Advertisement

ಇಂದು ನಾಗರಪಂಚಮಿ: ಇಷ್ಟಾರ್ಥ ಸಿದ್ಧಿಗಾಗಿ ನಾಗಾರಾಧನೆ

08:30 AM Jul 27, 2017 | Harsha Rao |

ಕಾಸರಗೋಡು: ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಶಿವನ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹೆದೆಯಾಗಿ, ಸಮುದ್ರ ಮಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜ ಚಿಹ್ನೆಯಾಗಿ, ಭೂಮಿಯನ್ನು ಹೊತ್ತ ಆದಿಶೇಷನಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಲಕ್ಷ್ಮಣ, ಬಲರಾಮ, ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪವಾಗಿರುವ “ನಾಗ’ ಭಾರತೀಯರಿಗೆಲ್ಲ ಪೂಜಾರ್ಹವಾಗಿದೆ.

Advertisement

ಇಷ್ಟಾರ್ಥ ಸಿದ್ಧಿಗಾಗಿ, ಪುತ್ರ ಪ್ರಾಪ್ತಿಗಾಗಿ ಪ್ರಾರ್ಥಿಸುವ, ನಾಗ ಸತ್ತರೆ ವೈದಿಕ ರೀತಿಯಲ್ಲಿ ಉತ್ತರ ಕ್ರಿಯೆ ನಡೆಸುವುದೂ ಉಂಟು.

“ಭಯವೇ ಧರ್ಮದ 
ಮೂಲವಯ್ನಾ’
“ಕ್ಷೇತ್ರ ಪಾಲಕ’ ರೂಪದಲ್ಲೋ ಧನ-ಧಾನ್ಯ ರಕ್ಷಕನಾದ ನಿಧಿಪಾಲಕ ರೂಪದಲ್ಲೋ ನಾಗರ ಪ್ರತಿಮೆ ನೆಟ್ಟು ಅದನ್ನು ಪೂಜಿಸುವ ಪದ್ಧತಿ ಬಳಕೆಗೆ ಬಂದಿರಬಹುದು. ಈ ನಾಗಪೂಜೆ ದ್ರಾವಿಡ ಜನಾಂಗದ ಹಬ್ಬವಾಗಿದ್ದು, ಪಾಂಡವರಲ್ಲಿ ಮಧ್ಯಮನಾದ ಅರ್ಜುನ ನಾಗಕನ್ಯೆಯಾದ ಉಲೂಚಿಯನ್ನು ವಿವಾಹವಾದ ಕಥೆ ಜನಜನಿತ. ಜನಮೇಜಯರಾಜ ತಾನು ಮಾಡಿಸುತ್ತಿದ್ದ ಸರ್ಪ ಯಜ್ಞವನ್ನು ಆಸ್ತಿಕ ಮಹರ್ಷಿಯ ಸಲಹೆಯಂತೆ ನಿಲ್ಲಿಸಿದ್ದು “ಶ್ರಾವಣ ಶುದ್ಧ ಪಂಚಮಿಯ ದಿನ’ ಎಂದು ಹೇಳುತ್ತಾರೆ.

|1ಶ್ರಾವಣೀ ಪಂಚಮೀ ಶುಕ್ಲಾ 
ಸಂಪ್ರೋಕ್ತಾ ನಾಗಪಂಚಮಿ|
ಯೇ ತಸ್ಸಾಂ ಪೂಜೆಯಂತಿಹ 
ನಾಗಾನ್‌ ಭಕ್ತಿ ಪುರಸ್ಸರಾಃ||

“ನತೇಷಾಂ ಸರ್ವತೋವೀರ, ಭಯಂ ಭವತಿ ಕುತ್ರಚಿತ್‌’ ಅಂದರೆ ಶ್ರಾವಣ ಶುದ್ಧ ಪಂಚಮಿಗೆ ನಾಗರಪಂಚಮಿ ಎಂದು ಹೆಸರು. ಅಂದು ಭಯಭಕ್ತಿಯಿಂದ ನಾಗಾರಾಧನೆ ಮಾಡುವವರಿಗೆ ಸರ್ಪ ಭಯವಿಲ್ಲ. ನಾಗ ಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ಅದು ಅವರಿಗೆ ಮಾಂಗಲ್ಯ ಪ್ರದ ಎಂದೂ “ಸಂತಾನಪ್ರದ’ ಎಂದೂ ನಂಬಿಗೆ.

