Advertisement

ಬರಪೀಡಿತ ಜಿಲ್ಲೆಯ ನೇತ್ರಾವತಿ ಬರಪೀಡಿತ ಜಿಲ್ಲೆಗಳಿಗೆ !

04:04 PM May 25, 2017 | Team Udayavani |

ಬೆಳ್ತಂಗಡಿ: ಒಂದೆಡೆಯಿಂದ ಎತ್ತಿನಹೊಳೆ ಕಾಮಗಾರಿ ಭರದಿಂದ ಸಾಗುತ್ತಿದೆ. ನೀರಿಲ್ಲದಿದ್ದರೂ ಮುಂದಿನ ಚುನಾವಣಾ ಸಿದ್ಧತೆಯಾಗಿ ಕಾಮಗಾರಿಯ ವೇಗೋತ್ಕರ್ಷವೇ ಉದ್ದೇಶವನ್ನು ಸಾರುತ್ತದೆ. ಇನ್ನೊಂದೆಡೆ ಬರದಿಂದ ನಾಡು ತತ್ತರಿಸುತ್ತಿದೆ. ಈ ಮಧ್ಯೆ ಪಶ್ಚಿಮ ಘಟ್ಟದ ಎಲ್ಲ ನದಿ ಮೂಲಗಳೂ ತನ್ನ ಹರಿವು  ನಿಲ್ಲಿಸಿ ಸ್ತಬ್ಧವಾಗಿದ್ದು ಈಗ ಆರಂಭವಾದ ಮಳೆ ನೀರನ್ನು ತನ್ನ ಒಡಲೊಳಗೆ ತುಂಬಿಕೊಳ್ಳಲು ಸಿದ್ಧವಾಗುತ್ತಿದೆ.

Advertisement

ಬರದ ನಾಡು 
ಕರುನಾಡು ಈಗ ಬರದ ನಾಡಾಗಿದೆ. ರಾಜ್ಯಕ್ಕೆ ರಾಜ್ಯವೇ ಬೇಸಗೆಯ ಬರದಿಂದ ತತ್ತರಿಸುತ್ತಿದೆ. ಒತ್ತರಿಸಿ ಬರುತ್ತಿದ್ದ ನೀರಿನ ಹರಿವು ನಿಂತು ಕರಾವಳಿಯ ಜಿಲ್ಲೆಗಳಲ್ಲೂ ಸಮುದ್ರರಾಜನ ನೆಂಟಸ್ತನವಿದ್ದರೂ ನೀರಿನ ಕೊರತೆ, ಉರಿಬಿಸಿಲಿನ ಒರತೆ. ವರ್ಷವಿಡೀ ನೀರಿನ ಸಮಸ್ಯೆಯೇ ಇರದ ಕರಾವಳಿ ಜಿಲ್ಲೆಗಳು ಈ ಬಾರಿ ಬರಕ್ಕಾಗಿ ಭರದ ಸಿದ್ಧತೆ ಮಾಡಬೇಕಾಗಿ ಬಂತು. ನೀರಿಗಾಗಿ ಹಾಹಾಕಾರ ಕಂಡಿತು. 

ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ,ತುಂಬಿ ಹರಿಯುವ ನೀರಿನಿಂದ ಹಸನಾಗಿದ್ದ ದ.ಕ. ಜಿಲ್ಲೆಯ ಎರಡು ತಾಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ನೇತ್ರಾವತಿ ಹರಿಯುವ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಇನ್ನೊಂದು ಕಡೆ ಬರಪೀಡಿತ ಜಿಲ್ಲೆಗಳಿಗೆ ಬರಪೀಡಿತ ಜಿಲ್ಲೆಯ ನದಿಯ ನೀರನ್ನು ತಿರುಗಿಸುವ ಎತ್ತಿನಹೊಳೆ ಎಂಬ ಯೋಜನೆಗೆ ಕಾಮಗಾರಿಯನ್ನು ತರಾತುರಿಯಾಗಿಸಿದೆ. ಕರಾವಳಿ, ಮಲೆನಾಡು ಬಯಲು ಸೀಮೆಯ ಜನರು ಈ ಮೂರ್ಖನಾಟಕಕ್ಕೆ ಮೂಕ ಪ್ರೇಕ್ಷಕರಾಗಿರುವುದಂತೂ ಸತ್ಯ.

