Advertisement

Festival; ಇಂದು ರಕ್ಷಾ ಬಂಧನ: ಅವಿತಿಟ್ಟ ಪ್ರೀತಿಯ ಮೂರ್ತವಾಗಿಸುವ ಹಬ್ಬ

09:48 PM Aug 18, 2024 | Team Udayavani |

ಹುಸಿ ಕೋಪ, ತುಸು ಪ್ರೀತಿ, ಆಗಾಗ ಹಸಿ ಮುನಿಸು ತೋರುವವರು ಯಾರೆಂದಾಗ ಮೊದಲು ನೆನಪಾಗುವುದು ಅಣ್ಣ. ಈ ಅಣ್ಣ ಗದರುವ ಅಪ್ಪನಾಗಲು ಬಲ್ಲ, ಆಂತರ್ಯದಲ್ಲಿ ಪ್ರೀತಿ ತೋರಿಸಿ ಮಮತೆಯ ಸೆರೆಯಲ್ಲಿ ನಮ್ಮನ್ನು ರಕ್ಷಿಸುವ ಅಮ್ಮನಾಗಲೂ ಬಲ್ಲ. ಅಪ್ಪ-ಅಮ್ಮನ ಪ್ರೀತಿ, ಗೆಳೆಯನ ಆಪ್ತತೆ… ಈ ಬಾಂಧವ್ಯಕ್ಕೆ ಸರಿಸಾಟಿ ಯಾರೂ ಇಲ್ಲ. ಅರೆಕ್ಷಣ ಜಗಳವಾಡುತ್ತಲೇ ಮತ್ತೂಮ್ಮೆ ಒಂದಾಗುವ ಸಹೋದರಿ-ಸಹೋದರರ ನಡುವಿನ ಬಾಂಧವ್ಯದ ದ್ಯೋತಕವೇ ರಕ್ಷಾ ಬಂಧನ ಹಬ್ಬ.

Advertisement

ಅಮ್ಮನ ಬಳಿ ಸದಾ ದೂರುವಾಗಲೂ ಅಣ್ಣನಾದವ ದೊಡ್ಡ ತಪ್ಪಿತಸ್ಥನ ಸ್ಥಾನಕ್ಕೆ ತಲುಪಿ ಮೌನಿಯಾಗುತ್ತಾನೆ. ತಂಗಿಗೆ ಬೀಳುವ ಏಟಿಗೆ ಅಡ್ಡಗಟ್ಟಿ ತಾನು ಆ ಏಟಿನ ಪಾಲುದಾರನಾಗುತ್ತಾನೆ. ಟಿ.ವಿ. ರಿಮೋಟ್‌, ಅಪ್ಪನ ಜೇಬಿನ ಹಣ, ಅವಿತಿಟ್ಟ ತಿಂಡಿಯ ಹಂಚಿಕೆ ಹೀಗೆ ಎಲ್ಲ ಕಡೆ ಜಗಳದ ಪೈಪೋಟಿಯಲ್ಲಿ ಅಣ್ಣ-ತಂಗಿಯ ನಡುವಿನ ಸಿಹಿ ಮುನಿಸು ಎಂದೂ ಮುಗಿಯದ ಅನುಬಂಧಕ್ಕೆ ಸಾಕ್ಷಿ ಎನ್ನಬಹುದು. ಆದರೆ ಬೆಳೆಯುತ್ತ ಹೋದಂತೆ ಈ ಪ್ರೀತಿ ಮರೆಯಾಗುತ್ತದೆ. ಅನೇಕ ಕಡೆ ಅಣ್ಣ-ತಂಗಿ ಮನದಾಳದ ಬಾಂಧವ್ಯದ ಪ್ರೀತಿಯು ಚಿಪ್ಪಿನೊಳಗೆ ಬಚ್ಚಿಟ್ಟ ಮುತ್ತಿನಂತೆ ಅವಿತು ಹೋಗುತ್ತದೆ. ಮಾತುಕತೆ ಕಡಿಮೆಯಾದರೂ ಪರಸ್ಪರ ಪ್ರೀತಿ ಹಸುರು. ಇಂತಹ ಅಮೂರ್ತ ಪ್ರೀತಿ ವರ್ಷಕ್ಕೊಮ್ಮೆ ಮೂರ್ತವಾಗಿ ಭಾವಾಭಿವ್ಯಕ್ತಗೊಳ್ಳುವ ದಿನವೇ ರಕ್ಷಾ ಬಂಧನ ಹಬ್ಬ.

