Advertisement

ತುಂಬೆ ನೀರಾ ಘಟಕದ ಮರು ಆರಂಭಕ್ಕೆ ಕೂಡಿ ಬಂದಿಲ್ಲ ಕಾಲ!

03:04 AM Mar 24, 2021 | Team Udayavani |

ಬಂಟ್ವಾಳ: ತಾಲೂಕಿನ ತೋಟಗಾರಿಕ ಕ್ಷೇತ್ರದಲ್ಲಿ ಅನುಷ್ಠಾನಗೊಂಡಿರುವ ತೆಂಗಿನ ಮರದ ಕಲ್ಪರಸವನ್ನು ಸಂಸ್ಕರಿಸಿ ನೀರಾ ಆಗಿ ಪರಿವರ್ತಿಸುವ ನೀರಾ ಘಟಕವನ್ನು ತೋಟಗಾರಿಕ ಇಲಾಖೆಯು ಖಾಸಗಿ ರೈತ ಪರ ಸಂಸ್ಥೆಗೆ ನೀಡಿ ಮರುಜೀವ ನೀಡಲು ಚಿಂತಿಸಿ, ಎರಡೆರಡು ಬಾರಿ ಟೆಂಡರ್‌ ಕರೆದರೂ ಯಾವುದೇ ಪ್ರಯೋಜನವಾಗಿಲ್ಲ.

Advertisement

ಬಂಟ್ವಾಳ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ತುಂಬೆಯಲ್ಲಿರುವ ತೋಟಗಾರಿಕ ಕ್ಷೇತ್ರದಲ್ಲಿ 2011-12ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ, ತೆಂಗು ಅಭಿವೃದ್ಧಿ ಮಂಡಳಿ, ಪಾಲಕ್ಕಾಡ್‌ ತೆಂಗು ಉತ್ಪಾದಕ ಕಂಪೆನಿಗಳ ಸಹಯೋಗದೊಂದಿಗೆ ರಾಜ್ಯದ ಮೊದಲ ನೀರಾ ಘಟಕವು ಆರಂಭಗೊಂಡಿತ್ತು.

ಮೂರ್ತೆದಾರರ ಮಹಾಮಂಡಲದ ತಾತ್ವಿಕ ಒಪ್ಪಿಗೆಯಿಂದ ಮಾರಾಟವೂ ಆರಂಭವಾಗಿತ್ತು. 2014ರಲ್ಲಿ ನೀರಾ ತಂಪು ಪಾನೀಯವನ್ನು ಪ್ಯಾಕೆಟ್‌ಗಳ ಮೂಲಕ ಮಂಗಳೂರು ಹಾಪ್‌ಕಾಮ್ಸ್‌
ಗೆ ರವಾನಿಸಲಾಗುತ್ತಿತ್ತು. ಘಟಕದ ಮೂಲಕ ದಿನಕ್ಕೆ ಗರಿಷ್ಠ 2 ಸಾವಿರ ಲೀ. ಸಂಗ್ರಹ ಮತ್ತು ಸಂಸ್ಕರಣೆ ಸಾಮರ್ಥ್ಯ ಹೊಂದಿತ್ತು. ಆದರೆ 2016ರಲ್ಲಿ ನಿರ್ವಹಣೆ ಸಾಧ್ಯವಾಗದೆ ಘಟಕ ಮುಚ್ಚಲ್ಪಟ್ಟಿತ್ತು.

ಪ್ರಾರಂಭದಲ್ಲಿ ಘಟಕಕ್ಕೆ ಉತ್ತಮ ಬೆಂಬಲ ಸಿಕ್ಕಿದರೂ ಬಳಿಕ ಸೂಕ್ತ ಕಾರ್ಮಿಕರ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತು. ತೆಂಗಿನ ಮರದಿಂದ ನೀರಾ ತೆಗೆದರೆ ಹೆಚ್ಚು ಫಸಲು ಬರುತ್ತದೆ ಎಂದು ಹೇಳಲಾಗಿತ್ತು. ಪ್ರತಿದಿನ ಹತ್ತುವುದರಿಂದ ಅದರ ಕುಬೆ ಅಗಲಗೊಂಡ ಹೆಚ್ಚಿನ ಫಸಲಿಗೆ ಸಹಕಾರಿ, ಜತೆಗೆ ನುಸಿ ಕಾಟವೂ ತಪ್ಪಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು.

ರೈತಪರ ಸಂಸ್ಥೆಗೆ ಗುತ್ತಿಗೆಯ ಯೋಚನೆ
ಹೀಗೆ ಕಳೆದ ಹಲವು ವರ್ಷಗಳಿಂದ ಮುಚ್ಚಿರುವ ನೀರಾ ಘಟಕವನ್ನು ಮರು ಆರಂಭಿಸುವುದಕ್ಕೆ ಹಲವು ಪ್ರಯತ್ನಗಳು ನಡೆದರೂ ಸಾಧ್ಯವಾಗಿಲ್ಲ. ಮುಂದೆ ಘಟಕದಲ್ಲಿ ನೀರಾದ ಜತೆಗೆ ಅದನ್ನು ಸಂಸ್ಕರಿಸಿ ಬೆಲ್ಲ, ಸಕ್ಕರೆ ಹಾಗೂ ಇತರ ಮೌಲ್ಯವರ್ಧಿತ ಉತ#ನ್ನಗಳನ್ನು ತಯಾರಿಸುವ ಕುರಿತು ಜಿಲ್ಲಾ ತೋಟಗಾರಿಕಾ ಇಲಾಖೆಯ ಅಂಗಸಂಸ್ಥೆ ಹಾಪ್‌ಕಾಮ್ಸ್‌ಗೆ ನೀಡುವುದಕ್ಕೆ ಚಿಂತನೆ ನಡೆದಿತ್ತು.

