Advertisement

ಇಂದು ದ್ವಿತೀಯ ಏಕದಿನ; ದಿಕ್ಕು ತಪ್ಪಿದ ವಿಂಡೀಸ್‌ಗೆ ಸರಣಿ ಸೋಲಿನ ಭೀತಿ

11:11 PM Jul 28, 2023 | Team Udayavani |

ಬ್ರಿಜ್‌ಟೌನ್‌ (ಬಾರ್ಬಡಾಸ್‌): ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ಸಂಕಟ ನೆನೆಯುವಾಗ ಬೇಸರವಾ ಗುತ್ತದೆ. ಒಂದು ಕಾಲದ ದೈತ್ಯ ತಂಡ ಇಂದು ತಲುಪಿರುವ ಸ್ಥಿತಿಯನ್ನು ಕಂಡು ಎಂಥವರಿಗೂ ಕನಿಕರ ವಾಗುತ್ತದೆ.

Advertisement

ಭಾರತದೆದುರಿನ ತವರಿನ ಟೆಸ್ಟ್‌ ಸರಣಿಯಲ್ಲಿ ಶೋಚನೀಯ ಪ್ರದರ್ಶನ ನೀಡಿದ ಕೆರಿಬಿಯನ್‌ ಪಡೆ ಏಕದಿನದಲ್ಲಾದರೂ ಸಿಡಿದು ನಿಲ್ಲಬಹುದು, ಪೈಪೋಟಿ ತೀವ್ರ ಗೊಳ್ಳಬಹುದೆಂಬ ನಿರೀಕ್ಷೆಯೂ ಹುಸಿ ಯಾಗಿದೆ. ಗುರುವಾರದ ಪಂದ್ಯ 23 ಓವರ್‌ಗಳ ಗಡಿ ದಾಟಲಿಲ್ಲ. ಇನ್ನೀಗ ಶನಿವಾರ ಇದೇ “ಕೆನ್ಸಿಂಗ್ಟನ್‌ ಓವಲ್‌’ನಲ್ಲಿ ದ್ವಿತೀಯ ಪಂದ್ಯ ನಡೆಯಲಿದೆ. ಇದೂ “ಒನ್‌ ಸೈಡೆಡ್‌ ಮ್ಯಾಚ್‌’ ಆದರೆ ಸರಣಿ ಖಂಡಿತವಾಗಿಯೂ ನೀರಸಗೊಳ್ಳಲಿದೆ.

ಕುಲದೀಪ್‌ ಯಾದವ್‌ ಅವರ ಚೈನಾ ಮನ್‌ ಮತ್ತು ರವೀಂದ್ರ ಜಡೇಜ ಅವರ ಆಫ್ಸ್ಪಿನ್‌ ಎಸೆತಗಳಿಗೆ ಕೆರಿಬಿಯನ್‌ ಪಡೆ ದಿಕ್ಕಾಪಾಲಾಯಿತು. ಬರೀ 23 ಓವರ್‌ಗಳಲ್ಲಿ 114ಕ್ಕೆ ವಿಂಡೀಸ್‌ ಇನ್ನಿಂಗ್ಸ್‌ ಮುಗಿದಿತ್ತು. ಚೇಸಿಂಗ್‌ ವೇಳೆ ಭಾರತ ಕೂಡ 5 ವಿಕೆಟ್‌ ಕಳೆದುಕೊಂಡಿತಾದರೂ, ಇದಕ್ಕೆ ಬ್ಯಾಟಿಂಗ್‌ ಸರದಿಯಲ್ಲಿ ಮಾಡ ಲಾದ ಪ್ರಯೋಗವೇ ಕಾರಣ ಎಂದು ಭಾವಿಸಲಡ್ಡಿಯಿಲ್ಲ.