ಸಹೋದರಿಯರೊಡನೆ ಆತ ಕೆಲವೊಂದು ಬಾರಿ ಕಡಿಮೆ ಮಾತನಾಡಿದರೂ ತೋರುವ ಪ್ರೀತಿ ಮಾತ್ರ ನಿಷ್ಕಲ್ಮಶ. ಸಮಾಜದಲ್ಲಿ ಗಂಡು ಅಳಬಾರದು, ಭಾವಜೀವಿ. ಆದರೆ ಎಲ್ಲಿ ಹೆಣ್ಣುಮಕ್ಕಳಂತೆ ಎನ್ನುತ್ತಾರೆಯೋ ಎಂಬ ಕೀಳರಿಮೆಯಿಂದ ತಾನು ಕೂಡ ಅಪ್ಪನಂತೆ ಭಾವ ಹೀನ ಎಂಬಂತೆ ವರ್ತಿಸುವರು ಇ¨ªಾರೆ. ಆದರೆ ಅವರ ಒಡಲಾಳದಲ್ಲಿ ತನ್ನ ತಂಗಿ, ತಮ್ಮನ ಬಗ್ಗೆ ವಿಶೇಷ ಕಾಳಜಿ ಇದ್ದೇ ಇರುತ್ತದೆ. ಆದರೆ ಇನ್ನು ಕೆಲವರು ತಮ್ಮ ತಂಗಿಯನ್ನೇ ಜೀವದ ಗೆಳತಿಯಂತೆ ಸ್ವೀಕರಿಸುವವರಿದ್ದಾರೆ. ಅಂತಹ ಅನುಬಂಧ ಸಿಕ್ಕವರು ಅದೃಷ್ಟವಂತರೆನ್ನಬಹುದು.

ನಮ್ಮ ಬುದ್ಧಿಮಟ್ಟ ಪ್ರೌಢಿಮೆಗೆ ಬರುತ್ತಲೇ ಈ ರಕ್ಷಾ ಬಂಧನ ಅಣ್ಣ-ತಂಗಿಗೆ ಮಾತ್ರ ಸೀಮಿತ ಎಂಬ ಚೌಕಟ್ಟು ಹಾಕಿ ಬಿಡುತ್ತೇವೆ. ಆದರೆ ನಿಜಾರ್ಥದಲ್ಲಿ ನಮ್ಮನ್ನು ರಕ್ಷಿಸುವ, ನಮ್ಮ ಏಳಿಗೆಗೆ ಪ್ರಾರ್ಥಿಸುವ ಎಲ್ಲ ರೀತಿಯ ಸಂಬಂಧಗಳಿಗೂ ರಕ್ಷಾ ಬಂಧನದ ವ್ಯಾಪ್ತಿ ವಿಸ್ತರಿಸುವ ಅಗತ್ಯವಿದೆ. ಹಾಗಿದ್ದರೂ ಸಂಪ್ರದಾಯಬದ್ಧ ಆಚರಣೆಯಲ್ಲಿ ಅಣ್ಣ-ತಂಗಿ ಬಾಂಧವ್ಯಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದನ್ನು ಕಾಣಬಹುದು.

ಯಾವಾಗ ಆಚರಣೆಗೆ ಬಂತು?
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು ಆರಂಭ ಆಗಿದೆ ಎಂದರ್ಥ. ವರಮಹಾಲಕ್ಷ್ಮೀ ಹಬ್ಬದ ಬಳಿಕ ಬರುವ ರಕ್ಷಾ ಬಂಧನ ಹಬ್ಬಕ್ಕು ಕೂಡ ತನ್ನದೆ ಆದ ಮಹತ್ವ ಇದೆ. ಸಹೋದರತೆಯ ಪ್ರೀತಿ ಪ್ರತೀ ವರ್ಷ ಅಚ್ಚಳಿಯದೇ ಉಳಿಯುವಂತೆ ಆಚರಿಸುವ ನೆಲೆಯಲ್ಲಿ ರಕ್ಷಾ ಬಂಧನ ಹಬ್ಬ ಅನಾದಿಕಾಲದಿಂದಲೂ ಆಚರಣೆಯಲ್ಲಿದೆ. ಶ್ರೀಕೃಷ್ಣನು ಶಿಶುಪಾಲನನ್ನು ಕೊಲ್ಲಲು ಸುದರ್ಶನ ಚಕ್ರ ಬಳಸುವಾಗ ಆತನ ಕೈಗೆ ಗಾಯವಾಗುವುದು. ಆಗ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಶ್ರೀಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಫ‌ಲವಾಗಿ ಶ್ರೀಕೃಷ್ಣನು ಹಸ್ತಿನಾಪುರ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಾಗ ಮಾನ ಕಾಪಾಡಿ ರಕ್ಷಣೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ಪೌರಾಣಿಕ ಕಥೆ. ಅಲ್ಲಿಂದಲೇ ಈ ರಾಖಿ ಹಬ್ಬದ ಆಚರಣೆ ಆರಂಭವಾಯಿತು ಎಂದು ಪ್ರತೀತಿ.

