಹ ಪರಿಸ್ಥಿತಿಯಲ್ಲೂ ಕೂಟವನ್ನು ನಡೆಸಿಯೇ ಸಿದ್ಧವೆನ್ನುವುದು ಇವರ ಹಠ. ಸೋಂಕಿನ ಕಾರಣ ಮೊದಲು ಜಪಾನಿ ಪ್ರೇಕ್ಷಕರಿಗೆ ಮಾತ್ರ ಪ್ರವೇಶ, ವಿದೇಶೀಯರಿಗಿಲ್ಲ ಎಂದು ಘೋಷಿಸಲಾಗಿತ್ತು. ಮೊನ್ನೆಮೊನ್ನೆಯಷ್ಟೇ ತುರ್ತುಪರಿಸ್ಥಿತಿ ಹೇರುವ ಮೂಲಕ ಜಪಾನಿ ಪ್ರೇಕ್ಷಕರಿಗೂ ಪ್ರವೇಶವಿಲ್ಲ ಎಂದು ಹೇಳಲಾಗಿದೆ! ಇಷ್ಟೆ  ಲ್ಲದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕವಾಗಿ ಒಲಿಂಪಿಕ್ಸ್‌ ರದ್ದು ಮಾಡಿ ಎಂಬ ಹೋರಾಟ ನಿಂತಿಲ್ಲ. ಹಾಗಾಗಿ ಒಂದೇ ಒಂದು ದುರ್ಘ‌ ಟನೆ ನಡೆಯದಂತೆ ಕೂಟವನ್ನು ನಡೆಸಬೇಕಾದ ಒತ್ತಡದಲ್ಲಿ ಜಪಾನ್‌ ಸರಕಾರವಿದೆ.

ಪ್ರೇಕ್ಷಕರ ಗೈರು ಕೂಟಕ್ಕೆ ಎಲ್ಲ ರೀತಿಯಲ್ಲೂ ನಷ್ಟ. ಮೊದಲನೆಯದಾಗಿ ದೇಶವಿದೇಶಗಳ ಪ್ರೇಕ್ಷಕರು ಬಂದಾಗ ಹತ್ತಾರು ರೀತಿಯಲ್ಲಿ ಲಾಭಗಳಾಗುತ್ತವೆ. ಜಪಾನ್‌ ಸರಕಾರ ಒಲಿಂಪಿಕ್ಸ್‌ ಸಂಘಟನೆಗಾಗಿ ಖರ್ಚು ಮಾಡಿರುವ ಹಣಪೂರ್ತಿ ವಾಪಸಾಗುತ್ತದೆ. ಹಾಗೆಯೇ ದೇಶದ ಬಗ್ಗೆ ಇರುವ ಜಾಗತಿಕ ಚಿತ್ರಣವೇ ಬದಲಾಗುತ್ತದೆ. ಇದೀಗ ಪ್ರೇಕ್ಷಕರೇ ಇಲ್ಲದಿರುವು ದರಿಂದ ನಷ್ಟಭರ್ತಿಯ ಮಾತೇ ಇಲ್ಲ! ಇನ್ನೊಂದು ಸಮಸ್ಯೆಯೆಂದರೆ ಒಂದು ದೇಶ ತನ್ನದೇ ನೆಲದಲ್ಲಿ ಬೃಹತ್‌ ಕೂಟವನ್ನು ಆಯೋಜಿಸಿದಾಗ, ಅದರ ಲಾಭವನ್ನೆತ್ತಿ ಹೆಚ್ಚು ಪದಕ ಗೆಲ್ಲಲು ಯೋಜಿಸಿರುತ್ತದೆ. ಅದಕ್ಕಾಗಿ ಆ್ಯತ್ಲೀಟ್‌ಗಳು ಬಹಳ ಶ್ರಮವಹಿಸಿರುತ್ತಾರೆ. ತಮ್ಮದೇ ನೆಲದ ಪ್ರೇಕ್ಷಕರ ಹಾಜರಾತಿಯಿಂದ ಉತ್ಸಾಹಿತರಾಗುವ ಆ್ಯತ್ಲೀಟ್‌ಗಳು ಮಾಮೂಲಿಗಿಂತ ಅಮೋಘ ಪ್ರದರ್ಶನ ನೀಡುವುದು ಖಚಿತ.

