Advertisement

ಇಂದು ಐತಿಹಾಸಿಕ ಅಸಂಖ್ಯ ಪ್ರಮಥರ ಗಣಮೇಳ

11:26 PM Feb 15, 2020 | Lakshmi GovindaRaj |

ಬೆಂಗಳೂರು: ಇಂದು ಎಲ್ಲ ಕ್ಷೇತ್ರಗಳಲ್ಲಿ ನೈತಿಕತೆಯ ಅಧ:ಪತನವನ್ನು ಕಾಣುತ್ತಿದ್ದೇವೆ. ನೈತಿಕತೆ ಎಂದರೆ ಬದುಕಿನ ಬದ್ಧತೆ. ಆದರೆ, ಬದ್ಧತೆ ಇಲ್ಲದೇ ನೈತಿ ಕತೆಯೂ ಕಾಣದಾಗಿದೆ. ಹಾಗಾಗಿ, ಇಂದಿನ ಜನರಿಗೆ ಬದ್ಧತೆಯ ಪಾಠದ ಅಗತ್ಯವಿದೆ. ವಂಚನೆ, ಶೋಷಣೆ, ಅಸ್ಪೃಶ್ಯತೆ, ಅನಾಗರಿಕತೆ, ಅಮಾನವೀಯತೆ ಇಲ್ಲದ ಒಂದು ಸಮಾಜ ನಿರ್ಮಾಣದ ಆಶಯವನ್ನು “ಅಸಂಖ್ಯ ಪ್ರಮಥರ ಗಣಮೇಳ’ದ ಮೂಲಕ ಸಾಕಾರ ಗೊಳಿಸುವ ಪ್ರಯತ್ನ ನಡೆದಿದೆ.

Advertisement

ಇವು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವ ಮೂರ್ತಿ ಮುರುಘಾ ಶರಣರ ಆಶಯ ನುಡಿಗಳು. ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಬಸವ ಕೇಂದ್ರಗಳು, ಬಸವ ಸಂಘ ಟನೆ ಗಳು, ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ಸರ್ವ ಜನಾಂಗದ ಮಠಾಧೀಶರ ಸಹಯೋಗದಲ್ಲಿ ಭಾನು ವಾರ ಬೆಂಗಳೂರಿನಲ್ಲಿ ಐತಿಹಾಸಿಕ ಶಿವಯೋಗ ಸಂಭ್ರಮ “ಅಸಂಖ್ಯ ಪ್ರಮಥರ ಗಣಮೇಳ’ ಹಾಗೂ ಸರ್ವ ಶರಣರ ಸಮ್ಮೇಳನ ಆಯೋಜಿಸಿದೆ. ಈ ಹಿನ್ನೆಲೆ ಯಲ್ಲಿ ಶಿವಮೂರ್ತಿ ಮುರುಘಾ ಶರಣರು ಗಣಮೇಳ ಆಯೋಜನೆಯ ಆಶಯ, ಸದುದ್ದೇಶ, ಪ್ರಯತ್ನಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದು, ಅದರ ಸಂಕ್ಷಿಪ್ತ ಸಾರ ಹೀಗಿದೆ.

* ಇಂದಿನ ಆಧುನಿಕ ಜಗತ್ತಿನಲ್ಲಿ ದಿನ ಬೆಳಗಾದರೆ ಅಪರಾಧೀಕರಣ ಕಾಣುತ್ತಿದ್ದೇವೆ. ಜಾಗತೀಕರಣದ ಜತೆಗೆ, ಅಪರಾಧೀಕರಣ ಸಾಮಾನ್ಯವಾಗುತ್ತಿದೆ. ಈ ಅಪ ರಾಧೀ ಕರಣದ ಪ್ರವೃತ್ತಿ ಎಲ್ಲ ವಯೋ ಮಾನ ದವರಲ್ಲಿ ಕಾಣುತ್ತಿದೆ. ಶುದ್ಧೀಕರಣದತ್ತ ಸಾಗಬೇಕಿದ್ದ ಬದುಕು ದುರ್ದೈವವಶಾತ್‌ ಅಪರಾಧಿಕರಣವಾಗುತ್ತಿದೆ.