ಎಷ್ಟೇ ಕಳಪೆ ಆಟವಾಡಿದರೂ ವೆಸ್ಟ್‌ ಇಂಡೀಸ್‌ ಒಮ್ಮಿಂದೊಮ್ಮೆಲೆ ಸಿಡಿದು ನಿಲ್ಲುವ ಛಾತಿ ಹೊಂದಿರುವ ತಂಡವೆಂಬ ಮಾತಿತ್ತು. ಗೆದ್ದರೂ ಸೋತರೂ ಫ‌ಲಿ ತಾಂಶ ದೊಡ್ಡ ಅಂತರದ್ದೇ ಆಗಿರುತ್ತದೆ ಎಂಬುದು ವಿಂಡೀಸ್‌ ತಂಡದ ಸ್ಪೆಷಾಲಿಟಿ. ಆದರೆ ಈಗಿನ ತಂಡಕ್ಕೆ ಇದೇ ಮಾತನ್ನು ಅನ್ವಯಿಸುವುದು ಮೂರ್ಖತನವಾಗುತ್ತದೆ. ಇವರು ವಿಶ್ವಕಪ್‌ ಟಿಕೆಟ್‌ ತಪ್ಪಿಸಿಕೊಂಡಾಗ ಕ್ರಿಕೆಟ್‌ ಜಗತ್ತು ಭಾವುಕಗೊಂಡಿತ್ತು. ಆದರೆ ಗುರುವಾರ ಆಟ ಕಂಡಾಗ ಈ ಕೆರಿಬಿಯನ್ನರಿಗೆ ವಿಶ್ವಕಪ್‌ ಅವಕಾಶ ತಪ್ಪಿದ್ದೇ ಒಳ್ಳೆಯದಾಯಿತು ಎಂದೆ ನಿಸದಿರದು! ಹಾಗೆಯೇ ಇಂಥದೊಂದು ಕಳಪೆ ತಂಡದೆದುರಿನ ಸಾಧನೆಯನ್ನು ಮಹಾನ್‌ ಎಂಬಂತೆ ಬಿಂಬಿಸಬೇಕಾದ ಅಗತ್ಯವೂ ಇಲ್ಲ.

ಬ್ರಿಜ್‌ಟೌನ್‌ನ “ಕೆನ್ಸಿಂಗ್ಟನ್‌ ಓವಲ್‌’ ಮಾಲ್ಕಂ ಮಾರ್ಷಲ್‌, “ಬಿಕ್‌ ಬರ್ಡ್‌’ ಜೋಯೆಲ್‌ ಗಾರ್ನರ್‌ ಮೊದಲಾದ ಘಾತಕ ವೇಗಿಗಳ ತವರಿನಂಗಳ. “ಬಿಗ್‌ ಫೋರ್‌’ ವೇಗಿಗಳ ಮೆರೆದಾಟದ ವೇಳೆ ಇದೊಂದು ಅಪ್ಪಟ ಫಾಸ್ಟ್‌ ಟ್ರ್ಯಾಕ್‌ ಆಗಿತ್ತು. ಆದರೆ ಗುರುವಾರ ಇಲ್ಲಿ ಸ್ಪಿನ್‌ ಅಟ್ಯಾಕ್‌ ಆಯಿತು. ಪೇಸ್‌ ಮತ್ತು ಟರ್ನ್ ಒಮ್ಮೆಲೇ ಕಾಣಿಸಿಕೊಂಡಿತು. ಕುಲದೀಪ್‌, ಜಡೇಜ ಅವರ ಸ್ಪಿನ್‌ ಎಸೆತಗಳನ್ನು ಹೇಗೆ ನಿಭಾಯಿಸಬೇಕೆಂಬುದೇ ಇವರಿಗೆ ತಿಳಿಯಲಿಲ್ಲ. ಹೊಡೆತಗಳ ಆಯ್ಕೆಯ ಎಡವಟ್ಟಿನಿಂದಾಗಿ ಇಡೀ ವಿಂಡೀಸ್‌ ತಂಡವೇ ಮುಗ್ಗರಿಸಿ ಬಿತ್ತು.

Advertisement

ವಿಂಡೀಸ್‌ ತಂಡದಲ್ಲೂ ಸ್ಪಿನ್ನರ್‌ಗಳಿದ್ದರು. ಆದರೆ ಎಡಗೈ ಸ್ಪಿನ್ನರ್‌ ಗುಡಕೇಶ್‌ ಮೋಟಿ, ಲೆಗ್‌ಬ್ರೇಕ್‌ ಬೌಲರ್‌ ಯಾನಿಕ್‌ ಕರಿಯ ವಿಶೇಷ ಪರಿಣಾಮವನ್ನೇನೂ ಬೀರಲಿಲ್ಲ.

