Advertisement

ಇಂದು ವಿವಿಧೆಡೆ ಅನಂತಪದ್ಮನಾಭ ವ್ರತ

08:50 PM Sep 11, 2019 | Sriram |

ಕುಂದಾಪುರ: ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು ಬರುವ ಶ್ರೇಷ್ಠ ವ್ರತವೇ ಅನಂತವ್ರತ. ಈ ವ್ರತಾಚರಣೆಗೆ ಪೌರಾಣಿಕ ಹಿನ್ನೆಲೆ ಇದೆ. ಸತತ ಹದಿನಾಲ್ಕು ವರುಷ ಈ ಅನಂತವ್ರತ ಆಚರಿಸಿ ಶ್ರೀ ಅನಂತಪದ್ಮನಾಭ ಉದ್ಯಾಪನೆ ಮಾಡಿಸಿದರೆ ಇಹದಲ್ಲಿ ಸುಖ ಪರದಲ್ಲಿ ಮುಕ್ತಿ ಲಭಿಸುತ್ತದೆ.

Advertisement

ಪೌರಾಣಿಕ ಹಿನ್ನೆಲೆ
ಭಾಗೀರಥಿ ನದಿ ತೀರದಲ್ಲಿ ಧರ್ಮರಾಯನು ಜರಾಸಂಧನ ವಧೆಗಾಗಿ ರಾಜಸೂಯ ಯಾಗ ಆರಂಭಿಸಿದ್ದು, ಶ್ರೀ ಕೃಷ್ಣ, ಭೀಮಾರ್ಜುನ, ನಕುಲ, ಸಹದೇವ, ದ್ರೌಪದಿಯಿಂದೊಡಗೂಡಿ ಯಜ್ಞಕ್ಕೆ ಸಕಲ ರಾಜರನ್ನು ಕರೆಯಿಸಿದ್ದು ವಿಶೇಷವಾಗಿತ್ತು. ಯಾಗ ಮಂಟಪ ಮುತ್ತು ರತ್ನಗಳಿಂದ ಅಲಂಕೃತಗೊಂಡು ಸಾಕ್ಷಾತ್‌ ದೇವಲೋಕವನ್ನೇ ಹೋಲುವಂತಿತ್ತು.

ಇಂತಹ ಅಭೂತಪೂರ್ವ ಯಾಗಶಾಲೆ ನೋಡಲು ದುರ್ಯೋಧನ ತನ್ನ ಮಾವ ಶಕುನಿಯೊಂದಿಗೆ ಬಂದಿದ್ದ. ಯಾಗದ ಹೊಳಪು ನೋಡಿ ಬೆರಗಾದ ಕೌರವ ದೊರೆ ಇದು ನೀರಿನಂತೆ ಇದ್ದದ್ದು ನೋಡಿ ತನ್ನ ವಸ್ತ್ರಗಳನ್ನು ಮೇಲೆತ್ತಿ ಮೆಲ್ಲ ಮೆಲ್ಲಗೆ ನಡೆಯುತ್ತಿದ್ದ ಈ ದೃಶ್ಯ ನೋಡಿದ ದ್ರೌಪದಿ ಹಾಗೂ ಅವಳ ಸಖೀಯರು ತಮಾಷೆ ಮಾಡಿ ನಗುತ್ತಾರೆ.ಇದರಿಂದ ಕ್ರೋಧಗೊಂಡ ದುರ್ಯೋಧನ ಮುಂದೆ ಮುಂದೆ ಸಾಗುತ್ತಾ ನಿಜವಾದ ನೀರು ಇರುವ ಜಾಗದಲ್ಲಿ ಕಾಲು ಜಾರಿ ಬಿದ್ದ ಇದನ್ನು ನೋಡಿದ ದ್ರೌಪತಿ ಸಹಿತ ಎಲ್ಲರೂ ಗೊಳ್ಳೆಂದು ನಕ್ಕರು. ಅವಮಾನಿತನಾದ ಕೌರವೇಶ್ವರನನ್ನು ಮಾವ ಶಕುನಿ ಸಮಾಧಾನಪಡಿಸಿ ಯಾಗ ಶಾಲೆಗೆ ಹೋಗಿ ವೈಭವದ ಯಾಗ ನೋಡುತ್ತಾರೆ. ಇಂತಹ ಅದ್ದೂರಿಯಾದ ಸಂಭ್ರಮದ ರಾಜಸೂಯ ಯಾಗ ನೋಡಿ ಬೆರಗಾದ ಕೌರವ ದೊರೆ ಮನದಲ್ಲಿ ತನ್ನ ಅವಮಾನ ಸೇಡು ತೀರಿಸಿ ಕೊಳ್ಳುವ ಇಂಗಿತ ಶಕುನಿಯಲ್ಲಿ ತಿಳಿಸಿದಾಗ, ಶಕುನಿ ಪಾಂಡವರ ಮೇಲೆ ಹೇಗೆ ಸೇಡು ತೀರಿಸುವ ಚಿಂತನೆ ಮಾಡಿ ಪಾಂಡವರನ್ನು ಪಗಡೆ ಆಟಕ್ಕೆ ಕರೆದು ಮೋಸದಿಂದ ಸೋಲಿಸುವ ಯೋಜನೆ ಹಾಕಿಕೊಂಡರು. ಅನಂತರ ಪಾಂಡವರೊಂದಿಗೆ ಪಗಡೆ ಆಡಿ ಮೋಸಮಾಡಿ ಅವರನ್ನು ಸೋಲಿಸಿ ಕಾಡಿಗೆ ಅಟ್ಟಿದರು.