* ಇಡೀ ಸಮಾಜ, ವ್ಯವಸ್ಥೆ ಒಂದಲ್ಲ ಒಂದು ರೀತಿ ಯಲ್ಲಿ ಅಪರಾಧಕ್ಕೆ ಹತ್ತಿರವಾಗುತ್ತಿರುವುದು ಒಳ್ಳೆಯ ವಿದ್ಯಮಾನವಲ್ಲ. ಸಣ್ಣ ಪುಟ್ಟ ಕಾರಣಗಳಿಗೂ ಕಾನೂನು ಕೈಗೆತ್ತಿಕೊಳ್ಳುವ, ಶಸ್ತ್ರಾಸ್ತ್ರ ತೆಗೆದುಕೊಳ್ಳುವ ಸಂದರ್ಭ ಸಾಮಾನ್ಯವಾಗುತ್ತಿದೆ. ಮಾನವ ಒಂದು ಹಂತದಲ್ಲಿ ವಿವೇ ಚನೆಯನ್ನೇ ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಅನುಮಾನ ಮೂಡುತ್ತದೆ.

* ವಿವೇಕದ ನಡೆ-ನುಡಿ ಮಾಯವಾಗಿ ಅವಿವೇಕದ ವರ್ತನೆ, ಮಾತುಗಳು ಹೆಚ್ಚಾಗುತ್ತಿದ್ದು, ಇವು ಪುನರಾವರ್ತನೆಯಾಗುತ್ತಿವೆ. ಜಗತ್ತು ಹಿಂಸೆಯ ಕಡೆಗೆ ವಾಲುತ್ತಿದೆಯೋ ಏನೋ ಎಂಬ ಆತಂಕ ಮೂಡುತ್ತಿದೆ. ಹಿಂಸೆ ಇರುವ ಕಡೆ ಅಶಾಂತಿ ಇರುತ್ತದೆ. ಅಶಾಂತಿಯ ಮುಂದಿನ ಹಂತವೇ ಹಿಂಸೆ, ದೌರ್ಜನ್ಯ. ಇಂದು ಎಲ್ಲ ಕ್ಷೇತ್ರ, ಹಂತ, ಸ್ತರಗಳಲ್ಲಿ ಅಪರಾಧೀಕರಣವಾಗುತ್ತಿದೆ.

Advertisement

* ಪರಿಸರ ಮಾಲಿನ್ಯ ಕೇವಲ ನಿಸರ್ಗದಿಂದಷ್ಟೇ ಅಲ್ಲದೇ ಮಾನವ ಪ್ರೇರಿತವಾಗಿರುವ ಪ್ರಚೋದನೆಗಳಿಂದಲೂ ನಿರ್ಮಾಣವಾಗುತ್ತಿದೆ. ಪ್ರತಿಯೊಂದು ವಸ್ತು, ಜೀವಿಗೂ ಬೆಲೆಯಿದ್ದು, ಅದನ್ನು ಹಾಳು ಮಾಡಬಾರದು ಎಂಬ ಪ್ರಜ್ಞೆ ಕಾಣದಾಗುತ್ತಿದೆ. ಜಗತ್ತಿನಲ್ಲಿ ಎಲ್ಲವನ್ನೂ ಕೊಂಡು ಕೊಳ್ಳಬಹುದು. ಆದರೆ, ಜೀವವನ್ನು ಕೊಡಲು, ಪಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಉದಾಸೀನ ಮನೋಭಾವ ತೋರುವುದು ಇನ್ನೊಂದು ಸಮಸ್ಯೆ. ಇದಕ್ಕೆಲ್ಲಾ ಅಜ್ಞಾನ, ಮೂರ್ಖತನ ಕಾರಣವಾಗಿದೆ.