ಇದು ಈ ಹಿಂದಿನ ಎಲ್ಲ ಕೂಟಗಳಲ್ಲೂ ಸ್ಪಷ್ಟವಾಗಿದೆ. ಈ ಬಾರಿ ಜಪಾನಿ ಆ್ಯತ್ಲೀಟ್‌ಗಳಿಗೆ ಈ ಕೊರತೆ ಕಾಡಲಿದೆ. ಇದರ ಮಧ್ಯೆ ಇನ್ನೊಂದು ರಗಳೆ ಶುರುವಾಗಿದೆ. ಟೆನಿಸ್‌ನ ಮಹಾಮಹಾ ತಾರೆಯರೆಲ್ಲ ಒಂದಲ್ಲ ಒಂದು ಕಾರಣ ನೀಡಿ ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳಲ್ಲ ಎಂದುಬಿಟ್ಟಿದ್ದಾರೆ. ಬಹುತೇಕರು ಪ್ರೇಕ್ಷಕರಿಲ್ಲ, ಅದಕ್ಕೇ ಆಡುವುದಿಲ್ಲ ಎಂಬ ವಿಚಿತ್ರ ಕಾರಣ ನೀಡಿದ್ದಾರೆ. ಇನ್ನು ಬ್ರೆಜಿಲ್‌ ಫ‌ುಟ್‌ ಬಾಲ್‌ ಸಂಸ್ಥೆ ತನ್ನ ತಂಡದ ನಾಯಕ, ವಿಶ್ವವಿಖ್ಯಾತ ತಾರೆ ನೇಮಾರ್‌ರಿಗೇ ವಿಶ್ರಾಂತಿ ನೀಡಿದೆ! ಹೀಗೆ ಗೈರಾಗುವವರ ಪಟ್ಟಿ ಮುಂದುವರಿಯಲಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕೊರೊನಾ ಕಾರಣಕ್ಕೆ ಹೇರಲಾಗಿರುವ ನಿರ್ಬಂಧಗಳು ಆ್ಯತ್ಲೀಟ್‌ಗಳನ್ನು, ಸಂಘಟಕರನ್ನು, ಜನರನ್ನು ಕಾಡಲಿವೆ. ಟೋಕಿಯೊ ದಲ್ಲಿ ಜನ ಸಲೀಸಾಗಿ ಓಡಾಡುವಂತಿಲ್ಲ, ಕಾರಣ ತುರ್ತು ಪರಿಸ್ಥಿತಿ. ಇನ್ನು ಆ್ಯತ್ಲೀಟ್‌ಗಳೂ ಸದಾ ಮಾಸ್ಕ್ ಧರಿಸಿಕೊಂಡು, ಪದೇಪದೇ ಪರೀಕ್ಷೆಗೊಳಗಾಗುತ್ತ, ನಿಗದಿತ ಸ್ಥಳಗಳಲ್ಲಿ ಮಾತ್ರವಿದ್ದು, ಗರಿಷ್ಠ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡಿರಬೇಕಾಗುತ್ತದೆ. ಇಷ್ಟರ ನಡುವೆಯೂ ಕೊರೊನಾ ಕಾಣಿಸಿ ಕೊಳ್ಳುವುದಿಲ್ಲ ಎಂಬ ಖಚಿತತೆಯಿಲ್ಲ. ಒಂದು ವೇಳೆ ಒಬ್ಬ ಆ್ಯತ್ಲೀಟ್‌ಗೆ ಕಾಣಿಸಿ  ಕ ೊಂಡರೂ ಇಡೀ ಕೂಟದಲ್ಲಿ ತಲ್ಲಣ ಶುರುವಾಗುತ್ತದೆ. ಇವನ್ನೆಲ್ಲ ಹೇಗೆ ನಿಭಾಯಿಸಲಾಗುತ್ತದೆ ಎನ್ನುವುದು ಈಗಿನ ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next