Advertisement

ಕಾರಂತರ ಕಾದಂಬರಿಗಳ ಮುಖ; ಇಂದು ಕೋಟ ಶಿವರಾಮ ಕಾರಂತ ಜನ್ಮದಿನ

12:16 AM Oct 10, 2022 | Team Udayavani |

ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ| ಶಿವರಾಮ ಕಾರಂತರದ್ದು ವಿಭಿನ್ನ ವ್ಯಕ್ತಿತ್ವ. ಕಾರಂತರು ಅಧ್ಯಯನ ಮಾಡದ ಕ್ಷೇತ್ರವೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಅವರ ಕುತೂಹಲದ ಮನಃಸ್ಥಿತಿ ಸುತ್ತಲ ಸಮಾಜಕ್ಕೆ ಅವರೊಬ್ಬ ಭಿನ್ನ ಲೇಖಕರಂತೆ ಕಂಡು ಬರಲು ಕಾರಣ. ಬಾಲ್ಯದಲ್ಲೇ ವೈಧವ್ಯ ಪಡೆದ ಹೆಣ್ಣೊಬ್ಬಳ ಜೀವನದ ಪರಿಪಕ್ವತೆಯ ಕುರಿತು ಲೇಖನಿಯ ಮೂಲಕ ಸಾಣೆ ಹಿಡಿದ ಕಾರಂತರು ಮೂಕಜ್ಜಿಯನ್ನು ತಂದು ಓದುಗನೆದುರು ನಿಲ್ಲಿಸಿಯೇ ಬಿಡುತ್ತಾರೆ. “ಮೂಕಜ್ಜಿಯ ಕನಸು’ ಮೂಲಕ ಜ್ಞಾನಪೀಠಕ್ಕೆ ಪಾತ್ರರಾಗುತ್ತಾರೆ.

Advertisement

ತುಂಡು ಭೂಮಿಗಾಗಿ ಪರಿತಪಿ ಸುವ ಚೋಮನ ಮನದ ತುಡಿತಗಳನ್ನು ಚೋಮನ ದುಡಿಯ ಮೂಲಕ ಹೇಳುತ್ತಾ ಹೋಗುವ ಕಾರಂತರು ಇಂದಿಗೂ ಹೊರ ಜಗತ್ತಿನ ಮರೆಯಲ್ಲೇ ಬದುಕ ಬಯ ಸುವ ಕೊರಗ ಜನಾಂಗದ ಅಸ್ಪೃ ಶ್ಯತೆ, ಅಸಹಾಯಕತೆ, ನೋವು- ನಲಿವುಗಳನ್ನೆಲ್ಲ ಕಥೆಯ ಮೂಲಕ ತೆರೆದಿಡುತ್ತಾ, ಚೋಮನ ತುಂಡು ಭೂಮಿಯಾಸೆಯೊಂದಿಗೆ ಅವನು ನಂಬಿದ ದೈವಗಳ ಭಯಭಕ್ತಿಯ ಬದುಕನ್ನು ಬಿಡಲಾಗದೆ ಚಡಪಡಿಕೆಯನ್ನು ಅನುಭವಿಸುವ ಚೋಮ, ಇತ್ತ ಭೂಮಿಯಾಸೆಯ ದರಿ, ಅತ್ತ ನಂಬಿಕೆಯ ಪುಲಿ ಇವೆರಡರ ನಡುವೆ ಅಸಹಾಯಕತೆ ಮತ್ತು ಗೊಂದಲದ ಗೂಡಾಗುತ್ತಾನೆ.

ಕಾರಂತರ “ಮರಳಿ ಮಣ್ಣಿಗೆ’ ಕಾದಂಬರಿ ಹಲವು ಜಿಜ್ಞಾಸೆಗಳನ್ನು ತನ್ನೊಡಲೊಳಗೆ ಬಿಚ್ಚಿಟ್ಟುಕೊಳ್ಳುತ್ತಲೇ ಐತಾಳರ ಕುಟುಂಬವೊಂದರ ತಲೆಮಾರಿನ ಬದುಕಿನ ಪದ್ಧತಿಯನ್ನು ತೆರೆದಿಡುತ್ತದೆ. ಮರಳಿ ಮಣ್ಣಿಗೆ ಪುಟಗಳನ್ನು ಮಗುಚುತ್ತಿದ್ದರೆ, ಕರಾವಳಿಯ ತೀರ ಪ್ರದೇಶಗಳಲ್ಲಿ ಓದುಗ ತನಗರಿವಿಲ್ಲದೇ ನಡೆದಾಡುತ್ತಾನೆ. ಸರಳವಾಗಿ ಹೇಳುವುದಾದರೆ ಸ್ವತಂತ್ರ ಪೂರ್ವ ಭಾರತದಲ್ಲಿದ್ದಂತಹ ಮೂರು ತಲೆಮಾರಿನ ಕಥೆ “ಮರಳಿ ಮಣ್ಣಿಗೆ’ಯಲ್ಲಿ ಅಡಗಿದೆ. ಕಡಲು, ಸಮುದ್ರ, ದಂಡೆ, ಅಳಿವೆ, ನದಿ, ಕೆರೆ, ತೋಟ, ಗದ್ದೆ, ಮನೆ ಕೊಟ್ಟಿಗೆ, ಚಪ್ಪರ ಕಥಾನಕದಲ್ಲಿ ಅಡಗಿಕೊಂಡು ಹೊಸ ಜನಾಂಗಕ್ಕೊಂದು ಅಭಿರುಚಿಯನ್ನು ತೆರೆದುಕೊಳ್ಳುವಂತೆ ಮಾಡುತ್ತದೆ.