* ಇಂದು ಎಲ್ಲ ಕ್ಷೇತ್ರಗಳಲ್ಲಿ ನೈತಿಕತೆಯ ಕುಸಿತವನ್ನು ಕಾಣುತ್ತಿದ್ದೇವೆ. ನೈತಿಕತೆ ಎಂದರೆ ಬದುಕಿನ ಬದ್ಧತೆ. ಆದರೆ, ಬದುಕಿನ ಬದ್ಧತೆಯೇ ಇಲ್ಲವಾಗುತ್ತಿದೆ. ಮನುಷ್ಯನಿಗೆ ಮುಖ್ಯವಾಗಿ ಬದ್ಧತೆಯ ಪಾಠದ ಅಗತ್ಯವಿದೆ. ಬಸವಾದಿ ಶರಣರು ಎಂದರೆ ಬದ್ಧತೆಯ ಮೇಲೆ ಬದುಕನ್ನು ಕಟ್ಟಿಕೊಂಡವರು. “ನಾವಳಿದರೂ ಅಡ್ಡಿಯಿಲ್ಲ, ಅನ್ಯರಿಗೆ ಅಪಾಯವಾಗಬಾರದು’ ಎಂಬ ಮಾನವ ಸಹಜ ಕಾಳಜಿಯೊಂದಿಗೆ ಅವರು ಜೀವನ ಸಾಗಿಸಿದರು.

ಆದರೆ, ಇಂದು ಎಲ್ಲವೂ ಉಲ್ಪಾಪಲ್ಟಾ ಆಗಿದೆ. “ನೀ ಅಳಿದರೂ ಅಡ್ಡಿಯಿಲ್ಲ, ನಾನು ಉಳಿಯ ಬೇಕು’ ಎಂಬ ಮನೋಭಾವ ಹೆಚ್ಚುತ್ತಿದೆ. ವ್ಯವಸ್ಥೆ ಅಳಿದರೂ ಅಡ್ಡಿಯಿಲ್ಲ. ನಾನು ಉಳಿಯಬೇಕು ಎಂಬ ಸ್ವಾರ್ಥಪರ ಚಿಂತನೆ ಹೆಚ್ಚುತ್ತಿದೆ. ಅಹಿತಕರ ವಿದ್ಯಮಾನ ವೆಂದರೆ ಹಿಂಸಾಚಾರ, ಅತ್ಯಾಚಾರ, ಭ್ರಷ್ಟಾಚಾರಗಳು ಹೆಚ್ಚಾಗುತ್ತಿವೆ. ಭೌತಿಕ ಬಂಧನ, ದಾಸ್ಯ ಹೆಚ್ಚಾಗುತ್ತಿದ್ದು, ಬೌದ್ಧಿಕ ಮಟ್ಟ ಇಲ್ಲವಾಗುತ್ತಿದೆ.

ಸಮಸ್ಯೆಯ ಮೂಲ
* ಇಂದಿನ ಶಿಕ್ಷಣ ಅಂಕ ಆಧಾರಿತವಾಗಿದೆ. ಮಕ್ಕಳು ಇಂತಿಷ್ಟು ಅಂಕ ಗಳಿಸಲೇಬೇಕು ಎಂದು ಪೋಷಕರು ಬಯಸುತ್ತಾರೆ. ಗುಣ ಆಧಾರಿತ ಶಿಕ್ಷಣ ಇಲ್ಲದಾಗಿದೆ. ಅಂಕ ಗಳಿಕೆ ಜೊತೆಯಲ್ಲಿ ಗುಣಗಳನ್ನೂ ರೂಢಿಸಿ ಕೊಳ್ಳಬೇಕು. ಅಂಕ ಆಧಾರಿತ, ಹಣ ಕೇಂದ್ರಿತ ಶಿಕ್ಷಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಪ್ರಚೋದಿಸುತ್ತಿದ್ದಾರೆ ಎನಿಸುತ್ತದೆ. ಮುಂದೆ ಅದೇ ಮನೋಭಾವ ಪೋಷ ಕರು ಮತ್ತು ಮಕ್ಕಳು ದೂರವಾಗುವ ಸನ್ನಿವೇಶದ ಸೃಷ್ಟಿಗೆ ಕಾರಣವಾಗಬಹುದು. ಈ ಪ್ರಕ್ರಿಯೆಯಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬುದು ಏಕೆ ಅರ್ಥವಾಗುತ್ತಿಲ್ಲವೋ ಗೊತ್ತಾಗದು.