Advertisement

ಹೀಗೊಂದು ದಂತ ಕಥೆ  
ನಾಗರ ಪಂಚಮಿ ಬಗ್ಗೆ ಕೆಲವು ದಂತಕಥೆಗಳಿವೆ. ಒಬ್ಬ ರೈತ ತನ್ನ ಗದ್ದೆಯಲ್ಲಿ ಊಳುತ್ತಿರುವಾಗ ನಾಗರ ಹಾವಿನ ಮರಿಗಳು ನೇಗಿಲ ಮೊನೆಗೆ ಸಿಕ್ಕು ಸಾಯುತ್ತವೆ. ಮರಿಗಳ ಸಾವಿನಿಂದ ತಾಯಿ ನಾಗಿಣಿಗೆ ಕೋಪ – ತಾಪ ಹೆಚ್ಚಿ  ಆ ರೈತನ ಮನೆಗೆ ತೆರಳಿ ಮನೆಯವರನ್ನೆಲ್ಲಾ ಕಚ್ಚಿ ಸಾಯಿಸುತ್ತದೆ. ಅಷ್ಟಕ್ಕೇ ಬಿಡದೆ ಆ ರೈತನ ಮದುವೆಯಾದ ಮಗಳನ್ನೂ ಕಚ್ಚಿ ಸಾಯಿಸಿ ಕುಲ ಕ್ಷಯಗೊಳಿಸಲು ಅವಳ ಮನೆಯತ್ತ ಧಾವಿಸಿದೆ. ನಾಗಿಣಿ ಅಲ್ಲಿಗೆ ಹೋದಾಗ ರೈತನ ಮಗಳು, ಮಣ್ಣಿನ ನಾಗನ ಮಾಡಿ ಹಾಲೆರೆದು ಪೂಜಿಸಿ, ನಮಿಸುತ್ತಿದ್ದಳು. ಅದನ್ನು ಕಂಡು ನಾಗಿಣಿಯ ಕೋಪ ಕರಗಿತು.

ಮನಸ್ಸು ಹಿಗ್ಗಿತು. ತನ್ನ ಮರಿಗಳನ್ನು ಕೊಂದುದಕ್ಕಾಗಿ ನಿನ್ನ ತವರಿನವರನ್ನೆಲ್ಲಾ ಕಚ್ಚಿ ಸಾಯಿಸಿ, ನಿನ್ನನ್ನು ಮುಗಿಸಿ ಬಿಡಲು ಇಲ್ಲಿಗೆ ಬಂದಿದ್ದೆ. ಆದರೆ ನೀನು ಮಾಡುತ್ತಿರುವ ಪೂಜೆ ನೋಡಿ ಸಂತೋಷಗೊಂಡಿದ್ದೇನೆ. ನಿನ್ನ ಇಷ್ಟಾರ್ಥ ನೆರವೇರಿಸುವೆ. ಬೇಕಾದುದನ್ನು ಕೇಳು ಎಂದಾಗ ಆಕೆ ತನ್ನ ತಂದೆ, ತಾಯಿಯರನ್ನು, ತವರಿನವರನ್ನು ಬದುಕಿಸುವಂತೆ ಬೇಡಿಕೊಂಡು ನಾಗಿಣಿಯ ಜೊತೆಗೆ ತವರಿಗೆ ಬಂದಳು. ನಾಗಿಣಿ ವಿಷ ಹೀರಿ ಎಲ್ಲರನ್ನೂ ಬದುಕಿಸಿತು. ಅಂದು ಶ್ರಾವಣ ಶುದ್ಧ ನಾಗಪಂಚಮಿಯಾಗಿತ್ತು. ಅಂದು ಬದುಕಿದ ಆ ಮನೆಯವರೆಲ್ಲಾ ಸೇರಿ ನಾಗಾರಾಧನೆ ಮಾಡಿದರು. ಈ ಹಬ್ಬದಂದು ಹೆಚ್ಚಾಗಿ ಹೆಣ್ಣು ಮಕ್ಕಳು ತವರಿಗೆ ಹೋಗುವುದು ಬಳಕೆಯಲ್ಲಿ ಬರಲು ಈ ಕಥೆ ಮೂಲವೆಂದು ತೋರುತ್ತದೆ.

ಮತ್ತೂಂದು ಕಥೆ
ಇದೇ ಮಾದರಿಯ ಇನ್ನೊಂದು ಕಥೆಯೂ ಉಂಟು. ಕಡು ಬಡ ಕುಟುಂಬದಲ್ಲಿ ಹುಟ್ಟಿದ ನಿರಾಭರಣ ಸುಂದರಿಯೊಬ್ಬಳು ತನ್ನ ಸುದೈವದಿಂದ ಸಿರಿವಂತ ಕುಟುಂಬ ಸೇರಿದಳು. ಅಣ್ಣ ನಾಗಪಂಚಮಿ ಹಬ್ಬಕ್ಕೆ ತಂಗಿಯನ್ನು, ಚಕ್ಕಡಿಯಲ್ಲಿ ಕರೆತರುತ್ತಿದ್ದಾನೆ. ಹೊಸ ಬಟ್ಟೆಯುಟ್ಟು, ಮೈತುಂಬಾ ಬಂಗಾರ ತೊಟ್ಟು ಸುಂದರಿ ತಂಗಿಯನ್ನು ಕರೆತರುವಾಗ ದಟ್ಟದರಿದ್ರ ಅಣ್ಣನಿಗೆ ಅವಳ ಆಭರಣದ ಮೇಲೆ ಆಸೆಯಾಗಿ ಅವಳನ್ನು ಪೀಡಿಸಿದ, ಕೊಡಲು ಅವಳು ಒಪ್ಪಲಿಲ್ಲ.