ಅವರ ವಿಶಿಷ್ಟ ಕಾದಂಬರಿಗಳಲ್ಲಿ “ಮೈಮನಗಳ ಸುಳಿಯಲ್ಲಿ’ ಒಂದು. ನಮ್ಮ ನಮ್ಮ ಯೋಜನೆಗಳಿಗೂ ಮಾಡಬಹುದಾದ ಕೆಲಸಗಳಿಗೂ ಹೊಂದಾಣಿಕೆ ಇದ್ದಾಗ ಮಾತ್ರ ಸಾರ್ಥಕತೆಯ ಶ್ರಮ ಕಂಡು ಬಂದೀತು ಎನ್ನುತ್ತಲೇ ಆರಂಭವಾಗುವ “ಮೈಮನಗಳ ಸುಳಿಯಲ್ಲಿ’ ಬದುಕಿನ ಹೆಜ್ಜೆಗಳಿಗೂ ಆಲೋ ಚನೆಯ ಕ್ರಿಯೆಗೂ ಸೂತ್ರವಿರದೆ ಹೋದರೆ ಬದುಕೇ ಗೊಂದಲ ವಾಗುವ ಅಪಾಯವಿದೆ ಎನ್ನುವ ಕಾರಂತರ ನುಡಿಗಳು ಮುಂದು ವರಿದು, ವೇದ, ಪುರಾಣ ಕಾಲದಿಂದಲೂ ಪ್ರಾರಂಭವಾಗಿ ರಾಜಾಶ್ರಯ, ಪ್ರಜಾಶ್ರಯ ಮಧ್ಯದಲ್ಲಿ ಮಹಿಳೆಯೊಬ್ಬಳ ಬದುಕಿನ ತುಡಿತಗಳು, ಸ್ಪರ್ಶ, ಅಸ್ಪೃಶ್ಯತೆಯ ಮೇಲು- ಕೀಳರಿಮೆಯ ನಡುವೆಯೂ ಹೆಣ್ಣೊಬ್ಬಳ ಮೈ ಮನಗಳ ಮೇಲೆ ನಡೆಯುವ ಬಾಹ್ಯ ಒತ್ತಡಗಳನ್ನು ಮನೋಜ್ಞವಾಗಿ ಬಿತ್ತರಿಸುತ್ತಾ ವೇಶ್ಯೆ ಮಂಜುಳಾಳ ನೈಜ ಬದುಕನ್ನು ಸಮಾಜಕ್ಕೆ ತೆರೆದಿಡುವ ಶಿವರಾಮ ಕಾರಂತರ ಪ್ರಯತ್ನ ಅತ್ಯಂತ ಶ್ರೇಷ್ಠವಾದದ್ದು.

ಕಾರಂತರು ಬರೆದ 40ಕ್ಕೂ ಹೆಚ್ಚು ಕಾದಂಬರಿಗಳಲ್ಲಿ “ಅಳಿದ ಮೇಲೆ’ ಎಂಬ ಜನಮಾನಸದಲ್ಲಿ ಅಚ್ಚೊತ್ತಿದ ಬರೆಹವೂ ಒಂದು. ಮುಂಬಯಿಯ ರೈಲು ಪ್ರಯಾಣದಲ್ಲಿರುವ ಕಾರಂತರಿಗೆ ಕಥೆಯಲ್ಲಿರುವ ಯಶವಂತರ ಪರಿಚಯವಾಗುವುದು. ಕಾರಂತರು ಮತ್ತು ಯಶವಂತರ ಸ್ನೇಹದ ಹಲವು ಮಜಲುಗಳನ್ನು ದಾಟುತ್ತಾ ಹೋಗುವ ಬರೆಹ, ಯಶವಂತರ ಧಾರಾಳತನ ಅವರ ಕೌಟುಂಬಿಕ ಜೀವನದ ವಿಶಾಲತೆ, ವೈವಿಧ್ಯತೆ ಇವೆಲ್ಲವನ್ನೂ ಕಾರಂತರು “ಅಳಿದ ಮೇಲೆ’ಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