ನೇತ್ರಾವತಿ ತಿರುವೋ? ಎತ್ತಿನಹೊಳೆಯ ತಿರುವೋ..?
ಒಟ್ಟಾರೆ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ನೇತ್ರಾವತಿ ನೀರಿನ ಹರಿವು ಕಡಿಮೆಯಾಗುತ್ತಿದೆ. ಆದರೆ ನದಿಯ ಫಲಾನುಭವಿಗಳು ಹೆಚ್ಚಾಗುತ್ತಿದ್ದಾರೆ. ಸರಕಾರ ಬಡಕಲಾಗುತ್ತಿರುವ, ಕ್ಷೀಣಿಸುತ್ತಿರುವ ನದಿಗೆ ಜೀವ ತುಂಬುವ ಯೋಚನೆಯನ್ನು ಮಾಡದೆ ಅಭಿವೃದ್ಧಿ ಎಂಬ ನೆಪದಲ್ಲಿ ಬರಿದಾಗುತ್ತಿರುವ ನದಿಗೆ ಬಲಾತ್ಕಾರ‌ವಾಗಿ ಬƒಹತ್‌ ನೀರಾವರಿ ಯೋಜನೆಗಳನ್ನು ಮಾಡುವುದರಲ್ಲೇ ತಲ್ಲೀನವಾಗಿದೆ. ಮುಂದಿನ ದಿನಗಳಲ್ಲಿ ನದಿ ಮೂಲಗಳನ್ನು ಸಂರಕ್ಷಿಸದೆ ಹೋದಲ್ಲಿ  ನೀರಾವರಿ ಯೋಜನೆಗಳು ಬಜೆಟ್‌ನಲ್ಲೋ, ಕಡತಗಳಲ್ಲೋ ಬಾಕಿಯಾಗುವ ಸಾಧ್ಯತೆ ಇದೆ. ನದೀ ಮೂಲಗಳ ಸೂಕ್ಷ್ಮಜೀವ ವೈವಿಧ್ಯ ತಾಣಗಳಲ್ಲಿ ಮಾನವನ ಅಕ್ರಮ ಚಟುವಟಿಕೆಗಳು, ಪರಿಸರ ವಿನಾಶಕ ಯೋಜನೆಗಳು ಹೆಚ್ಚಾಗುತ್ತಿರುವುದರಿಂದಲೇ ಇಂದು ಹೆಚ್ಚಿನ ನದಿಗಳು ಸೊರಗುತ್ತಿವೆ, ಕರಗುತ್ತಿವೆ.

ಹೀಗಾದರೆ ಹೇಗೆ
ಇತ್ತೀಚೆಗಿನ 20 ವರ್ಷಗಳಲ್ಲಿ ನೇತ್ರಾವತಿ ನದಿಗೆ ಹಂತ ಹಂತವಾಗಿ ಏಟು ಬೀಳುತ್ತಲೇ ಇದ್ದ ಕಾರಣ ನೇತ್ರಾವತಿ ಬಡಕಲಾಗಿ, ಎತ್ತಿನಹೊಳೆ ಯೋಜನೆ ಚಾಲನೆಯಾಗದೇ ಇನ್ನೂ ಕಾಮಗಾರಿ ಹಂತದಲ್ಲಿ ಇರುವಾಗಲೇ ದ.ಕ. ಜಿಲ್ಲೆ ಬರ ಪೀಡಿತ ಜಿಲ್ಲೆಯಾಗಿದೆ. ನೇತ್ರಾವತಿಯೆಂದರೆ ಅದು ಕೇವಲ ಉಪ್ಪಿನಂಗಡಿಯ ಸಂಗಮವಲ್ಲ. ಅದರಾಚೆ ಪಶ್ಚಿಮ ಘಟ್ಟದ ಶಿಖರ ಕಾಡು ಕಣಿವೆಗಳನ್ನೇರಿದರೆ 9 ಉಪನದಿಗಳು, 48 ಕಿರುನದಿಗಳು ಒಂದನ್ನೊಂದು ಹೊಂದಿಕೊಂಡಿದ್ದು ನರನ ದೇಹದ ನರನಾಡಿಯಂತೆ ಕಾರ್ಯಪ್ರವಹಿಸುತ್ತಿವೆ. ಎಳನೀರು, ಕಡ್ತಕಲ್‌, ಚಾರ್ಮಾಡಿ, ಶಿರಾಡಿ, ಬಿಸಿಲೆ, ಬೆ„ರಾಪುರ, ಪುಷ್ಪಗಿರಿ ಘಾಟಿ ಪ್ರದೇಶ ವಿವಿಧ ಮಳೆಕಾಡುಗಳಲ್ಲಿ ನೇತ್ರಾವತಿ ನದಿಯ ಮೂಲಸ್ಥಾನಗಳಿವೆ. ಈ ನದಿ ಮೂಲದ ಹುಲ್ಲುಗಾವಲು ಹಾಗೂ ಮಳೆಕಾಡು (ಶೋಲಾರಣ್ಯ) ಮಳೆನೀರನ್ನು ತನ್ನ ಒಡಲಲ್ಲಿ ಬಚ್ಚಿಟ್ಟು ಕೊಂಡು ವರ್ಷವಿಡೀ ನೇತ್ರಾವತಿಯ ಜೀವಂತಿಕೆಗೆ ಪಾತ್ರಧಾರಿಗಳಾಗಿದ್ದು ಅತೀ ಸೂಕ್ಷ್ಮ ಪ್ರದೇಶಗಳಾಗಿರುತ್ತವೆ. ಈ ಸೂಕ್ಷ್ಮ ಪ್ರದೇಶದಲ್ಲಿ ಮಾನವ ಹಸ್ತಕ್ಷೇಪವಾದರೆ ನದಿಯ ಅಸ್ತಿತ್ವಕ್ಕೆ ಸಮಸ್ಯೆಯಾಗುವುದಂತೂ ಖಂಡಿತ.

