Advertisement

ಬೈಕ್‌ನಲ್ಲಿ ಬಾದಾಮಿಗೆ

01:11 PM Feb 02, 2018 | |

ಸುತ್ತ ನೋಡಿದ್ರೆ ಬರೀ ಹಸಿರು, ಆ ಹಸಿರಿನ ನಡುವೆ ಸಾಗೋ ಡಾಂಬರುರಸ್ತೆ, ಆ ರಸ್ತೆ ಮೇಲೆ ನನ್ನ ಪ್ರೀತಿಯ ದ್ವಿಚಕ್ರ ವಾಹನ. ಅದರಲ್ಲಿ ನಾನು, ನನ್ನ ಗೆಳೆಯ. ಗೊತ್ತುಗುರಿಯಿರದ ದಾರಿಯಲ್ಲಿ ನಾವು ರಾಜರಂತೆ ಸಾಗುತ್ತಿದ್ದರೆ ಒಮ್ಮೆಲೇ ಕಾಡುವ ಕತ್ತಲಿನ ಗುಹೆಯೊಂದು ಇದಿರಾಯ್ತು. ಗುಹೆಯ ಅಗಾಧತೆ ಅಳೆಯುತ್ತ ಅದರೊಳಗೆ ಪ್ರವೇಶಿಸಿದ ನನಗೆ ನನ್ನ ಹೆಸರನ್ನು ಯಾರೋ ಕೂಗಿ ಕರೆದಂತೆ ಭಾಸವಾಯಿತು. ಬೆಚ್ಚಿಬಿದ್ದು ಎಚ್ಚೆತ್ತವಗೆ ಮಲಗಿದ್ದ ನನ್ನನ್ನು ಕರೆದದ್ದು ಸಾಕ್ಷಾತ್‌ ನನ್ನ ತೀರ್ಥರೂಪರು ಮತ್ತು ಈ ತನಕ ಕಂಡಿದ್ದೆಲ್ಲಾ ಕನಸು ಎಂದು ಮನವರಿಕೆಯಾಯ್ತು.

Advertisement

ಮನದಾಳದಲ್ಲಿ ಅಯ್ಯೋ! ಇಷ್ಟೊತ್ತು ಕಂಡದ್ದು ನಿಜವಾಗಲಿಲ್ಲವಲ್ಲ ಅನ್ನೋ ಅಳುಕು ಉಳಿದು ಬೆಳೆಯತೊಡಗಿತ್ತು. ಅದೇಕೊ ಈ ಗುಹೆಗಳಿಗೂ ನನಗೂ ಏನಾದರೂ ಸಂಬಂಧವಿದೆಯೊ ಎನಿಸತೊಡಗಿತು. ಥಟ್ಟನೆ ನೆನಪಾಗಿದ್ದು ನಾನು ಹಿಂದಿನ ದಿನವಷ್ಟೇ ಬಾದಾಮಿ ಗುಹೆಗಳ ಬಗ್ಗೆ ವೀಕ್ಷಿಸಿದ್ದ ಒಂದೂವರೆ ತಾಸಿನ ಪ್ರೋಗ್ರಾಮು. ಇನ್ನೇನು, ಕಾಲೇಜು ರಜಾ ಮುಗಿಯಲು ಎರಡೇ ದಿನಗಳಿದ್ದವು. ಹತ್ತು ದಿನಗಳ ರಜೆಯಲ್ಲಿ ಎಂಟು ದಿನಗಳನ್ನು ಸುಮ್ಮನೆ ಕೂತು ಕಳೆದಿದ್ದೆ. ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದ ಹಾಗೆ, ಬರೀ ಒಂದು ಕನಸಿನಿಂದಾಗಿ ಉಳಿದಿರುವ ಎರಡು ದಿನದ ರಜೆಯನ್ನು ಸಮರ್ಪಕವಾಗಿಸಲು ನಿರ್ಧರಿಸಿದೆ. ತತ್‌ಕ್ಷಣ ಫೋನಾಯಿಸಿದ್ದು ನನ್ನ ಏಕಮಾತ್ರ ಆಪ್ತಮಿತ್ರ ಆದಿತ್ಯನಿಗೆ. “ಲೋ, ಫ್ರೀ ಇದೀಯಾ, ಹೊರಡು’ ಅಂದೆ. ಮೊದಲಿಗೆ ನಿರಾಕರಿಸಿದ ಅವನಿಗೆ ನಾನು ನನ್ನ ಶೈಲಿಯಲ್ಲೇ ಒಪ್ಪಿಸಿದೆ. ಅವನು ಒಪ್ಪಿದ್ದೇ ತಡ, ನಾನು ನನ್ನ ಬೈಕ್‌ನೊಂದಿಗೆ ರೆಡಿಯಾದೆ. ಮಹಾಭಾರತದ ಅರ್ಜುನನ ಹಾಗೆ ಆದಿತ್ಯ ನನ್ನ ಹಿಂದೆ ಕುಳಿತಿದ್ದರೆ, ನಾನು ರಥದ ಸಾರಥಿಯಂತೆ ಬೈಕ್‌ ಚಲಾಯಿಸುತ್ತಿದ್ದೆ. ಮಾರ್ಗಮಧ್ಯೆ ಸಿಗುತ್ತಿದ್ದ ದಾರಿಹೋಕರೇ ನಮ್ಮ ಪಾಲಿನ ಜಿಪಿಎಸ್‌ಗಳು. ದಾರಿಯುದ್ದಕ್ಕೂ ಸೆಲ್ಫಿಗಳನ್ನು ತೆಗೆಯುತ್ತ ಕೊನೆಗೂ ಬಂತು ನೋಡಿ ಬಾದಾಮಿ. ಎರಡು ಗಂಟೆ ಪ್ರಯಾಣದ ಬಳಿಕ ಬಾದಾಮಿಯನ್ನು ಪ್ರವೇಶಿಸುತ್ತಿದ್ದ ಹಾಗೆ ಮೊದಲಿಗೆ ಕಾಣಸಿಕ್ಕಿದ್ದು ಬೆಟ್ಟದ ಸಾಲುಗಳು. ವಾಸ್ಕೋಡಿಗಾಮ ಕಲ್ಲಿಕೋಟೆಯನ್ನು ಕಂಡುಹಿಡಿದ ಹಾಗೆ ನಮಗದೇನೋ ಹೆಮ್ಮೆ ಉಂಟಾಯಿತು. ಒಳಗೆ ಹೋಗುತ್ತಿದ್ದಂತೆ ನಮಗೆ ಪುರಾತನ ಕಾಲಕ್ಕೆ ತಲುಪಿದ ಅನುಭವವಾಯಿತು. 