Advertisement

ಕಾರಂತರ ಬರೆಹ ಲೋಕದಲ್ಲಿ “ಬೆಟ್ಟದ ಜೀವ’ ಅತ್ಯಂತ ಚಿಕ್ಕ ಕಾದಂಬರಿಗಳಲ್ಲೊಂದು. ಗೋಪಾಲಯ್ಯ ಮತ್ತು ಶಂಕರಿ ಎಂಬ ವೃದ್ಧ ದಂಪತಿಯ ಕಥೆಯದು. ಕಥೆಯ ಆಳ, ಅಗಲ ಕಾರಂತರು ಬಿಂಬಿಸಿದ ರೀತಿ ಬೆಟ್ಟದ ಜೀವಕ್ಕೊಂದು ವಿಶಿಷ್ಟತೆ ತಂದುಕೊಡುತ್ತದೆ. ಪಶ್ಚಿಮ ಘಟ್ಟಗಳ ನಡುವೆ ಸುಬ್ರಹ್ಮಣ್ಯದ ಸಮೀಪ ಕುಮಾರ ಪರ್ವತದ ತಪ್ಪಲಲ್ಲಿ ಮನೆಯಿಂದ ಹೊರನಡೆದ ಮಗನ ನೋವನ್ನು ಒಡಲಲ್ಲಿ ತುಂಬಿಕೊಡು ಸುಖ ಎನ್ನುವ ಪದಕ್ಕೆ ಶ್ರಮ ಎನ್ನುವ ಅರ್ಥದೊಂದಿಗೆ ಬದುಕುವ ವೃದ್ಧರ ಜೀವನಗಾಥೆಯನ್ನು ಬೆಟ್ಟದ ಜೀವದ ಮೂಲಕ ತೆರೆದಿಟ್ಟ ಕಾರಂತರ ಲೇಖನಿ ನಿಸರ್ಗದ ಸೊಬಗನ್ನು ಘಟ್ಟಗಳ ನಡುವಿನ ಸೌಂದರ್ಯದ ರಾಶಿಯನ್ನು ಮೊಗೆ-ಮೊಗೆದು ಓದುಗನಿಗೆ ಬಡಿಸಿ ಬಿಡುತ್ತದೆ.

ಹೀಗೆ ಕಾರಂತರು ನೆಲ, ಜಲ, ಪರಿಸರ ಕಾಡು, ಮೇಡು, ಗುಡ್ಡ, ಬೆಟ್ಟ ಜರಿ, ತೊರೆಗಳೊಂದಿಗೆ ಬರೆಹದ ಬದುಕನ್ನು ಕಟ್ಟಿಕೊಳ್ಳುತ್ತಾ ಸಂಪ್ರದಾಯದ ಹೆಸರಿನಲ್ಲಿ ಮೂಢನಂಬಿಕೆಗಳು, ಅಧ್ಯಾತ್ಮದ ಹೆಸರಿನಲ್ಲಿ ಆಗುವ ಬದುಕಿನ ಅವಘಡಗಳು, ಅಧುನಿಕತೆ ಹೆಸರಿನಲ್ಲಿ ಪರಿಸರದ ನಾಶವನ್ನು ಬರೆಹದ ಮೂಲಕ ಸಮಾಜಕ್ಕೆ ಎತ್ತಿ ತೋರಿಸುತ್ತಲೇ ಊರುಗೋಲು ಹಿಡಿದು ದಾರಿತಪ್ಪುತ್ತಿರುವ ಸಮಾಜಕ್ಕೆ ಸರಿದಿಕ್ಕು ತೋರಿಸಲು ಶ್ರಮ ಪಟ್ಟಿದ್ದಾರೆ. ಒಟ್ಟಾರೆ ಶಿವರಾಮ ಕಾರಂತ ಎಂಬ “ನಡೆದಾಡುವ ವಿಶ್ವಕೋಶ’ ಸಮಾಜಕ್ಕೊಂದು ಹೆಮ್ಮೆ.

ರಮೇಶ್‌ಗೆ ಪ್ರಶಸ್ತಿ ಪ್ರದಾನ
ಇಂದು ಕೋಟ ಶಿವರಾಮ ಕಾರಂತರ ಜನ್ಮದಿನವಾಗಿದ್ದು, ಅವರು ಹುಟ್ಟಿ ಬೆಳೆದ ಈಗಿನ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್‌ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಈ ಬಾರಿ ಪ್ರಶಸ್ತಿಗೆ ಆಯ್ಕೆಯಾದವರು ಕಲಾವಿದ ರಮೇಶ್‌ ಅರವಿಂದ್‌. ಶಿವರಾಮ ಕಾರಂತರ ತಂದೆ ಶೇಷ ಕಾರಂತರು ಕಟ್ಟಿದ ಶಾಂಭವಿ ಗಿಳಿಯಾರು ಶಾಲೆಯ ಆವರಣದಲ್ಲಿ ನಡೆಯುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಮ್ಮೂರಿಗೊಂದು ಕಳೆ ಮತ್ತು ಸಂಭ್ರಮ.

-ಕೋಟ ಶ್ರೀನಿವಾಸ ಪೂಜಾರಿ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next