Advertisement

ನೀರಿಲ್ಲ
ಕೆಲವು ದಿನಗಳ ಹಿಂದೆ ಚಾರಣಿಗರು ಕಂಡಾಗ ಶಿರಾಡಿ ಘಾಟಿಯ ಕೆಂಪು ಹೊಳೆಯು ಈಗಾಗಲೇ ಗುಂಡ್ಯ ಜಲ ವಿದ್ಯುತ್‌ ಯೋಜನೆ, ಎತ್ತಿನಹೊಳೆ ಯೋಜನೆಯಿಂದ ತನ್ನ ತನುವನ್ನು ಕಳೆದುಕೊಂಡಿತ್ತು. ಕುಮಾರಧಾರಾ ನದಿಗೆ ಈಗಾಗಲೇ ಎರಡು ಕಡೆ ಅಣೆಕಟ್ಟು ಕಟ್ಟಿದ್ದು ನೀರಿನ ಸಾಂದ್ರತೆ ಕಡಿಮೆಯಾಗುತ್ತಿದೆ. ನಿರಂತರ ಬಗೆಹರಿಯದ ಕಾಳಿYಚ್ಚು, ನದಿ ಹರಿವಿನ ಮೀಸಲು ಅರಣ್ಯದಲ್ಲಿ ಅಕ್ರಮ ಎಸ್ಟೇಟ್‌ ನಿರ್ಮಾಣ, ನದಿ ಮೂಲದ ಸೂಕ್ಷ್ಮ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ರೆಸಾರ್ಟ್‌, ಹೋಮ್‌ಸ್ಟೇಗಳು, ಅರಣ್ಯ ಇಲಾಖೆಯನ್ನು ಕ್ಯಾರೆ ಮಾಡದ ಕಳ್ಳಬೇಟೆ, ಗಾಂಜಾ ಮಾಫಿಯಾ ಇವೆಲ್ಲ ಯಥಾಸ್ಥಿತಿಯಲ್ಲಿ ಮುಂದುವರಿದರೆ ನದಿ ಮೂಲ ಮತ್ತು ನದಿಯ ಹರಿವು ಮುಂದಿನ ದಿನಗಳಲ್ಲಿ ಎಷ್ಟು ಉಳಿದೀತು? 