* ಮಕ್ಕಳಿಗೆ ಪಠ್ಯಕ್ರಮವಿರುವಂತೆ ನೈತಿಕ ಕ್ರಮವಿರ ಬೇಕು. ಬದುಕಿಗೆ ಬೇಕಾದ ನೈತಿಕ ಕ್ರಮ ಪಾಲನೆಗೆ ಒತ್ತು ನೀಡಬೇಕು. ಈ ನೈತಿಕ ಕ್ರಮಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ಹೋದರೆ ಅವರ ಬದುಕು ನೈತಿ ಕತೆಯ ಕ್ರಮ ತಪ್ಪದು. ವಂಚನೆ, ಶೋಷಣೆ, ಅಸ್ಪೃಶ್ಯತೆ ಇಲ್ಲದ ಅನಾಗರಿಕ, ಅಮಾನವೀಯವಲ್ಲದ ಒಂದು ಸಮಾಜ ನಿರ್ಮಾಣವಾಗಬೇಕು ಎಂಬ ಆಶಯ, ಉದ್ದೇಶದೊಂದಿಗೆ ಅದನ್ನು ಸಾಕಾರಗೊಳಿಸಲು ಪ್ರಯತ್ನ ನಡೆಯಲಿದೆ.

ಚಿಂತನೆ ಮೂಡಿದ್ದು ಹೇಗೆ?: ಹಿಂದೆ ಬಸವಣ್ಣನವರ ನೇತೃತ್ವದಲ್ಲಿ 1.96 ಲಕ್ಷ ಗಣಂಗಳು ಸಮಾವೇಶಗೊಂಡಿದ್ದರೆಂಬುದು ಇತಿಹಾಸದ ಒಂದು ರೋಚಕ ಅಂಶ. ಅದನ್ನು 21ನೇ ಶತಮಾನದಲ್ಲಿ ನೆನಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಬೇರೆ, ಬೇರೆ ಆಯಾಮಗಳ ಮೂಲಕ ಇದನ್ನು ನಿರಂತರವಾಗಿಟ್ಟುಕೊಳ್ಳಲು ಪ್ರಯತ್ನಿಸಲಾಗುವುದು. ಕಳೆದ 30 ವರ್ಷಗಳಿಂದ ಶರಣ ಸಂಸ್ಕೃತಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬೆಂಗಳೂರಿನಲ್ಲೂ ಶರಣ ಸಂಸ್ಕೃತಿ ಉತ್ಸವ, ಶಿವಯೋಗ ಸಂಭ್ರಮ ಆಯೋಜಿಸಲಾಗುತ್ತಿದೆ.

ಇದಕ್ಕೆ ಸಾಕಷ್ಟು ಮಂದಿ ಒಲವು ತೋರುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಆ ಜನರ ಅಪೇಕ್ಷೆಯಂತೆ ಅಸಂಖ್ಯ ಪ್ರಮಥರ ಗಣಮೇಳ ಆಯೋಜನೆಯಾಗಿದೆ. ಗಣಮೇಳದಲ್ಲಿ ಭವಿಷ್ಯದ ಪ್ರಜೆಗಳೆನಿಸಿದ ಯುವಜನತೆಯ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿದೆ. ಭಾನುವಾರ ಮುಂಜಾನೆಯ ಶಿವಯೋಗದಲ್ಲಿ ವಿದ್ಯಾರ್ಥಿ ಸಮೂಹವೂ ಪಾಲ್ಗೊಳ್ಳಲಿದೆ. ಉಪನ್ಯಾಸ, ಪ್ರವಚನಕ್ಕಿಂತ ಚಿಂತನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ರೀತಿಯ ಮೇಳ ಸಂಘಟಿಸುವ ಉದ್ದೇಶವಿದೆ.