ದ್ವಿತೀಯ ಪಂದ್ಯ ಇದೇ ಅಂಗಳದ ಬೇರೊಂದು ಟ್ರ್ಯಾಕ್‌ನಲ್ಲಿ ನಡೆಯಲಿದೆ. ಭಾರತ ಮೊದಲು ಬ್ಯಾಟಿಂಗ್‌ ನಡೆಸಿ ದೊಡ್ಡ ಮೊತ್ತ ಪೇರಿಸುವತ್ತ ಮುಂದಡಿ ಇಟ್ಟಿàತೇ ಎಂಬುದೊಂದು ಪ್ರಶ್ನೆ.

ಬದಲಾದ ಬ್ಯಾಟಿಂಗ್‌ ಲೈನ್‌ಅಪ್‌
ಗುರುವಾರ ನಾಯಕ ರೋಹಿತ್‌ ಶರ್ಮ ಇನ್ನಿಂಗ್ಸ್‌ ಆರಂಭಿಸಲು ಇಳಿಯ ಲಿಲ್ಲ. ಕೊಹ್ಲಿಯಂತೂ ಕ್ರೀಸಿಗೇ ಬರಲಿಲ್ಲ. ಬ್ಯಾಟಿಂಗ್‌ ಲೈನ್‌ಅಪ್‌ ಸಂಪೂರ್ಣ ಬದಲಾಗಿತ್ತು. ಶುಭಮನ್‌ ಗಿಲ್‌ ಜತೆಗೆ ಇಶಾನ್‌ ಕಿಶನ್‌ ಆರಂಭಿಕನಾಗಿ ಬಂದರು. ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಗಿಲ್‌ ಇನ್ನೂ ಐಪಿಎಲ್‌ ಚಾರ್ಮ್ ತೋರಿಲ್ಲ. ಸೂರ್ಯಕುಮಾರ್‌ ಹ್ಯಾಟ್ರಿಕ್‌ ಗೋಲ್ಡನ್‌ ಡಕ್‌ ಬಳಿಕ ಮೊದಲ ಸಲ ಖಾತೆ ತೆರೆದರು. ಪಾಂಡ್ಯ, ಠಾಕೂರ್‌ ಬೇಗನೆ ವಾಪಸಾದರು. ಅನಂತರವೇ ರೋಹಿತ್‌ ಆಗಮನವಾದದ್ದು. ಅವರು ಜಡೇಜ ಜತೆ ಅಜೇಯರಾಗಿ ಉಳಿದರು.

ಭಾರತ ತಂಡದಲ್ಲಿ ಬದಲಾವಣೆಯ ಸಂಭವ ಕಡಿಮೆ. ಗುರುವಾರ ಬೌಲಿಂಗ್‌ ಪ್ರ್ಯಾಕ್ಟೀಸ್‌ ನಡೆಸಿದರಷ್ಟೇ? ಶನಿವಾರ ಬ್ಯಾಟಿಂಗ್‌ ಪ್ರ್ಯಾಕ್ಟೀಸ್‌ ನಿರೀಕ್ಷಿಸೋಣ. ವಿಶ್ವಕಪ್‌ಗೆ ಉಳಿದಿರುವುದಿನ್ನು ಕೆಲವೇ ದಿನಗಳು. ಈ ಅವಧಿಯಲ್ಲಿ ಭಾರತ 11 ಏಕದಿನ ಪಂದ್ಯಗಳನ್ನು ಆಡಲಿದೆ. ಸಮರ್ಥ ಆಡುವ ಬಳಗವನ್ನು ಕಟ್ಟಲು ಈ ಪಂದ್ಯಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ಆದರೆ ವೆಸ್ಟ್‌ ಇಂಡೀಸ್‌ಗೆ ಇಂಥ ಯಾವುದೇ ಚಿಂತೆ ಇಲ್ಲ. ಅದು ವಿಶ್ವಕಪ್‌ ರೇಸ್‌ನಿಂದ ಹೊರಬಿದ್ದಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next