ಬಂಡಾಜೆ ಹೊಳೆಯ ಮೂಲಸ್ಥಾನದ ದುರ್ಗದ ಬೆಟ್ಟದ ದುರ್ಗದಹಳ್ಳಿ, ಕೆಳಗೂರು ಕಣಿವೆ, ಸೊಪ್ಪಿನಗುಡ್ಡದ ಅರೇಕಲ್‌ ಕಣಿವೆ, ಮƒತ್ಯುಂಜಯ ಹೊಳೆಯ ಮಧುಗುಂಡಿ ಕಣಿವೆ, ಚಾರ್ಮಾಡಿಘಾಟಿಯ ಸೋಮನಕಾಡು, ಅಣಿಯೂರು ಕಣಿವೆ, ದೇವಗಿರಿ ಕಣಿವೆ, ಬಾರಿಮಲೆ, ಬಾಂಜಾರುಮಲೆ, ಬೆ„ರಾಪುರ ಘಾಟಿಯ ಮರಗುಂದ ಮುಂತಾದ ನೇತ್ರಾವತಿ ನದಿ ಮೂಲಗಳ ಅಡವಿ ಪ್ರದೇಶಗಳ ಸೂಕ್ಷ್ಮ ತಾಣಗಳಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ರೆಸಾರ್ಟ್‌ ಮಾಫಿಯಾ, ಖಾಸಗಿ ಜಮೀನುದಾರರ ಅರಣ್ಯ ಒತ್ತುವರಿ ಗಮನಿಸಿದರೆ ನೇತ್ರಾವತಿಯ ಹರಿವು ಶೀಘ್ರದಲ್ಲೇ ಬಡಕಲಾದೀತು ಎಂಬ ಆತಂಕವೂ ಹೆಚ್ಚಾಗುತ್ತಿದೆ. ತುಳುನಾಡಿನ ನೇತ್ರಾವತಿ ನದಿಯ ಫಲಾನುಭವಿಗಳು ತಮ್ಮ  ಏಕೈಕ  ಜೀವನದಿಯನ್ನು ಉಳಿಸಲು ನಿರಾಸಕ್ತರಾದರೆ ಮುಂದೆ  ಇಲ್ಲಿ ಆಗಲಿರುವ ಪ್ರಕೃತಿ ವಿಕೋಪಕ್ಕೆ ತುಳುನಾಡಿನ ಜನರೇ ಆಹ್ವಾನ ಕೊಟ್ಟು ಆಮಂತ್ರಿಸಿದಂತೆ ಆಗುವು ದಂತೂ ಕಟು ಸತ್ಯ.

ಕಟ್ಟೆಗಳದ್ದೇ ಕಾರುಬಾರು
ನೇತ್ರಾವತಿಯ ಮೂಲಸ್ಥಾನವಾಗಿರುವ ಕುದುರೆ ಮುಖ ಸಮೀಪದ ಹಿರಿಮರಿಗುಪ್ಪೆ ಪ್ರದೇಶದ ಎಳನೀರು ಹೊಳೆಗೆ ಅದರ ಮೂಲಸ್ಥಾನದಲ್ಲೇ ಮಾನವನ ರಗಳೆಗಳಾಗುತ್ತಿವೆ. ಮƒತ್ಯುಂಜಯ, ಅಣಿಯೂರು ಹೊಳೆಗೆ ಕಿರು ಜಲ ವಿದ್ಯುತ್‌ ಘಟಕಗಳಿಗೋಸ್ಕರ ಅಣೆಕಟ್ಟು ಕಟ್ಟಿ ನೀರನ್ನು ತಡೆ ಹಿಡಿಯಲಾಗಿದೆ. ಸುನಾಲ ಹೊಳೆ ಮತ್ತು ನೆರಿಯ ಹೊಳೆಯ ಶೋಲಾರಣ್ಯದಲ್ಲಿ ಖಾಸಗಿ ಎಸ್ಟೇಟ್‌ಗಳಿಂದ ಹಂತ ಹಂತವಾಗಿ ಗೀರು ಗಾಯಗಳಾಗುತ್ತಿವೆ. ಭೆೆ„ರಾಪುರ ಘಾಟಿಯ ಕಪಿಲಾ ಹೊಳೆಗೆ ಶಿಶಿಲ ಭೆೆ„ರಾಪುರ ರಸ್ತೆಯಾದರೆ ಅಲ್ಲಿಯೂ ಸಮಸ್ಯೆಯಾಗಲಿದೆ.

ಖಾಲಿ ನದಿಯ ನೋಟ 
ಕೆಲ ದಿನಗಳ ಹಿಂದೆ ನಾವು ಭೇಟಿ ನೀಡಿದಾಗ ಎಲ್ಲ ನದಿಗಳೂ ಬತ್ತಿ ಬೆತ್ತಲಾಗಿ ಹರಿವು ನಿಲ್ಲಿಸಿ ನಮ್ಮಲ್ಲಿ ಇನ್ನು ನೀರಿಲ್ಲ ಎಂದು ಜಗತ್ತಿಗೆ ಸಾರುತ್ತಿದ್ದವು. ಚಾರಣ ಹೋದಾಗಲೂ ಚಾರಣಿಗರಿಗೆ ಖಾಲಿ ನದಿಯ ಪಕ್ಷಿನೋಟ ಕಾಣುತ್ತದೆ .

– ದಿನೇಶ್‌ ಹೊಳ್ಳ 
ಪರಿಸರ ಹೋರಾಟಗಾರ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next