Advertisement

ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಈ ರಕ್ಷಾ ಬಂಧನ ಆಚರಿಸುತ್ತಾರೆ. ರಾಖಿ ಕಟ್ಟುವುದು ರಕ್ಷಣೆಯ ಸೂಚಕ ಎಂಬ ನಂಬಿಕೆ ಇದೆ. ಹಾಗೆಂದ ಮಾತ್ರಕ್ಕೆ ಬರೀ ದಾರದಿಂದಲೇ ರಕ್ಷೆ ಸಿಗುತ್ತದೆ ಎಂದರ್ಥವಲ್ಲ. ಬದಲಾಗಿ ರಕ್ಷಣೆ ಕೋರಿ ಕಟ್ಟಿದ್ದ ರಾಖಿ ಸಹೋದರತೆಯನ್ನು ನಮ್ಮನ್ನು ಅಂತರಾಳದಿಂದ ಎಚ್ಚರಿಸಬೇಕಿದೆ.

ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ದಾಪುಗಾಲಿಡುತ್ತಿದ್ದಾಳೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಆಕೆ ತಾನೆಷ್ಟು ಸಶಕ್ತಳು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾಳೆ. ಇಷ್ಟೆಲ್ಲ ಬೆಳವಣಿಗೆಗಳಾದರೂ ಇಂದಿಗೂ ಮಹಿಳೆಯರು ಪ್ರತಿಯೊಂದು ಹಂತದಲ್ಲಿಯೂ ಒಂದು ತೆರನಾದ ಅಭದ್ರತೆ, ಭೀತಿಯನ್ನು ಎದುರಿಸುತ್ತಿದ್ದಾಳೆ. ಅಷ್ಟು ಮಾತ್ರವಲ್ಲ ಇಂದಿಗೂ ಮಹಿಳೆಯರ ಬಗೆಗೆ ಸಮಾಜದಲ್ಲಿ ಕೀಳರಿಮೆ, ಸಂಕುಚಿತ ಭಾವನೆ ಇದೆ. ಮಹಿಳೆಯರಲ್ಲಿನ ಮತ್ತು ಆಕೆಯ ಬಗೆಗಿನ ಈ ಎಲ್ಲ ನಕಾರಾತ್ಮಕತೆಗಳಿಗೆ ಪುಷ್ಟಿ ನೀಡುವಂತಹ ಘಟನೆಗಳು ಪದೇಪದೆ ನಡೆಯುತ್ತಿರುವುದು ತೀರಾ ದುರದೃಷ್ಟಕರ. ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಭದ್ರತೆ, ಸೂಕ್ತ ಗೌರವ ಲಭಿಸುತ್ತಿಲ್ಲ ಎಂದಾದರೆ ಅದು ಇಡೀ ಸಾಮಾಜಿಕ ವ್ಯವಸ್ಥೆಗೆ ದೊಡ್ಡ ಕಳಂಕವೇ ಸರಿ.

ಇಂತಹ ಕಾಲಘಟ್ಟದಲ್ಲಿ ರಕ್ಷಾ ಬಂಧನ ಹಬ್ಬದ ಆಚರಣೆ ಕೇವಲ ಕಾಟಾಚಾರದಂತೆ ಕಾಣುತ್ತದೆ. ಆದರೆ ಈ ವ್ಯವಸ್ಥೆ ಹೀಗೆ ಮುಂದುವರಿದರೆ ನಾವು ಆಚರಿಸುವ ಸಂಪ್ರದಾಯ ಬದ್ಧ ಪ್ರತೀ ಆಚರಣೆಗಳು ಕೂಡ ಅರ್ಥಹೀನವಾಗುವುದು. ರಕ್ಷಾ ಬಂಧನ ದಿನದಂದು ತಂಗಿ ಅಣ್ಣನಿಗೆ ರಾಖಿ ಕಟ್ಟುವುದಕ್ಕಷ್ಟೇ ಸೀಮಿತವಾಗದೆ ಇಡೀ ಸಮಾಜದಲ್ಲಿ ಸಹೋದರತೆ, ಭ್ರಾತೃತ್ವದ ಭಾವನೆ ಬೆಳೆಯುವಂತಾಗಲು ಈ ಆಚರಣೆ ಮನಃಪೂರ್ವಕವಾಗಿ ರೂಢಿಯಾಗಬೇಕು. ಹೆಣ್ಣು ಮಕ್ಕಳು ರಕ್ಷಣೆ ಕೋರಿ ಅಣ್ಣ-ತಮ್ಮಂದಿರ ಕೈಗೆ ಕಟ್ಟುವ ರಾಖಿ, ಸಮಾಜದಲ್ಲಿ ಸಹೋದರತೆಯ ಅನುಬಂಧವನ್ನು ಸದಾ ಉಳಿಸುವಂತಾಗಬೇಕು.