ಸಿಟ್ಟುಗೊಂಡು ಅವಳ ಮೇಲೆ ಕಲ್ಲೊಂದು ಎತ್ತಿ ಹಾಕಲು ಹವಣಿಸಿದಾಗ ಅದರ ಅಡಿಯಲ್ಲಿದ್ದ ಹಾವು ಅವನನ್ನು ಕಚಿ ಸಾಯಿಸಿತು. ಅಣ್ಣನ ಸಾವಿನಿಂದ ನೊಂದ ತಂಗಿ ಆ ಕ್ಷಣ ಅಲ್ಲೇ ನಾಗನನ್ನು ಪ್ರಾರ್ಥಿಸಿ, ಪೂಜಸಿ ಅಣ್ಣನ ಜೀವ ಮರಳಿ ಪಡೆದಳು. ಅಂದು ಶ್ರಾವಣ ಶುದ್ಧ ಚೌತಿಯಾಗಿತ್ತು. ಅದಕ್ಕೆ ಈ ತಿಥಿಗೆ ನಾಗ ಚೌತಿ ಎಂದು ಹೆಸರು. ಈ ಕತೆಗಳ ಸತ್ಯಾಸತ್ಯತೆ ಏನೇ ಇರಲಿ. ಇದು ಹೆಣ್ಣು ಮಕ್ಕಳ ತವರಿನ ಸೌಹಾರ್ದ ಸೂಚಕ ಎಂಬಲ್ಲಿ ಎರಡು ಮಾತಿಲ್ಲ.

“ಪಂಚಮಿ ಹಬ್ಬಕ 
ಉಳಿದಾವ ದಿನ ನಾಕ 
ಅಣ್ಣ ಬರಲಿಲ್ಲ  ಕರಿಯಾಕ ಯಾಕ ? “

ಎಂಬ ಹಾಡು ಹಾಡಿದಾಗ ಮನ ಮಿಡಿಯುತ್ತದೆ. ಉತ್ತರ ಕರ್ನಾಟಕ ದಲ್ಲಂತೂ ಇದು ಅತಿ ದೊಡ್ಡ ಹಬ್ಬ. ಅಂದು ಹೆಣ್ಣು ಮಕ್ಕಳನ್ನು ಆಹ್ವಾನಿಸಿ ಉಡುಗೊರೆ ನೀಡಿ ಗೌರವಿಸುತ್ತಾರೆ. ಪಂಜಾಬಿನಲ್ಲಿ ಸರ್ಪದೇವತೆಯ ಸೂಚಕವಾಗಿ ಗೋಡೆಯ ಮೇಲೆ ಕಪ್ಪು ಚಿತ್ರ ಬರೆಯುತ್ತಾರೆ. ಇದರಿಂದ ಮನೆಗೆ  ಸರ್ಪ ಬಾಧೆಯಿಲ್ಲ ಎಂದು ಅವರ ನಂಬುಗೆ. ಮಹಾರಾಷ್ಟ್ರದಲ್ಲಿ ಹಾವಿನ ಹುತ್ತಕ್ಕೆ ಹಾಲೆರೆದು ಅಕ್ಕಿ ಹಾಕಿ ಪೂಜಿಸುತ್ತಾರೆ. ಉತ್ತರ ಪ್ರದೇಶದಲ್ಲಿ ಗೋಡೆಯ ಮೇಲೆ ಸರ್ಪ ಹಾಗು ಗರುಡ ಚಿತ್ರ ಬಿಡಿಸುವುದುಂಟು.

“ಆಸ್ತಿಕ’ ಋಷಿಯ ಹೆಸರು ಬರೆಯುವುದರಿಂದ ಸರ್ಪ ಒಳಗೆ ಬಾರದು ಎಂಬ ಸರ್ವತ್ರ ಭಾರತದಲ್ಲಿ ಪ್ರಚಲಿತವಿದೆ. ಹೀಗೆ ಭಾರತದಲ್ಲೆಲ್ಲಾ ಒಂದಿಲ್ಲೊಂದು ರೀತಿಯಿಂದ ಬಳಕೆಯಲ್ಲಿರುವ “ನಾಗಪಂಚಮಿ’ ಹಬ್ಬ ಅಂತರಂಗದಲ್ಲಿ ಭಯ ನಿವಾರಕವಾಗಿ ಬಹಿರಂಗದಲ್ಲಿ ಹೆಣ್ಣಿನ ತವರಿನ ಪ್ರೀತಿ ಸಂಕೇತವಾಗಿ ಬೆಳೆದು ಬಂದಿದೆ ಎನ್ನಬಹುದು.

– ಕಸ್ತೂರಿರಾಜ್‌ ಬೇಕಲ್‌, ನಾಗರಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next