ಈ ಸ್ಥಳ ನಮ್ಮ ಹುಬ್ಬಳ್ಳಿಗೆ ಹತ್ತಿರವಾಗಿದ್ದರೂ, ಅಲ್ಲಿಯ ಭಾಷೆ, ನಿಸರ್ಗ, ಹವಾಮಾನ, ಜನರು ಎಲ್ಲವೂ ಬಹಳ ವಿಭಿನ್ನವಾಗಿದ್ದವು. ಇದನ್ನೆಲ್ಲ ನೋಡುತ್ತಿದ್ದ ಹಾಗೆ ಹೊಟ್ಟೆಯೊಳಗೆ ಹಸಿವು ಕೇಕೆ ಹಾಕತೊಡಗಿತ್ತು. ಹೊಟೇಲಿಗೆ ಹೋಗಿ ನಾವು ಊಟದ ಕಾರ್ಯಕ್ರಮವನ್ನು ಮುಗಿಸಿದೆವು. ಮತ್ತೆ ನಮ್ಮ ಪಯಣ ಮುಂದುವರೆಯಿತು. ಪಾಠಪುಸ್ತಕದಲ್ಲಿ ಓದುತ್ತಿದ್ದ ಬಾದಾಮಿ, ಕನಸಲ್ಲಿ ಕಂಡ ಬಾದಾಮಿ ಹಾಗೂ ಪ್ರತ್ಯಕ್ಷವಾಗಿ ನೋಡುತ್ತಿದ್ದ ಬಾದಾಮಿಯಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ಬಾದಾಮಿಯ ಮುಖ್ಯಆಕರ್ಷಣೆ ಎಂದರೆ ಗುಹಾ ದೇವಾಲಯಗಳು ಹಾಗೂ ಅಲ್ಲಿನ ಸುಂದರ ಕೆತ್ತನೆಗಳು. ಆಶ್ಚರ್ಯಕರ ಸಂಗತಿ ಏನೆಂದರೆ, ಆ ಎಲ್ಲ ಗುಹೆಗಳು ಕೇವಲ ಒಂದು ಕಲ್ಲಿನಿಂದ ಕೆತ್ತಲ್ಪಟ್ಟಿವೆ. ಅಲ್ಲಿಯ ಬಾದಾಮಿ ಬಣ್ಣದ ಕಲ್ಲುಗಳು ವಿಭಿನ್ನವಾಗಿದ್ದು, ಸಾಫ್ಟ್ಸ್ಟೋನ್‌ ಜಾತಿಗೆ ಸೇರಿರುವವು. ಬಾದಾಮಿಯ ಹೊರಗಿನ ಪರಿಸರ ಅಷ್ಟೊಂದು ಬಿಸಿಯಾಗಿದ್ದರೂ, ಆಧುನಿಕತೆಯ ಏರ್‌ಕಂಡೀಷನ್‌ನನ್ನು ನಾಚಿಸುವಂಥ ತಂಪಾದ ವಾತಾವರಣ ಗುಹೆಯೊಳಗಿತ್ತು. ಜಗತ್ತಿನ ಮೂಲೆ ಮೂಲೆಗಳಿಂದ ಜನರು ಈ ಐತಿಹಾಸಿಕ ಸ್ಥಳವನ್ನು ನೋಡಲು ಬಂದಿರುವುದು ಇದರ ದಂತಕಥೆ ತಿಳಿಯುವಲ್ಲಿ ನಮ್ಮ ಉತ್ಸಾಹವನ್ನು ಕೆರಳಿಸಿತು. ಇದರ ಬಗ್ಗೆ ಅಲ್ಲಿನ ಗೈಡ್‌ಗೆ ಕೇಳಿದಾಗ, 6ನೆಯ ಶತಮಾನದಲ್ಲಿ ಕಟ್ಟಲ್ಪಟ್ಟ ಈ ಗುಹೆಗಳು ಚಾಲುಕ್ಯರ ಶಿಲ್ಪಕಲೆಗಳಾಗಿವೆ. ಇದು ಬಹಳ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಯ ಒಂದು ಸಾಲಿನಲ್ಲಿ ನಾಲ್ಕು ಗುಹೆಗಳು ಏರಿಕೆ ಹಂತದಲ್ಲಿವೆ. ಮೊದಲನೆಯ ಗುಹೆಯಲ್ಲಿ ನಟರಾಜರೂಪಿ ಶಿವನ ಕೆತ್ತನೆ, ಎರಡನೇ ಗುಹೆಯಲ್ಲಿ ತ್ರಿವಿಕ್ರಮನಾದ ವಿಷ್ಣುವನ್ನು, ಮೂರನೆಯ ಗುಹೆಯಲ್ಲಿ ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಪುರಾಣ ಕಥೆಗಳನ್ನಾಧರಿಸಿದ ಕೆತ್ತನೆಗಳು ಹಾಗೂ ನಾಲ್ಕನೆಯ ಗುಹೆಯಲ್ಲಿ ಜೈನದೇವರ ಕೆತ್ತನೆಗಳಿವೆ. ಒಂದೊಂದು ಶಿಲ್ಪಕಲೆಗಳೂ ಬಹಳ ಸೂಕ್ಷ್ಮವಾಗಿ ಕೆತ್ತಲ್ಪಟ್ಟಿವೆ. ಇಷ್ಟು ವರ್ಷಗಳಾದರೂ ಸ್ವಲ್ಪವೂ ಹಾನಿಯುಂಟಾಗಿಲ್ಲ. ಯುನೆಸ್ಕೋ ಸಂಸ್ಥೆಯು ಈ ತಾಣವನ್ನು ವಿಶ್ವ ಪಾರಂಪರಿಕತಾಣವಾಗಿ ಗುರುತಿಸಿದೆ.