ಕಾನೂನುಗಳಿಂದ ಮಾತ್ರವೇ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಅನಾಚಾರ, ಅನ್ಯಾಯಗಳಿಗೆ ಅಂತ್ಯ ಹಾಡಲು ಸಾಧ್ಯವಿಲ್ಲ. ಪ್ರತಿಯೋರ್ವ ನಲ್ಲಿಯೂ ಸಹೋದರತೆಯ ಮನೋಭಾವನೆ ಅವರ ಆಂತರ್ಯದಲ್ಲಿ ಮೂಡಿದಾಗಲಷ್ಟೇ ಆತ ಹೆಣ್ಣುಮಕ್ಕಳ ರಕ್ಷಣೆಗೆ ಸಂಕಲ್ಪಬದ್ಧನಾಗಲು ಸಾಧ್ಯ. ಹೀಗಾದಾಗ ಸಹಜವಾಗಿಯೇ ಆತನನ್ನು ಕಾನೂನಿನ ಭಯ ಕಾಡಲಾರಂಭಿಸುತ್ತದೆ. ಇವೆರಡೂ ಜತೆಯಾದಾಗ ಹೆಣ್ಣುಮಕ್ಕಳಿಗೆ ರಕ್ಷಣೆ, ಗೌರವ ಎಲ್ಲವೂ ಪ್ರಾಪ್ತವಾಗುತ್ತದೆ.

ಸಹೋದರಿಯರು ತಾವು ರಾಖಿ ಕಟ್ಟಿದ ಸಹೋದರರಿಂದ ಉಡುಗೊರೆಯ ಬದಲು ಸುರಕ್ಷಿತ ಮತ್ತು ಸ್ವಸ್ಥ ಸಮಾಜ ಬಯಸುತ್ತಿದ್ದಾರೆ. ಮನೆ ಮಾತ್ರವಲ್ಲದೆ ಸಮಾಜದಲ್ಲಿಯೂ ಈ ಸಹೋದರತೆಯ ಮನೋಭಾವವನ್ನು ಆಕೆ ನಿರೀಕ್ಷಿಸುತ್ತಿದ್ದಾಳೆ. ಕಾನೂನು , ನ್ಯಾಯಾಂಗ ವ್ಯವಸ್ಥೆಯ ಭಯದ ಪರಿಧಿ ಒಳಗೆ ಮಾನವೀಯ ಸಂಬಂಧಗಳ ಮೌಲ್ಯವನ್ನು ಅರಿಯೋಣ. ಸಹೋದರತೆಯ ಭಾವನೆಗಳು ತೋರ್ಪಡಿಕೆಯಾಗದೆ ಸ್ವಭಾವತಃ ಮನಃಪೂರ್ವಕವಾಗಿ ನಮ್ಮಲ್ಲಿ ನಾವು ಅಳವಡಿಸಿಕೊಳ್ಳಬೇಕು. ನಮ್ಮನ್ನು ಕಾಯುವ ಪ್ರತೀ ರಕ್ಷಕರಿಗೂ ಈ ದಿನ ವಿಶೇಷ ಕೃತಜ್ಞತೆ ತಿಳಿಸೋಣ. ಸಹೋದರತೆಯ ಈ ರಕ್ಷಾ ಬಂಧನ ಹಬ್ಬ, ಸಾಮಾಜಿಕ ಜಾಲತಾಣಗಳ ಸ್ಟೇಟಸ್‌, ಪೋಸ್ಟ್‌, ಶುಭಾಶಯ ವಿನಿಮಯ, ರಾಖಿ ಕಟ್ಟುವಿಕೆ, ಉಡುಗೊರೆ ನೀಡಿಕೆ ಇವೇ ಮೊದಲಾದ ತೋರಿಕೆಯ ಆಚರಣೆಗೆ ಸೀಮಿತವಾಗದೆ ಪ್ರತಿಯೋರ್ವರ ಹೃದಯದ ಮೂಲೆಯಲ್ಲೆಲ್ಲೋ ಅವಿತಿರುವ ಭ್ರಾತೃತ್ವದ ಮನೋಭಾವವನ್ನು ಬಡಿದೆಬ್ಬಿಸಿ, ಸಹೋದರ-ಸಹೋದರಿಯರ ನಡುವಣ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟು ಸದೃಢವಾಗಿಸಲಿ.

– ರಾಧಿಕಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next