ಇತ್ತ ಪಾಂಡವರು ಕಾಡಿನಲ್ಲಿ ಕಷ್ಟದಲ್ಲಿಯೇ ಜೀವನ ಸಾಗಿಸುತ್ತಾ ಕಾಲಕಳೆಯುತ್ತಿರುತ್ತಾರೆ. ಆಗ ಮಾತೆ ಕುಂತಿದೇವಿ ತನ್ನ ಮಕ್ಕಳೊಂದಿಗೆ ಆಪದ್ಬಾಂಧವ ಶ್ರೀಕೃಷ್ಣನನ್ನು ಪ್ರಾರ್ಥಿಸು ತ್ತಾರೆ. ಶ್ರೀಕೃಷ್ಣ ಇವರ ಕರೆಗೆ ಬಂದು ಇವರ ಕಷ್ಟಗಳನ್ನು ಕೇಳಿ ನಿಮಗೆ ಒಂದು ವಿಶಿಷ್ಟ ವ್ರತದ ಬಗ್ಗೆ ಹೇಳುತ್ತೇನೆ.ಅದನ್ನು ಮಾಡಿ ನಿಮ್ಮ ತೊಂದರೆಗಳು ದೂರವಾಗಲಿವೆ. ಅದುವೇ ಶ್ರೀ ಅನಂತವ್ರತ ಇದು ಭಾದ್ರಪದ ಶುಕ್ಲಪಕ್ಷ ಚತುರ್ದಶಿಯಂದು ಮಾಡಬೇಕು. ಅನಂತ ಎಂದರೆ ನಾನೇ ಆಗಿರುತ್ತೇನೆ ಎಂದು ಅನಂತವ್ರತದ ವಿಧಿವಿಧಾನ ತಿಳಿಸುತ್ತಾ ಪಾಂಡವರಿಗೆ ಅನುಗ್ರಹಿಸುತ್ತಾನೆ. ಪಾಂಡವರು ಪ್ರತಿವರ್ಷ ಈ ಅನಂತವ್ರತ ಆಚರಿಸಿ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಂಡಂತಹ ಅನಂತವ್ರತ ಕ್ರಮೇಣ ಭೂಲೋಕದಲ್ಲಿ ಆಚರಣೆಗೆ ಬಂದು ಅಂದು ಇಂದು ಮುಂದು ನಡೆಯುವಂತಾಯಿತು.

ಅನಂತವ್ರತ ಆಚರಣೆಯ ವಿಧಾನ
ಈ ವ್ರತದಲ್ಲಿ ದಭೆìಯಿಂದ ಶೇಷನ ಪ್ರತಿಮೆ ತಯಾರಿಸಿ ಮಂಡಲ ಬರೆದು ಕಲಶ ಸ್ಥಾಪನೆ ಮಾಡಿ ಗಂಧ ತುಲಸೀ ಪುಷ್ಪಗಳಿಂದ ಅರ್ಚಿಸಿ ಪೂಜಿಸಿ ವಿವಿಧ ಬಗೆಯ ಭಕ್ಷ್ಯಗಳನ್ನು ನೈವೇದ್ಯ ಮಾಡಿ ಮಹಾಮಂಗಳಾರತಿ ಮಾಡುವುದು. ವ್ರತದ ವಿಶೇಷವೆಂದರೆ ಕುಂಕುಮದಿಂದ ಲೇಪಿತ ವಾದ ಹದಿನಾಲ್ಕು ಗಂಟುಗಳುಳ್ಳ ದಾರಗಳಿಂದ ಗಂಧ ಪುಷ್ಪಗಳಿಂದ ಪೂಜಿತ ದಾರವನ್ನು ಗಂಡಸರು ಬಲತೋಳಿಗೆ, ಹೆಂಗಸರು ಎಡತೋಳಿಗೆ ಕಟ್ಟಿಕೊಂಡು ಈ ದಾರ ಕಟ್ಟಿಕೊಂಡು ಹದಿನಾಲ್ಕು ಬಾರಿ ನಮಸ್ಕರಿಸಬೇಕು. ಹದಿನಾಲ್ಕು ಗಂಟುಗಳಲ್ಲಿ ಮಹಾವಿಷ್ಣುವಿನ ಹದಿನಾಲ್ಕು ನಾಮಗಳ ಹೆಸರು ಹೇಳುತ್ತಾ ಹದಿನಾಲ್ಕು ಬಾರಿ ನಮಸ್ಕರಿಸುವುದೇ ಅನಂತವ್ರತದ ವಿಶೇಷಗಳಲ್ಲಿ ಒಂದು. ನೈವೇದ್ಯಕ್ಕೂ ಹದಿನಾಲ್ಕು ಬಗೆಯ ಹಣ್ಣುಗಳು ಹಾಗೂ ಹದಿನಾಲ್ಕು ಬಗೆಯ ನೈವೇದ್ಯ ಮತ್ತು ಹದಿನಾಲ್ಕು ಆರತಿ ಬೆಳಗವುದು ಕೂಡ ಅನಂತವ್ರತದ ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next