Advertisement

ದ.ಕ.ಜಿ.ಪಂ.ನ ಅಂದಿನ ಸಿಇಒ ಮನವಿಯ ಮೇರೆಗೆ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿ ಬಳಿಕ ತಿಳಿಸುವುದಾಗಿ ಹಾಪ್‌ಕಾಮ್ಸ್‌ನವರು ತಿಳಿಸಿದ್ದರು. ಇದು ಕೂಡ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಘಟಕವನ್ನು ನಡೆಸುವ ರೈತಪರ ಸಂಸ್ಥೆಗೆ ಗುತ್ತಿಗೆ ನೀಡುವ ಯೋಜನೆಯನ್ನು ತೋಟಗಾರಿಕ ಇಲಾಖೆ ಹಾಕಿಕೊಂಡಿತ್ತು. ಪ್ರಸ್ತುತ ಘಟಕಕ್ಕೆ ಸಂಬಂಧಿಸಿ ನಿಯಮಾವಳಿಗಳನ್ನು ಸಿದ್ಧಪಡಿಸಿ ಎರಡೆರಡು ಬಾರಿ ಟೆಂಡರ್‌ ಕರೆದರೂ ಯಾರೂ ಕೂಡ ಟೆಂಡರ್‌ ಹಾಕಿಲ್ಲ. ಹೀಗಾಗಿ ನೀರಾ ಘಟಕ ಮರು ಆರಂಭಗೊಳ್ಳುವ ಸಾಧ್ಯತೆ ಬಹಳ ಕಡಿಮೆ ಎನ್ನಲಾಗಿದೆ. ಇಲಾಖೆಯಿಂದಲೇ ಅಷ್ಟು ದೊಡ್ಡ ಕಾರ್ಯವನ್ನು ನಡೆಸುವುದು ಕಷ್ಟ ಎಂದು ಗುತ್ತಿಗೆ ನೀಡಲು ನಿರ್ಧರಿಸಲಾಗಿತ್ತು.

ಯಂತ್ರಗಳು ಔಟ್‌ಡೇಟೆಡ್‌!
ತುಂಬೆಯ ನೀರಾ ಘಟಕದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಯಂತ್ರೋಪಕರಣಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಪ್ರಸ್ತುತ ಅಲ್ಲಿನ ಯಂತ್ರಗಳು ಅವಧಿ ಮೀರಿದ (ಔಟ್‌ಡೇಟೆಡ್‌)ಯಂತ್ರಗಳಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಂದರೆ ಪ್ರಸ್ತುತ ನೀರಾ ತೆಗೆಯುವುದಕ್ಕೆ ಅತ್ಯಾಧುನಿಕ ಯಂತ್ರಗಳು ಬಂದಿದ್ದು, ಹಿಂದಿನ ಯಂತ್ರಗಳಿಂದ ನೀರಾ ತೆಗೆಯುವುದು ದುಬಾರಿಯಾಗಲಿದೆ.
ಹೀಗಾಗಿ ಯಾರಾದರೂ ಗುತ್ತಿಗೆ ವಹಿಸಿಕೊಂಡರೂ, ಹಳೆಯ ಯಂತ್ರಗಳ ಬಳಕೆ ಕಷ್ಟ ಎನ್ನಲಾಗುತ್ತಿದೆ.

ಎರಡೆರಡು ಬಾರಿ ಟೆಂಡರ್‌
ನೀರಾ ಘಟಕವನ್ನು ಖಾಸಗಿ ರೈತ ಪರ ಸಂಸ್ಥೆಗೆ ಗುತ್ತಿಗೆ ನೀಡುವ ಚಿಂತನೆಯಿಂದ ತೋಟಗಾರಿಕ ಇಲಾಖೆ ಎರಡೆರಡು ಬಾರಿ ಟೆಂಡರ್‌ ಕರೆದಿತ್ತು. ಆದರೆ ಯಾರೂ ಕೂಡ ಟೆಂಡರ್‌ ಹಾಕದೇ ಇರುವುದರಿಂದ ಸದ್ಯಕ್ಕೆ ಖಾಸಗಿಯವರಿಗೆ ನೀಡುವ ಚಿಂತನೆ ಪ್ರಗತಿ ಕಂಡಿಲ್ಲ.
-ಪ್ರದೀಪ್‌ ಡಿ’ಸೋಜಾ, ಹಿರಿಯ ತೋಟಗಾರಿಕ ಸಹಾಯಕ ನಿರ್ದೇಶಕರು, ಬಂಟ್ವಾಳ.

Advertisement

Udayavani is now on Telegram. Click here to join our channel and stay updated with the latest news.

Next