ಬಸವಣ್ಣನವರ ಸಂದೇಶ, ಬೋಧನೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮುಂದುವರಿಯಲಿದೆ. ಬಸವ ತತ್ವ ಎಂದರೆ ಬಿಡುಗಡೆಯ ತತ್ವ. ಅದನ್ನು ಪ್ರತಿಪಾದಿಸಲಾಗುವುದು. ಒಂದೇ ಒಂದು ಸಮಾವೇಶದ ಮುಖಾಂತರ ಇಡೀ ಜನಸಮೂಹದ ಬದುಕನ್ನು ಪರಿವರ್ತನೆ ಮಾಡುತ್ತೇವೆ ಎಂಬ ಭ್ರಮೆ ಇಲ್ಲ. ಇಂತಹ ಸಮಾವೇಶ ನಿರಂತರವಾಗಿ ನಡೆಯುತ್ತಿರಬೇಕು. ಶ್ರಮ ಹಾಕಿದಾಗ ಶರೀರದಿಂದ ಬೆವರು ಬರುತ್ತದೆ. ಆ ಕೊಳೆಯನ್ನು ತೊಳೆದುಕೊಳ್ಳಬೇಕಾಗುತ್ತದೆ. ಹಾಗೆಯೇ ನಾವು ಅಂತರಂಗ, ಬಹಿರಂಗ ಶುದ್ಧಿ ಮಾಡಿಕೊಳ್ಳುವುದು ಅನಿವಾರ್ಯ.

ನಾನೊಬ್ಬ ಆಶಾವಾದಿಯಾಗಿದ್ದೇನೆ. ಆಶಾವಾದಿಯಾಗಿಯೇ ಈ ಪ್ರಯತ್ನ ಮಾಡುತ್ತಿದ್ದೇನೆ. ಜನರೂ ಸ್ಪಂದಿಸುವ ನಿರೀಕ್ಷೆ ಇದೆ. ಶರಣರದು ಜೀವಪರ ಹಾಗೂ ಸರ್ವಶರಣ ಪರ ಧೋರಣೆಯಾದರೆ ಇಂದಿನ ಬಹುತೇಕ ಜನರಲ್ಲಿ ಸ್ವಾರ್ಥಪರವಾದ ಧೋರಣೆ ಕಾಣುತ್ತಿದೆ. ಮಾನವೀಯ ಮೌಲ್ಯಗಳು, ದಾರ್ಶನಿಕರ ಆದರ್ಶಗಳಿಗೆ ಆ ಕಾಲ- ಈ ಕಾಲ ಎಂಬುದಿಲ್ಲ. ಎಲ್ಲ ಕಾಲದಲ್ಲೂ ಅವುಗಳಿಗೆ ಮಹತ್ವ ಇದ್ದೇ ಇರುತ್ತದೆ. ಅದನ್ನು ಪ್ರತಿಪಾದಿಸಿ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮುಂದುವರಿಸುತ್ತೇವೆ.

ಜನರಲ್ಲಿ ಸ್ವಾರ್ಥಪರ ಧೋರಣೆ ಹೆಚ್ಚಾಗುತ್ತಿದೆ. ಹಣದ ದಾಹ ಅಧಿಕವಾಗುತ್ತಿರುವುದರಿಂದ ಗುಣದ ಕಡೆಗಿನ ತುಡಿತ ಕಡಿಮೆಯಾಗುತ್ತಿದೆ. ಹಣವೇ ಸರ್ವಸ್ವ ಎಂದು ತಿಳಿದವರಿಗೆ ಒಂದು ದಿನ ಹಣ ಅಳಿಯುತ್ತದೆ. ಗುಣ ಶಾಶ್ವತವಾಗಿ ಉಳಿಯುತ್ತದೆ ಎಂಬು ದನ್ನು ಅರ್ಥಪಡಿಸಬೇಕಿದೆ. ಗಣ ಅಂದರೆ ಗುಣ. ಗುಣ ಎಂದರೆ ಗಣ. ಗಣ+ಗುಣ = ಕಲ್ಯಾಣ. ಇದೊಂದು ಲೆಕ್ಕ!
-ಶಿವಮೂರ್ತಿ ಮುರುಘಾ, ಶರಣರು, ಮುರುಘಾ ಮಠ

Advertisement

Udayavani is now on Telegram. Click here to join our channel and stay updated with the latest news.

Next