ಇವೆಲ್ಲವನ್ನು ನೋಡಿದಾಗ ನಾವು ಕನ್ನಡಿಗರು, ಇಂತಹ ಸುಂದರ ಪರಿಸರದಲ್ಲಿದ್ದೇವೆ ಅನ್ನೋ ಸಂತೋಷ ಮತ್ತು ಹೆಮ್ಮೆ ಉಂಟಾಯಿತು. ಇಂತಹ ಐತಿಹಾಸಿಕ ಸ್ಥಳಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಬರಿಯ ಸರ್ಕಾರದ ಮಾತ್ರವಲ್ಲದೆ, ನಮ್ಮೆಲ್ಲರ ಹೊಣೆಗಾರಿಕೆ ಅಲ್ಲವೆ? ದಿನದ ಕೊನೆಯಲ್ಲಿ ಬಿಸಿಲಿನ ಝಳದ ನಡುವೆ ಸಾರ್ಥಕ ದಣಿವು ಮನಸ್ಸಿನ ಮೂಲೆಯಲ್ಲಿ ಸಮರ್ಪಣಾ ಭಾವ ಮೂಡಿಸಿತು!

ಜೋಶುವ ಮಠಪತಿ ಸ್ನಾತಕೋತ್ತರ ವಿಭಾಗ,  ಆಳ್ವಾಸ್‌ ಕಾಲೇಜು, ಮೂಡಬಿದ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next